Advertisement

ವಿಜಯೇಂದ್ರ ಶಿಕಾರಿಪುರದಿಂದ ಕಣಕ್ಕಿಳಿದರೆ ಸಿದ್ದು ವರುಣಾದಿಂದ?

11:14 PM Jul 30, 2022 | Team Udayavani |

ಬೆಂಗಳೂರು: ಬಿ.ವೈ. ವಿಜಯೇಂದ್ರ ಅವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರದ ಲೆಕ್ಕಾಚಾರವೂ ಬದಲಾಗುವ ಲಕ್ಷಣ ಕಂಡು ಬರುತ್ತಿದೆ.

Advertisement

ದೂರದ ಬಾದಾಮಿ ಬಿಟ್ಟು ಬೆಂಗಳೂರಿಗೆ ಹತ್ತಿರದ ಕೋಲಾರ ದಿಂದ ಸ್ಪರ್ಧೆಗೆ ಒತ್ತಡ ಹೆಚ್ಚಿರುವ ನಡುವೆಯೇ, ಮೈಸೂರು ಭಾಗದ ನಾಯಕರು ವರುಣಾದಿಂದಲೇ ಸ್ಪರ್ಧಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಮೈಸೂರು ಭಾಗದಲ್ಲಿ ಕಾಂಗ್ರೆಸ್‌ ಕ್ಷೇತ್ರಗಳ ಮೇಲೆ ಜೆಡಿಎಸ್‌ ಹಾಗೂ ಬಿಜೆಪಿ ಕಣ್ಣಿಟ್ಟಿದ್ದು, ಆ ಭಾಗದಿಂದ ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ಕಷ್ಟವಾಗಬಹುದು ಎಂಬುದು ಅಲ್ಲಿನ ನಾಯಕರ ಲೆಕ್ಕಾಚಾರವಾಗಿದೆ.
ಸದ್ಯದ ಪರಿಸ್ಥಿತಿಯಲ್ಲಂತೂ ಸಿದ್ದರಾಮಯ್ಯ ಬಾದಾಮಿಯಲ್ಲಿ ಸ್ಪರ್ಧಿಸುವುದು ಅನುಮಾನ ಹಾಗೂ ಕಳೆದ ಬಾರಿಯಂತೆ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯೂ ಕಡಿಮೆ. ಆದ್ದರಿಂದ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಬಣ ರಾಜಕೀಯ ಕಿರಿಕ್‌
ಮತ್ತೂಂದೆಡೆ ಕೋಲಾರದಲ್ಲಿ ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಬಣ ಹಾಗೂ ಕೇಂದ್ರದ ಮಾಜಿ ಸಚಿವ ಕೆ.ಎಚ್‌. ಮುನಿಯಪ್ಪ ಬಣದ ಕಿತ್ತಾಟ ಜೋರಾಗಿದೆ. ಸಮಸ್ಯೆ ಬಗೆಹರಿಯದಿದ್ದರೆ ಮುನಿಯಪ್ಪ ಜೆಡಿಎಸ್‌ ಕಡೆ ಹೋಗುವುದು ಖಚಿತ ಎನ್ನಲಾಗಿದೆ.

ಕೋಲಾರ ಕ್ಷೇತ್ರದಲ್ಲಿ ಒಕ್ಕಲಿಗರು ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೆಡಿಎಸ್‌ ಸಿ.ಎಂ. ಇಬ್ರಾಹಿಂ ಅವರನ್ನು ಕಣಕ್ಕಿಳಿಸಿದರೆ ಹಾಗೂ ಮುನಿಯಪ್ಪ ಕೂಡ ಜೆಡಿಎಸ್‌ ಕಡೆಗೆ ಹೋದರೆ ಸ್ಥಳೀಯ ಚಿತ್ರಣವೇ ಬೇರೆಯಾಗಲಿದೆ.

Advertisement

ಇಂಥ ಸಂದರ್ಭ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಕಷ್ಟವಾಗಬಹುದೆಂಬ ವಾದವನ್ನೂ ಅವರ ಆಪ್ತರು ಮುಂದಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಅವರೇ ಹೇಳಿರುವಂತೆ ಇದು ಕೊನೆಯ ಚುನಾವಣೆ. ಹೀಗಾಗಿ ಸ್ವಕ್ಷೇತ್ರ ವರುಣಾದಲ್ಲಿ ಸ್ಪರ್ಧಿಸಿದರೆ ಸೂಕ್ತ. ರಾಜಕೀಯವಾಗಿಯೂ ಉತ್ತಮ ಸಂದೇಶ ಹೋಗುತ್ತದೆ. ಜತೆಗೆ, ಮುಂದಿನ ವಿಧಾನಸಭೆ ಚುನಾ ವಣೆಯಲ್ಲಿ ರಾಜ್ಯವ್ಯಾಪಿ ಪ್ರವಾಸ ಕೈಗೊಳ್ಳಬೇಕಿರುವುದರಿಂದ ಸುಲಭ ವಾಗಿ ಗೆಲ್ಲುವ ಕಡೆ ಸ್ಪರ್ಧಿಸುವುದು ಸೂಕ್ತ. ಕಳೆದ ಚುನಾವಣೆಯಲ್ಲಿ ಬಾದಾಮಿ ಯಲ್ಲಿ ಶ್ರೀರಾಮುಲು, ಚಾಮುಂಡೇಶ್ವರಿಯಲ್ಲಿ ಜಿ.ಟಿ. ದೇವೇಗೌಡರ ಸ್ಪರ್ಧೆಯಿಂದ ಸಾಕಷ್ಟು ಸಮಸ್ಯೆಯಾಗಿತ್ತು ಎಂದು ಸಿದ್ದು ಆಪ್ತರು ಹೇಳುತ್ತಾರೆ.

ಹೈಕಮಾಂಡ್‌ ಜತೆ ಚರ್ಚಿಸಿ ನಿರ್ಧಾರ
ದಾವಣಗೆರೆ ಸಮಾವೇಶದ ಬಳಿಕ ಹೈಕಮಾಂಡ್‌ ಜತೆ ಚರ್ಚಿಸಿ ತಾಸು ಸ್ಪರ್ಧಿಸುವ ಕ್ಷೇತ್ರದ ಬಗ್ಗೆ ಸಿದ್ದರಾಮಯ್ಯ ಘೋಷಿಸಲಿದ್ದಾರೆ ಎಂದು ಹೇಳಲಾಗಿದೆ. ಕ್ಷೇತ್ರದ ಬಗ್ಗೆ ಕೊನೆಯವರೆಗೂ ಗುಟ್ಟಾಗಿ ಇಡುವುದು ಬೇಡ. ಇದರಿಂದ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಗೊಂದಲ ಉಂಟಾಗುತ್ತದೆ ಎಂದು ಆಪ್ತರು ಸಲಹೆ ನೀಡಿದ್ದಾರೆಂದು ತಿಳಿದು ಬಂದಿದೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next