ಯಾದಗಿರಿ: ಹೈದ್ರಾಬಾದ ಕರ್ನಾಟಕ ಭಾಗದ ಯಾವುದಾದರು ಒಂದು ಜಿಲ್ಲಾ ಕೇಂದ್ರದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ವತಿಯಿಂದ ವಿಶ್ವಮಟ್ಟದ ಜಾನಪದ ಉತ್ಸವ ಆಯೋಜಿಸುವ ಯೋಜನೆ ಹೊಂದಿದ್ದೇವೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ. ಟಾಕಪ್ಪ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲೆಯ ಸಾಹಿತಿಗಳು ಹಾಗೂ ಕಲಾವಿದರ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹೈದ್ರಾಬಾದ ಕರ್ನಾಟಕ ಭಾಗ ಜಾನಪದದ ಕಣಜ ಇದ್ದಂತೆ. ಈ ಭಾಗದಲ್ಲಿ ಹೆಚ್ಚು ಜಾನಪದ ಕಲಾತಂಡಗಳಿವೆ ಮತ್ತು ಕಲಾವಿದರಿದ್ದಾರೆ.
ಈಗಾಗಲೆ ಅನೇಕರು ಪ್ರಸ್ತಾವನೆ ಸಲ್ಲಿಸಿರುವುದರಿಂದ ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ನಮ್ಮ ಅವಧಿಯ ಒಳಗಾಗಿ ಹೈದ್ರಾಬಾದ ಕರ್ನಾಟಕದಲ್ಲಿ ವಿಶ್ವ ಮಟ್ಟದ ಜಾನಪದ ಉತ್ಸವ ಆಯೋಜಿಸಿ, ಈ ಭಾಗದ ಕಲಾವಿದರಿಗೆ ಅವಕಾಶ ನೀಡಿ, ವೇದಿಕೆ ಒದಗಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ತನಾರತಿ ಸಾಂಸ್ಕೃತಿಕ ಪ್ರತಿಷ್ಠಾನ ಅಧ್ಯಕ್ಷ ಸಿದ್ದರಾಜ ರೆಡ್ಡಿ, ಜಿಲ್ಲೆಯ ರಂಗಭೂಮಿ ಕವಿ, ಕಲಾವಿದರ ಒಕ್ಕೂಟದ ಅಧ್ಯಕ್ಷ
ಶರಣು ನಾಟೇಕಾರ್, ಬ್ರಹ್ಮಶ್ರೀ ನಾರಾಯಣಗುರು ಸಂಘದ ಸೈದಪ್ಪ ಗುತ್ತೆದಾರ, ಕಲಾವಿದರ ಬಳಗದಿಂದ ಮಹಾಂತೇಶ ಹುಲ್ಲೂರು ಅಧ್ಯಕ್ಷರನ್ನು ಸನ್ಮಾನಿಸಿದರು.
ಅಕಾಡೆಮಿ ಸದಸ್ಯ ಪ್ರಕಾಶ ಅಂಗಡಿ ಕನ್ನೆಳ್ಳಿ, ರಿಜಿಸ್ಟರ್ ಸಿದ್ದರಾಮ ಶಿಂಧೆ, ಪ್ರಮುಖರಾದ ಅಯ್ಯಣ್ಣ ಹುಂಡೆಕಾರ, ಶಿವಶರಣಪ್ಪ ಹೆಡಿಗಿನಾಳ, ಮಹಾದೇವಪ್ಪ ವಜ್ಜಲ್, ನಿಜಗುಣಿ ಬಡಿಗೇರ, ಗುರುಪ್ರಸಾದ ವೈದ್ಯ, ಅಶೋಕ ಚೌದ್ರಿ, ಶಿವರೆಡ್ಡಿ ಪಾಟೀಲ್ ಕೊಳ್ಳುರು, ಶಂಕರಶಾಸ್ತ್ರೀ, ದೇವರಾಜ ವರ್ಕನಳ್ಳಿ, ರಿಯಾಜ ಪಟೇಲ್ ವರ್ಕನಳ್ಳಿ ಸೇರಿದಂತೆ ಇತರರು ಇದ್ದರು.