Advertisement

 ವಿಶ್ವ ಬಂಟರ ಸಮ್ಮಿಲನ -2018: ಕೃತಜ್ಞತಾ ಸಭೆ, ಸಮ್ಮಾನ ಕಾರ್ಯಕ್ರಮ

05:07 PM Sep 28, 2018 | Team Udayavani |

ಮುಂಬಯಿ: ಬಂಟ ಸಮಾಜದಲ್ಲಿ ಆರ್ಥಿಕವಾಗಿ ಕಂಗೆಟ್ಟಿರುವ ಬಂಟ ಕುಟುಂಬ ಗಳಲ್ಲಿ ಇಂದಿಗೂ ವಾಸಕ್ಕೆ  ಮನೆಯಿಲ್ಲ. ತಿನ್ನಲು ಅನ್ನವಿಲ್ಲದ ಪರಿಸ್ಥಿತಿ ಇಂದಿಗೂ ಇದೆ. ಬಂಟರು ಇಂತಹ ದುರದೃಷ್ಟಕರ ಹಾಗೂ ಚಿಂತಾ ಜನಕ ಪರಿಸ್ಥಿತಿಯನ್ನು ವಿಶ್ವದ ಬಂಟರಿಗೆ ಪರಿಚಯಿಸಿಕೊಟ್ಟು ಅಂತವರ ಏಳ್ಗೆಯನ್ನು ಮಾಡಲಿಕ್ಕೆ ವಿಶ್ವ ಬಂಟರ ಸಮ್ಮಿಲನನ್ನು  ಆಯೋಜಿಸಲಾಗಿತ್ತು ಎಂದು ಜಾಗತಿಕ ಬಂಟ ರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ನುಡಿದರು.

Advertisement

ಆರಂಭದ ಹಂತದಲ್ಲಿ ತೀರಾ ಅಗತ್ಯತೆ ಇರುವ ಬಂಟ ಕುಟುಂಬಗಳಿಗೆ ನೂರು ಮನೆಗಳನ್ನು ನಿರ್ಮಿಸಲು ನಾವು ಸಿದ್ಧರಾಗಿ ದ್ದೇವೆ. ವಿಶ್ವ ಬಂಟರ ಸಮ್ಮಿಲನದಲ್ಲಿ ಸಮಾಜದಲ್ಲಿರುವ ಅತ್ಯಂತ ಹಿರಿಯ 20 ಮಂದಿ ಬಂಟರ ಸಾಧಕರನ್ನು ಗುರುತಿಸಿ ಸಮ್ಮಾನಿಸುವ ಯೋಜನೆಯನ್ನು ಹಾಕಿಕೊಂ ಡು ಸಫಲರಾಗಿದ್ದೇವೆ. ಸುಮಾರು 60 ಗುತ್ತು ಬರ್ಕೆಗಳ ಗಡಿ ಪ್ರಧಾನರನ್ನು ಒಂದೇ ವೇದಿಕೆಗೆ ಆಮಂತ್ರಿಸಿ ಗೌರವಿಸಿ ಅವರ ಆಶೀರ್ವಾದ ಪಡೆದಿದ್ದೇವೆ. ವಿಶ್ವ ಬಂಟ ಸಮ್ಮಿಲನದ ಯಶಸ್ಸಿನೊಂದಿಗೆ ವಿಶ್ವದ ಬಂಟರೆಲ್ಲರ ಒಮ್ಮತದ ಧ್ವನಿಯಾಗಿ ಬಡ ಕುಟುಂಬಗಳ ಅಭಿವೃದ್ಧಿಗೆ ಪ್ರೇರಕವಾಗಲಿದೆ ಎಂದು ಅವರು ಹೇಳಿದರು.

ಸೆ. 22 ರಂದು ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ ಅನೆಕ್ಸ್‌ ಸಂಕೀರ್ಣದ ವಿಜಯಲಕ್ಷ್ಮೀ ಬಾಬಾಸ್‌ ಸಭಾಗೃಹದಲ್ಲಿ ವಿಶ್ವ ಬಂಟರ ಸಮ್ಮಿಲನದ ಯಶಸ್ಸಿಗೆ  ಕೃತಜ್ಞತೆ ಸಲ್ಲಿಸಲು ಹಾಗೂ ಸಮ್ಮಿಲನದಲ್ಲಿ ಭಾಗ ವಹಿಸಲು ಅಸಾಧ್ಯವಾದ ಮಹಾಪೋಷಕರು, ಪೋಷಕರು, ದಾನಿಗಳನ್ನು ಸಮ್ಮಾನಿಸಲು ಜರಗಿದ ವಿಶೇಷ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪುಣೆಯಲ್ಲಿ ಬಂಟರ ಭವನ ನಿರ್ಮಿಸಲು ಕಾರಣಕರ್ತರಾದ ಓಣಿಮಜಲು ಜಗನ್ನಾಥ ಶೆಟ್ಟಿ ಅವರು ದೇವರಂತಹ ಮನುಷ್ಯ, ಸಹೃದ ಯಿಯಾದ ಅವರಂತಹವರು ನಮ್ಮಲ್ಲಿ ಬೆರಳೆಣಿಕೆಯಷ್ಟೇ ಇದ್ದಾರೆ. ಜಗನ್ನಾಥ ಶೆಟ್ಟಿ ಮತ್ತು ಕುಶಲ್‌ ಹೆಗ್ಡೆ ಅವರು ನಮ್ಮ ಸಮಾಜದ ಕಣ್ಮಣಿಗಳು. ಅವರನ್ನು ಸಮ್ಮಾನಿಸಿರುವುದು ಹೆಮ್ಮೆಯಾಗುತ್ತಿದೆ. ಸಂಘದ ಅಧ್ಯಕ್ಷ ಪದ್ಮನಾಭ ಪಯ್ಯಡೆ ಹಾಗೂ ಸಂಘದ ಪ್ರೋತ್ಸಾಹದಿಂದ ಇದೆಲ್ಲವೂ ಸಾಧ್ಯವಾಗಿದೆ ಎಂದು ನುಡಿದು ಕೃತಜ್ಞತೆ ಸಲ್ಲಿಸಿದರು.

ಒಕ್ಕೂಟದ ಮಹಾಪೋಷಕ, ಆರ್ಗಾನಿಕ್‌ ಕೆಮಿಕಲ್ಸ್‌ನ ಸಿಎಂಡಿ ತೋನ್ಸೆ ಆನಂದ ಶೆಟ್ಟಿ ಅವರು ಮಾತನಾಡಿ, ವಿಶ್ವ ಬಂಟರ ಸಮ್ಮಿಲನ ಬಂಟರ ಏಕತೆಯನ್ನು ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಗಿದೆ. ಸಮ್ಮಿಲನದ ಗುಣಮಟ್ಟ, ಸಮಯದ ಪರಿಜ್ಞಾನ, ಅತಿಥಿ-ಗಣ್ಯರಿಗೆ ನೀಡಿದ ಗೌರವ ಇವೆಲ್ಲರೂ ಎದ್ದು ಕಾಣು ವಂತಿತ್ತು. ಸಂಘಟನೆ ಮತ್ತು ಸಾಮರ್ಥ್ಯ ದಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರಿಗೆ ಸರಿಸಾಟಿ ಯಾರೂ ಇಲ್ಲ ಎಂದರು.

ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಅವರು ಮಾತನಾಡಿ, ಜಾತಿ ಮತ್ತು ಧರ್ಮ ವನ್ನು ಪ್ರೀತಿಸಲು ಕಲಿತಾಗ ನಾವು ನಿಜವಾದ ಮಾನವರಾಗುತ್ತೇವೆ. ಬಂಟರ ಸಂಘಕ್ಕೆ ಐಕಳ ಹರೀಶ್‌ ಶೆಟ್ಟಿ ಅವರು ನೀಡಿದ ಕೊಡುಗೆ ಅನನ್ಯವಾಗಿದೆ. ಇದೀಗ  ಒಕ್ಕೂಟದ ಮೂಲಕ ವಿಶ್ವ ಮಟ್ಟದಲ್ಲಿ ಗುರುತಿಸಿ ಕೊಂಡಿರುವುದು ಬಂಟರ ಸಂಘಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದರು.

Advertisement

ಇದೇ ಸಂದರ್ಭದಲ್ಲಿ ಸಮ್ಮಾನ ಸ್ವೀಕರಿಸಿ ಮಾತನಾಡಿದ ಪುಣೆಯ  ಉದ್ಯಮಿ, ಸಮಾಜ ಸೇವಕ ಓಣಿಮಜಲು ಜಗನ್ನಾಥ ಶೆಟ್ಟಿ ಅವರು, ವಿಶ್ವ ಬಂಟರ ಸಮ್ಮಿಲನದ ಯಶ ಸ್ಸಿಗೆ ಕಾರಣಕರ್ತರಾದ ಐಕಳ ಹರೀಶ್‌ ಶೆಟ್ಟಿ ಅವರಿಂದು ವಿಶ್ವ ಬಂಟರ ನಾಯಕರಾಗಿ ಹೊರಹೊಮ್ಮಿದ್ದಾರೆ. ಬಂಟ ಬಾಂಧವರಲ್ಲಿ ಎಷ್ಟು ಪ್ರೀತಿ ಇದೆ ಎಂಬುವುದನ್ನು ಇಂದು ಕಾಣುವಂತಾಗಿದೆ. ಮುಂಬಯಿ ಬಂಟರನ್ನು ನೋಡುವ ಭಾಗ್ಯ ಇಂದು  ಲಭಿಸಿತು ಎಂದು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.

ಇನ್ನೋರ್ವ ಸಮ್ಮಾನಿತ ಪುಣೆ ಕರ್ನಾಟಕ ಸಂಘದ ಅಧ್ಯಕ್ಷ ಕುಶಲ್‌ ಹೆಗ್ಡೆ ಅವರು ಮಾತನಾಡಿ, ಕೆಲವೊಂದು ಅನಾನುಕೂಲ ತೆಯಿಂದಾಗಿ ಸಮ್ಮಿಲನದಲ್ಲಿ ಭಾಗಿಯಾಲು ಅಸಾಧ್ಯವಾಯಿತು. ಆ ಸೌಭಾಗ್ಯವನ್ನು ಕಳೆದು ಕೊಂಡಿರುವುದಕ್ಕೆ ವಿಷಾಧವಾಗುತ್ತಿದೆ. ಐಕಳ ಹರೀಶ್‌ ಶೆಟ್ಟಿ ಅವರೋರ್ವ ಪ್ರಗತಿಶೀಲ ಕೀರ್ತಿವಂತ ವ್ಯಕ್ತಿ. ಅವರ ಉತ್ತಮ ಕಾರ್ಯಕ್ಕೆ ನಾನು ಸದಾಪ್ರೀತಿಯಿಂದ ಬೆಂಬಲಿಸುತ್ತೇನೆ ಎಂದರು.

ಸಮ್ಮಾನಿತರನ್ನು ಕರ್ನೂರು ಮೋಹನ್‌ ರೈ ಅವರು ಪರಿಚಯಿಸಿದರು. ಒಕ್ಕೂಟದ ಮಹಾ ಪೋಷಕಿ ಉಮಾಕೃಷ್ಣ ಶೆಟ್ಟಿ ಹಾಗೂ ಇತ್ತೀಚೆಗೆ ಅಮೆರಿಕದಲ್ಲಿ ಇಂಟರ್‌ನ್ಯಾಷನಲ್‌ ಮ್ಯಾನ್‌ ಆಫ್‌ ದಿ ಇಯರ್‌ ಪ್ರಶಸ್ತಿ ಪುರಸ್ಕೃ ತರಾದ ಒಕ್ಕೂಟದ ಪೋಷಕ ವಿರಾರ್‌ ಶಂಕರ ಬಿ. ಶೆಟ್ಟಿ, ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಭುಜಂಗ ಎಂ. ಶೆಟ್ಟಿ ಮತ್ತು ವಿನೋದಾ ಬಿ. ಶೆಟ್ಟಿ ದಂಪತಿ, ನ್ಯಾಯವಾದಿ ಆರ್‌. ಸಿ. ಶೆಟ್ಟಿ, ಒಕ್ಕೂಟದ ಪೋಷಕರಾದ ಪಾಂಡುರಂಗ ಶೆಟ್ಟಿ ಸೋನಿಸ್ಟೀಲ್‌, ಜೆ. ಪಿ. ಶೆಟ್ಟಿ ಪೆಸ್ಟ್‌ ಮಾರ್ಟಮ್‌, ಕನ್ನಡಿಗ ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ, ನ್ಯಾಯವಾದಿ ಪ್ರಕಾಶ್‌ ಎಲ್‌. ಶೆಟ್ಟಿ ಕಡಂದಲೆ ಪರಾರಿ, ರೇಖಾ ಜಗನ್ನಾಥ ಶೆಟ್ಟಿ ದಂಪತಿ, ಬಾಲಕೃಷ್ಣ ಭಂಡಾರಿ, ಚಲನಚಿತ್ರ ನಟ ಸೌರಭ್‌ ಭಂಡಾರಿ, ಪೆರಾರ ಬಾಬು ಶೆಟ್ಟಿ, ರವಿ ಶೆಟ್ಟಿ ನೆರೂಲ್‌, ಮಹೇಶ್‌ ಶೆಟ್ಟಿ ತೆಳ್ಳಾರ್‌, ವಿಜಯ ಭಂಡಾರಿ, ರಂಜನ್‌ ಶೆಟ್ಟಿ ನವಿಮುಂಬಯಿ, ವಸಂತ್‌ ಶೆಟ್ಟಿ ಪಲಿಮಾರು, ಹರೀಶ್‌ ಶೆಟ್ಟಿ ಸಹೋದರರು, ಡಾ| ಸುನೀತಾ ಎಂ. ಶೆಟ್ಟಿ, ಉದಯ ಶೆಟ್ಟಿ ಪೇಜಾವರ, ಕೆ. ಕೆ. ಶೆಟ್ಟಿ, ಲತಾ ಪ್ರಭಾಕರ ಶೆಟ್ಟಿ, ಮನೋರಮಾ ಎಂ. ಬಿ. ಶೆಟ್ಟಿ, ನಳಿನಿ ಶೆಟ್ಟಿ ಬೆಂಗಳೂರು, ತೋನ್ಸೆ ಧನಂಜಯ ಶೆಟ್ಟಿ, ದಿವಾಕರ ಶೆಟ್ಟಿ ಅಡ್ಯಾರ್‌, ವೇಣುಗೋಪಾಲ್‌ ಶೆಟ್ಟಿ, ಸಿಎ ಸಂಜೀವ ಶೆಟ್ಟಿ, ಜಗನ್ನಾಥ್‌ ಶೆಟ್ಟಿ, ಪ್ರವೀಣ್‌ ಶೆಟ್ಟಿ ವರಂಗ, ಸುಕುಮಾರ್‌ ಶೆಟ್ಟಿ, ಪ್ರಸಾದ್‌ ಶೆಟ್ಟಿ ಕಲ್ಯಾಣ್‌ ಮೊದಲಾದವರನ್ನು ಸಮ್ಮಾನಿಸಲಾಯಿತು.

ಸುರೇಶ್‌ ಶೆಟ್ಟಿ ಪನ್ವೇಲ್‌ ಪ್ರಾರ್ಥನೆಗೈದರು. ಸಮ್ಮಿಲನ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾ ವಿಕವಾಗಿ ಮಾತನಾಡಿ, ಸುಮಾರು ಎರಡು ತಿಂಗಳ ಸತತ ಪೂರ್ವ ತಯಾರಿ ಯೊಂದಿಗೆ ಜರಗಿದ ವಿಶ್ವ ಬಂಟರ ಸಮ್ಮಿಲನ ಬಂಟರ ವಿಜಯೋತ್ಸವವಾಗಿತ್ತು. ಸುಮಾರು 16 ವರ್ಷಗಳ ಬಳಿಕ ಈ ಸಮ್ಮಿಲನ ನಡೆದಿದ್ದು, ಸುಮಾರು 20 ಸಾವಿರ ಮಂದಿ ಪ್ರೇಕ್ಷಕರು ವಿಶ್ವದಾದ್ಯಂತದಿಂದ ಬಂದಿರುವುದು ಸಮ್ಮಿಲನಕ್ಕೆ ವಿಶೇಷ ಕಳೆ  ನೀಡಿತ್ತು ಎಂದರು.
ಸಮ್ಮಿಲನ ಕಾರ್ಯಕ್ರಮ ಸಮಿತಿಯ ಕೋಶಾಧಿ ಕಾರಿ ಉಳೂ¤ರು ಮೋಹನ್‌ದಾಸ್‌ ಶೆಟ್ಟಿ ಅವರು ಸಮ್ಮಿಲನದ ಖರ್ಚು ವೆಚ್ಚಗಳ ಬಗ್ಗೆ ವಿವರ ನೀಡಿ, ದಾನಿಗಳ ಹೆಸರನ್ನು ಘೋಷಿಸಿ ವಂದಿಸಿದರು. ಬಂಟರವಾಣಿಯ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ ಹಾಗೂ ಕರ್ನೂರು ಮೋಹನ್‌ ರೈ ಅವರು ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

 ವಿಶ್ವ ಬಂಟರ ಸಮ್ಮಿಲನವನ್ನು ನೋಡಿ ಮನತುಂಬಿ ಬಂದಿದೆ. ಇದರ ಆಯೋಜನೆಗೆ ಐಕಳ ಹರೀಶ್‌ ಶೆಟ್ಟಿ ಅವರು ಪಟ್ಟ ಪರಿಶ್ರಮ ಸಾರ್ಥಕವಾಗಿದೆ. ಸಮ್ಮಿಲನದಲ್ಲಿ ಶ್ರೀಮಂತ-ಬಡವರೆನ್ನುವ ಭೇದವಿರದಿ ರುವುದು ಜಾತಿ, ಮತ, ಪಂಗಡನೆ ಇರದಿ ರುವುದು ವಿಶೇಷತೆಯಾಗಿತ್ತು. ಅವರ ಮುಂದಿನ ಯೋಜನೆಯೂ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಅವರ ಕಾರ್ಯಯೋಜನೆಗಳಿಗೆ ನನ್ನ ಸಂಪೂರ್ಣ  ಸಹಕಾರವಿದೆ.
–  ಕೆ. ಡಿ. ಶೆಟ್ಟಿ , ಸಿಎಂಡಿ : ಭವಾನಿ ಗ್ರೂಪ್‌ ಆಫ್‌ ಕಂಪೆನೀಸ್‌, ಒಕ್ಕೂಟದ ಮಹಾಪೋಷಕರು

 ಐಕಳ ಹರೀಶ್‌ ಶೆಟ್ಟಿ ಅವರು ಬಂಟರ ಶಕ್ತಿ  ಎಷ್ಟು ಎಂಬುವುದನ್ನು ತೋರಿಸಿ ಕೊಟ್ಟಿದ್ದಾರೆ. ಬಂಟ ಸಮುದಾಯದ ಜನನಾಯಕ ಅವರಾ ಗಿದ್ದಾರೆ. ಬಂಟರ ಸಂಘವು ಐಕಳರ ಈ ಉತ್ತಮ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದೆ. ಸಮ್ಮಿಲನದ ಯಶಸ್ಸಿಗೆ ಮುಂಬಯಿ ಬಂಟರು ನೀಡಿದ ಕೊಡುಗೆ ಅಪಾರವಾಗಿದೆ.
–  ಪದ್ಮನಾಭ ಎಸ್‌. ಪಯ್ಯಡೆ , 
ಅಧ್ಯಕ್ಷರು : ಬಂಟರ ಸಂಘ ಮುಂಬಯಿ

 ಒಬ್ಬ ವ್ಯಕ್ತಿಯ ಜೊತೆಗೆ ಶಕ್ತಿ ಇದ್ದರೆ ಮಾತ್ರ ಇಂತಹ ಬೃಹತ್‌ ಮಟ್ಟದ ಕಾರ್ಯಕ್ರಮ ಮಾಡಲು ಸಾಧ್ಯ. ಐಕಳ ನಾಯಕತ್ವದ ಪರಿಚ ಯವಿಂದು ಇಡೀ ವಿಶ್ವಕ್ಕೆ ಆಗಿದೆ. ಅವರು ಬಂಟರ ಸಂಘದ ವಿಶ್ವ ನಾಯಕನ ಸ್ಥಾನಕ್ಕೇರಿದ್ದಾರೆ.
–  ಸಂತೋಷ್‌ ಶೆಟ್ಟಿ  ಇನ್ನ ಕುರ್ಕಿಲ್‌ಬೆಟ್ಟು , 
ಅಧ್ಯಕ್ಷರು : ಪುಣೆ ಬಂಟರ ಸಂಘ

 ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next