Advertisement
ಕರ್ನಾಟಕ ಸರ್ಕಾರಿ ಕಾಲೇಜು ಶಿಕ್ಷಕರ ಸಂಘ(ಕೆಜಿಸಿಟಿಎ), ಅಖೀಲ ಭಾರತ ವಿಶ್ವವಿದ್ಯಾಲಯ ಮತ್ತು ಕಾಲೇಜು ಉಪನ್ಯಾಸಕರ ಸಂಘಗಳ ಒಕ್ಕೂಟದಿಂದ (ಎಐಎಫ್ಯುಸಿಟಿಒ)ಭಾನುವಾರ ನಗರದ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರ ಹಿಂದೆಯೇ ಶಿಕ್ಷಕರು- ಉಪನ್ಯಾಸಕರು ಹಾಗೂ ಪ್ರಾಂಶುಪಾಲರು ಸದಾ ಸುತ್ತುತ್ತಿರುತ್ತಾರೆ. ಇದು ಸರಿಯಲ್ಲ. ಗುರುಗಳ ಬಗ್ಗೆ ಜನ ಸಾಮಾನ್ಯರಿಗೆ ಸಾಕಷ್ಟು ಗೌರವ ಇದ್ದು, ಅದನ್ನು ಉಳಿಸಿಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಬೇಕಾದ ಅತಿ ದೊಡ್ಡ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ. ಅದನ್ನು ಸಮರ್ಥವಾಗಿ ನಿಭಾಯಿಸಿ ಎಂದು ಸಲಹೆ ನೀಡಿದರು.
Related Articles
Advertisement
ವಿದ್ಯಾರ್ಥಿಗಳಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಿಸಲು ಸಹಕಾರಿಯಾಗುವಂತೆ ವಿವಿಗಳಲ್ಲಿ ಉಪನ್ಯಾಸಕರನ್ನು, ಕುಲಪತಿಗಳನ್ನು ನೇಮಕ ಮಾಡಲಾಗಿದೆ. ಆದರೆ, ವಿಶ್ವವಿದ್ಯಾಲಯಗಳ ಸದ್ಯದ ಪರಿಸ್ಥಿತಿ ವಿಭಿನ್ನವಾಗಿದೆ. ಉಪನ್ಯಾಸಕ, ಪ್ರಾಧ್ಯಾಪಕರ ಎಲ್ಲ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರ ಸಿದ್ಧವಿದೆ. ಸರ್ಕಾರಿ ಶಾಲಾ ಕಾಲೇಜಿನ ಶಿಕ್ಷಕ, ಉಪನ್ಯಾಸಕರು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ತಮ್ಮ ಸಾಧನೆಯನ್ನು ತೋರಿಸಬೇಕು ಎಂದು ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಡಾ.ಎನ್.ಮಂಜುಳಾ, ಕೆಜಿಸಿಟಿಎಯ ಅಧ್ಯಕ್ಷ ಡಾ.ಟಿ.ಎಂ.ಮಂಜುನಾಥ್, ಜಂಟಿ ಕಾರ್ಯಾದರ್ಶಿ ಡಾ.ಸಿ.ಶೋಭಾ, ಎಫ್ಯುಸಿಟಿಎಕೆ ಅಧ್ಯಕ್ಷ ಡಾ.ಎನ್.ಬಿ.ಸಂಗಾಪುರ್, ಎಐಎಫ್ಯುಸಿಟಿಒ ಅಧ್ಯಕ್ಷ ಕೇಶವ್ ಭಟ್ಟಾಚಾರ್ಯ ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ಸಚಿವ ಇಂಗ್ಲಿಷ್ ಭಾಷಣ:ಉನ್ನತ ಶಿಕ್ಷಣ ಇಲಾಖೆ ಜವಾಬ್ದಾರಿ ವಹಿಸಿಕೊಂಡಿರುವ ಜಿ.ಟಿ.ದೇವೇಗೌಡ ಅವರು ತಮ್ಮ ಮೊದಲ ಸಭೆಯಲ್ಲಿ ಇಂಗ್ಲಿಷ್ನಲ್ಲೇ ಭಾಷಣ ಆರಂಭಿಸುವ ಮೂಲಕ ತಮಗೆ ಇಂಗ್ಲೀಷ್ ಬರದು ಎಂಬ ಟೀಕೆಗಳಿಗೆ ಉತ್ತರ ನೀಡಿದ್ದಾರೆ. ಪ್ರೌಢಶಾಲೆಯ ಮೆಟ್ಟಿಲೇರದ ನನಗೆ ಉನ್ನತ ಶಿಕ್ಷಣ ಇಲಾಖೆ ನೀಡಿದ್ದಾರೆ. ಐಎಎಸ್ ಅಧಿಕಾರಿಗಳು ಮಾತನಾಡಿದ್ದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅನೇಕರು ಲೇವಡಿ ಮಾಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯಲ್ಲೇ ಇದ್ದುಕೊಂಡು ಕಲಿಯುತ್ತೇನೆ. ಐಐಎಸ್ ಅಧಿಕಾರಿಗಳಿಗೂ ನಮ್ಮ ಬದುಕನ್ನು ತಿಳಿಸುತ್ತೇನೆ. ಉಪನ್ಯಾಸಕರಿಂದಲೂ ಕಲಿಯುತ್ತೇನೆ ಎಂದು ಹೇಳಿದರು. ಉನ್ನತ ಶಿಕ್ಷಣಕ್ಕೆ ಮಂತ್ರಿ ಮಾಡಿದ ಸಂದರ್ಭದಲ್ಲಿ ನನ್ನ ವಿದ್ಯಾಭ್ಯಾಸದ ಬಗ್ಗೆ ತಿಳಿಸಿದ್ದೆ. ನಾನು ರೈತರ ಜತೆಗಿರುವವನು, ರೈತರ ಸಮಸ್ಯೆ ಬಗೆಹರಿಸಲು ಕಂದಾಯ ಖಾತೆ ಕೊಡಿ ಎಂದಿದ್ದೆ. ತಾಯಿ ಚಾಮುಂಡೇಶ್ವರಿ ಕೃಪೆಯಿಂದ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಉನ್ನತ ಶಿಕ್ಷಣ ಮಂತ್ರಿ ಮಾಡಿದ್ದಾರೆ. ಸಂತೋಷದಿಂದ ಇಲಾಖೆ ಜವಾಬ್ದಾರಿ ಒಪ್ಪಿಕೊಂಡಿದ್ದೇನೆ ಎಂದು ಹೇಳಿದರು. ಪದವಿ ಕಾಲೇಜಿನ ಉಪನ್ಯಾಸಕರ ವರ್ಗಾವಣೆ ನಿಯಮ ತಿದ್ದುಪಡಿ ಮಾಡಲಿದ್ದೇವೆ. ಉಪನ್ಯಾಸಕರ ಸ್ನೇಹಿ ವರ್ಗಾವಣೆ ನೀತಿ ರೂಪಿಸಲಿದ್ದೇವೆ.
– ಜಿ.ಟಿ.ದೇವೇಗೌಡ, ಉನ್ನತ ಶಿಕ್ಷಣ ಸಚಿವ ಸರ್ಕಾರಿ ಪದವಿ ಕಾಲೇಜಿನ ದಾಖಲಾತಿ ಪ್ರಮಾಣ ಹೆಚ್ಚುವ ಅಗತ್ಯವಿದೆ. ಜಾಗತಿಕ ಮಟ್ಟದಲ್ಲಿ ಶೇ.44ರಷ್ಟು, ರಾಷ್ಟ್ರಮಟ್ಟದಲ್ಲಿ ಶೇ.26ರಷ್ಟಿದೆ. ರಾಜ್ಯದಲ್ಲಿ ಈ ಪ್ರಮಾಣ ಇನ್ನು ಕಡಿಮೆ ಇದೆ. ಜನಸಂಖ್ಯೆಗೆ ಅನುಗುಣವಾಗಿ ಉನ್ನತ ಶಿಕ್ಷಣ ಪಡೆಯುವವರ ಸಂಖ್ಯೆಯೂ ಹೆಚ್ಚಾಗಬೇಕು.
– ಡಾ.ಎನ್.ಮಂಜುಳಾ, ಆಯುಕ್ತೆ, ಕಾಲೇಜು ಶಿಕ್ಷಣ ಇಲಾಖೆ.