Advertisement

ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯ ಕೂಗಿಗೆ ಬಸವರಾಜ ಬೊಮ್ಮಾಯಿ ಬೀಗ?

09:08 AM Aug 01, 2021 | Team Udayavani |

ದಾವಣಗೆರೆ: ಅಭಿವೃದ್ಧಿ ತಾರತಮ್ಯ ವಿಚಾರ ಮುಂದಿಟ್ಟು ಆಗಾಗ ಭುಗಿಲೇಳುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇನ್ನು ಮುಂದೆ ತಣ್ಣಗಾಗಿಸುವಲ್ಲಿ ನೂತನ ಸಿಎಂ ಬಸವರಾಜ ಬೊಮ್ಮಾಯಿ ದಿಟ್ಟ ಹೆಜ್ಜೆ ಇಡುವರೇ ಎಂಬ ನಿರೀಕ್ಷೆ ಗರಿಗೆದರಿದೆ.

Advertisement

ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಅವರಿಗೆ ಆ ಭಾಗದ ಜಿಲ್ಲೆಗಳ ಸಮಸ್ಯೆ, ಜನರ ಬೇಡಿಕೆಗಳ ಬಗ್ಗೆ ಅರಿವು ಇದೆ. ಇದೇ ಕಾರಣಕ್ಕಾಗಿ ಅವರು ಅಭಿವೃದ್ಧಿ ವಿಚಾರದಲ್ಲಿ ದಕ್ಷಿಣ ಕರ್ನಾಟಕ ಹಾಗೂ ಉತ್ತರ ಕರ್ನಾಟಕ ನಡುವಿನ ಅಸಮಾನತೆ ಸರಿದೂಗಿಸಲು ಮುಂದಾಗಬಹುದು. ತನ್ಮೂಲಕ ಪ್ರತ್ಯೇಕ ರಾಜ್ಯದ ಧ್ವನಿಯನ್ನು ಶಾಶ್ವತವಾಗಿ ಅಡಗಿಸಬಹುದು ಎಂಬ ಅಖಂಡ ಕರ್ನಾಟಕ ಪ್ರೇಮಿಗಳ ಆಸೆ ಚಿಗುರೊಡೆದಿದೆ.

ಇದನ್ನೂ ಓದಿ:ಶತಾಯುಷಿ, “ವಿಶ್ವದಾಖಲೆಯ ಓಟಗಾರ್ತಿ’ ಮನ್‌ ಕೌರ್‌ ನಿಧನ

ರಾಜ್ಯದ ಆರ್ಥಿಕ ವ್ಯವಹಾರ, ವಾಣಿಜ್ಯ, ವ್ಯಾಪಾರೋದ್ಯಮ, ಕೈಗಾರಿಕೆ, ಸಾರಿಗೆ ಸಂಪರ್ಕ ಸೇರಿದಂತೆ ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಹೆಚ್ಚಿನ ಪಾಲು ಬೆಂಗಳೂರು ನಗರ ಕೇಂದ್ರೀಕೃತವಾಗಿದೆ. ಇನ್ನು ರಾಜಧಾನಿಗೆ ಸಮೀಪದಲ್ಲಿರುವ ಹಾಗೂ ದಕ್ಷಿಣ ಕರ್ನಾಟಕ ಜಿಲ್ಲೆಗಳೂ ಒಂದಿಷ್ಟು ಅಭಿವೃದ್ಧಿ ಕಂಡುಕೊಂಡಿವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ತೀರಾ ಹಿಂದುಳಿದಿವೆ. ಈ ಅಭಿವೃದ್ಧಿ ಅಸಮಾನತೆಯೇ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಕೂಗಿನ ಮೂಲ. ನೂತನ ಸಿಎಂ ಬೊಮ್ಮಾಯಿ ಈ ಅಸಮಾನತೆ ಹೋಗಲಾಡಿಸುವ ಪ್ರಯತ್ನ ಮಾಡುವ ಮೂಲಕ ಪ್ರತ್ಯೇಕತೆ ಕೂಗನ್ನು ಮರೆಯಾಗಿಸಬಹುದು ಎಂಬುದು ಪ್ರಜ್ಞಾವಂತರ ಅಭಿಪ್ರಾಯ.

ಪ್ರತ್ಯೇಕತೆಯ ಲಾಭವೇನು?: ಉ.ಕ. ಪ್ರತ್ಯೇಕ ರಾಜ್ಯವಾದರೆ ಪ್ರತ್ಯೇಕ ಬಜೆಟ್‌ ಸಿಗುತ್ತದೆ. ಕೇಂದ್ರದಿಂದ ರಾಜ್ಯಕ್ಕೆ ಪ್ರತ್ಯೇಕ ಅನುದಾನ ಬರುತ್ತದೆ. ರಾಜಧಾನಿ ಸಮೀಪವಾಗುವುದರಿಂದ ಜನರಿಗೆ ಸುಗಮ ಆಡಳಿತ ಸಾಧ್ಯವಾಗುತ್ತದೆ.                    ರಾಜಧಾನಿಗೆ ಹತ್ತಿರವಿರುವ ಜಿಲ್ಲೆಗಳು ಅಭಿವೃದ್ಧಿ ವೇಗದಲ್ಲಿ ನೇರವಾಗಿ ಭಾಗಿಯಾಗುತ್ತವೆ. ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ವಲಸೆ ಪ್ರಮಾಣ ಕುಗ್ಗುತ್ತದೆ. ಚಿಕ್ಕರಾಜ್ಯ-ಚೊಕ್ಕ ಆಡಳಿತ ಸಾಧ್ಯವಾಗುತ್ತದೆ ಎಂಬುದು ಪ್ರತ್ಯೇಕ ರಾಜ್ಯ ಹೋರಾಟಗಾರರ ಅಭಿಪ್ರಾಯ. ಸಮಗ್ರ ಕರ್ನಾಟಕದಲ್ಲಿ ಇದ್ದುಕೊಂಡೇ ಇದರಲ್ಲಿ ಶೇ.80ರಷ್ಟು ಬೇಡಿಕೆ ಈಡೇರಿಸಲು ಸಾಧ್ಯವಿರುವುದರಿಂದ ನೂತನ ಸಿಎಂ ಬೊಮ್ಮಾಯಿ ಈ ಬಗ್ಗೆ ಚಿತ್ತ ಹರಿಸಬಹುದು ಎಂಬ ಆಶಾಭಾವ ಮನೆ ಮಾಡಿದೆ.

Advertisement

ಧ್ವನಿ ದಮನಿಸಲು ಏನಾಗಬೇಕು?: ಉತ್ತರ ಕರ್ನಾಟಕ ಭಾಗದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಜಿಲ್ಲೆಗಳು ಐಐಟಿ, ಐಟಿ-ಬಿಟಿ, ಕೈಗಾರಿಕೆ, ವ್ಯಾಪಾರೋದ್ಯಮ ಸೇರಿದಂತೆ ಇನ್ನಿತರ ಅಭಿವೃದ್ಧಿಯಲ್ಲಿ ತುಸು ಮುಂದಿದ್ದರೂ ಹೈದ್ರಾಬಾದ್‌- ಕರ್ನಾಟಕದ ಜಿಲ್ಲೆಗಳು ಸೇರಿದಂತೆ ಉಳಿದೆಲ್ಲ ಜಿಲ್ಲೆಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ದೊಡ್ಡ ದೊಡ್ಡ ಕೈಗಾರಿಕೆ, ಐಟಿ, ಬಿಟಿ, ಸಾರಿಗೆ ಸಂಪರ್ಕ ವ್ಯವಸ್ಥೆ ಮಾಡಬೇಕಿದೆ. ಇದರಿಂದ ಉದ್ಯೋಗಕ್ಕಾಗಿ ವಲಸೆ ಹೋಗುವಿಕೆ ತಡೆದು ಸ್ಥಳೀಯವಾಗಿ ಅಭಿವೃದ್ಧಿ ಕಾಣಬಹುದಾಗಿದೆ.

ಸುವರ್ಣಸೌಧ ಸದ್ಬಳಕೆಯಾಗಲಿ: ಈಗಾಗಲೇ ಬೆಳಗಾವಿಯಲ್ಲಿ ನಿರ್ಮಿಸಿರುವ ಸುವರ್ಣಸೌಧಕ್ಕೆ ಕೆಲವು ಇಲಾಖೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಕೆಲಸವಾಗಬೇಕು. ಬೆಳಗಾವಿಯಲ್ಲಿ ನಡೆಯುವ ಅಧಿವೇಶನ‌ದ ವೇಳೆ ಉತ್ತರ ಕರ್ನಾಟಕದ ಸಮಸ್ಯೆ, ಬೇಡಿಕೆಗಳ ಬಗ್ಗೆ ಚರ್ಚಿಸಲು ಉತ್ತರ ಕರ್ನಾಟಕದ ಶಾಸಕರಿಗೆ ಹೆಚ್ಚಿನ ಸಮಯಾವಕಾಶ ಮಾಡಿಕೊಡಬೇಖಕು. ಉ.ಕ. ಭಾಗದ  ಜಿಲ್ಲೆಗಳ ಅಭಿವೃದ್ಧಿಗೆ ಪೂರಕ ದೊಡ್ಡ ಯೋಜನೆ ಜಾರಿಗೊಳಿಸಲು ಹೆಚ್ಚಿನ ಅನುದಾನ ಒದ‌ಗಿಸಬೇಕು. ಆಗ ಮಾತ್ರ  ಪ್ರತ್ಯೇಕ ‌ ರಾಜ್ಯದ ಸಮಸ್ಯೆ ಅರ್ಧ ಬಗೆಹರಿಯುತ್ತದೆ.

ಶಾಶ್ವತ ಪರಿಹಾರ ಸಾಧ್ಯ:  ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ವಿಚಾರವಾಗಿ ರಾಜ್ಯದಲ್ಲಿ ಪರ-ವಿರೋಧ ಅಭಿಪ್ರಾಯಗಳಿವೆ. ಆದರೆ, ಪ್ರತ್ಯೇಕತೆ ಕೂಗು ಏಳಲು ಕಾರಣವಾದ ಅಂಶಗಳನ್ನು ಗಂಭೀರವಾಗಿ ಪರಿಗಣಿಸಿ, ಸ್ಪಂದಿಸಿದರೆ ಪ್ರತ್ಯೇಕತೆ ಕೂಗು ಶಾಶ್ವತವಾಗಿ ಕಣ್ಮರೆಯಾಗುತ್ತದೆ. ಇಲ್ಲದಿದ್ದರೆ ಆಗಾಗ ಏಳುವ ಈ ಕೂಗು ಒಂದು ದಿನ ದೊಡ್ಡ ಆಂದೋಲನದ ಸ್ವರೂಪ ಪಡೆದುಕೊಂಡರೂ ಅಚ್ಚರಿಯಿಲ್ಲ. ಆದ್ದರಿಂದ ನೂತನ ಸಿಎಂ ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಸಮಸ್ಯೆಗೆ ಸ್ಪಂದಿಸುವ ಮೂಲಕ ಪ್ರಾದೇಶಿಕ ಅಸಮಾನತೆ ಹೋಗಲಾಡಿಸಬೇಕಿದೆ.

ಉತ್ತರ ಕರ್ನಾಟಕಕ್ಕೆ ಭಾರೀ ಅನ್ಯಾಯವಾಗಿದೆ ಎಂಬುದನ್ನು ಅಂಕಿ-ಅಂಶಗಳೇ ಸಾಬೀತು ಪಡಿಸುತ್ತವೆ. ಈ ಬಗ್ಗೆ ಶೀಘ್ರ ನೂತನ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಮನವರಿಕೆ ಮಾಡಿ ಕೊಡಲಾಗುವುದು. ಆಡಳಿತ ವರ್ಗದಲ್ಲಿ ದಕ್ಷಿಣ ಕರ್ನಾಟಕಕ್ಕೆ ಆದ್ಯತೆ ನೀಡುವ ಮನಸ್ಥಿತಿ ಬದಲಾಗದಷ್ಟು ಗಟ್ಟಿಯಾಗಿದೆ. ಆದ್ದರಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟನಿ ರಂತರವಾಗಿರುತ್ತದೆ.

-ನೀಲೇಶ್‌ ಬನ್ನೂರು, ಕೋಶಾಧ್ಯಕ್ಷರು, ಉ.ಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next