Advertisement

ಸುಮಲತಾ ಕೈ ಹಿಡಿದ ಮಹಿಳಾ ಮತದಾರರು

04:23 PM May 25, 2019 | Team Udayavani |

ಮಂಡ್ಯ: ಅಂಬರೀಶ್‌ ಸಾವಿನ ಅನುಕಂಪದ ಅಲೆಯ ಜೊತೆಗೆ ಜಿಲ್ಲೆಯ ಮಹಿಳಾ ಮತದಾರರು ಕೈ ಹಿಡಿದ ಪರಿಣಾಮ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪ್ರಚಂಡ ಜಯ ಸಾಧಿಸಲು ಸಾಧ್ಯವಾಯಿತು.

Advertisement

ಮಂಡ್ಯ ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಮಹಿಳಾ ಮತದಾರರು ಸ್ವಯಂಪ್ರೇರಣೆಯಿಂದ ಬಂದ ಮತ ಚಲಾಯಿಸಿದ್ದರು. ಬಹಿರಂಗ ಪ್ರಚಾರದ ಅಂತಿಮ ದಿನ ಸುಮಲತಾ ಜಿಲ್ಲೆಯ ಜನರೆದುರು ಸೆರಗೊಡ್ಡಿ ಸ್ವಾಭಿಮಾನದ ಭಿಕ್ಷೆ ಬೇಡಿದರು. ಜನರು ಅದನ್ನು ದಯಪಾಲಿಸಿ ವಿಜಯಮಾಲೆ ತೊಡಿಸಿದರು.

ಲೋಕಸಭಾ ಚುನಾವಣೆಯಲ್ಲಿ 680859 ಮಹಿಳೆಯರು ಮತ ಚಲಾಯಿಸಿದ್ದರು. ಇದರಲ್ಲಿ ಬಹುತೇಕ ಮತಗಳು ಸುಮಲತಾ ಪರವಾಗಿ ಹರಿದುಬಂದಿವೆ. ಚುನಾವಣೋತ್ತರದಲ್ಲಿ ಬಹಳಷ್ಟು ಮಹಿಳಾ ಮತದಾರರು ಬಹಿರಂಗವಾಗಿಯೇ ಸುಮಲತಾ ಪರ ಮತ ಚಲಾಯಿಸಿರುವ ಬಗ್ಗೆ ಮಾತನಾಡುತ್ತಿದ್ದುದು ಸುಮಲತಾ ಗೆಲುವಿನ ಮುನ್ಸೂಚನೆ ನೀಡಿತ್ತು. ಫ‌ಲಿತಾಂಶದಲ್ಲಿ ಅದು ನಿಜವೂ ಆಯಿತು.

ಮಹಿಳಾ ಮತಗಳು ಒಗ್ಗೂಡಿದ್ದು ಹೇಗೆ: ಚುನಾವಣೆ ಪೂರ್ವ ಹಾಗೂ ಪ್ರಚಾರ ಸಮಯದಲ್ಲಿ ಜೆಡಿಎಸ್‌ ನಾಯಕರು ಸುಮಲತಾ ವಿರುದ್ಧವಾಗಿ ಆಡಿದ ಅಸಹನೀಯ ಮಾತುಗಳೂ ಮಹಿಳೆಯರನ್ನು ಕೆರಳುವಂತೆ ಮಾಡಿತ್ತು. ಅಂಬರೀಶ್‌ ಕಳೆದುಕೊಂಡು ದುಃಖದಲ್ಲಿದ್ದ ಸುಮಲತಾ ಪರ ಮಹಿಳೆಯರಿಗಿದ್ದ ಅನುಕಂಪ ಜೆಡಿಎಸ್‌ ನಾಯಕರ ಟೀಕಾ ಪ್ರಹಾರದಿಂದ ಇನ್ನಷ್ಟು ಹೆಚ್ಚಾಗುವಂತೆ ಮಾಡಿತು. ಈ ಬೆಳವಣಿಗೆ ಮಹಿಳಾ ಮತಗಳೆಲ್ಲವೂ ಕೇಂದ್ರೀಕೃತವಾಗುವುದಕ್ಕೆ ಎಡೆಮಾಡಿಕೊಟ್ಟವು.

ಕೊಟ್ಟ ಮಾತಿಗೆ ತಪ್ಪಿದ ಸಿಎಂ: ಮುಖ್ಯಮಂತ್ರಿ ಕುಮಾರಸ್ವಾಮಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡಲಿಲ್ಲ. ಇದೂ ಕೂಡ ಮಹಿಳೆಯರಲ್ಲಿ ಅಸಮಾಧಾನ ಮೂಡಿಸಿತ್ತು. ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕ ಕೊಟ್ಟ ಮಾತಿಗೆ ತಪ್ಪಿದ ಸಿಎಂ ಕುಮಾರಸ್ವಾಮಿ ವಿರುದ್ಧದ ಕೋಪವನ್ನು ಸುಮಲತಾ ಪರ ಮತ ಚಲಾಯಿಸಿ ತೀರಿಸಿಕೊಂಡರು.

Advertisement

ಸುಮಲತಾ ಮಾತು: ನಟನಾಗಿ ಅಂಬರೀಶ್‌ ಅವರನ್ನು ಇಷ್ಟಪಡುತ್ತಿದ್ದ ಮಹಿಳೆಯರು ಅಂಬರೀಶ್‌ ಪತ್ನಿಯನ್ನು ಸುಲಭವಾಗಿಯೇ ರಾಜಕಾರಣಿಯಾಗಿ ಒಪ್ಪಿಕೊಂಡರು. ನಾನು ಈ ಮಣ್ಣಿನ ಮಗಳು, ಜಿಲ್ಲೆಯ ಸೊಸೆ ಎಂದು ಹೇಳಿದ ಮಾತುಗಳು ಮಹಿಳೆಯರ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸುಮಲತಾ ಹೋದಲೆಲ್ಲಾ ಮಹಿಳೆಯರು ಗುಂಪು ಗುಂಪಾಗಿ ಸೇರುತ್ತಿದ್ದರು. ಸುಮಲತಾ ಡ್ರೆಸ್‌ ಕೋಡ್‌, ನಡವಳಿಕೆ, ಮಾತುಗಾರಿಕೆ ಇವೆಲ್ಲ ಕಂಡು ಮಾರುಹೋದರು. ಸುಮಲತಾ ನಟಿ ಎಂಬುದಕ್ಕಿಂತ ಹೆಚ್ಚಾಗಿ ಅಂಬರೀಶ್‌ ಪತ್ನಿ, ತವರಿಗೆ ಸೇರಿದವಳು ಎಂಬುದನ್ನು ಹೃದಯದಲ್ಲಿರಿಸಿಕೊಂಡರು.

ಜಿಲ್ಲೆಯ ಮಹಿಳೆಯರು ಈ ಬಾರಿ ಹಣಕ್ಕೆ ಮರುಳಾಗಲಿಲ್ಲ. ಹಣದ ಹರಿದಾಟ ತೀವ್ರತೆಯಿಂದ ಕೂಡಿದ್ದರೂ ಸುಮಲತಾ ಅವರನ್ನು ತಿರಸ್ಕರಿಸುವುದಕ್ಕೆ ಮಹಿಳೆಯರ ಮನಸ್ಸು ಒಪ್ಪಲಿಲ್ಲ. ಜೆಡಿಎಸ್‌ನವರು ನೀಡಿದ ಹಣ ಪಡೆದು ಕೊನೆಗೆ ಸುಮಲತಾ ಪರ ನಿಂತರು. ಸ್ವಾಭಿಮಾನದ ಉಳಿವಿಗೆ ಬದ್ಧರಾದರು.

ಅಳಿಯನಾಗುವೆನೆಂದರೂ ಒಪ್ಪಲಿಲ್ಲ: ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಕೆ.ನಿಖೀಲ್ ಕೂಡ ನಾನೂ ಈ ಜಿಲ್ಲೆಯ ಮಗ, ಒಳ್ಳೆಯ ಹುಡುಗಿ ಸಿಕ್ಕರೆ ಮದುವೆಯಾಗಿ ಅಳಿಯನಾಗುತ್ತೇನೆ ಎಂದರೂ ಯಾರೊಬ್ಬರೂ ಅದನ್ನು ಒಪ್ಪಿಕೊಳ್ಳಲಿಲ್ಲ. ಜಮೀನು ಖರೀದಿಸಿ, ತೋಟದ ಮನೆ ಮಾಡಿಕೊಂಡು ಇಲ್ಲೇ ಉಳಿಯುತ್ತೇನೆ ಎಂದರೂ ಮಂಡ್ಯ ಜನತೆ ನಂಬಲಿಲ್ಲ. ಮಂಡ್ಯದ ಸೊಸೆ ಸುಮಲತಾ ಅಂಬರೀಶ್‌ ಪರ ಮತ ಚಲಾಯಿಸಿ ಗೆಲುವಿಗೆ ಕಾರಣರಾದರು.

ಸುಮಲತಾ ಸೆರಗೊಡ್ಡಿ ಬೇಡಿದ ಸ್ವಾಭಿಮಾನದ ಭಿಕ್ಷೆ ಮಹಿಳೆಯರ ಮನಸ್ಸು ಪರಿವರ್ತನೆಯಾಗುವಂತೆ ಮಾಡಿತು. ಒಟ್ಟು ಚಲಾವಣೆಯಾದ ಮಹಿಳಾ ಮತಗಳಲ್ಲಿ ಶೇ.70ರಷ್ಟು ಮತಗಳು ಸುಮಲತಾ ಪರ ಇದ್ದುದರಿಂದಲೇ ಗೆಲುವು ಸುಲಭವಾಯಿತು.

● ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next