Advertisement
ದಾನಶೂರ, ಮಹಾರಥಿ ಕರ್ಣನ ಕಥೆ ನಮ್ಮ ಜನಪದ ದಲ್ಲೂ ಮಿಳಿತಗೊಂಡಿದೆ. ಹಾಗೆಯೇ ಶಿಬಿ ಚಕ್ರವರ್ತಿಯ ಕಥೆ ಕೂಡ. ಎಷ್ಟೋ ಸಾವಿರ ವರ್ಷಗಳ ಹಿಂದೆ ನಡೆದ ಈ ಚರಿತ್ರೆ, ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿ ರು ವುದಕ್ಕೆ ಕಾರಣ, ಆ ಕಥೆಗಳಲ್ಲಿನ ಮೌಲ್ಯಾ ದರ್ಶಗಳು. ಅದುವೇ ದಾನ. ಭಾರತೀಯ ಸಮಾಜದಲ್ಲಿ “ದಾನ’ ಎಂಬುದು ಕರುಣೆ, ಪ್ರೀತಿ, ದಯೆ ಮೊದಲಾದ ಮೌಲ್ಯಗಳನ್ನೊಳಗೊಂಡ ಸಮಗ್ರ ಆದರ್ಶ. ಈ ಆದರ್ಶವನ್ನು ನಿಸ್ವಾರ್ಥದಿಂದ ಪಾಲಿಸುವವರನ್ನು ಸಮಾಜ ಸರ್ವಕಾಲಕ್ಕೂ ಸ್ಮರಿಸುತ್ತದೆ ಎಂಬುದಕ್ಕೆ ಕರ್ಣ ಹಾಗೂ ಶಿಬಿ ಮಹಾರಾಜರೇ ಸಾಕ್ಷಿ.
Related Articles
Advertisement
ಆಗಸ್ಟ್ 13ರಂದು ಜಗತ್ತಿನಾದ್ಯಂತ “ವಿಶ್ವ ಅಂಗಾಂಗ ದಾನ ದಿನಾಚರಣೆ’ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರಕಾರ, ಈ ದಿನವನ್ನು ವಿಶೇಷವಾಗಿ ಆಚರಿಸಲಿದ್ದು, ಅಂಗಾಂಗ ದಾನವನ್ನು ಜನಾಂದೋಲನವಾಗಿ ರೂಪಿಸಲು ಸಿದ್ಧತೆ ನಡೆದಿದೆ.
ಸೊಟ್ಟೊ ಕರ್ನಾಟಕ : ರಾಜ್ಯದಲ್ಲಿ ಅಂಗಾಂಗ ದಾನದ ಎಲ್ಲ ಚಟುವಟಿಕೆ ನಿರ್ವಹಣೆ ಮಾಡಲು “ಜೀವಸಾರ್ಥಕತೆ’ ಸೊಸೈಟಿ ಆರಂಭಿಸಲಾಗಿತ್ತು. ಈ ಸೊಸೈಟಿ ಈಗ “ಸೊಟ್ಟೊ ಕರ್ನಾಟಕ’ (State Organ and Tissue Transplant Organization & SOTTO) ಎಂದು ಬದಲಾಗಿದೆ. “ಮಾನವ ಅಂಗಾಂಗಗಳ ಕಸಿ ಕಾಯ್ದೆ-1994′ ರ ಸಮರ್ಪಕ ಅನುಷ್ಠಾನದ ಹೊಣೆ ಇದರ ಮೇಲಿದೆ. ಈ ಸಂಸ್ಥೆ ಅಂಗಾಂಗ ದಾನದ ಕುರಿತು ಸಮುದಾಯಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಲಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ಸರಕಾರೇತರ ಸಂಸ್ಥೆ, ಕಾರ್ಪೊರೆಟ್ ಸೇರಿದಂತೆ ವಿವಿಧ ಸಂಸ್ಥೆಗಳ ಮುಖಾಂತರ ಜಾಗೃತಿ ಕಾರ್ಯಗಳು ನಡೆಯಲಿವೆ. ಅಂಗಾಂಗ ದಾನಿಗಳ ಪಟ್ಟಿ ಹಾಗೂ ಕಸಿಗಾಗಿ ಕಾಯುತ್ತಿರುವ ರೋಗಿಗಳ ಪಟ್ಟಿ ನಿರ್ವಹಣೆ, ಕುಟುಂಬದವರ ಮನ ಒಲಿಕೆ, ಆಸ್ಪತ್ರೆಗಳ ನಡುವೆ ಸಮನ್ವಯ ಸೇರಿದಂತೆ ಬಹುಮುಖೀ ಕಾರ್ಯಗಳನ್ನು ಸೊಟ್ಟೊ ಮಾಡುತ್ತದೆ.
ಅಂಗಾಂಗ ದಾನ ಕೇವಲ ವೈದ್ಯಕೀಯ ಪ್ರಕ್ರಿಯೆ ಅಲ್ಲ. ಇದು ಸಾಮಾಜಿಕ ಹಿನ್ನೆಲೆ ಒಳಗೊಂಡಿದೆ. ವ್ಯಕ್ತಿಯ ಮಿದುಳು ನಿಷ್ಕ್ರಿಯಗೊಂಡಾಗ ಆತ/ಆಕೆಯ ಕುಟುಂಬ ತೀವ್ರ ಆಘಾತದಲ್ಲಿರುತ್ತದೆ. ಇವರನ್ನು ಮನ ಒಲಿಸಿ ಅಂಗಾಂಗ ದಾನಕ್ಕೆ ಒಪ್ಪಿಸುವುದು ಸೂಕ್ಷ್ಮ ಸಂಗತಿ. ಅಲ್ಲದೆ, ಅಂಗಾಂಗಗಳನ್ನು ದೇಹದಿಂದ ಹೊರತೆಗೆಯುವುದು, ಸ್ಥಳಾಂತರ, ಕಸಿ ಸೇರಿದಂತೆ ಎಲ್ಲ ಪ್ರಕ್ರಿಯೆಗಳು ಸಮಯದ ಅಭಾವವನ್ನು ಒಳಗೊಂಡಿರುತ್ತದೆ. ಈ ಎಲ್ಲ ಕಾರ್ಯಗಳನ್ನು ಸೊಟ್ಟೊ ಸಂಸ್ಥೆ ಮಾಡುತ್ತದೆ. ಆದರೆ ಇದಕ್ಕೆ ಕುಟುಂಬದವರು, ವೈದ್ಯರು, ಆರೋಗ್ಯ ಸಂಸ್ಥೆ, ಸ್ಥಳಾಂತರಕ್ಕೆ ನೆರವಾಗುವ ಟ್ರಾಫಿಕ್ ಪೊಲೀಸ್ ಹೀಗೆ ಎಲ್ಲರ ಸಹಕಾರ ಅಗತ್ಯ. ಹೀಗಾಗಿ ಅಂಗಾಂಗ ದಾನ ಎಂಬುದು ಸಾಮೂಹಿಕ ಕಾರ್ಯ.
ಈವರೆಗೆ ಸರಕಾರ ಕೈಗೊಂಡ ಜಾಗೃತಿ ಕಾರ್ಯ ಗಳಿಂದಾಗಿ ಹಿಂದೆಗಿಂತಲೂ ಅಂಗಾಂಗ ದಾನಿಗಳ ಸಂಖ್ಯೆ ಹೆಚ್ಚಾಗಿದೆ ಎಂಬುದು ಗಮನಾರ್ಹ. 2017ರಿಂದ ಆರಂಭವಾಗಿ 2022ರ ಆ.7ರವರೆಗೆ, 448 ಪ್ರಕರಣಗಳಲ್ಲಿ ಅಂಗಾಂಗ ದಾನಗಳು ನಡೆದಿವೆ. ಇದರಲ್ಲಿ 662 ಕಿಡ್ನಿ, 374 ಯಕೃತ್ತು, 133 ಹೃದಯ ದಾನಗಳು ಸೇರಿವೆ.
ಮತ್ತೊಬ್ಬರ ಜೀವಕ್ಕೆ ಅಮೃತ ನೀಡಿ: ದೇಶದೆಲ್ಲೆ ಡೆ ಸ್ವಾತಂತ್ರ್ಯ ದ ಅಮೃತ ಮಹೋತ್ಸವ ಆಚರಣೆಯಾಗುತ್ತಿದೆ. ಇದು ತ್ಯಾಗ, ಬಲಿದಾನ, ಸಮರ್ಪಣೆ ಮೊದಲಾದ ಮಹೋನ್ನತ ಮೌಲ್ಯಗಳನ್ನು ಸಾರುವ ಆಚರಣೆ. ಸ್ವಾತಂತ್ರ್ಯ ಹೋರಾಟಗಾರರು ತನು, ಮನ, ಧನ ಸೇರಿದಂತೆ ಇಡೀ ಬದುಕನ್ನು ಭಾರತಕ್ಕೆ ಅರ್ಪಿಸಿದ ಚರಿತ್ರೆಯನ್ನು ಸಾರುವ ಸಂದರ್ಭ. ಈ ಸ್ವಾತಂತ್ರ್ಯ ದ ಅಮೃತ ಮಹೋತ್ಸವದಲ್ಲಿ ಮತ್ತೊಬ್ಬರ ಜೀವಕ್ಕೆ ಅಮೃತವಾಗುವ ಸಂಕಲ್ಪವನ್ನು ಎಲ್ಲರೂ ಕೈಗೊಳ್ಳುವಂತಾಗಲಿ. ಪ್ರತಿಯೊಬ್ಬರೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡು ಸಾರ್ಥಕತೆ ಮೆರೆಯುವ ಜನಾಂದೋಲನ ವ್ಯಾಪಕವಾಗಲಿ.
-ಡಾ| ಕೆ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರು