ರಾಮನಗರ: ಜಿಲ್ಲೆಯಲ್ಲಿ ತೀವ್ರಗೊಂಡಿರುವ ಕಾಡಾನೆ ಹಾವಳಿ ಕೇವಲ ಬೆಳೆಗಳನ್ನಷ್ಟೇ ಅಲ್ಲದೆ, ಜನರ ಜೀವಕ್ಕೂ ಎರವಾಗಿ ಪರಿಣಮಿಸಿದೆ. ಕಾಡಾನೆ ಹಾವಳಿಯಿಂದಾಗಿ ಕಾಡಂಚಿನ ಗ್ರಾಮಗಳಲ್ಲಿ ಜನತೆ ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಅಂಜುವಂತಾಗಿದೆ.
ಪ್ರತಿವರ್ಷ ಸಾವಿರಾರು ಎಕರೆ ಬೆಳೆ ನಾಶ ಒಂದೆಡೆಯಾದರೆ, ಪ್ರತಿ ವರ್ಷ ಕನಿಷ್ಠ ಇಬ್ಬರಿಂದ ಮೂರು ಜನ ಕಾಡಾನೆಗಳಿಗೆ ಸಿಲುಕಿ ಸಾವಿಗೀಡಾ ಗುತ್ತಿದ್ದಾರೆ. ಈ ಮೂಲಕ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ.
ಸಾವಿನ ಸರಣಿ: ಜಿಲ್ಲೆಯಲ್ಲಿ ಕಾಡಾನೆ ತುಳಿತಕ್ಕೆ ಸಿಲುಕಿ ಕಳೆದ 5 ವರ್ಷಗಳಲ್ಲಿ 18 ಮಂದಿ ಸಾವಿಗೀಡಾಗಿದ್ದು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 2018- 19ರಲ್ಲಿ 6 ಮಂದಿ, 2019-20ರಲ್ಲಿ 3 ಮಂದಿ, 2020 -21ರಲ್ಲಿ 3, 2021-22ರಲ್ಲಿ 4 ಮಂದಿ, 2022-23 ರಲ್ಲಿ 2, 2023-24 ರಲ್ಲಿ 1 ಸಾವಿಗೀಡಾಗಿದ್ದಾರೆ.
ಆತಂಕ: ಜಿಲ್ಲೆಯ 4 ತಾಲೂಕುಗಳ ವ್ಯಾಪ್ತಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಗ್ರಾಮಗಳು ಶಾಶ್ವತ ಕಾಡಾನೆ ಪೀಡಿತ ಪ್ರದೇಶವಾಗಿ ಪರಿಣಮಿಸಿವೆ. ಈ ಗ್ರಾಮಗಳಲ್ಲಿ ರೈತರ ಜಮೀನಿಗೆ ನುಗ್ಗಿ ಬೆಳೆ ಹಾನಿಮಾಡುತ್ತಿವೆ. ಇನ್ನು ಕಾಡಾನೆಗಳನ್ನು ಓಡಿಸಲು ಹೋದರೆ ಜೀವಕ್ಕೆ ಅಪಾಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಾಡಾನೆ ಪೀಡಿತ ಪ್ರದೇಶಗಳ ಜನತೆ ಕತ್ತಲಾಗುತ್ತಿದ್ದಂತೆ ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ.
Related Articles
ಆನೆಗಳ ಹಾಟ್ಸ್ಪಾಟ್: ರಾಮನಗರ ಜಿಲ್ಲೆಗೆ ಹೊಂದಿಕೊಂಡಂತೆ ಬನ್ನೇರುಘಟ್ಟ ವನ್ಯಜೀವಿ ವಲಯ, ಕಾವೇರಿ ವನ್ಯ ಜೀವಿ ವಲಯ ಪ್ರಮುಖ ವನ್ಯಜೀವಿ ಅರಣ್ಯ ಪ್ರದೇಶಗಳಾಗಿವೆ. ಜಿಲ್ಲೆಯ ಗಡಿಭಾಗಕ್ಕೆ ಹೊಂದಿಕೊಂಡಂತೆ 299 ಕಿ.ಮೀ. ದೂರ ಅರಣ್ಯ ವಿಸ್ತರಿಸಿದೆ. ವನ್ಯಜೀವಿ ವಲಯಕ್ಕೆ ಹೊಂದಿಕೊಂಡಂತೆ ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ತೆಂಗಿನಕಲ್ಲು, ಕೊಂಬಿನಕಲ್ಲು, ನರೀಕಲ್ಲು, ಹಂದಿಗುಂದಿ, ಸೇರಿ ಹತ್ತಾರು ಸಾವಿರ ಎಕರೆ ಪ್ರಾದೇಶಿಕ ಅರಣ್ಯ ಪ್ರದೇಶವಿದೆ. ಎರಡೂ ವನ್ಯಜೀವಿ ವಲಯದಿಂದ ಜಿಲ್ಲೆಯ ಪ್ರಾದೇಶಿಕ ಅರಣ್ಯ ಪ್ರದೇಶಕ್ಕೆ ಬರುವ ಕಾಡಾನೆ ಹಿಂಡು ಕಾಡಂಚಿನ ಗ್ರಾಮಗಳಲ್ಲಿ ಪದೇ ಪದೆ ಹಾವಳಿ ಮಾಡುತ್ತಿವೆ. ಇದರಿಂದಾಗಿ ಜಿಲ್ಲೆಯ ನೂರಾರು ಗ್ರಾಮ ಕಾಡಾನೆಗಳ ಹಾಟ್ಸ್ಪಾಟ್ ಆಗಿವೆ.
ಜೀವಕ್ಕೆ ಕಂಟಕ: ವನ್ಯ ಜೀವಿ ವಲಯದಲ್ಲಿ 4-5 ಗುಂಪುಗಳಲ್ಲಿ ಸುಮಾರು 35ಕ್ಕೂ ಹೆಚ್ಚು ಆನೆ ಜಿಲ್ಲೆಯ ವಿವಿಧ ಪ್ರಾದೇಶಿಕ ಅರಣ್ಯ ಪ್ರದೇಶದಂಚಿನ ಗ್ರಾಮಗಳತ್ತ ದಾಂಗುಡಿ ಇಡುತ್ತಿರುತ್ತವೆ. ಜತೆಗೆ ಕೆಲ 2-3 ಒಂಟಿಸಲಗಗಳು ಇದ್ದು ಜನರ ಜೀವಕ್ಕೆ ಕಂಟಕವಾಗಿ ಪರಿಣಮಿಸಿವೆ.
ಕಾಡಾನೆಯಿಂದ ಜೀವ ಹಾನಿಗೆ 15 ಲಕ್ಷ ರೂ.ಪರಿಹಾರ: ಕಾಡಾನೆ ಸೇರಿ ಕಾಡುಪ್ರಾಣಿಗಳ ದಾಳಿಯಿಂದ ಜೀವಕ್ಕೆ ಹಾನಿಯಾದಲ್ಲಿ ಸರ್ಕಾರದಿಂದ ದೊರೆ ಯುವ ಪರಿಹಾರ ಮೊತ್ತವನ್ನು 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಅವರ ಮೊದಲನೇ ಅವಲಂಬಿತರಿಗೆ ಮೊದಲ 5 ವರ್ಷ ಮಾಸಿಕ 4 ಸಾವಿರ ರೂ.ಧನಸಹಾಯ ನೀಡಲಾಗುವುದು. ಮೊದಲು 7.50 ಲಕ್ಷ ರೂ. ಪರಿಹಾರ, ಅವಲಂಬಿ ತರಿಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತಿತ್ತು. ಕಳೆದ ಜನವರಿಯಿಂದ ಈ ಮೊತ್ತವನ್ನು ದುಪ್ಪಟ್ಟು ಮಾಡಲಾಗಿದೆ.
ಕಳೆದ 18 ವರ್ಷಗಳ ಅವಧಿಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಸಾವಿಗೀಡಾಗು ವವರಿಗೆ ನೀಡುವ ಪರಿಹಾರ ಗಣನೀಯವಾಗಿ ಹೆಚ್ಚಳವಾಗುತ್ತಿದೆ. 2005ರಲ್ಲಿ 1 ಲಕ್ಷ ಇದ್ದ ಮೊತ್ತ, ಬಳಿಕ 2 ಲಕ್ಷ ರೂ.ಗೆ, 2012ರಲ್ಲಿ 5 ಲಕ್ಷ ರೂ.ಗೆ ಹೆಚ್ಚಳವಾಯಿತು. 2021ರಲ್ಲಿ ಈ ಮೊತ್ತವನ್ನು 7.50 ಲಕ್ಷ ರೂ.ಗೆ ಹೆಚ್ಚಿಸಲಾಯಿತು. ಇದೀಗ 15 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ.
ಕಗ್ಗಂಟಾಗೇ ಉಳಿದ ಆನೆ ಬ್ಯಾರಿಕೇಡ್ ನಿರ್ಮಾಣ: ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಒಂದಿಲ್ಲೊಂದು ಉಪಾಯ ಮಾಡುತ್ತಲೇ ಬಂದಿದೆ. ಆದರೆ, ಬುದ್ಧಿವಂತ ವನ್ಯಜೀವಿ ಎಂದು ಕರೆಯುವ ಆನೆಗಳು ರಂಗೋಲೆ ಕೆಳಗೆ ನುಸುಳುವ ಚಾಣಾಕ್ಷತನ ತೋರಿದ್ದು ಎಲ್ಲಾ ಪ್ರಯತ್ನಗಳನ್ನು ವಿಫಲ ಮಾಡುತ್ತಲೇ ಇವೆ. ಆನೆ ನಿರೋಧ ಗುಂಡಿ, ಬೇಲಿ ಹಾಕುವುದು ಸೇರಿ ಸಾಕಷ್ಟು ಪ್ರಯತ್ನಗಳನ್ನು ವಿಫಲ ಮಾಡಿವೆ. ಇದಕ್ಕೆ ಪರಿಹಾರ ಎಂಬಂತೆ ರೈಲ್ವೆ ಕಂಬಿಯಿಂದ ಆನೆ ಬ್ಯಾರಿಕೇಡ್ ನಿರ್ಮಾಣ ಕಾರ್ಯವನ್ನು ಅರಣ್ಯ ಇಲಾಖೆ ಕೈಗೊಂಡಿದೆಯಾದರೂ ಈ ಕಾಮಗಾರಿ ಪೂರ್ಣಗೊಳ್ಳದಿರುವುದು ಕಾಡಾನೆ ಹಾವಳಿ ಸಮಸ್ಯೆಯಾಗಿ ಪರಿಣಮಿಸಿದೆ.
ಬನ್ನೇರುಘಟ್ಟ ವನ್ಯಜೀವಿ ವಲಯದಿಂದ ಕಾವೇರಿ ವನ್ಯಜೀವಿ ವಲಯದ ಮುತ್ತತ್ತಿ ಅರಣ್ಯ ಪ್ರದೇಶದವರೆಗೆ 299 ಕಿ.ಮೀ ಉದ್ದದ ಅರಣ್ಯ ದಲ್ಲಿ 170 ಕಿ.ಮೀ.ನಷ್ಟು ರೈಲ್ವೆ ಬ್ಯಾರಿಕೇಟ್ ಅಳವ ಡಿಸಲಾಗಿದೆ. ಉಳಿದ ಭಾಗದಲ್ಲಿ ಅರ್ಕಾವತಿ ನದಿ, ಕೆಲವೆಡೆ ಜನವಸತಿ ಗ್ರಾಮಗಳಿರುವುದು, ಮತ್ತೆ ಕೆಲವೆಡೆ ಅರಣ್ಯ ಇಲಾಖೆ ಮತ್ತು ರೈತರ ನಡುವೆ ಭೂವಿವಾದ ಎದುರಾಗಿರುವುದು ರೈಲ್ವೆ ಬ್ಯಾರಿ ಕೇಡ್ ನಿರ್ಮಾಣಕ್ಕೆ ಕಗ್ಗಂಟಾಗಿದೆ. ಬ್ಯಾರಿಕೇಡ್ ಇಲ್ಲದ ಜಾಗ ಗುರುತು ಮಾಡಿಕೊಂಡಿರುವ ಆನೆಗಳು ಅಲ್ಲಿಂದ ಇತ್ತ ಬರುತ್ತಿವೆ.
ಕನಕಪುರ ತಾಲೂಕಿನ ಹೊಸಕಬ್ಟಾಳು ಗ್ರಾಮದಲ್ಲಿ ರೈತ ಕಾಡಾನೆ ದಾಳಿಗೆ ಸಾವನ್ನಪ್ಪಿರುವುದು ದುರದೃಷ್ಟಕರ. ಕಾಡಾನೆ ಪೀಡಿತ ಪ್ರದೇಶದ ಜನತೆ ಕತ್ತಲಾದ ಬಳಿಕ ಒಂಟಿಯಾಗಿ ತಿರುಗಾಡುವುದು ಬೇಡ. ● ದೇವರಾಜು, ಜಿಲ್ಲಾ ಅರಣ್ಯಾಧಿಕಾರಿ, ರಾಮನಗರ
ಜಿಲ್ಲೆಯಲ್ಲಿ ಕಳೆದ 20 ವರ್ಷದಿಂದ ಕಾಡಾನೆ ದಾಳಿಗೆ ರೈತರು ಸಾವಿಗೀ ಡಾಗುತ್ತಲೇ ಇದ್ದಾರೆ. ಸಾವಿರಾರು ಎಕರೆಯಲ್ಲಿ ಬೆಳೆ ಬೆಳೆಯಲಾಗುತ್ತಿಲ್ಲ. ಅರಣ್ಯ ಇಲಾಖೆ- ಜಿಲ್ಲಾಡಳಿತ ಶಾಶ್ವತ ಪರಿಹಾರಕ್ಕೆ ವಿಫಲ. ● ತುಂಬೇನಹಳ್ಳಿ ಶಿವಕುಮಾರ್, ಅಧ್ಯಕ್ಷರು ಜಿಲ್ಲಾ ರೈತಸಂಘ
– ಸು.ನಾ.ನಂದಕುಮಾರ್