Advertisement

ಮೀಸಲಿದ್ರೂ ರಾಜಕೀಯಕ್ಕೆ ಬರಲು ಸ್ತ್ರೀಯರು ಹಿಂದೇಟು

06:52 AM Jan 19, 2019 | Team Udayavani |

ಮೈಸೂರು: ದೇಶದ ಪ್ರಜೆಯಾಗಿ ಪ್ರತಿಯೊಬ್ಬರಿಗೂ ಭಾಗವಹಿಸುವ ಹಕ್ಕಿರುವಾಗ ಮಹಿಳೆಯರನ್ನು ರಾಜಕಾರಣದಲ್ಲಿ ಒಪ್ಪಿಕೊಳ್ಳುವ ಮನೋಭಾವವನ್ನು ಸಮಾಜ ತೋರಬೇಕು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. ರಂಗಾಯಣ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಲಿಂಗಸಮಾನತೆ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ರಾಜಕಾರಣ ಮತ್ತು ಲಿಂಗ ಸಮಾನತೆ ವಿಷಯ ಕುರಿತು ಅವರು ಮಾತನಾಡಿದರು.

Advertisement

ರಾಜಕೀಯದಲ್ಲಿ ಮಹಿಳಾ ಮೀಸಲಾತಿಗೂ ಆಕ್ಷೇಪವಿದೆ. ಕುಟುಂಬ ಮತ್ತು ಸಮಾಜದಲ್ಲಿ ಪುರುಷರಿಗೆ ಅವಕಾಶಗಳು ಸಿಕ್ಕಂತೆ ಮಹಿಳೆಗೂ ಅವಕಾಶಗಳು ಸಿಕ್ಕಿದ್ದರೆ ಮೀಸಲಾತಿ ಬೇಕಿರಲಿಲ್ಲ. ಮೀಸಲಾತಿಯಿದ್ದರೂ ಆಯ್ಕೆಯಾಗಿ ಬರುವವರ ಸಂಖ್ಯೆ ಕಡಿಮೆ ಇದೆ. ಮಹಿಳೆಗೆ ಮತದಾನ ಹಕ್ಕು ಸಿಗಲೂ ಹೋರಾಟ ಮಾಡಬೇಕಾಯಿತು. ಸಂವಿಧಾನದಲ್ಲಿ ಮಹಿಳೆಗೆ ಎಲ್ಲಾ ರೀತಿಯ ರಕ್ಷಣೆಯನ್ನೂ ಹೇಳಲಾಗಿದೆ.

ಆದರೆ, ವಾಸ್ತವವಾಗಿ ನ್ಯಾಯ ದೊರಕುವಲ್ಲಿ ಹಿನ್ನಡೆಯಾಗುತ್ತಿದೆ. ದೇಶದ ಪ್ರಜೆಯಾಗಿ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿ ಪ್ರತಿಯೊಬ್ಬರಿಗೂ ಭಾಗವಹಿಸುವ ಹಕ್ಕಿದೆ. ಆದರೆ, ಗೃಹಿಣಿ, ನಟಿ ರಾಜಕೀಯಕ್ಕೆ ಹೋಗ ಬಾರದು ಎಂಬ ಮನೋಭಾವ ಏಕೆ? ರಾಜಕಾರಣದಲ್ಲೂ ಮಹಿಳೆಯರನ್ನು ಒಪ್ಪಿಕೊಳ್ಳುವ ಮನೋಭಾವ ತೋರಬೇಕು. ಮಹಿಳಾ ನಾಯಕತ್ವ ಬೆಳೆಯಬೇಕೆಂದರೆ ಸಮಾಜದ ಮನಸ್ಥಿತಿ ಬದಲಾಗಬೇಕು ಎಂದರು.

ರಾಜಕೀಯದಲ್ಲಿರುವವರೇ ನಿಮಗ್ಯಾಕೆ ಎನ್ನುವ ಧೋರಣೆಯಿಂದಾಗಿ ಮುಂದೆ ಹೋಗುವ ಮಹಿಳೆಯನ್ನು ಎಳೆದಿಡಲಾಗುತ್ತಿದೆ. ರಾಜಕೀಯದಲ್ಲಿ ಹೆಣ್ಣಿಗೆ ಬೆಂಬಲಕೊಟ್ಟು ಪ್ರೋತ್ಸಾಹಿಸಬೇಕು ಎಂಬ ಭಾವನೆ ಕೆಲವೇ ಕೆಲವರಲ್ಲಿದೆ ಎಂದು ಹೇಳಿದರು. ಮಹಿಳೆಯನ್ನು ಮಹಿಳೆಯೇ ದೂಷಿಸುವ ಕಾಲ ಬದಲಾಗಬೇಕು. ಅಪ್ಪ, ಅಣ್ಣ, ತಮ್ಮ, ಗಂಡನಾಗಿ ನಮ್ಮ ಹಿಂದಿರುವ ಗಂಡಸರನ್ನು ದ್ವೇಷಿಸದೆ, ಲೌಕಿಕ ತಿಳಿವಳಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ತಿಳಿಸಿದರು.

ಹೆಣ್ಣಿಗೆ 2ನೇ ಸ್ಥಾನ: ಶಿಕ್ಷಣ, ಅಧಿಕಾರ, ತೀರ್ಮಾನ ತೆಗೆದುಕೊಳ್ಳುವ ವಿಷಯಗಳಲ್ಲಿ ಹಿಂದಿನಿಂದಲೂ ಹೆಣ್ಣನ್ನು ಎರಡನೇ ಸ್ಥಾನದಲ್ಲಿ ಕಾಣಲಾಗುತ್ತಿದೆ. ಸಾಂಸ್ಕೃತಿಕವಾಗಿಯೂ ಹೆಣ್ಣನ್ನು ಕಡೆಗಣಿಸಲಾಗಿತ್ತು. ಈ ಶತಮಾನದಲ್ಲಿ ಹೆಣ್ಣು ಶಿಕ್ಷಣ, ಅಧಿಕಾರ ಪಡೆದುಕೊಂಡು ಸಾಂಸ್ಕೃತಿಕ ರಂಗದಲ್ಲಿ ತೊಡಗಿಸಿಕೊಂಡಿದ್ದರೆ ಅದು ತಾನಾಗಿಯೇ ಬಂದದ್ದಲ್ಲ. ಶತಮಾನಗಳಿಂದ ಹೋರಾಟ ನಡೆಸಿದ ಫ‌ಲವಾಗಿ ಶಿಕ್ಷಣ, ರಾಜಕೀಯ ಸ್ಥಾನಮಾನ ಸಿಕ್ಕಿದೆ.

Advertisement

ಹೋರಾಟಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಂಘಟನಾ ಶಕ್ತಿಯೂ ಬಂದಿದೆ. ಹೆಣ್ಣು ತನ್ನ ಹಕ್ಕುಗಳನ್ನು ಪಡೆಯಲು ಹೋರಾಟ ಅಗತ್ಯ ಎಂಬುದನ್ನು ಜಗತ್ತು ತೋರಿಸಿಕೊಟ್ಟಿದೆ ಎಂದು ಹೇಳಿದರು. ಹಿಂದೆ ಮಹಿಳೆಗೆ ಕುಟುಂಬದ ಅನುಭವ ಮಾತ್ರ ಸಿಗುತ್ತಿತ್ತು. ಈಗ ಕುಟುಂಬದ ಜೊತೆಗೆ ಸಮಾಜದ ಅನುಭವವೂ ಸಿಗುತ್ತಿದೆ. ಇದರ ಜೊತೆಗೆ ತೀರ್ಮಾನ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಂಚೂಣಿ ಸ್ಥಾನವನ್ನು ದಕ್ಕಿಸಿಕೊಳ್ಳಬೇಕು ಎಂದು ಹೇಳಿದರು.

ಬಿಸಿ ಎಣ್ಣೆ: ಪ್ರಾಸ್ತಾವಿಕ ನುಡಿಗಳನ್ನಾಡಿದ ರಂಗಾಯಣ ನಿರ್ದೇಶಕಿ ಭಾಗೀರಥಿ ಬಾಯಿ ಕದಂ, ಗಂಡಸರ ಸ್ವತ್ತಾಗಿದ್ದ ರಂಗಭೂಮಿಗೆ ಮಹಿಳೆ ಪ್ರವೇಶ ಮಾಡಿದ್ದರೂ ಆಕೆಯನ್ನು ಯಾವ ದೃಷ್ಟಿಕೋನದಿಂದ ನೋಡಲಾಗುತ್ತದೆ ಎಂಬುದನ್ನು ಕೇಳಿದಾಗ ಬಿಸಿ ಎಣ್ಣೆ ಸುರಿದಂತೆ ಆಗುತ್ತಿತ್ತು. ದಿನ ಕಳೆದಂತೆ ಆ ಭಾವನೆ ಹೋಗಬೇಕಿತ್ತು. ಆದರೆ, ಆ ಕೆಲಸವಾಗಿಲ್ಲ. ಹೀಗಾಗಿ ಲಿಂಗ ಸಮಾನತೆಯನ್ನು ಮೀರುವ ದಿಟ್ಟ ಹೆಜ್ಜೆಯನ್ನು ಹಾಕಿ, ಚೌಕಟ್ಟನ್ನು ಮೀರುವ ಸಾಹಸವನ್ನು ರಂಗಭೂಮಿ ಕೊಟ್ಟಿದೆ ಎಂದು ತಿಳಿಸಿದರು.

ಆಕರ್ಷಣೆಯ ಕ್ಷೇತ್ರ: ರಾಜ್ಯ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಮಂಜುಳಾ ಮಾನಸ ಮಾತನಾಡಿ, ಕ್ರಿಕೆಟ್‌, ಸಿನಿಮಾದಂತೆ ರಾಜಕಾರಣ ಕೂಡ ಆಕರ್ಷಣೆಯ ಕ್ಷೇತ್ರ. ಆದರೆ, ಅಲ್ಲಿ ಮಹಿಳೆಯರು ಉಳಿಯುವುದು ಕಷ್ಟ. ಸ್ವಸಾಮರ್ಥ್ಯದಿಂದ ಉಳಿದು ಅಧಿಕಾರ ಸ್ಥಾನದ ಹತ್ತಿರಕ್ಕೆ ಬಂದರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರತುಪಡಿಸಿ ಬೇರೆ ಇಲಾಖೆಗಳ ಜವಾಬ್ದಾರಿಯನ್ನು ಮಹಿಳೆಗೆ ನೀಡುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹಗಾರರಾದ ಡಾ.ಸುಶಿ ಕಾಡನಕುಪ್ಪೆ ಮಾತನಾಡಿ, ಮಹಿಳೆ ಮಾನಸಿಕ ಅಸಮಾನತೆಯಿಂದ ಬಿಡುಗಡೆಗೊಂಡರೆ ಅಸಹನೆ ಕಡಿಮೆಯಾಗುತ್ತೆ. ಸರ್ಕಾರಿ ಶಾಲಾ ಮಕ್ಕಳಿಗೆ ಲೈಂಗಿಕ ಶಿಕ್ಷಣ, ರಾಜಕೀಯ ಪ್ರಜ್ಞೆ ಮೂಡಿಸಬೇಕು. ಇಲ್ಲವಾದಲ್ಲಿ ಮಕ್ಕಳ ವ್ಯಕ್ತಿತ್ವದ ಪರಿಪೂರ್ಣ ಬೆಳವಣಿಗೆಯಾಗಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next