Advertisement

ವ್ರತ ಕಷ್ಟವೆಂದು ಸ್ತ್ರೀಯರಿಗೆ ಪ್ರವೇಶ ನಿರ್ಬಂಧ

06:00 AM Jul 20, 2018 | Team Udayavani |

ಹೊಸದಿಲ್ಲಿ: ಮಹಿಳೆಯರಿಗೆ 41 ದಿನಗಳ ಕಾಲ ಕಠಿನ ವ್ರತ (ದೇಹದಂಡನೆ) ಕೈಗೊಳ್ಳುವುದು ಅಸಾಧ್ಯ ಎಂಬ ಕಾರಣಕ್ಕೆ ಶಬರಿಮಲೆ ದೇಗುಲ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಸ್ಪಷ್ಟನೆ ನೀಡಿದೆ.

Advertisement

ಸ್ತ್ರೀಯರಿಗೇಕೆ ಪ್ರವೇಶ ನೀಡುತ್ತಿಲ್ಲ ಎಂದು ಸುಪ್ರೀಂ ಕೋರ್ಟ್‌ ತರಾಟೆಗೆ ತೆಗೆದುಕೊಂಡ ಮಾರನೇ ದಿನ, ತನ್ನ ವಾದ ಮುಂದುವರಿಸಿರುವ ಅದು, ದೇವಸ್ಥಾನ ಪ್ರವೇಶಕ್ಕೆ ಯಾವುದೇ ಜಾತಿ, ಧರ್ಮಕ್ಕೂ ನಿಷೇಧ ಹೇರಿಲ್ಲ. ಋತು ಮತಿ ಆದವರಿಗೆ ಪ್ರವೇಶ ನಿರಾಕರಿಸಿರುವ ಹಿನ್ನೆಲೆಯಲ್ಲಿ 10ರಿಂದ 50 ವರ್ಷದ ವರೆಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ. ಇದು ದೇಗುಲದಲ್ಲಿ ಕಡ್ಡಾಯವಾಗಿದೆೆ. ಈ ರೀತಿ ನಿರ್ಬಂಧ ವಿಧಿಸಿರುವುದು ದೇಗುಲದ ನಿಷ್ಕಪಟ ಐತಿಹಾಸಿಕ ನಂಬಿಕೆಯಾಗಿದೆ. ಜತೆಗೆ ಅಯ್ಯಪ್ಪ ಸ್ವಾಮಿ ಭಕ್ತರ ಸಾಮೂಹಿಕ ನಂಬಿಕೆಯೂ ಆಗಿದೆ ಎಂದು ಹೇಳಿದೆ.

ಬೇರೆ ದೇವಸ್ಥಾನದಂತೆ ಶಬರಿಮಲೆಗೂ ಮುಸ್ಲಿಮರು, ಕ್ರಿಶ್ಚಿಯನ್ನರು ಪ್ರವೇಶ ಮಾಡ ಬಹುದು ಎಂದು ದೇಗುಲ ಪರ ವಕೀಲ ಅಭಿಷೇಕ್‌ ಮನು ಸಿಂಘ್ವಿ ವಾದ ಮಂಡಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠವು, “ಮಹಿಳೆಯರಿಗೆ ಅಸಾಧ್ಯವಾದಂಥ 41 ದಿನಗಳ ದೇಹದಂಡನೆಯನ್ನು ವಿಧಿಸುವ ಮೂಲಕ ನೀವು ನೇರವಾಗಿ ಮಾಡಲಾಗದ್ದನ್ನು, ಪರೋಕ್ಷವಾಗಿ ಮಾಡಲು ಯತ್ನಿಸಿದಂತಿದೆ. 46 ವರ್ಷಕ್ಕೇ ಒಬ್ಬ ಮಹಿಳೆಯ ಋತುಸ್ರಾವ ಅಂತ್ಯಗೊಂಡರೆ ಅಂಥವರಿಗೂ ಏಕೆ ಪ್ರವೇಶ ನಿರ್ಬಂಧ ಹೇರುತ್ತೀರಿ? ಪ್ರತಿ ಮಹಿಳೆಯೂ ದೇವರ ಸೃಷ್ಟಿ. ಹೀಗಿರುವಾಗ ಭಕ್ತಿ, ಉದ್ಯೋಗದ ವಿಚಾರಕ್ಕೆ ಬಂದಾಗ ಏಕೆ ಮಹಿಳೆಯರ ವಿರುದ್ಧ ತಾರತಮ್ಯ ಮಾಡುತ್ತೀರಿ’ ಎಂದು ಪ್ರಶ್ನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next