Advertisement

“ವಿಶ್ವ ತುಳು ಸಮ್ಮೇಳನ ದುಬೈ -2018′ಸಂಭ್ರಮಕ್ಕೆ  ತೆರೆ

05:05 PM Nov 27, 2018 | |

ದುಬೈ: ತುಳುವರಲ್ಲಿ ಜಾತೀಯತೆ ತೊಲಗಿ ಪ್ರೀತಿ,  ವಾತ್ಸಲ್ಯದ ಭಾವನೆ ಮೊಳಗಬೇಕು. ಜಾತೀಯತೆ ಮರೆಯಾಗಿ ನಾವೆಲ್ಲರೂ ತುಳು ವರೆಂಬ ಸಂಬಂಧ ಮೈಗೂಡಿಸಿಕೊಳ್ಳಬೇಕು. ತುಳುನಾಡಿನ ಸಂಬಂಧಗಳೇ ವಿಶಿಷ್ಟವಾದುದು. ತುಳುವರಿಗೆ ಹಣ ಬೇಕಾಗಿಲ್ಲ, ಬದಲಾಗಿ ಪರಸ್ಪರ ಬೆಸೆದು-ಬಾಳುವ ಜನ ಬೇಕು ಎನ್ನುವುದು ವಾಸ್ತವ. ಹಣೆಯಲ್ಲಿ ಬರೆದಿದ್ದರೆ ಮಾತ್ರ ಶ್ರೀಮಂತನಾಗಲು ಸಾಧ್ಯ. ಇದು ನನ್ನ ಜನನಿದಾತೆಯಿಂದಲೇ ತಿಳಿದವನು ನಾನು. ಆ ಮೂಲಕ ನಾವೆಲ್ಲರೂ ಸಹೋದರತ್ವದಿಂದ ಬಾಳ್ಳೋಣ. ತುಳುವಿನ ಮಾನ್ಯತೆಗಾಗಿ ನಾನು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಶೀಘ್ರವೇ ತುಳು ಭಾಷೆಯನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆ ಪ್ರಯತ್ನಿಸುತ್ತೇನೆ  ಎಂದು ಎನ್‌ಎಂಸಿ ಸಮೂಹದ ಸಂಸ್ಥಾಪಕ ಕಾರ್ಯಾಧ್ಯಕ್ಷ  ಪದ್ಮಶ್ರೀ  ಡಾ| ಬಿ. ಆರ್‌. ಶೆಟ್ಟಿ ಅವರು ತಿಳಿಸಿದರು.

Advertisement

ಸಾಗರೋತ್ತರ ತುಳುವರ ಕೂಟವು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖೀಲ ಭಾರತ ತುಳು ಒಕ್ಕೂಟದ ಸಹಯೋಗದೊಂದಿಗೆ ದುಬಾೖಯ  ಅಲ್‌ ನಾಸರ್‌ನ ಲೀಸರ್‌ ಲ್ಯಾಂಡ್‌ ಐಸ್‌ ರಿಂಕ್‌ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ  ದ್ವಿದಿನಗಳ “ವಿಶ್ವ ತುಳು ಸಮ್ಮೇಳನ ದುಬಾೖ-2018′ ಸಂಭ್ರಮದ ಸಮಾರೋಪ ಸಮಾರಂಭವು ನ. 24 ರಂದು ಸಂಜೆ ನಡೆದಿದ್ದು, ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ. ಆರ್‌. ಶೆಟ್ಟಿ ಅವರು,  ಸಮ್ಮೇಳನವು ಎರಡು ದಿನಗಳ ಕಾಲ ಅರ್ಥಪೂರ್ಣವಾಗಿ ನಡೆದಿದ್ದು, ಆಯೋಜಕರ ಸಂಘಟನಾತ್ಮಕ ಶಕ್ತಿಯನ್ನು ಮೆಚ್ಚಲೇಬೇಕು. ಭಾಷಾಭಿಮಾನವನ್ನು ಬೆಳೆಸಿಕೊಂಡು ನಾವೆಲ್ಲರೂ ಒಗ್ಗಟ್ಟಿನಿಂದ ತುಳುನಾಡ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ-ಬೆಳೆಸುವಲ್ಲಿ ಕಾಯೊìàನ್ಮುಖರಾಗೋಣ ಎಂದು ನುಡಿದು ಶುಭಹಾರೈಸಿದರು.

ಸಮಾರೋಪದಲ್ಲಿ ಅತಿಥಿಗಳಾಗಿ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಶ್ರೀ  ಸುಗುಣೇಂದ್ರ ತೀರ್ಥ ಸ್ವಾಮೀಜಿ, ಗುರುದೇವದತ್ತ ಸಂಸ್ಥಾನಂ    ಶ್ರೀ ದತ್ತಗುರು ವೀರಾಂಜನೆಯ ಸ್ವಾಮಿ  ಕ್ಷೇತ್ರ ಒಡಿಯೂರಿನ ಪರಮಪೂಜ್ಯ ಶ್ರೀ  ಗುರುದೇವಾನಂದ ಸ್ವಾಮೀಜಿ, ಶ್ರೀಧಾಮ ಮಾಣಿಲ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಪ್ರೊಟೆಸ್ಟೆಂಟ್‌ ಮಂಗಳೂರು ಪ್ರಾಂತ್ಯದ ಬಿಷಪ್‌ ವಂ| ಎಬಿನೆಜರ್‌ ಜತ್ತನ್ನ, ಮುಸ್ಲಿಂ ಧರ್ಮಶಾಸ್ತ್ರಜ್ಞ ಅಬ್ದುಸ್ಸಲಾಂ ಪುತ್ತಿಗೆ, ಮುಂಬಯಿಯ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಬಾಲಿವುಡ್‌ ನಟ ಸುನೀಲ್‌ ಶೆಟ್ಟಿ, ಸಂಗೀತ ನಿರ್ದೇಶಕ ಗುರು ಕಿರಣ್‌ ಹಾಗೂ ಕರ್ನಾಟಕರ ರಾಜ್ಯ ತುಳು ಅಕಾಡೆಮಿ ಅಧ್ಯಕ್ಷ  ಎ. ಸಿ. ಭಂಡಾರಿ, ಅಖೀಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಧರ್ಮಪಾಲ್‌ ಯು. ದೇವಾಡಿಗ ಅವರು ಉಪಸ್ಥಿತರಿದ್ದು,  ಪದ್ಮಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ 

ಜನ್ಮೋತ್ಸವಕ್ಕೆ ಶುಭಹಾರೈಸಿ ಅವರನ್ನು ಸಮ್ಮಾನಿಸಿ ಗೌರವಿಸಿದರು.

ಸಮ್ಮೇಳನ ಪೂರಕವಾಗಲಿ 
ಸಮ್ಮೇಳನದ ಸುಮಾರು ಆರು ತಿಂಗಳ ಶ್ರಮದ ಸಿದ್ಧತೆ  ಮರೆಯಾಗಬಹುದು.  ಆದರೆ ಈ ಎರಡು ದಿನಗಳ ನೆನಪು ಮಾತ್ರ ನಮ್ಮಲ್ಲಿ ಶಾಶ್ವತವಾಗಿರಲಿ. ಸಮ್ಮೇಳನವನ್ನು ಖುದ್ದಾಗಿ ಅನುಭವಿಸಿದಾಗ ನಾನು ಊರಿನಲ್ಲೇ ಇದ್ದಂತೆ ಭಾಸವಾಗುತ್ತಿದೆ. ಸಮ್ಮೇಳನದ ಉದ್ದೇಶವೂ ಅದೇ ಆಗಿದೆ. ಸಮಗ್ರ ತುಳುನಾಡಿನ ಸಮೃದ್ಧಿಗೆ ಈ ಸಮ್ಮೇಳನ ಪೂರಕವಾಗಲಿ ಎಂದು ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಆಶಯ ವ್ಯಕ್ತಪಡಿಸಿದರು.

Advertisement

ಒಗ್ಗಟ್ಟಿನ ಸಂಕೇತವಾಗಲಿ 
ಬಿಷಪ್‌ ಜತ್ತನ್ನ ಅವರು ಮಾತನಾಡಿ ಇಂತಹ ಸಮ್ಮೇಳನಗಳು ಒಗ್ಗಟ್ಟಿನ ಸಂಕೇತ ವಾಗಲಿ. ತುಳು ಭಾಷೆಯು ತುಳುನಾಡಿನ ಎಲ್ಲಾ ಸಮುದಾಯಗಳನ್ನು ಮತ್ತೆ ಒಗ್ಗೂಡಿ ಸುತ್ತಾ ಸಾಮರಸ್ಯದಿಂದ ಬಾಳುವಂತೆ ಕಾರಣೀ ಭೂತವಾಗಲಿ ಎಂದು ನುಡಿದು, ಸುಮಾರು 180 ವರ್ಷಗಳ ಇತಿಹಾಸವುಳ್ಳ ತುಳು ಬೈಬಲ್‌ನ್ನು ಸಮ್ಮೇಳನದ ಅಧ್ಯಕ್ಷ ಡಾ| ಬಿ. ಆರ್‌. ಶೆಟ್ಟಿ ಅವರಿಗೆ ಹಸ್ತಾಂತರಿಸಿ ಶುಭಹಾರೈಸಿದರು.

ಅಭಿಮಾನದಿಂದ ತುಂಬಿತು 
ಮುಂಬಯಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಹೊರನಾಡಿನ ಅದೂ ಸಾಗರೋತ್ತರದಲ್ಲಿ ಆಯೋಜಿಸಲ್ಪಟ್ಟ ಈ ಸಮ್ಮೇಳನವು ತುಳುವ ಅಭಿಮಾನದಿಂದ ತುಂಬಿತು. ಈ ಭಾಷೆಯು ಮನಸ್ಸಿನ ಆಸಕ್ತಿಯನ್ನು ವೃದ್ಧಿಸಿದೆ. ಸಾಂಸ್ಕೃತಿಕ ಪ್ರೀತಿಯಿದೆ ಎನ್ನುವುದನ್ನು ತೋರಿಸಿದೆ. ಇದು ಬರೇ ತುಳು ಸಮ್ಮೇಳನವಲ್ಲ ವಿಶಿಷ್ಟವಾದ ಜಾಗತಿಕ ಸರ್ವಧರ್ಮ ಸಮ್ಮೇಳನವಾಗಿದೆ. ಆದ್ದರಿಂದ ತುಳು ಭಾಷೆಯನ್ನು ಕರ್ನಾಟಕದಲ್ಲಿ ದ್ವಿತೀಯ ಭಾಷೆಯಾಗಿ ಸರಕಾರ ಪರಿಗಣಿಸುವಂತೆ, ಮಾನ್ಯತೆಗೊಳಿಸುವಂತೆ ಮಾಡಬೇಕು. ಆ ಮೂಲಕ ಮುಂದಿನ ವರ್ಷದಿಂದ ಒಂದುದಿನ ತುಳು ದಿನವನ್ನಾಗಿ ಆಚರಿಸುಂತಾಗಬೇಕು ಎಂದರು.
ತುಳು ಸಮ್ಮೇಳನದ ಪ್ರಧಾನ ಸಂಘಟಕ ಸರ್ವೋತ್ತಮ ಶೆಟ್ಟಿ ಅಬುಧಾಬಿ ಸ್ವಾಗತಿಸಿದರು. ಸಾಗರೋತ್ತರ ತುಳುವರ ಒಕ್ಕೂಟ ದುಬಾೖ  ಮುಖ್ಯಸ್ಥ ಶೋಧನ್‌ ಪ್ರಸಾದ್‌ ಅಭಿನಂದನಾ ನುಡಿಗಳನ್ನಾಡಿದರು. ವಿಶ್ವ ತುಳು ಸಮ್ಮೇಳನದ ಸವಿನೆನಪಿಗಾಗಿ ಬಿ. ಕೆ. ಗಣೇಶ್‌ ರೈ ಅವರ ಪ್ರಧಾನ ಸಂಪಾದಕತ್ವದಲ್ಲಿ ರಚಿತ “ವಿಶ್ವ ತುಳು ಐಸಿರಿ’ ಸ್ಮರಣಿಕೆಯನ್ನು ಗಣ್ಯರು ಬಿಡುಗಡೆಗೊಳಿಸಿದರು. ಪ್ರೊ|  ಭಾಸ್ಕರ್‌ ರೈ ಕುಕ್ಕುವಳ್ಳಿ, ಸಾಹಿಲ್‌ ರೈ,  ಪ್ರಿಯಾ ಹರೀಶ್‌ ರೈ, ಕಲಾಸಂಘಟಕ ಕರ್ನೂರು ಮೋಹನ್‌ ರೈ, ಮುಂಬಯಿ ರಂಗಕಲಾವಿದ ಅಶೋಕ್‌ ಪಕ್ಕಳ ಮುಂಬಯಿ ಇವರು  ಅತಿಥಿ ಗಳನ್ನು ಪರಿಚಯಿಸಿದರು. ಬಿ. ಆರ್‌. ಶೆಟ್ಟಿ ಮತ್ತು ಸರ್ವೋತ್ತಮ ಶೆಟ್ಟಿ   ಅತಿಥಿಗಳನ್ನು ಗೌರವಿಸಿದರು. ಕದ್ರಿ ನವನೀತ್‌ ಶೆಟ್ಟಿ  ನಿರೂಪಿಸಿ ವಂದಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಮೋದ್‌ ಕುಮಾರ್‌ ಮತ್ತು ಬಳಗದಿಂದ ರಸಮಂಜರಿ, ನಾಗೇಶ್‌ ಕುಲಾಲ್‌ ಮಂಗಳೂರು ತಂಡದಿಂದ ತುಳುನಾಡ ಸಾಂಸ್ಕೃತಿಕ ಕ್ರೀಡೆಗಳು, ಕೆ. ವೆಂಕಟ್ರಮಣ ಮತ್ತು ಬಳಗದಿಂದ ನಾಟ್ಯವೈಭವ ಹಾಗೂ ಡಾ| ರಾಜೇಶ್‌ ಆಳ್ವ ಬದಿಯಡ್ಕ ತಂಡದಿಂದ “ಪಾಡªನೆ ಮೇಳ ಬೊಕ್ಕ ಮಾಂಕಾಳಿ ನಲಿಕೆ’ ಪ್ರದರ್ಶನಗೊಂಡಿತು.  ಭಾಸ್ಕರ್‌  ರೈ  ಕುಕ್ಕುವಳ್ಳಿ ಸಾರಥ್ಯದಲ್ಲಿ ಜಬ್ಬರ್‌ ಸುಮೋ, ಕದ್ರಿ ನವನೀತ್‌ ಶೆಟ್ಟಿ, ತೋನ್ಸೆ ಪುಷ್ಕಳ್‌ ಕುಮಾರ್‌, ದಯಾನಂದ ಕತ್ತಲ್‌ಸಾರ್‌ ಕೂಡುವಿಕೆಯಲ್ಲಿ ತಾಳಮದ್ದಳೆ, ಪ್ರಶಂಸಾ ಕಾಪು, ಸಂದೀಪ್‌ ಶೆಟ್ಟಿ ಮಾಣಿಬೆಟ್ಟು ತಂಡವು ಪ್ರಸನ್ನ ಶೆಟ್ಟಿ ಮೈಲೂರು, ಮರ್ವಿನ್‌ ಶಿರ್ವಾ ಮತ್ತು ಶರತ್‌ ಕುಮಾರ್‌ ಕೂಡುವಿಕೆಯಲ್ಲಿ ಹಾಸ್ಯ ಪ್ರಹಸನ, ಸನಾತನ ನಾಟ್ಯಾಲಯ ಮಂಗಳೂರು ಬಳಗದಿಂದ ಚಂದ್ರಶೇಖರ್‌ ಶೆಟ್ಟಿ ನಿರ್ದೇಶನದಲ್ಲಿ “ಸತ್ಯನಾ ಪುರತ ಸಿರಿ’ ತುಳು ನೃತ್ಯ ರೂಪಕ, ಮನೋಹರ್‌ ಕುಮಾರ್‌  ಉಳ್ಳಾಲ್‌ ಸಾರಥ್ಯಲ್ಲಿ ನಾಟ್ಯನಿಕೇತನ ಮಂಗಳೂರು ತಂಡದಿಂದ  “ಎಳುವೆರ್‌  ದೈಯ್ನಾರ್‌’ ತುಳುನಾಟ್ಯ ರೂಪಕ ಪ್ರದರ್ಶನಗೊಂಡಿತು.

ಸಾಸಿತಿ ಡಾ| ಬಿ. ಎ, ವಿವೇಕ್‌ ರೈ  ಅಧ್ಯಕ್ಷತೆಯಲ್ಲಿ ತುಳುನಾಡ ಆಚರಣೆ ಗೋಷ್ಠಿ ನಡೆಯಿತು. ಪ್ರೊ| ತುಕರಾಂ ಪೂಜಾರಿ, ದಯಾನಂದ ಕತ್ತಲ್‌ಸಾರ್‌, ಡಾ| ಗಣೇಶ್‌ ಅಮೀನ್‌ ಸಂಕಮಾರ್‌, ಕುದಿ ವಸಂತ್‌ ಶೆಟ್ಟಿ ಅವರು ಗೋಷ್ಠಿಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದರು. ನವೀನ್‌ ಶೆಟ್ಟಿ ಎಡೆ¾ಮಾರ್‌ ಗೋಷ್ಠಿಯನ್ನು  ನಡೆಸಿಕೊಟ್ಟರು. ಡಾ| ವೈ. ಎನ್‌. ಎನ್‌. ಶೆಟ್ಟಿ ಅಧ್ಯಕ್ಷತೆಯಲ್ಲಿ ತುಳು ಕವಿಗೋಷ್ಠಿ ನಡೆಯಿತು. ಪ್ರಕಾಶ್‌ ರಾವ್‌ ಪಯ್ನಾರ್‌, ಇರ್ಷಾದ್‌ ಮೂಡಬಿದ್ರಿ, ಗೋಪಿನಾಥ್‌ ರಾವ್‌, ಎಂ. ಇ. ಮೂಳೂರು, ಉಷಾ ನಾಗಭೂಷಣ್‌ ಕೊಲ್ಪೆ  ಕವಿತೆಗಳನ್ನು ವಾಚಿಸಿದರು. ಅಶೋಕ್‌ ಪಕ್ಕಳ ಮುಂಬಯಿ  ಕವಿಗೋಷ್ಠಿಯನ್ನು ನಡೆಸಿಕೊಟ್ಟರು.

“ತುಳುವರ ಸಾಧನೆ ಅತ್ಯದ್ಭುತವಾದುದು’ 
ನನ್ನನ್ನು ದುಬಾೖಯ ಈ ತುಳು ಸಮ್ಮೇಳನಕ್ಕೆ ಹೋಗಿ ಬರುವಂತೆ ಉಡುಪಿ ಶ್ರೀ ಕೃಷ್ಣ ದೇವರು ಕಳುಹಿಸಿಕೊಟ್ಟಿದ್ದಾರೆ. ಮಧ್ವಾಚಾರ್ಯರೂ ತುಳುವರ ಆಚಾರಗಳನ್ನು ಮನ್ನಿಸಿದವರಾಗಿದ್ದರು. ನಮ್ಮ ದಿವ್ಯೋಪಸ್ಥಿತಿಗೆ ಅವರ ಪ್ರೇರಣೆಯೂ ಕಾರಣವಾಗಿದೆ. ಮುಂಬಯಿ ಅಥವಾ ದುಬಾೖಯ ತುಳುವರ ಸಾಧನೆ ಅತ್ಯದ್ಭುತವಾದುದು. ಎಂದು  ಉಡುಪಿ ಪುತ್ತಿಗೆ ಮಠಾಧೀಶ  ಶ್ರೀ  ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು.  

“ಸಂಸ್ಕೃತಿಯ ಹೃದಯವೇ ತುಳು ಭಾಷೆ’
ಸಂಸ್ಕೃತಿಯ ಹೃದಯವೇ ತುಳು ಭಾಷೆಯಾಗಿದೆ. ಇಂತಹ ತುಳು ಭಾಷೆಯಲ್ಲಿ  ಅಧ್ಯಾತ್ಮದ ಸೊಬಗು, ಧರ್ಮದ ಸಾರ ಒಳಗೊಂಡಿದೆ. ತುಳುವರು ವಿಶ್ವಾಸಿಗರು. ಈ ಕಾರಣದಿಂದಲೇ ತುಳು ಅಂದರೆ ಕೀರ್ತಿ ಎಂದರ್ಥ. ಒಗ್ಗಟ್ಟಿದ್ದರೆ ಮಾತ್ರ ತುಳು ಬಲವರ್ಧಿತಗೊಂಡು 
ಬೆಳೆಯಲು ಸಾಧ್ಯ. ತುಳು ಭಾಷೆ  ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಆಗಲೇಬೇಕು ಎಂದು ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ  ಗುರುದೇವಾನಂದ ಸ್ವಾಮೀಜಿ  
ಅವರು ಹೇಳಿದರು.

“ತುಳುನಾಡಿನ ಪ್ರತಿಯೊಂದು ಆತ್ಮದಲ್ಲಿ  ತುಳುವಿನ ಸೆಲೆ, ಬೆಲೆಯಿದೆ’ 
ತುಳುನಾಡಿನ ಪ್ರತಿಯೊಂದು ಆತ್ಮದಲ್ಲಿ ತುಳುವಿನ ಸೆಲೆ, ಬೆಲೆಯಿದೆ. . ಆದ್ದರಿಂದ ತುಳುವಿನ ಕೆಲಸಗಳಿಗೆ ಆಮಂತ್ರಣ ಬೇಡ,  ಒಲವು ಬೇಕು. ತುಳು ಸಮ್ಮೇಳನವು ಅತ್ಯಂತ ಅದ್ಭುತವಾಗಿ ಮೂಡಿ ಬಂದಿರುವುದು ಹೆಮ್ಮೆಯಾಗುತ್ತಿದೆ. ನಮ್ಮ ತುಳುನಾಡ ಸಂಸ್ಕೃತಿ, ಸಂಸ್ಕಾರಗಳು ಇದೆ ರೀತಿಯಲ್ಲಿ ಮಿನುಗುತ್ತಿರಲಿ ಎಂದು ಶ್ರೀ ಧಾಮ ಮಾಣಿಲ ಕ್ಷೇತ್ರ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ  ಹೇಳಿದರು.

ಚಿತ್ರ-ವರದಿ : ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next