Advertisement

ಕಾಡಾನೆಗಳಿಗೆ ಅಂಕುಶ ಹಾಕುವಲ್ಲಿ ಅರಣ್ಯ ಇಲಾಖೆ ವಿಫಲ

02:44 PM Jul 01, 2023 | Team Udayavani |

ರಾಮನಗರ: ಕಾಡಿನಿಂದ ನಾಡಿಗೆ ಬಂದು ಹಾವಳಿ ಎಬ್ಬಿಸಿರುವ ಕಾಡಾನೆಗಳಿಗೆ ಅಂಕುಶ ಹಾಕುವಲ್ಲಿ ಅರಣ್ಯ ಇಲಾಖೆ ವಿಫಲಗೊಂಡಿದೆ. ಸಾಕಷ್ಟು ಕಸರತ್ತುಗಳ ನಡುವೆಯೂ ಮಾನವ-ಕಾಡಾನೆ ಸಂಘರ್ಷಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲದಂತಾಗಿದ್ದು, ಕೆಲ ಗ್ರಾಮಗಳಲ್ಲಿ ಗುಂಪುಗುಂಪಾಗಿ ಆನೆಗಳು ತಿರುಗಾಡುತ್ತಿರುವುದನ್ನು ಕಂಡು ಜನತೆ ಕಂಗಾಲಾಗಿದ್ದಾರೆ.

Advertisement

ಕಳೆದೊಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಕಾಡಾನೆ ಹಾವಳಿಗೆ 3 ಮಂದಿ ಸಾವಿಗೀಡಾಗಿದ್ದು, ಗುರುವಾರ ನಡೆದಿರುವ ಘಟನೆ ಸೇರಿ ದಂತೆ 6 ಮಂದಿ ಕಾಡಾನೆಯಿಂದ ಗಾಯಗೊಂಡಿದ್ದಾರೆ. ಇನ್ನು ತೆಂಗಿನಕಲ್ಲು, ಚಿಕ್ಕಮಣ್ಣುಗುಡ್ಡೆ, ನರೀಕಲ್ಲು ಹಾಗೂ ಹಂದಿಗುಂದಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ನಡೆದಿರುವ ಬೆಳೆ ಹಾನಿ, ಆಸ್ತಿಪಾಸ್ತಿಗಳ ಹಾನಿ ಪ್ರಕರಣಗಳು ನೂರರ ಗಡಿದಾಟಿವೆ.

ಕಾಡಾನೆ ಹಾವಳಿಗೆ ನಿಯಂತ್ರಣ ಯಾವಾಗ ಎಂದು ಜನತೆ ಪ್ರಶ್ನಿಸುತ್ತಿದ್ದು, ಸಾವಿರಾರು ಎಕರೆ ಭೂಮಿ ಶಾಶ್ವತ ಕಾಡಾನೆ ಪೀಡಿತ ಪ್ರದೇಶವಾಗಿದೆ. ಜಿಲ್ಲೆಯಲ್ಲಿ 80ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಿರಂತರ ಕಾಡಾನೆ ದಾಳಿ ನಡೆಯುತ್ತಿದ್ದು, 40ಕ್ಕೂ ಹೆಚ್ಚು ಕಾಡಾನೆಗಳು ನಾಡಿನಿಂದ ಇತ್ತ ಬಂದು ಹಾವಳಿ ಎಬ್ಬಿಸುತ್ತಿವೆ. ಈ ಆನೆಗಳನ್ನು ಅವುಗಳ ನೆಲೆಗೆ ಹಿಂದಿರುಗಿಸುವುದು ಅರಣ್ಯ ಇಲಾಖೆಗೆ ಸವಾಲಿನ ಕೆಲಸವಾಗಿದ್ದು, ಆನೆಗಳ ಸ್ಥಳಾಂತರ ಸೇರಿದಂತೆ ಅರಣ್ಯ ಇಲಾಖೆ ಕೈಗೊಂಡ ಕ್ರಮಗಳು ವಿಫಲಗೊಂಡಿವೆ. ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಎಂಬುದು ಮರೀಚಿಕೆಯಾಗಿದೆ.

ಕಾವೇರಿ, ಬನ್ನೇರುಘಟ್ಟದ ಆನೆಗಳು: ರಾಮನಗರ ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತೆ ಕಾವೇರಿ ವನ್ಯಜೀವಿ ವಲಯ ಮತ್ತು ಬನ್ನೇರುಘಟ್ಟ ವನ್ಯಜೀವಿ ವಲಯ ಇದ್ದು, ಈ ಎರಡೂ ಅರಣ್ಯ ವಲಯಕ್ಕೆ ಸೇರಿದಂತೆ ಸುಮಾರು 500 ಕಾಡಾನೆಗಳಿವೆ ಎಂದು ಅರಣ್ಯ ಇಲಾಖೆ ಅಂದಾಜಿಸಿದೆ. ಆದರೆ, ಜಿಲ್ಲೆಯ ವಿವಿಧ ಪ್ರಾದೇಶಿಕ ಅರಣ್ಯಗಳಲ್ಲಿ ಸುಮಾರು 40 ಕಾಡಾನೆಗಳು ಹಾವಳಿ ಎಬ್ಬಿಸುತ್ತಿವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಜಿಲ್ಲೆಯ ಏಳೆಂಟು ಗ್ರಾಮಗಳಲ್ಲಿ 5ರಿಂದ 6 ಕಾಡಾನೆಗಳು ಗುಂಪಾಗಿ ತಿರುಗಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಅರಣ್ಯ ಇಲಾಖೆ ವನ್ಯಜೀವಿ ವಲಯದಿಂದ ಕಾಡಾನೆಗಳು ಹೊರಗೆ ಬರದಂತೆ ರೈಲ್ವೆ ಕಂಬಿಯನ್ನು ಬಳಸಿ ಬ್ಯಾರಿಕೇಡ್‌ ನಿರ್ಮಿಸುತ್ತಿದ್ದು, ಕೆಲವೆಡೆ ಭೂವಿವಾದದಿಂದಾಗಿ ಬ್ಯಾರಿಕೇಡ್‌ ಅಳವಡಿಕೆ ಸಾಧ್ಯವಾಗಿಲ್ಲ. ಬ್ಯಾರಿಕೇಡ್‌ ಇಲ್ಲದ ಜಾಗಗಳಿಂದ ಕಾಡಾನೆಗಳು ಹೊರಗೆ ಬರುತ್ತಿವೆ ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳ ಮಾಹಿತಿಯಾಗಿದೆ.

ಕಾಡಾನೆ ನಾಡಿಗೇಕೆ ಬರುತ್ತಿದೆ: ಜಿಲ್ಲೆಯಲ್ಲಿ ಕಾಡಾನೆ ಹಾವಳಿ ಕಳೆದ 12 ವರ್ಷಗಳಿಂದ ತೀವ್ರವಾಗಿದೆ. ವನ್ಯಜೀವಿ ವಲಯದಲ್ಲಿ ಆನೆಗಳಿಗೆ ತೊಂದರೆಯಾಗುತ್ತಿರುವುದೇ ಕಾರಣ ಎಂದು ಪರಿಸರ ವಾದಿಗಳು ಹೇಳುತ್ತಿದ್ದರೆ, ಅರಣ್ಯ ಇಲಾಖೆ ಮೇವು ಮತ್ತು ನೀರನ್ನು ಅರಸಿ ಬರುತ್ತಿವೆ. ಕಾಡಿನಲ್ಲಿ ಸಾಕಷ್ಟು ನೀರು ಮತ್ತು ಮೇವು ಇದ್ದಾಗ್ಯೂ ಊರಿನ ಮೇವಿನ ರುಚಿ ಕಂಡಿರುವ ಕಾಡಾನೆಗಳು ಪದೇ ಪದೆ ಇತ್ತ ಬರುತ್ತವೆ ಎಂದು ವಿವರಣೆ ನೀಡುತ್ತಿದ್ದಾರೆ. ಆದರೆ, ಕಾಡಾನೆಗಳು ಮೂಲ ನೆಲೆಯಿಂದ ಹೊರ ಬರುತ್ತಿರುವುದು ಯಾಕೆ ಎಂಬ ನಿಖರವಾದ ಕಾರಣ ಯಾರೂ ನೀಡುತ್ತಿಲ್ಲ.

Advertisement

ಕಾಡಾನೆ ಹಾವಳಿಗೆ ವೈಜ್ಞಾನಿಕ ಪರಿಹಾರ ಬೇಕು: ಅರಣ್ಯ ಇಲಾಖೆಯ ವಾದಗಳನ್ನು ರೈತ ಮುಖಂಡರು ಹಾಗೂ ಸಾರ್ವಜನಿಕರು ಒಪ್ಪುತ್ತಿಲ್ಲ. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳು ದಾಂಧಲೆ ಎಬ್ಬಿಸುತ್ತಿದ್ದು, ಮೂಲನೆಲೆಯಿಂದ ಕಾಡಾನೆಗಳು ಹೊರ ಬರುತ್ತಿರುವುದನ್ನು ನಿಯಂತ್ರಿಸಲು ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಹಾರ ಕಲ್ಪಿಸುವ ಕೆಲಸವಾಗಬೇಕಿದೆ. ಈ ಬಗ್ಗೆ ಅರಣ್ಯ ಇಲಾಖೆ ಗಂಭೀರವ ಕ್ರಮ ವಹಿಸಬೇಕು.

ಪರಿಹಾರ ನೀಡಿ ಅರಣ್ಯ ಇಲಾಖೆ ಹೈರಾಣು: ಜಿಲ್ಲೆಯಲ್ಲಿ ಕಾಡಾನೆ, ಚಿರತೆ, ಕರಡಿ, ಕಾಡುಹಂದಿ ಹಾವಳಿ ತೀವ್ರಗೊಂಡಿದ್ದು, ಕಾಡಾನೆಗಳ ಹಾವಳಿಯಿಂದ ಉಂಟಾದ ನಷ್ಟಕ್ಕೆ ಅರಣ್ಯ ಇಲಾಖೆ ನಿರಂತರವಾಗಿ ಪರಿಹಾರ ನೀಡಿ ಹೈರಾಣಾಗಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕಾಡುಪ್ರಾಣಿಗಳಿಂದ ಸಂಭವಿಸಿರುವ ಹಾನಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ 11.18 ಕೋಟಿ ರೂ. ಪರಿಹಾರ ನೀಡಿದೆ. ಜಿಲ್ಲೆಯಲ್ಲಿ ಕಳೆದ 5 ವರ್ಷಗಳಲ್ಲಿ 18 ಜೀವ ಹಾನಿ ಸಂಭವಿಸಿದ್ದು 1.18 ಕೋಟಿ ರೂ., 67 ಮಾನವ ಗಾಯ ಪ್ರಕರಣಗಳಿಗೆ 50.46 ಲಕ್ಷರೂ., 13830 ಬೆಳೆ ಹಾನಿ ಪ್ರಕರಣಗಳಿಗೆ 7 ಕೋಟಿ ರೂ., 770 ಆಸ್ತಿ ಹಾನಿಗಳಿಗೆ 41.78 ಲಕ್ಷ ರೂ., 3277 ಜಾನುವಾರುಗಳ ಸಾವಿಗೆ 2.35 ಕೋಟಿ ರೂ, ಪರಿಹಾರ ನೀಡಲಾಗಿದೆ.

ಜೂ.23ರಂದು ಜಿಲ್ಲೆಯ ವಿವಿಧ ಅರಣ್ಯಗಳಲ್ಲಿ 26 ಕಾಡಾನೆಗಳು ಇದ್ದವು. ಇದೀಗ 9 ಆನೆಗಳು ಮಾತ್ರ ಜಿಲ್ಲೆಯ ಪ್ರಾದೇಶಿಕ ಅರಣ್ಯಗಳಲ್ಲಿ ಇದ್ದು, ಇವುಗಳನ್ನು ಇನ್ನು 5 ರಿಂದ 6 ದಿನಗಳಲ್ಲಿ ಮೂಲ ನೆಲೆಗೆ ಕಳುಹಿಸಲಾಗುವುದು. 100 ಮಂದಿ ಸಿಬ್ಬಂದಿಯನ್ನು ಇದಕ್ಕಾಗಿ ನಿಯೋಜಿಸಲಾಗಿದೆ. 60 ಮಂದಿ ಆನೆ ಕಾರ್ಯಪಡೆಯ ಸಿಬ್ಬಂದಿ ಸಹ ಕಾರ್ಯಾಚರಣೆ ಕೈಗೊಂಡಿದ್ದಾರೆ. ● ದೇವರಾಜು, ಡಿಎಫ್‌ಒ, ರಾಮನಗರ

ಅರಣ್ಯ ಇಲಾಖೆ ವೈಜ್ಞಾನಿಕವಾಗಿ ಆನೆಗಳ ಸಮಸ್ಯೆಗೆ ಪರಿಹಾರ ಕಲ್ಪಿಸಲು ಮುಂದಾಗಬೇಕು. ಜಿಲ್ಲೆಯಲ್ಲಿ ಆನೆಗಳು ಗುಂಪುಗುಂಪಾಗಿ ಗ್ರಾಮದ ಸನಿಹದಲ್ಲೇ ತಿರುಗಾಡುತ್ತಿದ್ದು, ಇದರಿಂದಾಗಿ ಜನತೆ ಕಂಗಾಲಾಗಿದ್ದಾರೆ. 50ಕ್ಕೂ ಹೆಚ್ಚು ಆನೆಗಳು ಜಿಲ್ಲೆಯ ವಿವಿಧ ಅರಣ್ಯ ಪ್ರದೇಶದಲ್ಲಿ ಇದ್ದು, ಅರಣ್ಯ ಇಲಾಖೆ ಕಾಡಾನೆ ಹಾವಳಿಯ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ● ಸಿ.ಪುಟ್ಟಸ್ವಾಮಿ, ಹಿರಿಯ ರೈತ ಹೋರಾಟಗಾರ

-ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next