Advertisement

ಮಹಿಳೆ ಮೇಲೆ ಹಲ್ಲೆ; ಹಣ ಕಸಿದು ಪರಾರಿ

03:12 PM Sep 21, 2017 | Team Udayavani |

ಸಿದ್ದಾಪುರ:  ಅಮಾಸೆಬೈಲು ಬಳಿಯ ರಟ್ಟಾಡಿಯಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾಲಾಡಿ ವಲಯದ ಕಾರ್ಯಕ್ಷೇತ್ರದ ಸೇವಾನಿರತರ ಕಚೇರಿಗೆ ಆಗಮಿಸಿದ ದುಷ್ಕರ್ಮಿಯೋರ್ವ ನಗದು ಗುಮಾಸ್ತೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸುಮಾರು ರೂ. 2.3 ಲಕ್ಷ ದೋಚಿದ ಘಟನೆ ಬುಧವಾರ ಪೂರ್ವಾಹ್ನ 10 ಗಂಟೆಯ ಸುಮಾರಿಗೆ ಸಂಭವಿಸಿದೆ.

Advertisement

ಘಟನೆ ವಿವರ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಣ ಸಂಗ್ರಹಕ್ಕಾಗಿ ಪ್ರತಿ ಬುಧವಾರ ಕುಂದಾಪುರ ಕಚೇರಿಯಿಂದ ವಾಹನದಲ್ಲಿ  ಸಿಬಂದಿಯೋರ್ವರು ರಟ್ಟಾಡಿಗೆ ತೆರಳುತ್ತಾರೆ. ಹಾಗೆಯೇ ನಗದು ಗುಮಾಸ್ತೆ  ಪ್ರೀತಿ ಕೊಕ್ಕರ್ಣೆ (23) ಅವರು ಕೂಡ ರಟ್ಟಾಡಿಯ ಸೇವಾನಿರತರ ಕಚೇರಿಗೆ ಹಣ ಸಂಗ್ರಹಕ್ಕಾಗಿ ಕುಂದಾಪುರದಿಂದ ಯೋಜನೆಯ ವಾಹನದಲ್ಲಿ ತೆರಳಿದ್ದರು. ಯೋಜನೆಯ ವಾಹನವು ಬೆಳಗ್ಗೆ ಯುವತಿಯನ್ನು ಕಚೇರಿಯಲ್ಲಿ ಬಿಟ್ಟು ಮುಂದಿನ ಕಚೇರಿಗೆ ಹಣ ಸಂಗ್ರಹಿಸಲು ಹೋಗಿದ್ದರು. ಕಚೇರಿಯಲ್ಲಿ  ಸದಸ್ಯರಿಂದ ರೂ. 2.3ಲಕ್ಷ ರೂ. ಸಂಗ್ರಹಿಸಿದ್ದರು. ಬೆಳಗ್ಗೆ 10 ಗಂಟೆಯ ಸುಮಾರಿಗೆ ಹೆಲ್ಮೆಟ್‌ ಧರಿಸಿ ಬಂದ ವ್ಯಕ್ತಿಯೋರ್ವ ಕಚೇರಿಗೆ ಬಂದು ಕೃಷಿ ಇಲಾಖೆಯ ಕಚೇರಿ ಎಲ್ಲಿದೆ ಎಂದು ಪ್ರಶ್ನಿಸಿದ. ಈ ಬಗ್ಗೆ ಮಾಹಿತಿ ನೀಡುವ ಸಂದರ್ಭ ಮರದ ತುಂಡಿನಿಂದ ಪ್ರೀತಿ ಅವರ ತಲೆ, ದವಡೆ, ಸೊಂಟದ ಭಾಗದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆನಂತರ ಕಾಲಿನಿಂದ ತುಳಿದು  ನಗದು ಕೌಂಟರ್‌ನಲ್ಲಿದ್ದ  ಹಣವನ್ನ ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾನೆ.

ಹಲ್ಲೆಗೊಳಗಾದ ಪ್ರೀತಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ  ಬಿದ್ದಿದ್ದು,  ವಿಪರೀತ ರಕ್ತಸ್ರಾವವಾಗಿತ್ತು. ಈ ಸಂದರ್ಭದಲ್ಲಿ ಹಣ ಕಟ್ಟಲು ಬಂದ ಸದಸ್ಯ ಓರ್ವ ಪ್ರೀತಿ ಅವರು ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಕಂಡು ಬೊಬ್ಬೆ ಹೊಡೆದಾಗ ಸ್ಥಳೀಯ ಅಂಗಡಿಯವರು  ಹಾಗೂ ಮನೆಯವರು ಧಾವಿಸಿದರು. ಮಹಿಳೆಯರನ್ನು ಕರೆಸಿ ಪ್ರೀತಿ ಅವರನ್ನು 108 ವಾಹನದಲ್ಲಿ  ಹಾಲಾಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.  ಬಳಿಕ ಸರಕಾರಿ ಆಸ್ಪತ್ರೆಯವರ ಸೂಚನೆಯಂತೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು. ಆಕೆ ಮಣಿಪಾಲದ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬುಧವಾರ ಬೆಳಗ್ಗೆ ಹಣ ಸಂಗ್ರಹ
ರಟ್ಟಾಡಿಯಲ್ಲಿ  ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತರ ಕಚೇರಿ ಸುಮಾರು 15 ವರ್ಷಗಳಿಂದ ಇಲ್ಲಿ ಕಾರ್ಯಾಚರಿಸುತ್ತಿದೆ. ಈ ಪ್ರದೇಶವು ನಿರ್ಜನ ಪ್ರದರ್ಶನವಾಗಿದ್ದು, ಕಚೇರಿಯ ಸುತ್ತಲೂ ಕಾಡು ಪ್ರದೇಶಗಳಿಂದ ಕೂಡಿದೆ. ಮನೆ ಹಾಗೂ ಅಂಗಡಿಗಳು ನೂರಕ್ಕೂ ಹೆಚ್ಚು ಮೀಟರ್‌ ದೂರದಲ್ಲಿದೆ. ಪ್ರತಿ ಬುಧವಾರ ಹಣ ಸಂಗ್ರಹ ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳುತ್ತಿತ್ತು. ಕೂಲಿ ಹಾಗೂ ಇತರ ಕೆಲಸಕ್ಕೆ ಹೋಗುವವರು ಇಲ್ಲಿ ಹಣ ಕಟ್ಟಿ ತೆರಳುತ್ತಿದ್ದರು.  ಹೀಗಾಗಿ ಬೆಳಗ್ಗೆ 9 ಗಂಟೆಯೊಳಗೆ ಲಕ್ಷಾಂತರ ರೂ.   ಸಂಗ್ರಹವಾಗುತ್ತಿತ್ತು. ಈ ಬಗ್ಗೆ ಸರಿಯಾಗಿ ಮಾಹಿತಿಯುಳ್ಳವರೇ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ.

ಘಟನ ಸ್ಥಳಕ್ಕೆ ಕುಂದಾಪುರ ಡಿವೈಎಸ್‌ಪಿ ಪ್ರವೀಣ ನಾಯಕ್‌, ವೃತ್ತ ನಿರೀಕ್ಷಕರಾದ ಮಂಜಪ್ಪ, ಸಂಪತ್‌, ಅಮಾಸೆಬೈಲು ಹಾಗೂ ಶಂಕರನಾರಾಯಣ ಪೊಲೀಸ್‌ ಠಾಣೆಯ ಠಾಣಾ ಉಪ ನಿರೀಕ್ಷಕರಾದ ಸುದರ್ಶನ್‌ ಹಾಗೂ ಸುನೀಲ್‌ಕುಮಾರ್‌, ಮಾಜಿ ತಾಲೂಕು  ಪಂಚಾಯತ್‌  ಸದಸ್ಯ ಆರ್‌. ನವೀನಶ್ಚಂದ್ರ ಶೆಟ್ಟಿ ರಟ್ಟಾಡಿ ಹಾಗೂ ಗ್ರಾಮ ಪಂಚಾಯತ್‌ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Advertisement

ಆರೋಪಿ ಬೈಕ್‌ನಲ್ಲಿ ಬಂದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಘಟನೆ ನಡೆದ ಕೆಲವು ಹೊತ್ತಿನ ಬಳಿಕ ಬೈಕೊಂದು ಸ್ಥಳದಿಂದ ತೆರಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಆಗಮಿಸಿದೆ.
ಪೊಲೀಸರಿಂದ ತೀವ್ರ ಶೋಧ: ಈ ಘಟನೆ ನಡೆದ ಬಳಿಕ ಪೊಲೀಸರು ಎಲ್ಲೆಡೆ ನಾಕಾಬಂಧಿ ಮಾಡಿದ್ದು, ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ. ಶ್ವಾನ ಘಟನೆ ಸ್ಥಳದಿಂದ ಮುಖ್ಯ ರಸ್ತೆಯವರೆಗೆ ಬಂದು ವಾಪಸಾಗಿದೆ. ಈ ಸ್ಥಳದಲ್ಲಿ ಬೈಕ್‌ನ್ನು ಆರೋಪಿ ನಿಲ್ಲಿಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next