Advertisement

ವಿಶ್ವ ಮೂತ್ರಪಿಂಡ ದಿನಾಚರಣೆ: ಎಲ್ಲರಿಗೂ ಮೂತ್ರಪಿಂಡ (ಕಿಡ್ನಿ /Kidney) ಆರೋಗ್ಯ

09:20 PM Mar 05, 2022 | Team Udayavani |

ಇತ್ತೀಚಿನ ದಿನಗಳಲ್ಲಿ ದೀರ್ಘ‌ಕಾಲದ ಮೂತ್ರಪಿಂಡ ಕಾಯಿಲೆಯು (Chronic Kidney Disease/ CKD) ಸಾಂಕ್ರಾಮಿಕವಲ್ಲದ ಆದರೆ ಬಹು ಸಾಮಾನ್ಯ, ಹಾನಿಕಾರಕ ಹಾಗೂ ಮಾರಣಾಂತಿಕ ಜಾಗತಿಕ ಸಮಸ್ಯೆ ಎಂದು ಗುರುತಿಸಲ್ಪಟ್ಟಿದೆ. ಇದರ ತೀವ್ರತೆ ಹೇಗಿದೆ ಎಂದರೆ ಪ್ರಪಂಚದಾದ್ಯಂತ ಹತ್ತು ಜನರಲ್ಲಿ ಒಬ್ಬರು ಇದಕ್ಕೆ ತುತ್ತಾಗುತ್ತಿದ್ದಾರೆ. ಈ ಕಾಯಿಲೆಯು ಸೂಕ್ತ ಸಮಯದಲ್ಲಿ ಸರಿಯಾದ ಚಿಕಿತ್ಸೆ ಪಡೆಯದೆ ಅಥವಾ ಸಿಗದೆ ಅನಿಯಂತ್ರಿತವಾಗಿ ಉಳಿದುಬಿಟ್ಟರೆ ಇದು ಶಾಶ್ವತ ಕಾಯಿಲೆಯಾಗಿ ಉಳಿದು ಜೀವಕ್ಕೆ ಮಾರಕವಾಗಬಹುದು. ಪ್ರಸ್ತುತ ಅಂಕಿ ಅಂಶಗಳ ಪ್ರಕಾರ ಸರಿ ಸುಮಾರು 850 ಮಿಲಿಯನ್‌ ಜನರು ವಿವಿಧ ರೀತಿಯ ಮೂತ್ರಪಿಂಡ ಅಸ್ವಸ್ಥತೆಗಳಿಂದ ಬಳಲುತ್ತಿದ್ದಾರೆ. ಮೂತ್ರಪಿಂಡ ಕಾಯಿಲೆಗೆ ಸಂಬಂಧಿಸಿದ ಮರಣವು ವಾರ್ಷಿಕವಾಗಿ ಹೆಚ್ಚಾಗುತ್ತಲೇ ಇದೆ ಮತ್ತು 2040ರ ವೇಳೆಗೆ ಇದು ಸಾವಿಗೆ ಐದನೆಯ ಪ್ರಮುಖ ಕಾರಣ ಎಂದು ಅಂದಾಜಿಸಲಾಗಿದೆ.
ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಯಲ್ಲಿ ವಾರಕ್ಕೆ ಕನಿಷ್ಠ ಮೂರು ಬಾರಿ ಡಯಾಲಿಸಿಸ್‌ ಚಿಕಿತ್ಸೆ ಅಥವಾ ಮೂತ್ರಪಿಂಡ ಕಸಿ ಇಲ್ಲದೆ ಜೀವನ ನಡೆಸಲಾಗುವುದಿಲ್ಲ. ಆದ್ದರಿಂದ ದೀರ್ಘ‌ಕಾಲದ ಮೂತ್ರಪಿಂಡ ಕಾಯಿಲೆಯು ಆರೋಗ್ಯ ಖರ್ಚು ವೆಚ್ಚಕ್ಕೆ ಪ್ರಮುಖ ಕಾರಣವಾಗಿದೆ. ಮೂರು ಡಯಾಲಿಸಿಸ್‌ ಮತ್ತು ಮೂತ್ರಪಿಂಡ ಕಸಿ ಚಿಕಿತ್ಸೆಗಳ ವಾರ್ಷಿಕ ವೆಚ್ಚಗಳು ನಿರಂತರ ಮತ್ತು ದುಬಾರಿ ಪ್ರಕ್ರಿಯೆಯಾಗಿದ್ದು ಮೂತ್ರಪಿಂಡ ಕಾಯಿಲೆಯು ವಿಶ್ವಾದ್ಯಂತ ಸಾಮಾಜಿಕ ವಿಪತ್ತು, ಬಹು ದುಬಾರಿ ಸಾರ್ವಜನಿಕ ಆರೋಗ್ಯ ಸಮಸ್ಯೆ ಮತ್ತು ಆರ್ಥಿಕ ದುರಂತವಾಗಿ ಗುರುತಿಕೊಂಡಿದೆ. ಹಾಗಾಗಿ ಭಾರತ ಸರಕಾರದ ದೊಡ್ಡ ಮಟ್ಟದ ಬಜೆಟ್‌ ಘೋಷಣೆಗಳಲ್ಲಿ ಮೂತ್ರಪಿಂಡ ಚಿಕಿತ್ಸಾ ವೆಚ್ಚವು ವಿಶೇಷ ಸ್ಥಾನ ಪಡೆದುಕೊಂಡಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರವಾಗಿ ವಿವಿಧ ರೀತಿಯ ಹಂತಗಳಲ್ಲಿ ಕಾಯಿಲೆ ತಡೆಗಟ್ಟುವ ಆರೋಗ್ಯ ಕ್ರಮಪಾಲನೆಗಳನ್ನು ಅನುಸರಿಸುವುದರಿಂದ ಮೂತ್ರಪಿಂಡ ಆರೈಕೆ, ರೋಗ ನಿರ್ವಹಣೆ, ವ್ಯಕ್ತಿಯ ರೋಗಗ್ರಸ್ತವಾಗುವಿಕೆ ಮತ್ತು ಮರಣವನ್ನು ತಡೆಗಟ್ಟುವುದು ಮಾತ್ರವಲ್ಲದೇ ವೈದ್ಯಕೀಯ ವೆಚ್ಚವನ್ನು ಪರಿಣಾಮಕಾರಿಯಾಗಿ ಮತ್ತು ಸಮರ್ಥನೀಯವಾಗಿ ಸುಧಾರಿಸಬಹುದು.

Advertisement

ನಿರ್ದಿಷ್ಟವಾಗಿ ಹೇಳುವುದಾದರೆ, ವಿಶ್ವ ಮೂತ್ರಪಿಂಡ ದಿನಾಚರಣೆಯ ಅಭಿಯಾನವು ಉತ್ತಮ ಮೂತ್ರಪಿಂಡದ ಆರೈಕೆಗಾಗಿ ಜ್ಞಾನದ ಕೊರತೆ ಹಾಗೂ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲು ಕರೆ ನೀಡಿ ಎಲ್ಲರಲ್ಲೂ ಮೂತ್ರಪಿಂಡ ಆರೋಗ್ಯವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಕಾರ್ಯಕ್ರಮವು ಮೂತ್ರಪಿಂಡದ ಆರೋಗ್ಯದ ಬಗ್ಗೆ ಶಿಕ್ಷಣ ಮತ್ತು ಜಾಗೃತಿಯನ್ನು ಹೆಚ್ಚಿಸುವ ಪ್ರಯತ್ನಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಮೂತ್ರಪಿಂಡದ ಆರೈಕೆಯ ಬಗ್ಗೆ ಹೆಚ್ಚಿನ ಜ್ಞಾನವನ್ನು ನೀಡಿ ಅರಿವಿನ ಕೊರತೆಯನ್ನು ಕಡಿಮೆ ಮಾಡುವ ಪ್ರಯತ್ನದ ಗುರಿಯನ್ನು ಹೊಂದಿದೆ. ಈ ಗುರಿಯನ್ನು ತಲುಪಲು ವಿವಿಧ ರೀತಿಯ ತಡೆಗಟ್ಟುವಿಕೆ ಹಂತಗಳಲ್ಲಿ ಮೂತ್ರಪಿಂಡದ ಆರೋಗ್ಯ ರಕ್ಷಣೆಯ ಬಗ್ಗೆ ನಿರಂತರ ಶಿಕ್ಷಣ ಮತ್ತು ಜಾಗೃತಿಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.

ಆರೋಗ್ಯ ನೀತಿ ನಿರ್ಧಾರಗಳಲ್ಲಿ ಮೂರು ಹಂತಗಳಲ್ಲಿ ಕಾಯಿಲೆ ತಡೆಗಟ್ಟುವ ಆರೋಗ್ಯ ಕ್ರಮಪಾಲನೆಯು ಪ್ರಸ್ತುತವಾಗಿದೆ ಮತ್ತು ಇವು ಆರೋಗ್ಯ ಶಿಕ್ಷಣ ಮತ್ತು ಜಾಗೃತಿಗೆ ಸಂಬಂಧಿತವಾಗಿವೆ. ಈ ಲೇಖನವು ಇದರ ಮೇಲೆ ಬೆಳಕು ಚೆಲ್ಲುವುದರ ಮೂಲಕ ಅಭಿಯಾನದ ಉದ್ದೇಶಕ್ಕೆ ನೀರೆರೆಯುವ ಪ್ರಯತ್ನವನ್ನು ಮಾಡುತ್ತದೆ.

ಮೂರು ವಿವಿಧ ಹಂತಗಳಲ್ಲಿ ಕಾಯಿಲೆ ತಡೆಗಟ್ಟುವ ಕ್ರಮಗಳನ್ನು ಪಾಲಿಸುವುದರಿಂದ ಶಾಶ್ವತ ಮೂತ್ರಪಿಂಡ ವೈಫಲ್ಯವನ್ನು ತಡೆಯುವ ಸಾಧ್ಯತೆಗಳು ಅಧಿಕವಾಗಿದ್ದರೂ ಸಹ ಕೆಲವೊಮ್ಮೆ ಕಾಯಿಲೆಯು ಕೊನೆಯ ಹಂತವನ್ನು ತಲಪುವ ಸಾಧ್ಯತೆಗಳಿರುತ್ತವೆ. ಇಂತಹ ಪರಿಸ್ಥಿತಿ ಬಂದಲ್ಲಿ ಮೇಲೆ ತಿಳಿಸಿದ ಪರ್ಯಾಯ ಚಿಕಿತ್ಸೆಯನ್ನು ಆಯ್ಕೆ ಮಾಡಿಕೊಂಡು ಉಪಶಾಮಕ ಆರೈಕೆ ಹಾಗೂ ಪುನಶ್ಚೆ„ತನ್ಯ ಆರೈಕೆ (Palliative care and rehabilitation care) ಪಡೆದು ದೀರ್ಘ‌ಕಾಲ ಜೀವನವನ್ನು ನಿರ್ವಹಿಸಬಹುದು. ಆದರೂ “ಆರೋಗ್ಯವೇ ಭಾಗ್ಯ’, “ಚಿಕಿತ್ಸೆಗಿಂತಲೂ ತಡೆಗಟ್ಟು ವಿಕೆಯೇ ಉತ್ತಮ’ ಎಂಬ ಅನುಭವದ ನುಡಿಗಳನ್ನು ಅರಿತು ಆರೋಗ್ಯವನ್ನು ಸಂರಕ್ಷಿಸಿಕೊಳ್ಳುವುದು ಜಾಣನಡಿಗೆ ಎಂದೆನ್ನಬಹುದು.

1. ಪ್ರಾಥಮಿಕ ಹಂತದ ತಡೆಗಟ್ಟುವಿಕೆ
ಗುರಿ: ಮೂತ್ರಪಿಂಡ ಕಾಯಿಲೆ ಸಂಭವಿಸುವುದನ್ನು ತಡೆಗಟ್ಟುವುದು ಮತ್ತು ಕಡಿಮೆಗೊಳಿಸುವುದು. ತಂತ್ರಗಾರಿಕೆಗಳು:
– ಆರೋಗ್ಯಕರ ಜೀವನಶೈಲಿಯ ಆಯ್ಕೆಗಳನ್ನು (ಉತ್ತಮ ಆಹಾರಸೇವನೆ, ದೈಹಿಕ ಚಟುವಟಿಕೆ ಮತ್ತು ಕಡಿಮೆ ಉಪ್ಪು ಸೇವನೆ) ಉತ್ತೇಜಿಸುವುದು.
– ಉತ್ತಮ ಶಿಸ್ತುಬದ್ದ ಜೀವನಶೈಲಿ ಅಳವಡಿಸಿಕೊಳ್ಳುವುದನ್ನು ಪ್ರೋತ್ಸಾಹಿಸುವುದು.
– ದೀರ್ಘ‌ಕಾಲಿಕ ಮೂತ್ರಪಿಂಡ ಕಾಯಿಲೆಯ ಮಾಹಿತಿ ಮತ್ತು ಅದರ ಅಪಾಯಕಾರಿ ಅಂಶಗಳ ಬಗ್ಗೆ ಆರೋಗ್ಯ ಶಿಕ್ಷಣ ನೀಡುವುದು.

Advertisement

ನೀವು ಪಾಲಿಸಬೇಕಾದದ್ದು
– ಕಾಯಿಲೆ ತರುವ ಸಾಮಾನ್ಯ ಅಪಾಯಕಾರಿ ಅಂಶಗಳ ಬಗ್ಗೆ ಮಾಹಿತಿ ಹೊಂದುವುದು.
– ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು.
– ಪ್ರಾಥಮಿಕ ತಪಾಸಣೆಗೆ ಒತ್ತು ನೀಡುವುದು.
– ನಿಯಮಿತ ಹಾಗೂ ಸಂದಭೋìಚಿತವಾಗಿ ವೈದ್ಯರ ಭೇಟಿ ಮಾಡುವುದು.
– ಆರೋಗ್ಯ ಶಿಕ್ಷಣ ಪಡೆಯುವುದು.

2. ದ್ವಿತೀಯ ಹಂತದ ತಡೆಗಟ್ಟುವಿಕೆ
ಗುರಿ: ಮೂತ್ರಪಿಂಡ ಕಾಯಿಲೆಯ ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ನೀಡುವುದು.
ತಂತ್ರಗಾರಿಕೆಗಳು:
– ಮೂತ್ರಪಿಂಡ ಕಾಯಿಲೆಯ ಇರುವಿಕೆ ಮತ್ತು ಕಾಯಿಲೆ ಉಂಟುಮಾಡುವ ಅಪಾಯಕಾರಿ ಅಂಶಗಳ ಪತ್ತೆಗಾಗಿ ತಪಾಸಣೆಯನ್ನು ಕೆಳಗಿನ ಈ ಎರಡು ಹಂತಗಳಲ್ಲಿ ಮಾಡುವುದು.
– ಅಧಿಕ ರಕ್ತದೊತ್ತಡ, ಮಧುಮೇಹದ ಉಪಸ್ಥಿತಿಯ ಬಗ್ಗೆ ತಿಳಿದಿಲ್ಲದ ವ್ಯಕ್ತಿಗಳನ್ನು ಗುರುತಿಸಲು ತಪಾಸಣೆ ಮಾಡುವುದು.
– ಗುರುತಿಸಲ್ಪಟ್ಟ ವ್ಯಕ್ತಿಗಳಲ್ಲಿ ಮೂತ್ರಪಿಂಡ ಕಾಯಿಲೆಯ ಇರುವಿಕೆಯನ್ನು ಪರೀಕ್ಷಿಸಿ ಖಚಿತ ಪಡಿಸುವುದು ಮತ್ತು ಸೂಕ್ತ ಚಿಕಿತ್ಸೆಯನ್ನು ಸ್ಥಾಪಿಸುವುದು.

ನೀವು ಪಾಲಿಸಬೇಕಾದದ್ದು
– ಅನಾರೋಗ್ಯವಿದ್ದಲ್ಲಿ ಕಡೆಗಣಿಸದೆ ತುರ್ತು ವೈದ್ಯರ ಭೇಟಿ ಮಾಡಿ ಅರೋಗ್ಯ ಸಲಹೆಯನ್ನು ಪಡೆಯುವುದು.
– ಮೂತ್ರಪಿಂಡ ಕಾಯಿಲೆ ಯನ್ನುಂಟು ಮಾಡುವ ಅಪಾಯಕಾರಿ ಅಂಶ ಗಳಿವೆಯೇ ಎಂದು ಪರೀಕ್ಷಿಸಿಕೊಳ್ಳುವುದು.
– ಇವೆ ಎಂದು ಪತ್ತೆಯಾ ದಲ್ಲಿ ಅವುಗಳ ಅಡ್ಡಪರಿಣಾಮ ಗಳಿಂದ ಮೂತ್ರಪಿಂಡಗಳಿಗೆ ತೊಂದರೆ ಆಗಿದೆಯೇ /ಇಲ್ಲವೇ ಎಂದು ಪರೀಕ್ಷೆಯಿಂದ ಖಚಿತಪಡಿಸಿಕೊಳ್ಳುವುದು ಮತ್ತು ಸೂಕ್ತ ಸಲಹೆ ಹಾಗೂ ಚಿಕಿತ್ಸೆಯನ್ನು ಪಡೆದು ಕಾಯಿಲೆಯ ಪ್ರಗತಿಯನ್ನು ತಡೆಯುವುದು.

3. ತೃತೀಯ ಹಂತದ ತಡೆಗಟ್ಟುವಿಕೆ
ಗುರಿ: ಮೂತ್ರಪಿಂಡ ಕಾಯಿಲೆಯ ಪ್ರಗತಿಯನ್ನು ತಡೆಗಟ್ಟುವುದು
ತಂತ್ರಗಾರಿಕೆಗಳು:
– ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.
– ಮೂತ್ರದಲ್ಲಿ ಪ್ರೊಟೀನ್‌ ಸೋರಿಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು.

ನೀವು ಪಾಲಿಸಬೇಕಾದದ್ದು
– ಕಾಯಿಲೆಯ ಗುಣಲಕ್ಷಣಗಳ ಬಗ್ಗೆ ಮಾಹಿತಿ ಹೊಂದುವುದು ಮತ್ತು ಗುರುತಿಸುವುದು.
– ಕಾಯಿಲೆಯ ಅಡ್ಡಪರಿಣಾಮಗಳನ್ನು ಮತ್ತು ಇತರ ಸಂಬಂಧಿತ ಕಾಯಿಲೆಗಳನ್ನು ವೈದ್ಯರ ಸಲಹೆಯಂತೆ ನಿರ್ವಹಿಸುವುದು.
– ವೈದ್ಯರಲ್ಲಿ ಕಾಯಿಲೆಯ ದೀರ್ಘ‌ಹಂತದ ನಿರ್ವಹಣೆಯ ಬಗ್ಗೆ ಸಲಹೆ, ಸೂಚನೆ, ಮಾಹಿತಿ ಪಡೆಯುವುದು ಮತ್ತು ಅನುಸರಣೆ ಮಾಡುವುದು.
– ಪಥ್ಯಾಹಾರ ಹಾಗೂ ಔಷಧೋಪಚಾರವನ್ನು ಪಾಲಿಸುವುದು.

ವೀಣಾ ಎನ್‌.ಕೆ.
ಅಸಿಸ್ಟೆಂಟ್‌ ಪ್ರೊಫೆಸರ್‌, ಸೀನಿಯರ್‌ ಸ್ಕೇಲ್‌ ಮತ್ತು ಪ್ರೋಗ್ರಾಮ್‌ ಕೊಆರ್ಡಿನೇಟರ್‌, ರೀನಲ್‌ ರಿಪ್ಲೇಸ್‌ಮೆಂಟ್‌ ಥೆರಪಿ ಮತ್ತು ಡಯಾಲಿಸಿಸ್‌ ಟೆಕ್ನಾಲಜಿ (ಆರ್‌ಆರ್‌ಟಿ ಮತ್ತು ಡಿಟಿ)ಎಂಸಿಎಚ್‌ಪಿ, ಮಾಹೆ, ಮಣಿಪಾಲ

ಡಾ| ಶ್ರೀನಿವಾಸ್‌ ವಿನಾಯಕ್‌ ಶೆಣೈ
ಅಸೋಸಿಯೇಟ್‌ ಪ್ರೊಫೆಸರ್‌, ನೆಫ್ರಾಲಜಿ ವಿಭಾಗ, ಕೆಎಂಸಿ, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next