Advertisement

ಅ.4-10: ವಿಶ್ವ ಅಂತರಿಕ್ಷ ಸಪ್ತಾಹ: ಅಂತರಿಕ್ಷದತ್ತ ಯುವಜನತೆಯ ಸೆಳೆತ

11:54 PM Oct 03, 2022 | Team Udayavani |

ಇಸ್ರೋ ತನ್ನ ಕೇಂದ್ರಗಳ ಮೂಲಕ ಹಾಗೂ ದೇಶದ ವಿಜ್ಞಾನಾಸಕ್ತ ಸಂಸ್ಥೆಗಳ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ರಾಜ್ಯದ ತಾರಾಲಯಗಳು, ವಿಜ್ಞಾನ ಕೇಂದ್ರಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಈ ಸಪ್ತಾಹದಲ್ಲಿ ಯುವಜನತೆಯನ್ನು ತಲು ಪುವ ಪ್ರಯತ್ನ ಮಾಡುತ್ತಿದೆ.

Advertisement

1999ರಲ್ಲಿ ವಿಶ್ವ ಸಂಸ್ಥೆ ಜಾಗತಿಕ ಅಂತರಿಕ್ಷ ಸಪ್ತಾಹವನ್ನು ಪ್ರತೀವರ್ಷ ಅಕ್ಟೋಬರ್‌ 4 ರಿಂದ 10ರ ವರೆಗೆ ಆಚರಿಸಬೇಕೆಂದು ನಿರ್ಣಯ ತೆಗೆದುಕೊಂಡಿತು. ಅದರಂತೆ ಪ್ರತೀ ವರ್ಷ ಎಲ್ಲ ತಾರಾಲಯಗಳು, ವಿಜ್ಞಾನ ಕೇಂದ್ರಗಳು, ಆಸಕ್ತ ಸಂಘಸಂಸ್ಥೆಗಳು ಅಂತಾ ರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನ-ತಂತ್ರಜ್ಞಾನದ ಈ ಉತ್ಸವವನ್ನು ಆಚರಿಸಿಕೊಂಡು ಬರುತ್ತಿವೆ.

1957ರ ಅಕ್ಟೋಬರ್‌ 04 ರಂದು ಮಾನವ ನಿರ್ಮಿತ ಭೂ ಉಪಗ್ರಹ ಸ್ಪುಟ್ನಿಕ್‌ ­ 1ರ ಉಡ್ಡಯನವಾಯಿತು. ಇದು ಬಾಹ್ಯಾಕಾಶ ಸಂಶೋಧನೆಗೆ ನಾಂದಿಯಾಯಿತು. 1967 ಅಕ್ಟೋಬರ್‌ 10 ರಂದು ಬಾಹ್ಯಾಂ ತರಿಕ್ಷದಲ್ಲಿ ಆಸಕ್ತ ರಾಷ್ಟ್ರಗಳು ಕೈಗೊಳ್ಳಬಹುದಾದ ಶಾಂತಿಯುತ ಅನ್ವೇಷಣೆಗಳ ಬಗ್ಗೆ (ಚಂದ್ರ ಹಾಗೂ ಇತರ ಆಕಾಶಕಾಯಗಳನ್ನು ಸೇರಿಸಿ) ರೂಪಿಸಿದ ಅಂತಾ ರಾಷ್ಟ್ರೀಯ ನಿಯಮಗಳಿಗೆ ಸಹಿ ಹಾಕಲಾಯಿತು.

ಅಂತರಿಕ್ಷ ಸಪ್ತಾಹ ಏಕೆ?
ಆಧುನಿಕ ಜಗತ್ತಿನಲ್ಲಿ ಉಪ ಗ್ರಹಗಳ ಸ್ಥಾನ, ಉಪಯೋಗ ಮುಂದೆ ಅವುಗಳನ್ನು ಬಳಸುವ ಬಗೆ, ಅಂತ ರಿಕ್ಷದಲ್ಲಿ ನಮ್ಮದೇ ಆದ ಅಂತರಿಕ್ಷ ನಿಲ್ದಾಣ ಗಳನ್ನು ಸ್ಥಾಪಿಸಿ -ಉಪಗ್ರಹಗಳ ಉಡಾವಣೆ, ರಿಪೇರಿ ಹೊರ ಜಗತ್ತಿನ ವೀಕ್ಷಣೆ ಇತ್ಯಾದಿಗಳ ಸಾಧ್ಯಾಸಾಧ್ಯತೆಗಳು ಎಷ್ಟರ ಮಟ್ಟಿಗೆ ಮುಂದುವರಿದಿವೆ ಎಂದರೆ ಜಗತ್ತಿನ ರಾಷ್ಟ್ರಗಳಲ್ಲಿ ಈ ನಿಟ್ಟಿನಲ್ಲಿ ಮುಂಚೂಣಿ ಯಲ್ಲಿರಲು ಸ್ಪರ್ಧೆಯೇ ಏರ್ಪಟ್ಟಿದೆ. ದಿನದಿಂದ ದಿನಕ್ಕೆ ಹೊಸ ಕಲ್ಪನೆಗಳ ಮೂಲಕ ಉದ್ಯಮಿಗಳು ಈ ಕ್ಷೇತ್ರಕ್ಕೆ ದಾಪುಗಾಲಿಡು ತ್ತಿದ್ದಾರೆ. ಚಂದ್ರಾನ್ವಷೇಣೆ, ಮಂಗಳ ನತ್ತ ಪಯಣ, ವಿಶೇಷ ವಿನ್ಯಾಸದ ದೂರ ದರ್ಶಕಗಳ ಉಡಾವಣೆ, ಒಂದೇ ಎರಡೇ? ಎಲ್ಲ ಉಪಗ್ರಹಗಳು ಒಂದಲ್ಲ ಒಂದು ಕ್ಷೇತ್ರಕ್ಕೆ ಸಂಬಂಧಿಸಿದವುಗಳು. ಸಂವಹನಕ್ಕಾಗಿ, ಮಿಲಿಟರಿ ಉದ್ದೇಶಗಳಿಗಾಗಿ, ಭೂಪ್ರದೇಶದ ಮಾಹಿತಿಗಳಿಗಾಗಿ, ಸಂಶೋಧನೆಗಳಿಗಾಗಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

ವಿಜ್ಞಾನಿಗಳ ಕುತೂಹಲ, ವಿಶ್ವ ರಹಸ್ಯಗಳನ್ನು ಅರಿಯುವ ತುಡಿತ, ಛಲ ಬಹಳಷ್ಟು ಸ್ಪರ್ಧಾತ್ಮಕವಾಗಿ ಮುಂದುವರಿದಿದೆ. ಭವಿಷ್ಯ ದಲ್ಲಿ ಭೂಮಿಯ ಹೊರಗಿನಿಂದ ನೋಡಿದರೆ, ಇದು ಉಪಗ್ರಹಗಳಿಂದ ಸುತ್ತುವರಿದಿರುವ ಗ್ರಹ, ದಟ್ಟಣೆ ಎಷ್ಟಿದೆಯೆಂದರೆ ಬೇರೇನೂ ಕಾಣದು ಎಂದು ಹೇಳುವ ಕಾಲ ಬಂದೀತು ಎಂದು ಹಾಸ್ಯ ಮಾಡುವ ಪರಿಸ್ಥಿತಿಯಾಗಿದೆ.

Advertisement

ಅದಕ್ಕಾಗಿ ಈ ಸಪ್ತಾಹ. ನಮ್ಮ ಮುಂದಿನ ಜನಾಂಗ ಈ ಕ್ಷೇತ್ರದ ಬಗ್ಗೆ ಅರಿತುಕೊಳ್ಳಬೇಕು ಸುಸ್ಥಿರ ಅಭಿವೃದ್ಧಿಗೆ ಇವನ್ನು ಬಳಸಬೇಕು. ಇದರಲ್ಲಿ ತೊಡಗಿಕೊಳ್ಳುವ ಆಸಕ್ತಿ ಅವರಲ್ಲಿ ಮೂಡಬೇಕು. ವಿಜ್ಞಾನ-ತಂತ್ರಜ್ಞಾನದತ್ತ ಅವರು ಹೊರಳಬೇಕೆನ್ನುವ ಆಶಯ. ಅಂತಾ ರಾಷ್ಟ್ರೀಯ ಸಹಕಾರದೊಂದಿಗೆ ಬಾಹ್ಯಾಕಾಶ ಸಂಶೋಧನೆ, ಶಿಕ್ಷಣ ಹೊಸ ಮಜಲನ್ನು ತಲುಪ ಬೇಕೆನ್ನುವ ಮನೋಭಾವವನ್ನು ಮೂಡಿಸುವ ಪ್ರಯತ್ನ.

ಅಂತಾರಾಷ್ಟ್ರೀಯ ಬಾಹ್ಯಾ ಕಾಶ ಸಂಸ್ಥೆಗಳು, ತಾರಾಲಯ ಗಳು ವಿಜ್ಞಾನ ಕೇಂದ್ರಗಳು ಈ ಸಪ್ತಾಹದಲ್ಲಿ ಈ ವರ್ಷ ಬಹಳ ದೊಡ್ಡ ಮಟ್ಟ ದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ. ಭಾರತದಲ್ಲಿ ಇಸ್ರೋ ತನ್ನ ಕೇಂದ್ರಗಳ ಮೂಲಕ ಹಾಗೂ ದೇಶದ ವಿಜ್ಞಾನಾಸಕ್ತ ಸಂಸ್ಥೆಗಳ ಮೂಲಕ ಕಾರ್ಯ ಕ್ರಮಗಳನ್ನು ಹಮ್ಮಿ ಕೊಳ್ಳುತ್ತಿದೆ. ರಾಜ್ಯದ ತಾರಾಲಯಗಳು, ವಿಜ್ಞಾನ ಕೇಂದ್ರಗಳು ವಿಭಿನ್ನ ಕಾರ್ಯಕ್ರಮಗಳ ಮೂಲಕ ಈ ಸಪ್ತಾಹದಲ್ಲಿ ವಿದ್ಯಾರ್ಥಿಗಳನ್ನು, ಅಧ್ಯಾಪಕ ರನ್ನು ಮತ್ತು ಸಾರ್ವಜನಿಕರನ್ನು ತಲುಪುವ ಪ್ರಯತ್ನ ಮಾಡುತ್ತಿವೆ. ರಸಪ್ರಶ್ನೆ ಸ್ಪರ್ಧೆಗಳು ಆನ್‌ಲೈನ್‌ ಕಾರ್ಯಕ್ರಮಗಳು, ಕಾರ್ಯಾ ಗಾರಗಳು, ವಿವಿಧ ಪ್ರಯೋಗಗಳು ಇವೆಲ್ಲ ಅಂತರಿಕ್ಷದ ಪರಿಚಯ, ಅಂತರಿಕ್ಷ ಯಾನದ ಸಾಧನೆಗಳು, ಭವಿಷ್ಯದ ಯೋಜನೆಗಳು ಇತ್ಯಾದಿಗಳನ್ನು ಚರ್ಚಿಸುತ್ತಿವೆ. ಒಟ್ಟಿನಲ್ಲಿ ನಮ್ಮ ಮುಂದಿನ ಯುವ ಜನಾಂಗ ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಆಸಕ್ತಿ ಬೆಳೆಸಿಕೊಳ್ಳ ಬೇಕೆನ್ನುವುದು ಉದ್ದೇಶ. ಅದು ಈಡೇರಲಿ ಎಂದು ನಮ್ಮ ಹಾರೈಕೆ.

-ಡಾ| ಕೆ.ವಿ.ರಾವ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next