ಜಿನೇವಾ: ಸತತ 5 ರಾತ್ರಿಗಳ ಸಂವಾದದ ಬಳಿಕ ಕೊನೆಗೂ ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ)
ಯ 164 ಸಚಿವರು ಭಾರತದ ಬೇಡಿಕೆಗಳಿಗೆ ಸಮ್ಮತಿಸಿದ್ದಾರೆ. ಅತಿಯಾದ ಮೀನುಗಾರಿಕೆಗೆ ತಡೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಕೊರೊನಾ ಲಸಿಕೆಗಳ ಉತ್ಪಾದನೆ ಹೆಚ್ಚಳ ಮತ್ತು 27 ವರ್ಷಗಳಷ್ಟು ಹಳೆಯ ವ್ಯಾಪಾರ ಸಂಸ್ಥೆಯಲ್ಲಿ ಸುಧಾರಣೆ ಸೇರಿದಂತೆ ಕೆಲವು ಮಹತ್ವದ ನಿರ್ಧಾರಗಳಿಗೆ ಒಪ್ಪಿಗೆ ನೀಡಲಾಗಿದೆ. ಈ ಮೂಲಕ ನಾಲ್ಕೂವರೆ ವರ್ಷಗಳ ಬಳಿಕ ನಡೆದ ಮೊದಲ ಸಚಿವರ ಸಮ್ಮೇಳನವು ಸಮಾಪ್ತಿಯಾಗಿದೆ.
ಅಕ್ರಮ, ಅನಿಯಂತ್ರಿತ ಮೀನುಗಾರಿಕೆಗೆ ನಿರ್ಬಂಧ, ವಿಶ್ವದ ಸಾಗರಗಳಲ್ಲಿ ಅತಿಯಾದ ಮೀನುಗಾರಿಕೆಗೆ ತಡೆ, ಮೀನುಗಾರಿಕಾ ಕ್ಷೇತ್ರದಲ್ಲಿ ಸರ್ಕಾರಿ ಸಬ್ಸಿಡಿಗೆ ಮತ್ತು ಅತಿಯಾದ ಆಪರೇಟರ್ಗಳಿಗೆ ನಿಯಂತ್ರಣ ಹೇರುವ ಒಪ್ಪಂದಗಳನ್ನು ಕೈಗೊಳ್ಳಲಾಗಿದೆ.
ಇದು ಮೀನುಗಾರಿಕೆಯನ್ನು ಅವಲಂಬಿಸಿರುವ 260 ದಶಲಕ್ಷ ಮಂದಿಯ ಜೀವನೋಪಾಯಕ್ಕೆ ಸಂಬಂಧಿಸಿದ ವಿಚಾರವಾಗಿರುವ ಕಾರಣ ಒಕ್ಕೊರಲಿನಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಡಬ್ಲ್ಯುಟಿಒ ಮುಖ್ಯಸ್ಥ ಒಕೋಂಜೋ ಇವಿಯಾಲಾ ಹೇಳಿದ್ದಾರೆ.
ವಿಶ್ವಸಂಸ್ಥೆಯ ವಿಶ್ವ ಆಹಾರ ಯೋಜನೆಯ ಮೇಲೆ ಹೇರಿರುವ ರಫ್ತು ನಿರ್ಬಂಧವನ್ನು ವಾಪಸ್ ಪಡೆಯಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಗಿದೆ.
Related Articles
ಭಾರತಕ್ಕೆ ಶೇ.100ರ ಯಶಸ್ಸು: ಗೋಯಲ್
ದೀರ್ಘಕಾಲದಿಂದ ನನೆಗುದಿಗೆ ಬಿದ್ದಿದ್ದ ಅಂಶಗಳಲ್ಲಿ ಪ್ರಗತಿ ಸಾಧಿಸಲಾಗಿದ್ದು, ಈ ಬಾರಿಯ ಸಮ್ಮೇಳನದಲ್ಲಿ ಭಾರತಕ್ಕೆ ಶೇ.100ರಷ್ಟು ಯಶಸ್ಸು ದೊರೆತಿದೆ. ಕಳೆದ ಹಲವಾರು ವರ್ಷಗಳಿಂದೀಚೆಗೆ ನಡೆದ ಯಶಸ್ವಿ ಸಭೆ ಇದಾದಿದ್ದು, ಸಕಾರಾತ್ಮಕ ಫಲಿತಾಂಶ ಲಭ್ಯವಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಡಬ್ಲ್ಯುಟಿಒ ಒಪ್ಪಂದದಲ್ಲಿ ಭಾರತವು ಜಾಗತಿಕ ನಾಯಕನ ಪಾತ್ರ ವಹಿಸಿತ್ತು ಎಂದೂ ಅವರು ತಿಳಿಸಿದ್ದಾರೆ.