Advertisement

World Doctor’s Day: ನನ್ನ ಆರೋಗ್ಯ ನನ್ನ ಕೈಯ್ಯಲ್ಲಿ!

12:14 PM Jun 30, 2024 | Team Udayavani |

ವಿದ್ಯಾರ್ಥಿ ಜೀವನದಲ್ಲಂತೂ ಊಟ- ತಿಂಡಿ -ನಿದ್ದೆಗೆ ಹೊತ್ತು ಗೊತ್ತು ಇರಲಿಲ್ಲ. ತರಗತಿಗಳನ್ನು ಅಟೆಂಡ್‌ ಮಾಡುತ್ತಾ, ಪ್ರಾಕ್ಟಿಕಲ್‌ಗ‌ಳಿಗೆ ಓಡುತ್ತಾ, ಕ್ಲಿನಿಕ್‌ಗಳಲ್ಲಿ ಕೆಲಸ ಮಾಡುತ್ತಾ ಕಲಿಯುವುದು ಅನಿವಾರ್ಯವಾಗಿತ್ತು.

Advertisement

“ನಾವು ಇತರರಿಗೆ ಹೀಗೆ ಮಾಡಿ ಹಾಗೆ ಮಾಡಿ ಎಂದು ಹೇಳುವುದೇನೋ ಸರಿ. ಆದರೆ, ಆರೋಗ್ಯದ ವಿಷಯಕ್ಕೆ ಬಂದಾಗ ವೈದ್ಯರಿಗೆ ತಮ್ಮ ಆರೋಗ್ಯದ ಬಗ್ಗೆ ಪೂರ್ತಿ ನಿರ್ಲಕ್ಷ್ಯ. ಹೇಳುವುದಕ್ಕೂ ಮಾಡುವುದಕ್ಕೂ ಸಂಬಂಧವಿರುವುದಿಲ್ಲ. ಹಾಗಾಗಬಾರದು. ಅದು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದ ಮೇಲೆ ಪರಿಣಾಮವನ್ನು ಬೀರುತ್ತದೆ’ ಎಂದು ಸೀನಿಯರ್‌ಗಳು, ಹಿರಿಯ ಪ್ರೊಫೆಸರ್‌ ಎಚ್ಚರಿಸುತ್ತಿದ್ದರು. ನಮಗೆ ಅರ್ಥವಾಗುವ ವಯಸ್ಸಲ್ಲ ಅದು!

ಶಿಕ್ಷಣ ಮುಗಿದು ವೃತ್ತಿ ಜೀವನ ಆರಂಭವಾಯಿತು. ನಮ್ಮನ್ನು ನಾವು ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವ ಆಸೆ, ರೋಗಿಗಳು ಬೇರೆಡೆ ಹೋದರೆ ಎಂಬ ಹೆದರಿಕೆ, ಆದರೆ ನಿಧಾನವಾಗಿ, ವೈದ್ಯಕೀಯ ವೃತ್ತಿಯಲ್ಲಿದ್ದರೂ ನಾವು ಎಲ್ಲರಂತೆ ದೇಹ-ಮನಸ್ಸಿರುವ ಮನುಷ್ಯರೇ.

ನಮ್ಮದೇ ಆದ ಕುಟುಂಬವೂ ಇದೆ. ಹಾಗಾಗಿ ವೃತ್ತಿ ಬದುಕಿನ ಜೊತೆಗೆ ವೈಯಕ್ತಿಕ ಬದುಕನ್ನು ತೂಗಿಸಿಕೊಂಡು ಹೋಗಬೇಕು ಎಂಬುದು ಅರಿವಿಗೆ ಬಂತು. ತಾಸುಗಟ್ಟಲೇ ನಿಂತು-ಕುಳಿತು-ಬಗ್ಗಿ ಕೆಲಸ ಮಾಡುವ ದಂತ ವೈದ್ಯರಿಗಂತೂ ಕಾಲು, ಕೈ, ಭುಜ, ಕತ್ತು ನೋವು ಸರ್ವೇಸಾಮಾನ್ಯ. ದೈಹಿಕ ಸಾಮರ್ಥ್ಯದ ಜೊತೆಗೆ ತಾಳ್ಮೆ -ಏಕಾಗ್ರತೆಯೂ ಬೇಕು. ಹೀಗಾಗಿ ಆರೋಗ್ಯದ ಕಡೆ ಗಮನ ನೀಡಲೇಬೇಕು. ನಮ್ಮದೇ ದೇಹ- ಮನಸ್ಸು ಸರಿ ಇಲ್ಲದೆ ಇದ್ದಾಗ ನೀಡುವ ಚಿಕಿತ್ಸೆಯ ಗುಣಮಟ್ಟವೂ ಕುಸಿಯುತ್ತದೆ ಎಂಬುದು ಅನುಭವಕ್ಕೆ ಬಂತು. ಅದಕ್ಕಾಗಿ ಶಿಸ್ತುಬದ್ಧ ದಿನಚರಿಯನ್ನು ರೂಢಿಸಿಕೊಳ್ಳಲೇಬೇಕಾಯಿತು.

ಬೆಳಿಗ್ಗೆ ಬೇಗ ಎಳುವ ಅಭ್ಯಾಸ ಮೊದಲಿನಿಂದಲೂ ಇದೆ. ಕಳೆದ ಇಪ್ಪತ್ತು ವರ್ಷದಿಂದ ವಾರಕ್ಕೆ ಕನಿಷ್ಠ ಐದು ದಿನ ಮುಕ್ಕಾಲು ಗಂಟೆ ವಾಕಿಂಗ್‌ ಮಾಡುತ್ತೇನೆ. ಒಂದೊಮ್ಮೆ ಬೆಳಿಗ್ಗೆ ಸಾಧ್ಯವಾಗದೇ ಇದ್ದಲ್ಲಿ ಸಂಜೆಯಾದರೂ ಕಡ್ಡಾಯ. ಪುರುಸೊತ್ತಿದ್ದಾಗ ತಿಂಡಿ-ಊಟ ಎನ್ನುವುದನ್ನು ಬದಲಿಸಿ ಬೆಳಿಗ್ಗೆ ಎಂಟರ ಒಳಗೆ ತಿಂಡಿ, ಮಧ್ಯಾಹ್ನ ಒಂದರಿಂದ ಎರಡು ಗಂಟೆಗೆ ಊಟ, ರಾತ್ರಿ ಎಂಟರ ಹೊತ್ತಿಗೆ ಲಘು ಆಹಾರ ಎಂದು ನಿರ್ದಿಷ್ಟ ಸಮಯ ಮೀಸಲಿಟ್ಟಿದ್ದೇನೆ. ದಿನಕ್ಕೊಂದು ಕಪ್‌ ಕಾಫಿ ಮತ್ತು ಟೀ ಎಂದು ರೂಢಿ ಮಾಡಿಕೊಂಡಿದ್ದೇನೆ.

Advertisement

ಬಗೆಬಗೆಯ ಆಹಾರ ತಿನ್ನುವುದು ನನಗಿಷ್ಟ. ಐಸ್‌ ಕ್ರೀಮ್ ಪಿಜ್ಜಾ, ಕರಿದ ತಿಂಡಿ ಬಹಳ ಇಷ್ಟವಾ ದರೂ ತಿಂಗಳಿಗೆ ಒಮ್ಮೆ ಮಾತ್ರ ಎಂದು ನಿರ್ಬಂಧ ಹಾಕಿಕೊಂಡಿದ್ದೇನೆ. ಆದಷ್ಟೂ ತರಕಾರಿ, ಸೊಪ್ಪು, ಮೊಳಕೆ ಕಾಳುಗಳು ಹೆಚ್ಚಿರುವಂತೆ ಅಡಿಗೆಯ ಟೈಮ್‌ ಟೇಬಲ್‌ ಮಾಡುತ್ತೇನೆ. ರಾತ್ರಿ ಹನ್ನೊಂದಕ್ಕೆ ಮಲಗಿದರೆ ಬೆಳಗ್ಗೆ ಆರಕ್ಕೆ ದಿನ ಆರಂಭವಾಗುತ್ತದೆ. 7 ತಾಸಿನ ನಿದ್ದೆ ಇರದಿದ್ದರೆ ನನಗೆ ತಲೆ ಓಡುವುದೇ ಇಲ್ಲ!!

ಏನೇ ಮಾಡಿದರೂ ಕೆಲಸದ ಒತ್ತಡ ಇದ್ದದ್ದೇ! ಅದನ್ನು ನಿಭಾಯಿಸಲು ಮಾಡಬೇಕಾದ ಕೆಲಸಗಳ ಪಟ್ಟಿ ಮಾಡುವುದರ ಜತೆಗೆ ಅಗತ್ಯವಿದ್ದಲ್ಲಿ ಇತರರ ಸಹಾಯ ಪಡೆಯುತ್ತೇನೆ. ಇದರೊಂದಿಗೆ ದಿನವೂ ಕನಿಷ್ಠ ಅರ್ಧ ಗಂಟೆ ಏನಾದರೂ ಓದುವುದು, ಸಂಗೀತ ಕೇಳುವುದು, ಸಿನಿಮಾ ನೋಡುವುದು,

ಆಗಾಗ್ಗೆ ಪ್ರವಾಸ, ಬರವಣಿಗೆ, ನೃತ್ಯ ಇವೆಲ್ಲಾ ಬದುಕಿನ ಏಕತಾನತೆ ಕಳೆದು ಮನಸ್ಸು ರಿಲ್ಯಾಕ್ಸ್ ಆಗಲು ಸಹಾಯ ಮಾಡುತ್ತದೆ. ಮನೆಯಲ್ಲಿರುವ ಮಾವನ ಜತೆ ಚರ್ಚೆ ಮತ್ತು ಅಪ್ಪ- ಅಮ್ಮ, ತಂಗಿಯರೊಡನೆ ಫೋನ್‌ ಮೂಲಕ ಮಾತನಾಡಿ ಕಷ್ಟ ಸುಖ ಹೇಳಿಕೊಳ್ಳುವುದು ವೈಯಕ್ತಿಕವಾಗಿ ನನಗೆ ಸಮಾಧಾನ ನೀಡುತ್ತದೆ.

ಒಟ್ಟಿನಲ್ಲಿ “ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿ’ ಎನ್ನುವುದು ರೋಗಿಗಳಿಗೆ ನೀಡುವ ಉಪದೇಶ ಮಾತ್ರವಾಗದೇ ನನ್ನ ಬದುಕಿಗೂ ಅನ್ವಯವಾಗುವಂತೆ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ!!

-ಡಾ. ಕೆ.ಎಸ್‌. ಚೈತ್ರಾ, ದಂತ ವೈದ್ಯೆ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next