Advertisement

ಮರುಜೀವ ನೀಡುವ ಅಮೃತ: ಅಂಗಾಂಗ ದಾನ

10:42 PM Aug 10, 2022 | Team Udayavani |

ಇದೇ 13ರಂದು ವಿಶ್ವ ಅಂಗಾಂಗ ದಾನ ದಿನ. ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಂದು ಬೆಳಗ್ಗೆ ಬೆಂಗಳೂರಿನಲ್ಲಿ ನಡೆಯಲಿರುವ ವಾಕಾಥಾನ್‌ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ| ಕೆ. ಸುಧಾಕರ್‌ ಹಾಗೂ ಅನೇಕ ಗಣ್ಯರು, ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸುಧಾಕರ್‌ ಅವರು ಅಂಗಾಂಗ ದಾನದ ಕುರಿತು ವಿಶೇಷ ಲೇಖನ ಬರೆದಿದ್ದಾರೆ.

Advertisement

ದಾನಶೂರ, ಮಹಾರಥಿ ಕರ್ಣನ ಕಥೆ ನಮ್ಮ ಜನಪದ ದಲ್ಲೂ ಮಿಳಿತಗೊಂಡಿದೆ. ಹಾಗೆಯೇ ಶಿಬಿ ಚಕ್ರವರ್ತಿಯ ಕಥೆ ಕೂಡ. ಎಷ್ಟೋ ಸಾವಿರ ವರ್ಷಗಳ ಹಿಂದೆ ನಡೆದ ಈ ಚರಿತ್ರೆ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿ ರು ವುದಕ್ಕೆ ಕಾರಣ, ಆ ಕಥೆಗಳಲ್ಲಿನ ಮೌಲ್ಯಾ  ದರ್ಶಗಳು. ಅದುವೇ ದಾನ. ಭಾರತೀಯ ಸಮಾಜದಲ್ಲಿ “ದಾನ’ ಎಂಬುದು ಕರುಣೆ, ಪ್ರೀತಿ, ದಯೆ ಮೊದಲಾದ ಮೌಲ್ಯಗಳನ್ನೊಳಗೊಂಡ ಸಮಗ್ರ ಆದರ್ಶ. ಈ ಆದರ್ಶವನ್ನು ನಿಸ್ವಾರ್ಥದಿಂದ ಪಾಲಿಸುವವರನ್ನು ಸಮಾಜ ಸರ್ವಕಾಲಕ್ಕೂ ಸ್ಮರಿಸುತ್ತದೆ ಎಂಬುದಕ್ಕೆ ಕರ್ಣ ಹಾಗೂ ಶಿಬಿ ಮಹಾರಾಜರೇ ಸಾಕ್ಷಿ.

ಇಂತಹ ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಡೆಯಲು ನಮಗೆಲ್ಲರಿಗೂ ಅವಕಾಶ ಮಾಡಿಕೊಡುವ ಪುಣ್ಯಕರ ಕಾರ್ಯವೇ ಅಂಗಾಂಗ ದಾನ. ಇನ್ನೊಬ್ಬರ ಜೀವ ಉಳಿ ಸುವ, ಸಾವಿನ ಅನಂತರವೂ ಮತ್ತೂಬ್ಬರಿಗೆ ಬದುಕು ನೀಡುವ ಈ ದಾನ, ಎಲ್ಲಕ್ಕಿಂತ ಶ್ರೇಷ್ಠ ದಾನ. ವೈದ್ಯಕೀಯ ಲೋಕದ ಆಧುನಿಕ ಆವಿಷ್ಕಾರ, ತಂತ್ರಜ್ಞಾನಗಳ ಸದ್ಬಳಕೆ ಯಿಂದ ಅಂಗಾಂಗ ದಾನ ಮತ್ತು ಕಸಿ ಅದ್ಭುತ ಅಚ್ಚರಿ ಯಂತೆ ನಡೆಯುತ್ತಿದೆ. ಇನ್ನೂ ಅಚ್ಚರಿ ಎಂದರೆ, ಈ ತಂತ್ರಜ್ಞಾನ ಗಳ ಬಳಕೆಯಿಂದ ಒಬ್ಬ ವ್ಯಕ್ತಿ 8 ಜನರಿಗೆ ಮರು ಜೀವ ನೀಡಬಹುದು. ಹೃದಯ, ಮೂತ್ರಪಿಂಡ, ಯಕೃತ್ತು ಸೇರಿದಂತೆ ಹಲವು ಅಂಗಾಂಗಗಳನ್ನು ದಾನ ಮಾಡಬಹುದು. ಅಲ್ಲದೆ, ಟಿಶ್ಯೂ ದಾನದ ಮೂಲಕ ಸುಮಾರು 50 ಜನರಿಗೆ ನೆರವಾಗಬಹುದು!

ವೈದ್ಯ ಲೋಕದಲ್ಲಿ ಎಷ್ಟೇ ದೊಡ್ಡ ತಂತ್ರಜ್ಞಾನಗಳ ಆವಿಷ್ಕಾರವಾದರೂ ಅದನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಸರಕಾರದ ಹೊಣೆ. ಕೋವಿಡ್‌ ಲಸಿಕೆ ಭಾರತದಲ್ಲೇ ಆವಿಷ್ಕಾರವಾದರೂ ಅತೀ ಕಡಿಮೆ ಅವಧಿ ಯಲ್ಲಿ 200 ಕೋಟಿ ಲಸಿಕೆಗಳನ್ನು ನೀಡಿರುವುದು ಸರಕಾರಿ ವ್ಯವಸ್ಥೆಯ ವೇಗದ ಕಾರ್ಯವೈಖರಿಗೆ ಸಾಕ್ಷಿ. ಇದ ರಲ್ಲಿ ವೈದ್ಯರು, ಸಂಘ ಸಂಸ್ಥೆಗಳ ಪಾತ್ರವೂ ಇದೆ. ಇದೇ ರೀತಿ ಅಂಗಾಂಗ ದಾನ ಹಾಗೂ ಕಸಿಯಲ್ಲಿ ಹೊಸ ತಂತ್ರಜ್ಞಾನ ಬಂದರೂ ಅದನ್ನು ಜನಾಂದೋಲನವಾಗಿ ರೂಪಿಸಲು ಸರಕಾರ ವ್ಯಾಪಕ ಕ್ರಮ ಕೈಗೊಳ್ಳುತ್ತಿದೆ. ವೈದ್ಯರು, ಎನ್‌ಜಿಒ, ಧಾರ್ಮಿಕ ಸಂಸ್ಥೆಗಳು, ಕಾರ್ಪೊರೆಟ್‌ ಸೇರಿದಂತೆ ಎಲ್ಲರೂ ಭಾಗಿಯಾಗಿ ಜಾಗೃತಿ ಕಾರ್ಯ ಕೈಗೊಂಡಾಗ ಮಾತ್ರ ಅಂಗಾಂಗ ದಾನ ಜನರ ಅಭಿಯಾನವಾಗಿ ಬದಲಾಗಲು ಸಾಧ್ಯ.

ಅಂಗಾಂಗ ದಾನದಲ್ಲಿ ಏಕಿಷ್ಟು ಹಿಂದೆ?: ಸ್ಪೇನ್‌ನಲ್ಲಿ 10 ಲಕ್ಷ ಜನರಲ್ಲಿ 40 ಜನರು ಅಂಗಾಂಗ ದಾನ ಮಾಡಿದರೆ, 130 ಕೋಟಿ ಜನಸಂಖ್ಯೆಯ ಭಾರತದಲ್ಲಿ 10 ಲಕ್ಷದಲ್ಲಿ ಕೇವಲ 0.08 ಜನರು ಮಾತ್ರ ಅಂಗಾಂಗ ದಾನ ಮಾಡುತ್ತಿದ್ದಾರೆ. ದೇಶದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 800 ಜನರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗೆಯೇ ಪ್ರತಿ 10 ಲಕ್ಷದಲ್ಲಿ 150-200 ಜನರು ಇಎಸ್‌ಆರ್‌ಡಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಈ ಪೈಕಿ 3 ಲಕ್ಷ ಜನರು ಕಿಡ್ನಿ ಕಸಿಗಾಗಿ ಕಾಯುತ್ತಿದ್ದು, ಪ್ರತೀ ವರ್ಷ 10 ಸಾವಿರ ರೋಗಿಗಳು ಮಾತ್ರ ಕಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಸುಮಾರು 1 ಲಕ್ಷ ರೋಗಿಗಳು ಯಕೃತ್ತು ಕಸಿಗಾಗಿ ಕಾಯುತ್ತಿದ್ದು, ಶೇ.3ಕ್ಕೂ ಕಡಿಮೆ ರೋಗಿಗಳು ಕಸಿ ಮಾಡಿಸಿಕೊಳ್ಳುವ ಪರಿಸ್ಥಿತಿ ಇದೆ. ಹೃದಯ ಕಸಿ ಅಗತ್ಯವಿರುವ ಸುಮಾರು 50 ಸಾವಿರ ರೋಗಿಗಳಲ್ಲಿ, ಕನಿಷ್ಠ ಸಂಖ್ಯೆಯ ರೋಗಿಗಳು ಕಸಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿದೆ. 12 ಲಕ್ಷ ಭಾರತೀಯರಿಗೆ ಕಾರ್ನಿಯಾ ಕಸಿ ಅಗತ್ಯವಿದ್ದರೆ, ಪ್ರತೀ ವರ್ಷ 50 ಸಾವಿರ ಮಂದಿ ಮಾತ್ರ ಕಾರ್ನಿಯಾ ಪಡೆಯುತ್ತಿದ್ದಾರೆ. ಸಾಮಾಜಿಕ ಹಿನ್ನೆಲೆ, ಮೂಢನಂಬಿಕೆ, ಆತಂಕ ಮೊದಲಾದ ಕಾರಣಗಳು ಅಂಗಾಂಗ ದಾನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ.

Advertisement

ಆಗಸ್ಟ್‌ 13ರಂದು ಜಗತ್ತಿನಾದ್ಯಂತ “ವಿಶ್ವ ಅಂಗಾಂಗ ದಾನ ದಿನಾಚರಣೆ’ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರಕಾರ, ಈ ದಿನವನ್ನು ವಿಶೇಷವಾಗಿ ಆಚರಿಸಲಿದ್ದು, ಅಂಗಾಂಗ ದಾನವನ್ನು ಜನಾಂದೋಲನವಾಗಿ ರೂಪಿಸಲು ಸಿದ್ಧತೆ ನಡೆದಿದೆ.

ಸೊಟ್ಟೊ ಕರ್ನಾಟಕ : ರಾಜ್ಯದಲ್ಲಿ ಅಂಗಾಂಗ ದಾನದ ಎಲ್ಲ ಚಟುವಟಿಕೆ ನಿರ್ವಹಣೆ ಮಾಡಲು “ಜೀವಸಾರ್ಥಕತೆ’ ಸೊಸೈಟಿ ಆರಂಭಿಸಲಾಗಿತ್ತು. ಈ ಸೊಸೈಟಿ ಈಗ “ಸೊಟ್ಟೊ ಕರ್ನಾಟಕ’ (State Organ and Tissue Transplant Organization & SOTTO) ಎಂದು ಬದಲಾಗಿದೆ. “ಮಾನವ ಅಂಗಾಂಗಗಳ ಕಸಿ ಕಾಯ್ದೆ-1994′ ರ ಸಮರ್ಪಕ ಅನುಷ್ಠಾನದ ಹೊಣೆ ಇದರ ಮೇಲಿದೆ. ಈ ಸಂಸ್ಥೆ ಅಂಗಾಂಗ ದಾನದ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಸರಕಾರೇತರ ಸಂಸ್ಥೆ, ಕಾರ್ಪೊರೆಟ್‌ ಸೇರಿದಂತೆ ವಿವಿಧ ಸಂಸ್ಥೆಗಳ ಮುಖಾಂತರ ಜಾಗೃತಿ ಕಾರ್ಯಗಳು ನಡೆಯಲಿವೆ. ಅಂಗಾಂಗ ದಾನಿಗಳ ಪಟ್ಟಿ ಹಾಗೂ ಕಸಿಗಾಗಿ ಕಾಯುತ್ತಿರುವ ರೋಗಿಗಳ ಪಟ್ಟಿ ನಿರ್ವಹಣೆ, ಕುಟುಂಬದವರ ಮನ ಒಲಿಕೆ, ಆಸ್ಪತ್ರೆಗಳ ನಡುವೆ ಸಮನ್ವಯ ಸೇರಿದಂತೆ ಬಹುಮುಖೀ ಕಾರ್ಯಗಳನ್ನು ಸೊಟ್ಟೊ ಮಾಡುತ್ತದೆ.

ಅಂಗಾಂಗ ದಾನ ಕೇವಲ ವೈದ್ಯಕೀಯ ಪ್ರಕ್ರಿಯೆ ಅಲ್ಲ. ಇದು ಸಾಮಾಜಿಕ ಹಿನ್ನೆಲೆ ಒಳಗೊಂಡಿದೆ. ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಾಗ ಆತ/ಆಕೆಯ ಕುಟುಂಬ ತೀವ್ರ ಆಘಾತದಲ್ಲಿರುತ್ತದೆ. ಇವರನ್ನು ಮನ ಒಲಿಸಿ ಅಂಗಾಂಗ ದಾನಕ್ಕೆ ಒಪ್ಪಿಸುವುದು ಸೂಕ್ಷ್ಮ ಸಂಗತಿ. ಅಲ್ಲದೆ, ಅಂಗಾಂಗಗಳನ್ನು ದೇಹದಿಂದ ಹೊರತೆಗೆಯುವುದು, ಸ್ಥಳಾಂತರ, ಕಸಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಸಮಯದ ಅಭಾವವನ್ನು ಒಳಗೊಂಡಿರುತ್ತದೆ. ಈ ಎಲ್ಲ ಕಾರ್ಯಗಳನ್ನು ಸೊಟ್ಟೊ ಸಂಸ್ಥೆ ಮಾಡುತ್ತದೆ. ಆದರೆ ಇದಕ್ಕೆ ಕುಟುಂಬದವರು, ವೈದ್ಯರು, ಆರೋಗ್ಯ ಸಂಸ್ಥೆ, ಸ್ಥಳಾಂತರಕ್ಕೆ ನೆರವಾಗುವ ಟ್ರಾಫಿಕ್‌ ಪೊಲೀಸ್‌ ಹೀಗೆ ಎಲ್ಲರ ಸಹಕಾರ ಅಗತ್ಯ. ಹೀಗಾಗಿ ಅಂಗಾಂಗ ದಾನ ಎಂಬುದು ಸಾಮೂಹಿಕ ಕಾರ್ಯ.

ಈವರೆಗೆ ಸರಕಾರ ಕೈಗೊಂಡ ಜಾಗೃತಿ ಕಾರ್ಯ ಗಳಿಂದಾಗಿ ಹಿಂದೆಗಿಂತಲೂ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಗಮನಾರ್ಹ. 2017ರಿಂದ ಆರಂಭವಾಗಿ 2022ರ ಆ.7ರವರೆಗೆ, 448 ಪ್ರಕರಣಗಳಲ್ಲಿ ಅಂಗಾಂಗ ದಾನಗಳು ನಡೆದಿವೆ. ಇದರಲ್ಲಿ 662 ಕಿಡ್ನಿ, 374 ಯಕೃತ್ತು, 133 ಹೃದಯ ದಾನಗಳು ಸೇರಿವೆ.

ಮತ್ತೊಬ್ಬರ ಜೀವಕ್ಕೆ ಅಮೃತ ನೀಡಿ: ದೇಶದೆಲ್ಲೆ ಡೆ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆಯಾಗುತ್ತಿದೆ. ಇದು ತ್ಯಾಗ, ಬಲಿದಾನ, ಸಮರ್ಪಣೆ ಮೊದಲಾದ ಮಹೋನ್ನತ ಮೌಲ್ಯಗಳನ್ನು ಸಾರುವ ಆಚರಣೆ. ಸ್ವಾತಂತ್ರ್ಯ ಹೋರಾಟಗಾರರು ತನು, ಮನ, ಧನ ಸೇರಿದಂತೆ ಇಡೀ ಬದುಕನ್ನು ಭಾರತಕ್ಕೆ ಅರ್ಪಿಸಿದ ಚರಿತ್ರೆಯನ್ನು ಸಾರುವ ಸಂದರ್ಭ. ಈ ಸ್ವಾತಂತ್ರ್ಯ ದ ಅಮೃತ ಮಹೋತ್ಸವದಲ್ಲಿ ಮತ್ತೊಬ್ಬರ ಜೀವಕ್ಕೆ ಅಮೃತವಾಗುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳುವಂತಾಗಲಿ. ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡು ಸಾರ್ಥಕತೆ ಮೆರೆಯುವ ಜನಾಂದೋಲನ ವ್ಯಾಪಕವಾಗಲಿ.

-ಡಾ| ಕೆ. ಸುಧಾಕರ್‌,
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು

Advertisement

Udayavani is now on Telegram. Click here to join our channel and stay updated with the latest news.

Next