Advertisement

ವಿಶ್ವ ಭ್ರಾತೃತ್ವದ ಪರಿಕಲ್ಪನೆಗೆ ದಾದಿಯರ ಕೊಡುಗೆ : ಇಂದು ವಿಶ್ವ ದಾದಿಯರ ದಿನ

11:19 PM May 11, 2022 | Team Udayavani |

ಆರೋಗ್ಯ ಸೇವಾ ಕ್ಷೇತ್ರದಲ್ಲಿ ಪರಿಣಾಮಕಾರಿ ಯಾದ ಶುಶ್ರೂಷಾ ವಿಭಾಗಕ್ಕೆ ದಾದಿಯರದೇ ನೇತೃತ್ವ. ವೈದ್ಯರ ನಿರ್ದೇಶನವನ್ನು ಯಥಾವತ್ತಾಗಿ ಪಾಲಿಸಲು ದಾದಿಯರು ಸಹಕರಿಸುತ್ತಾರೆ. ವಿಶ್ವ ದಾದಿಯರ ದಿನಾಚರಣೆಯ ನಿಮಿತ್ತ ಜಗದ್ವಾéಪಕವಾದ ಶುಶ್ರೂಷಾ ಸೇವೆಯ ಬಗ್ಗೆ ಉಲ್ಲೇಖೀಸುವುದು ಔಚಿತ್ಯದಾಯಕ.

Advertisement

(ಮೇ 12ರಂದು) ಫ್ಲಾರೆನ್ಸ್‌ ನೈಟಿಂಗೆಲ್‌ ಅವರ ಜನ್ಮದಿನವನ್ನೇ ವಿಶ್ವ ದಾದಿಯರ ದಿನವನ್ನಾಗಿ ಆಚರಿಸುವುದು. ಅನೇಕರಿಗೆ ತಿಳಿದ ವಿಚಾರ. 1854ರ ಕ್ರೈಮನ್‌ ಯುದ್ಧದಲ್ಲಿ ಗಾಯಗೊಂಡ ಸೇನಾನಿಗಳ ಆರೈಕೆ ಮಾಡಿ ಜಗತ್ತಿನಾದ್ಯಂತ ಗೌರವ ಪಡೆದ ನೈಟಿಂಗೆಲ್‌ ವೃತ್ತಿ ಘನತೆಯನ್ನು ಎತ್ತಿ ಹಿಡಿದ ಅನುಭವಿ ದಾದಿ. ಲಂಡನ್‌ನ ಪ್ರಮುಖ ಆಸ್ಪತ್ರೆಯಲ್ಲಿ ದಾದಿಯಾಗಿ ಸೇವೆ ಸಲ್ಲಿಸಿದ ಅವರು ಮಾನವೀಯತೆಯ ಪ್ರತಿಪಾದಕರಾಗಿಯೂ ಪ್ರಸಿದ್ಧರು. ಆಧುನಿಕ ನರ್ಸಿಂಗ್‌ ಶಿಕ್ಷಣದ ಪ್ರಗತಿ ಗಾಗಿ ಕೊಡುಗೆ ನೀಡಿದ ಫ್ಲಾರೆನ್ಸ್‌ ನೈಟಿಂಗೆಲ್‌ ನರ್ಸಿಂಗ್‌ ವಿಜ್ಞಾನ ಕಾಲೇಜನ್ನೂ ಸ್ಥಾಪಿಸಿದ್ದಾರೆ.

1820ರಿಂದ 1910ರ ಕಾಲಾವಧಿಯಲ್ಲಿ ಜೀವಿತದ ಬಹುಭಾಗವನ್ನು ಶುಶ್ರೂಷ ಸೇವೆ ಗಾಗಿ ವಿನಿಯೋಗಿಸಿದ್ದು ಸ್ವಯಂಸ್ಫೂರ್ತಿಯ ಸಮ ರ್ಪಣಾಭಾವದಿಂದ. ಬ್ರಿಟನ್‌, ಫ್ರಾನ್ಸ್‌ ಮತ್ತು ರಷ್ಯಾ ದೇಶಗಳೊಂದಿಗೆ ನಡೆದ ಕ್ರೈಮನ್‌ ಯುದ್ಧದಲ್ಲಿ ಜರ್ಜರಿತವಾಗಿ ಬಿದ್ದ ಯೋಧರು ಆಸ್ಪತ್ರೆ ಸೇರಿದಾಗ ಅವರು ಶೀಘ್ರ ಗುಣಮುಖ ರಾಗುವಂತೆ ದಾದಿಯರ ತಂಡ ಪ್ರಯತ್ನಿಸಿತು. ಆ ತಂಡದಲ್ಲಿ ನೈಟಿಂಗೆಲ್‌ ಅವರದು ಪ್ರಮುಖ ಪಾತ್ರ.

ವಾರ್ಷಿಕ ಪ್ರಶಸ್ತಿ ವಿತರಣೆ
1912ರಲ್ಲಿ ಅಂತರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ “”ಪ್ಲಾರೆನ್ಸ್‌ ನೈಟಿಂಗೇಲ್‌” ಪದಕವನ್ನು ವಿಶಿಷ್ಟ ನರ್ಸಿಂಗ್‌ ಸೇವೆಯನ್ನು ಮಾಡಿದ ದಾದಿಯರಿಗೆ ನೀಡಲು ಆರಂಭಿಸಿತು. ಪ್ರತಿ ಎರಡು ವರ್ಷಕ್ಕೊಮ್ಮೆ ಈ ಪದಕ ನೀಡಲಾಗುತ್ತದೆ. ಭಾರತ ದೇಶದವರಿಗೆ 1973ರಿಂದ “”ರಾಷ್ಟ್ರೀಯ ಪ್ಲಾರೆನ್ಸ್‌ ನೈಟಿಂಗೇಲ್‌ ಪದಕ” ಎಂಬುದಾಗಿ ರಾಷ್ಟ್ರಪತಿಗಳಿಂದ ಪದಕ ನೀಡುವ ಸಂಪ್ರದಾಯ ಆರಂಭಿಸಲಾಯಿತು. ಪ್ರತೀ ವರ್ಷ ಈ ಪದಕ ನೀಡಲಾಗುತ್ತದೆ. ಬೇರೆ ಬೇರೆ ದೇಶಗಳಲ್ಲಿ ಫ್ಲಾರೆನ್ಸ್‌ ನೈಟಿಂಗೆಲ್‌ ಅವರ ನೆನಪಿನಲ್ಲಿ ಪ್ರತಿವರ್ಷ ದಾದಿಯರ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ವಿತರಣೆ ನಡೆಯುತ್ತಿದೆ. ಭಾರತದಲ್ಲೂ ದಾದಿಯರ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮಗಳು ಜರಗುತ್ತವೆ.

ವಿದ್ಯಾ ಪರಿಣತಿ, ಪ್ರತಿಭೆ, ಅರ್ಹತೆ, ಸ್ಪಂದನಶೀಲತೆ ಇತ್ಯಾದಿಗಳಿಂದ ದಾದಿಯರ ಕರ್ತವ್ಯ ನಿರ್ವಹಣೆ ಮಾನ್ಯವಾಗುತ್ತದೆ. ವೈದ್ಯರು ನಿರ್ದೇಶಿಸಿದ ಚಿಕಿತ್ಸಾ ಸೂತ್ರಗಳನ್ನು ಅನುಷ್ಠಾನಿಸುವಲ್ಲಿ ಆಸ್ಪತ್ರೆಗಳಲ್ಲಿ ದಾದಿಯರು ಪ್ರಭಾವಶಾಲಿಗಳು. ವೈಜ್ಞಾನಿಕವಾಗಿ ನರ್ಸಿಂಗ್‌ ಸೇವೆ ಈಗ ವಿಸ್ತಾರಗೊಂಡು ಬಹುಜನರ ಮೆಚ್ಚುಗೆ ಗಳಿಸಿದೆ. ಅಪಘಾತ, ತೀವ್ರನಿಗಾ ವಿಭಾಗ, ಶಸ್ತ್ರಕ್ರಿಯಾ ವಿಭಾಗ, ಮಕ್ಕಳ ವಿಭಾಗ, ಹೆರಿಗೆ ವಿಭಾಗ, ಹೃದಯ ಚಿಕಿತ್ಸೆ ಇತ್ಯಾದಿಯಾಗಿ ವಿವಿಧ ವಿಭಾಗಗಳಲ್ಲಿ ಶುಶ್ರೂಷಾ ವಿಭಾಗ ಆದ್ಯತೆ ಪಡೆಯುತ್ತದೆ.

Advertisement

ಯಾವುದೋ ಸಾಮಾನ್ಯ ಮಾತ್ರೆಯೊಂದು ರೋಗಿಯ ಉದರ ಸೇರುವುದರಿಂದ ಹಿಡಿದು, ದೇಹದ ಅಂಗಾಂಗಳನ್ನೇ ಬಗೆದು ಗಂಟೆಗಟ್ಟಲೆ ನಡೆಸುವ ಶಸ್ತ್ರಚಿಕಿತ್ಸೆಯವರೆಗೆ ಪ್ರತಿಯೊಂದು ವೈದ್ಯಕೀಯ ಪ್ರಕ್ರಿಯೆಯಲ್ಲಿಯೂ ನರ್ಸ್‌ಗಳ ಪಾಲ್ಗೊಳ್ಳುವಿಕೆ ಆವಶ್ಯಕವಾಗಿದೆ. ವಿವಿಧ ಚಿಕಿತ್ಸೆಯ ರೂಪುರೇಷೆಗಳನ್ನು ವೈದ್ಯರು ನಿರ್ಧರಿಸಿದರೂ, ಅದರ ಸಮರ್ಪಕ ಅನುಷ್ಠಾನ ಸಾಧ್ಯವಾಗುವುದು ಮಾತ್ರ ನಿಸ್ವಾರ್ಥ ಸೇವೆಗೈಯ್ಯುವ ಶುಶ್ರೂಷಕರಿಂದಲೇ.

ಸವಾಲಿಗೆ ಸವೊಲೊಡ್ಡುವರು 
ದಾದಿಯರ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಸವಾಲುಗಳು ಜಾಸ್ತಿಯೇ. ಅದರಲ್ಲಿಯೂ ಅವರ ಪ್ರಮಾಣ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಲೇ ಇದೆ ವಿನಾಃ ಹೆಚ್ಚಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 350 ಜನರಿಗೆ ಒಬ್ಬರು ಶುಶ್ರೂಷಕರು ಇರಬೇಕು. ಆದರೆ ಪ್ರಸ್ತುತ ಭಾರತದಲ್ಲಿ 600ಕ್ಕೆ ಒಬ್ಬರಂತೆ ದಾದಿಯರಿದ್ದಾರೆ. ಇದು ಅವರ ಒತ್ತಡ ಮತ್ತು ಈ ಕ್ಷೇತ್ರದಲ್ಲಿರುವ ಕೊರತೆಯ ಕೈಗನ್ನಡಿಯಾಗಿದೆ. ಒಂದು ಅಂದಾಜಿನ ಪ್ರಕಾರ ದಾದಿಯರು ತಮ್ಮ ಒಂದು ಪಾಳಿಯಲ್ಲಿ ಏನಿಲ್ಲವೆಂದರೂ ಸರಿಸುಮಾರು 8ರಿಂದ 9 ಕಿ. ಮೀ. ದೂರ ಕ್ರಮಿಸುವಷ್ಟು ನಡೆಯುತ್ತಾರೆ.

ಹುಟ್ಟಿನಿಂದ ಹಿಡಿದು ಬದುಕ ಯಾನ ಮುಗಿಸುವವರೆಗೆ ವಿವಿಧ ಹಂತದಲ್ಲಿ ಅವರ ಕೆಲಸ ಬೆಲೆ ಕಟ್ಟಲಾಗದ್ದು, ಹುಟ್ಟು ಸಾವಿನ ನಡುವಿನ ಬದುಕಲ್ಲಿ ಅವರ ಹೋರಾಟಕ್ಕೆ ನಾವು ಅವರೊಂದಿಗೆ ಕೈ ಜೋಡಿಸಬೇಕಿದೆ. ಅವರಲ್ಲಿ ಹೇಳದೆ ಉಳಿದು ಹೋದ ನೋವುಗಳಿಗೆ ಧನಿಯಾಗಬೇಕಾಗಿದೆ. ಅವರ ಕೆಲಸವನ್ನು ಹಾಡಿ ಹೊಗಳದಿದ್ದರೂ ಪರವಾಗಿಲ್ಲ.ಅವರೊಂದಿಗೆ ನೀಚ ವರ್ತನೆ ತೋರಿಸದೆ ಸಭ್ಯವಾಗಿದ್ದಲ್ಲಿ ಅದಕ್ಕಿಂತ ಬೇರೆ ಕೊಡುಗೆ ಮತ್ತೂಂದಿಲ್ಲ.

ಮನುಕುಲಕ್ಕೆ ಮಾರಕವಾಗಿ ಆಗಾಗ ಕಂಡು ಬರುವ ವಿವಿಧ ವ್ಯಾಧಿಗಳನ್ನು ನಿಯಂತ್ರಿಸಲೂ ದಾದಿಯರ ಸೇವೆ ಅಗತ್ಯ. ಅಸೌಖ್ಯದಿಂದ ಬಳಲಿದ ಅಸ್ವಸ್ಥ ಜನರ, ರೋಗಿಗಳ ಚೇತರಿಕೆಗಾಗಿ ಶ್ರಮಿಸುವ ಸಹಸ್ರಾರು ದಾದಿಯರು ಸದಾ ಕಾಣ ಸಿಗುತ್ತಾರೆ.

ಪ್ರಾಜ್ಞರಿಂದ ಪ್ರತಿದಿನ ವಂದನಾರ್ಹರಾಗಿ ಗೌರವ ಗಳಿಸುವ ಸ್ತ್ರೀ, ಪುರುಷ ದಾದಿಯರು ಆಸ್ಪತ್ರೆಗಳಲ್ಲಿ ಸಿಸ್ಟರ್‌ ಮತ್ತು ಬ್ರದರ್ ಎಂದು ಗುರುತಿಸಲ್ಪಡುತ್ತಾರೆ. ವಿಶ್ವಭಾತೃತ್ವದ ಪರಿಕಲ್ಪನೆ ಯನ್ನು ಕಾರ್ಯಾರ್ಥದಲ್ಲಿ ಸಾಕಾರ ಗೊಳಿಸಿ ಸಹೋದರ ಭಾವದಿಂದ, ಜನಪರ ವಾಗಿ ವೃತ್ತಿ ನಿರ್ವ ಹಿಸುವ ಎಲ್ಲ ದಾದಿಯರಿಗೆ ವಿಶ್ವದಾದಿ ಯರ ದಿನದ ಶುಭಾಶಯ ವ್ಯಕ್ತಪಡಿಸುವುದು ಸಕಾಲಿಕ.
(ಫಾರ್ಮಸಿಸ್ಟ್‌. ಎಜೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಮಂಗಳೂರು)

– ಎಲ್‌.ಎನ್‌. ಭಟ್‌, ಮಳಿ

Advertisement

Udayavani is now on Telegram. Click here to join our channel and stay updated with the latest news.

Next