Advertisement

ಬ್ಯಾಟರ್ ಗಳೇ ಯಾಕೆ..? ಭಾರತಕ್ಕೆ ಬೌಲರ್‌ ಗಳೂ ನಾಯಕರಾಗಬಹುದಲ್ಲ!

04:30 PM Jan 17, 2022 | Team Udayavani |

ಬ್ರಿಟಿಷರು ಭಾರತಕ್ಕೆ ಕೊಟ್ಟ ಬಳುವಳಿಗಳಲ್ಲಿ ಕ್ರಿಕೆಟ್‌ ಕೂಡ ಒಂದು. ಆರಂಭದಲ್ಲಿ ಈ ಕ್ರೀಡೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. 1983ರಲ್ಲಿ ಭಾರತ ಏಕದಿನ ವಿಶ್ವಕಪ್‌ ಗೆದ್ದ ನಂತರ ಒಮ್ಮಿಂ ದೊಮ್ಮೆಗೇ ಈ ಕ್ರೀಡೆ ಜನಪ್ರಿಯವಾಯಿತು. ಅದೇ ವೇಳೆ ಸದ್ದಿಲ್ಲದೇ ಒಂದು ಪರಂಪರೆಯೂ ಬೆಳೆಯಿತು. ಭಾರತ ತಂಡಕ್ಕೆ ನಾಯಕರನ್ನು ಹೆಸರಿಸುವಾಗ ಬೌಲರ್‌ಗಳನ್ನು ಮೊದಲ ಆಯ್ಕೆಯಾಗಿ ಪರಿಗಣಿಸುವುದಿಲ್ಲ. ಅವರೆಂತಹ ಘಾತಕ ಬೌಲರ್‌ಗಳಾಗಿದ್ದರೂ ನಾಯಕರಾದವರ ಸಂಖ್ಯೆ ಬಹಳ ಕಡಿಮೆ. ಇದೀಗ ಟೆಸ್ಟ್‌ ನಾಯಕತ್ವವನ್ನೂ ವಿರಾಟ್‌ ಕೊಹ್ಲಿ ತ್ಯಜಿಸಿದ್ದಾರೆ, ಅವರ ಸ್ಥಾನಕ್ಕೆ ಆರ್‌.ಅಶ್ವಿ‌ನ್‌ ಆಗಲೀ, ಜಸ್ಪ್ರೀತ್‌ ಬುಮ್ರಾ ಆಗಲೀ ಯಾಕೆ ಬರಬಾರದು? ಬರೀ ಬ್ಯಾಟಿಗರನ್ನೇ ನಾಯಕತ್ವಕ್ಕೆ ಏಕೆ ಪರಿಗಣಿಸಬೇಕು? ಈ ಪ್ರಶ್ನೆಯನ್ನು ಗಂಭೀರವಾಗಿ ಪರಿಗಣಿಸಲು ಇದು ಸಕಾಲ.

Advertisement

ದ.ಆಫ್ರಿಕಾ ಟೆಸ್ಟ್‌ ಸರಣಿಗೆ ವಾಸ್ತವವಾಗಿ ಇದೇ ಮೊದಲ ಬಾರಿ ಖಾಯಂ ಉಪನಾಯಕರಾಗಿ ರೋಹಿತ್ ಶರ್ಮರನ್ನು ಆಯ್ಕೆ ಮಾಡಲಾಗಿತ್ತು. ಅದಕ್ಕೂ ಮುನ್ನ ಅವರಿಗೆ ತಂಡದಲ್ಲಿ ಸ್ಥಾನ ಸಿಗುವುದೇ ಕಷ್ಟವಾಗಿತ್ತು. ಅನಿರೀಕ್ಷಿತವಾಗಿ ಗಾಯಗೊಂಡಿದ್ದರಿಂದ ಬಹುತೇಕ ದ.ಆಫ್ರಿಕಾ ಪ್ರವಾಸದಿಂದಲೇ ಹೊರಬಿದ್ದಿದ್ದಾರೆ. ಈಗವರಿಗೆ ಟೆಸ್ಟ್‌ ತಂಡದ ನಾಯಕರಾಗುವ ಅವಕಾಶವೂ ಇದೆ.

ಇದನ್ನೂ ಓದಿ:ಬೆಂಗಳೂರಿನಲ್ಲಿ ಅದ್ದೂರಿ ವಿದಾಯ ಪಂದ್ಯಕ್ಕೆ ಯೋಚಿಸಿದ್ದ ಬಿಸಿಸಿಐ: ತಿರಸ್ಕರಿಸಿದ ವಿರಾಟ್!

ಒಂದು ವೇಳೆ ಲಯದಲ್ಲಿದ್ದರೆ ಅಜಿಂಕ್ಯ ರಹಾನೆ, ಚೇತೇ ಶ್ವರ ಪೂಜಾರಗೆ ದೊಡ್ಡ ಅವಕಾಶವಿತ್ತು. ದುರದೃಷ್ಟ ಅವರ ಸ್ಥಾನವುಳಿಯುವುದೇ ಕಷ್ಟವಾಗಿದೆ. ಇಂತಹದ್ದೊಂದು ಪರಿಸ್ಥಿತಿಯಲ್ಲಿ ರೋಹಿತ್‌ ಶರ್ಮ ಸಹಜ ಆಯ್ಕೆ. ಅವರನ್ನು ಬಿಟ್ಟರೆ ಕೆ.ಎಲ್‌.ರಾಹುಲ್‌, ಅಶ್ವಿ‌ನ್‌, ಬುಮ್ರಾ ಇದ್ದಾರೆ. ಸದಾ ಗಾಯಕ್ಕೊಳಗಾಗುವ ರೋಹಿತ್‌ ಬದಲು ಟೆಸ್ಟ್‌ಗೆ ರಾಹುಲ್‌ರನ್ನು ನಾಯಕ ಸ್ಥಾನಕ್ಕೆ ಪರಿಗಣಿಸಿ ಎಂಬ ಧ್ವನಿಗಳೆದ್ದಿವೆ. ಅದೇ ಸಂದರ್ಭದಲ್ಲಿ ಬೌಲರ್‌ಗಳಿಗೆ ಭಾರತದಲ್ಲಿ ನಾಯಕಪಟ್ಟ ನೀಡುವುದಿಲ್ಲ, ಭಾರತದಲ್ಲಿರಲಿ ವಿಶ್ವದ ಇತರೆ ದೇಶಗಳಲ್ಲೂ ಇದೇ ಪರಿಸ್ಥಿತಿ ಇದೆ. ಹಾಗಾಗಿ ಅಶ್ವಿ‌ನ್‌, ಬುಮ್ರಾ ಅವರೆಲ್ಲ ಈ ಪೈಪೋಟಿಯಲ್ಲೇ ಇಲ್ಲ ಎಂಬ ಸಹಜ ನಿರಾಸಕ್ತಿ ಇದೆ. ಆದರೆ…

ಬೌಲರ್‌ಗಳು ನಾಯಕರು ಯಾಕಾಗಬಾರದು? ಅಶ್ವಿ‌ನ್‌ ಆಗಲೀ, ಬುಮ್ರಾ ಆಗಲೀ ತಮ್ಮ ಅತ್ಯುತ್ತಮ ದಾಳಿಯ ಮೂಲಕ ಎದುರಾಳಿ ತಂಡಗಳನ್ನು ಕಂಗೆಡಿಸಿದ್ದಾರೆ. ಅವರ ಸಾಮರ್ಥ್ಯವನ್ನು ಸಂಶಯಿಸುವ ಅಗತ್ಯವೂ ಇಲ್ಲ, ಆ ಮಟ್ಟಕ್ಕೆ ಪ್ರದರ್ಶನ ನೀಡಿದ್ದಾರೆ.

Advertisement

ಇದನ್ನೂ ಓದಿ: ಆ್ಯಶಸ್ ಗೆಲುವಿನ ಸಂತಸದಲ್ಲೂ ಒಂದು ನಡೆಯಿಂದ ಹೃದಯ ಗೆದ್ದ ಆಸೀಸ್ ನಾಯಕ ಪ್ಯಾಟ್ ಕಮಿನ್ಸ್

ಹಾಗೆ ನೋಡಿದರೆ ಅಶ್ವಿ‌ನ್‌ ಬ್ಯಾಟಿಂಗ್‌ನಲ್ಲೂ ಹಲವು ಬಾರಿ ತಂಡದ ನೆರವಿಗೆ ಬಂದಿದ್ದಾರೆ. ಟೆಸ್ಟ್‌ನಲ್ಲಿ ಅವರು 5 ಶತಕ ಬಾರಿಸುವುದರ ಜೊತೆಗೆ, 2884 ರನ್‌ ಚಚ್ಚಿದ್ದಾರೆ. 2021ರಲ್ಲಿ ಭಾರತ ಆಸ್ಟ್ರೇಲಿಯದಲ್ಲಿ ಐತಿಹಾಸಿಕವಾಗಿ ಟೆಸ್ಟ್‌ ಸರಣಿ ಗೆದ್ದಾಗ ಅಲ್ಲಿ ಅಶ್ವಿ‌ನ್‌ ಬ್ಯಾಟಿಂಗ್‌ ದೊಡ್ಡ ಪಾತ್ರವಹಿಸಿತ್ತು. ಅವರೇಕೆ ನಾಯಕರಾಗಬಾರದು? ಪ್ರಸ್ತುತ ಈ ಪ್ರಶ್ನೆ ಕೇಳುವುದೇ ತಪ್ಪು ಎನ್ನುವ ಭಾವನೆ ಭಾರತೀಯರಲ್ಲಿದೆ.

ವಿಶ್ವ ಕ್ರಿಕೆಟ್‌ನಲ್ಲಿ ನಾಯಕರಾದ ಬೌಲರ್‌ಗಳೆಷ್ಟು?

ವಿಶ್ವದ ಇತರೆ ತಂಡಗಳಲ್ಲೂ ನಾಯಕರಾದ ಬೌಲರ್‌ಗಳ ಸಂಖ್ಯೆ ಬಹಳ ಕಡಿಮೆ. ಅದರಲ್ಲೂ ಹೆಸರು ಮಾಡಿದವರು ಕೆಲವರು ಮಾತ್ರ. ದ.ಆಫ್ರಿಕಾ ಪರ ಶಾನ್‌ ಪೊಲಾಕ್‌, ಪಾಕಿಸ್ತಾನದ ವಿಶ್ವಕಪ್‌ ವಿಜೇತ ನಾಯಕ ಇಮ್ರಾನ್‌ ಖಾನ್‌, ವಾಸಿಂ ಅಕ್ರಮ್‌, ವಖಾರ್‌ ಯೂನುಸ್‌, ವೆಸ್ಟ್‌ ಇಂಡೀಸ್‌ನಲ್ಲಿ ಕರ್ಟ್ನಿ ವಾಲ್ಶ್, ಜೇಸನ್‌ ಹೋಲ್ಡರ್‌, ಇಂಗ್ಲೆಂಡ್‌ನ‌ಲ್ಲಿ ಬಾಬ್‌ ವಿಲ್ಲಿಸ್‌, ಜಿಂಬಾಬ್ವೆಯಲ್ಲಿ ಹೀತ್‌ಸ್ಟ್ರೀಕ್‌, ಬಾಂಗ್ಲಾದಲ್ಲಿ ಮಶ್ರಫೆ ಮೊರ್ತಜ ನಾಯಕರಾಗಿದ್ದಾರೆ. ಹೆಸರೂ ಮಾಡಿದ್ದಾರೆ. ಇತ್ತೀಚೆಗೆ ಆಸ್ಟ್ರೇಲಿಯ ತಂಡಕ್ಕೆ ವೇಗಿ ಪ್ಯಾಟ್‌ ಕಮಿನ್ಸ್‌ ನಾಯಕರಾಗಿದ್ದಾರೆ. ಅವರ ನೇತೃತ್ವದಲ್ಲಿ ಆಸೀಸ್‌ ಭರ್ಜರಿಯಾಗಿ ಆ್ಯಷಸ್‌ ಯಶಸ್ಸನ್ನೂ ಸಾಧಿಸಿದೆ. ಇದೇ ಮಾದರಿ ಭಾರತಕ್ಕೂ ಏಕಾಗಬಾರದು?

ಬ್ಯಾಟಿಗರೇ ನಾಯಕರೇಕಾಗುತ್ತಾರೆ?

1 ಕ್ರಿಕೆಟ್‌ ರನ್ನಿನ ಆಟ. ಹಾಗಾಗಿ ಅಲ್ಲಿ ಬ್ಯಾಟಿಗರನ್ನೇ ನಾಯಕ ಸ್ಥಾನಕ್ಕೆ ಪರಿಗಣಿಸಲ್ಪಡುವ ಸಹಜಪ್ರವೃತ್ತಿ ಇದೆ.

2 ಬೌಲರ್‌ಗಳಿಗೆ ಗಾಯಗಳಾಗುವುದು ಹೆಚ್ಚು. ನಾಯಕನಿಗೆ ಪದೇಪದೇ ಗಾಯಗಳಾದಾಗ ತಂಡದ ಪ್ರದರ್ಶನದ ಮೇಲೆ ಹೊರ ಬೀಳುತ್ತದೆ. ಹಾಗಾಗಿ ಬ್ಯಾಟಿಗ ಮುನ್ನೆಲೆಗೆ ಬರುತ್ತಾನೆ. ಆದರೆ ಸ್ಪಿನ್ನರ್‌ಗಳಿಗೆ ಗಾಯದ ಅಪಾಯ ಕಡಿಮೆ ಎನ್ನುವುದನ್ನು ಮರೆಯುವಂತಿಲ

3 ಬೌಲರ್‌ ನಾಯಕನಾದಾಗ ಪರಿಸ್ಥಿತಿ ನಿಭಾಯಿಸುವುದರ ಜೊತೆಗೆ ಬೌಲಿಂಗ್‌ ಮಾಡಬೇಕಾದ ಹೊಣೆಯೂ ಇರುತ್ತದೆ. ರನ್‌ ನಿಯಂತ್ರಿಸುವಾಗ ನಾಯಕನೇ ವಿಫ‌ಲನಾದರೆ ಒತ್ತಡಕ್ಕೊಳಗಾಗಬಹುದು. ಬ್ಯಾಟಿಗನಾದರೆ ಕೇವಲ ಬೌಲರ್‌ಗಳು, ಕ್ಷೇತ್ರರಕ್ಷಕರನ್ನು ನಿಭಾಯಿಸಿದರೆ ಸಾಕು.

ಬೌಲರ್‌ಗಳೆಷ್ಟು ಮಂದಿ ನಾಯಕರಾಗಿದ್ದಾರೆ?

ಸ್ವಾತಂತ್ರ್ಯಪೂರ್ವದ ಅಂಕಿಸಂಖ್ಯೆಗಳನ್ನೂ ಪರಿಗಣಿಸಿದರೆ ಭಾರತ ಟೆಸ್ಟ್‌ ತಂಡಕ್ಕೆ ಇದು ವರೆಗೆ ಒಟ್ಟು 34 ಮಂದಿ ನಾಯಕರಾಗಿದ್ದಾರೆ. ಇದರಲ್ಲಿ ಪಕ್ಕಾ ಬೌಲರ್‌ಗಳ ಸಂಖ್ಯೆ ಕೇವಲ 3. ಎಸ್‌.ವೆಂಕಟರಾಘವನ್‌, ಬಿಷನ್‌ ಸಿಂಗ್‌ ಬೇಡಿ, ಅನಂತರ ಅನಿಲ್‌ ಕುಂಬ್ಳೆ. ಇನ್ನು ಸಿ.ಕೆ.ನಾಯ್ಡು, ಕಪಿಲ್‌ ದೇವ್‌ರಂತಹ ಆಲ್‌ ರೌಂಡರ್‌ಗಳಿಗೆ ನಾಯಕಪಟ್ಟ ದಕ್ಕಿದೆ. ಪೂರ್ಣಪ್ರಮಾಣದ ಬೌಲರ್‌ಗಳನ್ನು ಪರಿಗಣಿಸಿದ್ದು ಬೆರಳೆಣಿಕೆಯಷ್ಟು ಮಾತ್ರ. ಈ ತಾರತಮ್ಯವೇಕೆ? ಇದಕ್ಕೆ ಕಾರಣ ಮನಃಸ್ಥಿತಿ.

ಕ್ರಿಕೆಟ್‌ ಎಂದರೆ ಅಲ್ಲಿ ಗಣಿಸಲ್ಪಡುವುದು ಮುಖ್ಯವಾಗಿ ರನ್‌. ಎಷ್ಟು ರನ್‌ ಬಾರಿಸಿದರು, ಎಷ್ಟು ರನ್‌ಗಳನ್ನು ಬೆನ್ನತ್ತಬೇಕು? ಹೀಗೆ ರನ್‌ಗಳನ್ನೇ ವಿಜಯಕ್ಕೂ ಪರಿಗಣಿಸಲಾಗುತ್ತದೆ. ಹಾಗೆಯೇ ಜನರೂ ಬ್ಯಾಟಿನಿಂದ ಸಿಡಿಯುವ ಬೌಂಡರಿ, ಸಿಕ್ಸರ್‌ ಗಳಿಗೆ ನೀಡುವ ಗೌರವವನ್ನು ಅಮೋಘವಾಗಿ ಬೀಳುವ ವಿಕೆಟ್‌ಗಳಿಗೆ ನೀಡುವುದಿಲ್ಲ. ಒಂದು ರೀತಿಯಲ್ಲಿ ನೋಡುವುದಾದರೆ ರನ್ನೇ ಪ್ರಧಾನವಾಗಿರುವುದರಿಂದ ಅದನ್ನು ಗಳಿಸುವ, ಬ್ಯಾಟಿಗನೇ ಇಲ್ಲಿ ನಾಯಕ ಎಂಬಂತೆ ಬಿಂಬಿತನಾಗಿದ್ದಾನೆ. ವಿಶ್ವ ಕ್ರಿಕೆಟ್‌ನಲ್ಲೂ ಈ ಮನೋಭಾವದಲ್ಲಿ  ಹೇಳಿಕೊಳ್ಳುವ ವ್ಯತ್ಯಾಸವೇನಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next