Advertisement

“ಗೋಬಿ, ಪಾನಿಪುರಿ ಗೊತ್ತು, ಉತ್ತಮ ಉಡುಪಿ ಊಟದ ಹೊಟೇಲ್‌ ಗೊತ್ತಿಲ್ಲ’

08:46 PM Sep 27, 2021 | Team Udayavani |

ಉಡುಪಿ: ನಮ್ಮ ಜನರಿಗೆ ಗೋಬಿ ಮಂಚೂರಿ, ಪಾನಿಪುರಿ ಗೊತ್ತಿದೆ. ನಮ್ಮದೇ ಆದ ಉತ್ತಮ ಉಡುಪಿ ಊಟದ ಹೊಟೇಲ್‌ ಎಲ್ಲಿದೆ ಎಂದು ಕೇಳಿದರೆ ಹೇಳುವುದು ಕಷ್ಟ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಮಲ್ಪೆ ಅಭಿವೃದ್ಧಿ ಸಮಿತಿ, ಕರಾವಳಿ ಪ್ರವಾಸೋದ್ಯಮ ಸಂಘಟನೆ (ಆ್ಯಕ್ಟ್) ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯಲ್ಲಿ ಪ್ರವಾಸ ಕಥನ ಕುರಿತು ವಿಷಯ ತೆರೆದಿಟ್ಟ ಮಣಿಪಾಲ ಕೆಎಂಸಿ ಮೂಳೆ ಚಿಕಿತ್ಸೆ ವಿಭಾಗ ಮುಖ್ಯಸ್ಥ ಮತ್ತು ಪ್ರಾಧ್ಯಾಪಕ ಡಾ| ಕಿರಣ್‌ ಆಚಾರ್ಯ ಅವರು ಜಗತ್ತಿನಾದ್ಯಂತ ಪ್ರವಾ ಸೋದ್ಯಮವನ್ನು ಅಭಿವೃದ್ಧಿಪಡಿಸಿದಂತೆ ನಮ್ಮ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಪಡಿಸಲು ಅವಕಾಶಗಳಿವೆ ಎಂದರು.

Advertisement

ಹೆಮ್ಮಾಡಿ, ಉಡುಪಿ ಮಹತ್ವ
ಚಿತ್ರ ಸಹಿತ ಘಟನಾವಳಿಗಳನ್ನು ವಿವರಿಸಿದ ಡಾ| ಆಚಾರ್ಯ, ಜನವರಿ- ಫೆಬ್ರವರಿಯಲ್ಲಿ ಹೆಮ್ಮಾಡಿಯ ಸೇವಂತಿಗೆ ತೋಟವನ್ನು ಯಾರೂ ಮಾರ್ಕೆಟಿಂಗ್‌ ಮಾಡಲಿಲ್ಲ ಎಂದರು. ಈಗ ಪ್ರಶಾಂತ ವಾತಾವರಣದಲ್ಲಿ ಐಷಾರಾಮಿ ಹೊಟೇಲ್‌ಗ‌ಳನ್ನು ಸ್ಥಾಪಿಸಿದರೆ ಪ್ರವಾಸಿಗರನ್ನು ಆಕರ್ಷಿಸಬಹುದು. ಇಂತಹ ಟೂರಿಸಂ ಅನ್ನು ಗ್ರೀಸ್‌, ಅಮೆರಿಕ ಮೊದಲಾದೆಡೆ ಕಾಣಬಹುದು. ಇಟಲಿ, ಭೂತಾನ್‌ನಲ್ಲಿ ಕೃಷಿ ಪ್ರವಾಸೋದ್ಯಮವಿದೆ. ಅಮೆರಿಕ, ಬಾಲಿಯಲ್ಲಿ ಗದ್ದೆ ಬದಿ ಗುಡಿಸಲುಗಳನ್ನು ಕಟ್ಟಿ ಪ್ರವಾಸಿಗರನ್ನು ಆಕರ್ಷಿಸುತ್ತಾರೆ. ಉಡುಪಿಯ ರಥಬೀದಿಯನ್ನು ಪಾರಂಪರಿಕವಾಗಿ ಆಕರ್ಷಣೀಯವಾಗಿಸಬಹುದು. ಇಂತಹ ಜಾಗಗಳಲ್ಲಿ ಯಾವುದೇ ಫ್ಲೆಕ್ಸ್‌, ಬೋರ್ಡ್‌ ಗಳಿರಬಾರದು. ಹಿಂದೆಲ್ಲ ಫೋಟೋಗಳನ್ನು ತೆಗೆಯಬಾರದು ಎಂಬ ಸೂಚನೆಗಳಿರುತ್ತಿತ್ತು. ಈಗ ಕಾಲ ಬದಲಾಗಿದೆ. ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಿ ಎನ್ನಬೇಕಾಗಿದೆ ಎಂದರು.

ರಿಕ್ಷಾ-ಸೈಕಲ್‌-ಸ್ಪಿರಿಚುವಲ್‌ ಟೂರಿಸಂ
ಆಟೋ ರಿಕ್ಷಾ ಚಾಲಕರಿಗೆ ಪ್ರವಾಸಿ ತಾಣಗಳ ಮಾಹಿತಿಗಳು ತಿಳಿದಿರುವುದರಿಂದ ಪ್ರವಾಸಿಗರಿಗೆ ಮಾರ್ಗದರ್ಶನ ನೀಡ ಬಹುದು. ಪೋರ್ಚುಗಲ್‌, ಜಪಾನ್‌ನಲ್ಲಿ ರಿಕ್ಷಾ ಟೂರಿಸಂಗಳಿವೆ.

ಬಾಡಿಗೆ ಬೈಸಿಕಲ್‌ ಮೂಲಕ ಸೈಕಲ್‌ ಟೂರಿಸಂ ಅನ್ನು ನಾನೇ ಸ್ವತಃ ಚಲಾಯಿಸಿ ಅನುಭವಿಸಿದ್ದೇನೆ. ಬಾಲಿ ದ್ವೀಪದಲ್ಲಿ ನಡೆಯುವ ರಾಮಾಯಣದ ಲಂಕಾದಹನ ಸನ್ನಿವೇಶ ಸ್ಪಿರಿಚುವಲ್‌ ಟೂರಿಸಂಗೆ ಉದಾಹರಣೆ. ಕಾಂಬೋಡಿಯಾದಲ್ಲಿ ಮೊಸರನ್ನೂ ಟೂರಿಸಂಗೆ ಬಳಸಿಕೊಂಡಿದ್ದಾರೆ. ನಾನು ಸಸ್ಯಾಹಾರಿಯಾದರೂ ಪ್ರವಾಸ ಮಾಡುವಾಗ ಮೀನು ಮಾರುಕಟ್ಟೆಗೆ ಭೇಟಿ ನೀಡಿ ಮೀನು ಆಹಾರವನ್ನು ಪ್ರವಾಸೋದ್ಯಮಕ್ಕೆ ಬಳಸಿಕೊಂಡಿರುವುದನ್ನು ಕಂಡಿದ್ದೇನೆ. ಅಲ್ಲಿ ಯಾವುದೇ ರೀತಿಯ ವಾಸನೆಗಳಿರುವುದಿಲ್ಲ ಎಂದು ಡಾ| ಕಿರಣ್‌ ಆಚಾರ್ಯ ಹೇಳಿದರು.

ಇದನ್ನೂ ಓದಿ:ಮದುವೆಗೆ ಮಾಡಿದ ಸಾಲ ತೀರಿಸಲಾಗಲಿಲ್ಲ ಎಂದು ಮದುವೆಯಾದ ಐದೇ ತಿಂಗಳಲ್ಲಿ ವ್ಯಕ್ತಿ ನೇಣಿಗೆ ಶರಣು

Advertisement

ಕಾರ್ಯಪಡೆ
ಮೂಲಕ ಸರಳೀಕರಣ: ಡಿಸಿ
ನಮ್ಮ ವಿಶೇಷ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಕೆಲಸ ಆಗಬೇಕು. ಉಡುಪಿಯು ಹೊಟೇಲ್‌ ಉದ್ಯಮಕ್ಕೆ ಹೆಸರಾಗಿದ್ದು ಉಡುಪಿಯ ಖಾದ್ಯವಿಶೇಷಗಳನ್ನು ಆಕರ್ಷಿಸಲು ಹೊಟೇಲಿಗರ ಸಹಕಾರ ಪಡೆಯಬೇಕು. ಹಿಂದೆ ಹೋಮ್‌ ಸ್ಟೇ ಯೋಜನೆ ಆರಂಭವಾಗಿತ್ತು. ಇದರಲ್ಲಿರುವ ಕೆಲವು ದೋಷಗಳನ್ನು ಸರಿಪಡಿಸಲು ಕಾರ್ಯಪಡೆ ಸಭೆ ಮೂಲಕ ಚರ್ಚಿಸಲಾಗುವುದು. ಧಾರ್ಮಿಕ, ಸಾಹಸ ಟೂರಿಸಂಗೆ ಅವಕಾಶಗಳಿವೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅಭಿಪ್ರಾಯಪಟ್ಟರು.

ಸ್ಥಳೀಯ ವೈಶಿಷ್ಟ್ಯ
ಹೊರಜಗತ್ತಿಗೆ: ಸಿಇಒ
ಈಗ ವರ್ಚುವಲ್‌ ಟೂರಿಸಂ ಇದೆ. ಕೊರಗ ಸಮುದಾಯದ ಬುಟ್ಟಿಯಂತಹ ಉತ್ಪನ್ನಗಳನ್ನು ಹೊರ ಜಗತ್ತಿಗೆ ಪರಿಚಯಿ ಸುವ ಕೆಲಸ ಆಗಬೇಕು ಎಂದು ಜಿ.ಪಂ. ಸಿಇಒ ಡಾ|ನವೀನ್‌ ಭಟ್‌ ಹೇಳಿದರು. ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್‌, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಆ್ಯಕ್ಟ್ ಅಧ್ಯಕ್ಷ ಮನೋಹರ ಶೆಟ್ಟಿ ಅತಿಥಿಗಳಾಗಿದ್ದರು. ಪ್ರವಾಸೋ ದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫ‌ರ್ಡ್‌ ಲೋಬೋ ಜೆ. ಸ್ವಾಗತಿಸಿ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ|ರೋಶನ್‌ಕುಮಾರ್‌ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಲ್ಪೆ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ, ಪೌರಾಯುಕ್ತ ಡಾ|ಉದಯಕುಮಾರ ಶೆಟ್ಟಿ ವಂದಿಸಿದರು.

ಪ್ರವಾಸೋದ್ಯಮ ಅಭಿವೃದ್ಧಿಗೆ ಸಕಾಲ
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಕೆ. ರಘುಪತಿ ಭಟ್‌ ಅವರು ನದಿ, ಹಿನ್ನೀರು, ಕಡಲು ಇತ್ಯಾದಿ ಪ್ರದೇಶಗಳನ್ನು ಮೀನುಗಾರಿಕೆಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದೇವೆ. ನಮ್ಮ ಜಿಲ್ಲೆ ಟೂರಿಸಂಗೆ ಸೂಕ್ತವಾಗಿದೆ. ಈಗ ಕೊರೊನಾ ಮುಕ್ತವಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿರುವುದರಿಂದ ಸಚಿವರಾಗಿದ್ದಾಗ ಸೂಚಿಸಿದ ಪ್ರವಾಸೋದ್ಯಮ ಯೋಜನೆ ಗಳಿಗೆ ಕಾಯಕಲ್ಪ ನೀಡಬೇಕು. ಪ್ರವಾಸೋದ್ಯಮ ಕಾರ್ಯಪಡೆಯ ಸಭೆ ಕರೆದು ಪ್ರಸ್ತಾವನೆಗಳನ್ನು ಸರಕಾರಕ್ಕೆ ಕಳುಹಿಸಿ ಪ್ರವಾಸಿ ಆಕರ್ಷಿತ ಜಿಲ್ಲೆಯಾಗಿ ಮಾರ್ಪಡಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next