Advertisement
ಬನ್ನಂಜೆ: ಇಷ್ಟಕ್ಕೂ ತ್ಯಾಜ್ಯ ನೀರು ನಿರ್ವಹಣೆ ಇತ್ಯಾದಿ ಕೆಲಸಗಳಿಗೆ ನಗರಸಭೆಯ ಅಧಿಕಾರಿಗಳು ನೀಡುವ ಮಾಹಿತಿಯಂತೆ ವಾರ್ಷಿಕ 49 ಲಕ್ಷ ರೂ. ವೆಚ್ಚವಾಗುತ್ತಿವೆ. ಹಾಗಾದರೆ ಅವೆಲ್ಲವೂ ಎಲ್ಲಿಗೆ ಹೋಗುತ್ತವೆ?
Related Articles
ಈ ನಾಲ್ಕು ವೆಟ್ವೆಲ್ಗಳು ಹಾಗೂ ಒಂದು ಎಸ್ಟಿಪಿಯ ನಿರ್ವಹಣೆಯನ್ನು ಯಾವುದೋ ಖಾಸಗಿ ಗುತ್ತಿಗೆದಾರರಿಗೆ ನೀಡಲಾಗಿದೆ. ಸುಮಾರು 50 ಲಕ್ಷ ರೂ.ಗಳನ್ನು ಇದಕ್ಕಾಗಿ ಬಜೆಟ್ನಲ್ಲಿ ಕಾದಿರಿಸಲಾಗುತ್ತಿದೆ. ಇಡೀ ವೆಟ್ವೆಲ್ಗಳು, ಎಸ್ಟಿಪಿಯ ವಿವರ ಪಡೆದುಕೊಂಡಾಗ ಗೋಚರಿಸಿದ ಸತ್ಯವೆಂದರೆ, ನಿರ್ವಹಣೆಗೆ ಹಣವೇ ಮೀಸಲಿಡುತ್ತಿರಲಿಲ್ಲ. ಈ ಹಣವೆಲ್ಲ ಸಿಬಂದಿಯ ಸಂಬಳಕ್ಕೇ ಮುಗಿದು ಹೋಗುತ್ತಿತ್ತು !
ಸದ್ಯದ ಮಾಹಿತಿ ಪ್ರಕಾರ ನಾಲ್ಕು ವೆಟ್ವೆಲ್ಗಳಲ್ಲಿ ತಲಾ ಮೂವರು ಸಿಬಂದಿಯಿದ್ದಾರೆ. ಇವರೆಲ್ಲರನ್ನೂ ಮತ್ತು ಒಳಚರಂಡಿ ವ್ಯವಸ್ಥೆಯನ್ನು ನೋಡಿಕೊಳ್ಳಲಿಕ್ಕೆ ಒಬ್ಬ ಸೂಪರ್ವೈಸರ್ ಇದ್ದಾರೆ. ಒಟ್ಟಿಗೆ 13 ಮಂದಿ. ಎಸ್ಟಿಪಿಯಲ್ಲಿ ಮೂರು ಶಿಫ್ಟ್ ನಲ್ಲಿ ಇವರು ಕೆಲಸ ಮಾಡುತ್ತಾರೆ. ಇವರಲ್ಲಿ ಒಬ್ಬ ಸೂಪರ್ವೈಸರ್, ಇಬ್ಬರು ಲ್ಯಾಬ್ ಟೆಕ್ನೀಶಿಯನ್ ಇದ್ದಾರೆ. ಈ ಸಂಖ್ಯೆಯಲ್ಲೂ ಕೆಲವೊಮ್ಮೆ ಕಡಿತ ವಾಗುವುದುಂಟು. ಇವರೆಲ್ಲರ ಸಂಬಳ ಲೆಕ್ಕದಂತೆ ಸುಮಾರು 30ರಿಂದ 32 ಲಕ್ಷ ರೂ. ಸಂಬಳಕ್ಕೆ ಹೋದರೆ ಉಳಿದ ಹಣ ನಿರ್ವಹಣೆಗೆ ಹಾಕಬೇಕು. ಆದರೆ ನಿರ್ವಹಣೆಯ ಗುಣಮಟ್ಟ ಗಮನಿಸಿದರೆ ನಿರ್ವಹಣೆ ಮಾಡುತ್ತಿರುವುದರ ಬಗ್ಗೆಯೇ ಸಂಶಯ ಮೂಡಿಸುತ್ತದೆ. ವೆಟ್ವೆಲ್ಗಳಲ್ಲಿ ಮೂರು ತಿಂಗಳಿ ಗೊಮ್ಮೆ ಪಂಪ್ಗ್ಳು ಹಾಳಾಗುವುದುಂಟು. ಒಮ್ಮೆ ಹೀಗೆ ಹಾಳಾದರೆ ಸರಿಪಡಿಸಲು ಕನಿಷ್ಠ 4-5 ಲಕ್ಷ ರೂ. ಬೇಕು. ಒಂದು ವರ್ಷದಲ್ಲಿ ನಾಲ್ಕೈದು ಬಾರಿ ಪಂಪ್ಗ್ಳು ಹಾಳಾದರೆ, ಅದನ್ನು ದುರಸ್ತಿಗೊಳಿಸಲೇ 20 ಲಕ್ಷ ರೂ. ವೆಚ್ಚ ಮಾಡಬೇಕು. ಆ ಉಸಾಬರಿ ಏಕೆಂದು ಪಂಪ್ಗ್ಳ ದುರಸ್ತಿಯನ್ನು ಮುಂದೂಡಲಾಗುತ್ತದೆ. ಅದರ ಪರಿಣಾಮವಾಗಿ ಇಂದ್ರಾಣಿ ನದಿಗೆ ತ್ಯಾಜ್ಯ ನೀರು ಹರಿಯತೊಡಗುತ್ತದೆ. ಕಪ್ಪೆಟ್ಟು ಭಾಗದಲ್ಲಿ ತೋಡಿನಲ್ಲಿ ಹರಿದು ಬಳಿಕ ಉದ್ಯಾವರ ಹೊಳೆ ಸೇರುತ್ತದೆ.
Advertisement
ಇದರೊಂದಿಗೆ ಗುತ್ತಿಗೆದಾರರು ಸರಿಯಾಗಿ ಕಾರ್ಯ ನಿರ್ವ ಹಿಸುತ್ತಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳಲ್ಲಿ ಪರಿಶೀಲಿಸುವ ಅಭ್ಯಾಸವಿದ್ದಂತೆ ಕಂಡು ಬರುತ್ತಿಲ್ಲ. ಒಂದು ವೇಳೆ ಅಗತ್ಯ ಮೂಲ ಸೌಲಭ್ಯ (ಜನರೇಟರ್ ಇತ್ಯಾದಿ) ಕಲ್ಪಿಸಿ, ನಗರಸಭೆಯೇ ವಾರ್ಷಿಕ ನಿರ್ವಹಣೆಯನ್ನು ಜವಾಬ್ದಾರಿಯುತವಾಗಿ ನಿಭಾಯಿಸಿದ್ದರೆ ಜನರ ಆರೋಗ್ಯವೂ ಉಳಿಯುತ್ತಿತ್ತು. ಲಕ್ಷಾಂತರ ರೂ. ಕೂಡ.
ಸರಿಯಾಗಿ ನಿರ್ವಹಣೆ ಮಾಡಿದರೆ ಹೇಗೆ?ನಾಲ್ಕು ವೆಟ್ವೆಲ್ಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ದುರಸ್ತಿ ಮಾಡಿದ ಯಂತ್ರಗಳು ಕನಿಷ್ಠವೆಂದರೂ ಒಂದು ವರ್ಷ ಉತ್ತಮ ಸ್ಥಿತಿಯಲ್ಲಿರುತ್ತವೆ. ಆ ಬಳಿಕ ಅವುಗಳ ವಾರ್ಷಿಕ ನಿರ್ವಹಣೆಯಾಗಬೇಕಷ್ಟೇ. ಕೊಳಚೆ ನೀರಿನೊಂದಿಗೆ ಘನತ್ಯಾಜ್ಯ ವಸ್ತುಗಳು ಪೈಪ್ಲೈನ್ ಮೂಲಕ ವೆಟ್ವೆಲ್ಗೆ ಸೇರುತ್ತದೆ. ಒಳಗಿನ ವೆಟ್ವೆಲ್ ಪಂಪ್ಗೆ ಹೋಗುವ ಸಂದರ್ಭ ಮಧ್ಯದಲ್ಲಿ ಅಳವಡಿಸ
ಲಾದ (ಸ್ಟಾಕ್ನೆಟ್) ಕಬ್ಬಿಣದ ನೆಟ್ನಲ್ಲಿ ಘನ ತ್ಯಾಜ್ಯಗಳು ಸಂಗ್ರಹವಾಗುತ್ತದೆ. ಅದನ್ನು ಪ್ರತಿನಿತ್ಯ ಶುಚಿಗೊಳಿಸಬೇಕು. ಎಷ್ಟೋ ಬಾರಿ ಇದನ್ನು ದಿನವೂ ಶುಚಿಗೊಳಿಸದಿದ್ದಾಗಲೇ ಪಂಪ್ಗ್ಳು ಹಾಳಾಗುವುದು. ಶುಚಿಗೊಳಿಸಿದರೆ ಘನ ತ್ಯಾಜ್ಯಗಳು ಪಂಪ್ಗೆ ಸಿಕ್ಕಿ ಬೀಳುವುದು ತಪ್ಪುತ್ತದೆ.
ವೆಟ್ವೆಲ್ಗಳ ಗ್ರೀವ್ ಚೇಂಬರ್ನಲ್ಲಿ ಶೇಖರಣೆಯಾದ ಮರಳು 2 ತಿಂಗಳಿಗೊಮ್ಮೆ ಶುಚಿಗೊಳಿಸಲೇಬೇಕು. ಇದರಿಂದ ನೀರಿನ ಅಡಿ ಭಾಗ ಮೋಟಾರು ಭಾಗಗಳ ಸವೆತ ತಡೆಯಲು ಸಾಧ್ಯ ಎನ್ನುತ್ತಾರೆ ಪರಿಣತರು. ಉಳಿದಂತೆ ವೆಟ್ವೆಲ್ಗಳ ಸಾಮಾನ್ಯ ನಿರ್ವಹಣೆಗೆ ತಿಂಗಳಿಗೆ 50 ಸಾವಿರ ರೂ. ತಗಲಬಹುದು. ಇದರಿಂದ ಪಂಪ್ಗ್ಳು ಆಗಾಗ್ಗೆ ಹಾಳಾಗುವುದನ್ನು ತಡೆಯಬಹುದು ಹಾಗೂ ಉಳಿದ ಯಂತ್ರಗಳೆಲ್ಲವೂ ಸುಸ್ಥಿತಿಯಲ್ಲಿರುತ್ತವೆ. ಈ ನಿರ್ವಹಣೆಯನ್ನು ಸರಿಯಾಗಿ ಮಾಡದಿದ್ದರೆ, 180 ಎಚ್ಪಿ ಪಂಪ್ ಹಾಳಾದರೆ 4ರಿಂದ 5 ಲ.ರೂ. ವೆಚ್ಚ ಮಾಡಬೇಕು. ದುರಸ್ತಿ ಸಂದರ್ಭ ಯಂತ್ರದ ಮುಖ್ಯ ಭಾಗಗಳನ್ನು ದುರಸ್ತಿ ಮಾಡಬೇಕು. ಅದಕ್ಕೆ ಹೆಚ್ಚು ಹಣ ವೆಚ್ಚವಾಗುತ್ತದೆ. ಒಮ್ಮೆ ಪಂಪ್ ದುರಸ್ತಿ ಮಾಡಿದ ಮೇಲೆ ಸರಿಯಾಗಿ ನಿರ್ವಹಣೆ ಮಾಡಿದರೆ ಸುಮಾರು ಒಂದು ವರ್ಷ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಉಡುಪಿಯ ವೆಟ್ವೆಲ್ಗಳಲ್ಲಿ ಮೂರು ತಿಂಗಳಿಗೊಮ್ಮೆ ಪಂಪ್ ಹಾಳಾಗುತ್ತದೆ ಎಂಬುದು ನಮಗೆ ಸಿಕ್ಕ ಮಾಹಿತಿ. ಹಾಗಾದರೆ ನಗರಸಭೆ ಅಧಿಕಾರಿಗಳು ವಾರ್ಷಿಕ ನಿರ್ವಹಣೆಯನ್ನು ಅಷ್ಟೊಂದು ಗಂಭೀರವಾಗಿ ಯಾಕೆ ಪರಿಗಣಿಸಲಿಲ್ಲ ಎಂಬುದೇ ಯಕ್ಷಪ್ರಶ್ನೆ. ಇಂದ್ರಾಣಿಯೊಂದಿಗೆ ಮತ್ತೆರಡು ತೀರ್ಥ !
ಇಂದ್ರಾಣಿ ದೇವಸ್ಥಾನದ ಪಕ್ಕದಲ್ಲೇ ಇರುವ ಆಂಜನೇಯ ದೇವರ ಗುಡಿಯ ಎದುರಿನ ಕೆರೆಯಿಂದ ಹರಿದು ಸಣ್ಣ ತೋಡಿನಲ್ಲಿ ಗದ್ದೆ-ತೋಟಗಳ ಬದಿಗೆ ಸಾಗುವ ಈ ನದಿಗೆ ಮುಂದೆ ಅನತಿ ದೂರದಲ್ಲಿ ಮತ್ತೂಂದು ಬದಿಯಿಂದ ಹರಿದು ಬರುವ ಗುಳ್ಮೆ ತೀರ್ಥ ಸೇರಿಕೊಳ್ಳುತ್ತದೆ. ಹಾಗೆ ಹರಿದು ಸಾಗುತ್ತಾ ಇಂದ್ರಾಳಿ ರೈಲ್ವೇ ಸ್ಟೇಶನ್ ಬಳಿ ಮಂಚಿಕೆರೆಯ ಕಡೆಯಿಂದ ಬರುವ ಸಣ್ಣದೊಂದು ಝರಿ ಸೇರಿದ ಮೇಲೆ ಇಂದ್ರಾಣಿ ಸಾಗುವುದು ಕಲ್ಸಂಕ ದಾಟಿಕೊಂಡು. ಮೂರೂ ತೀರ್ಥಗಳು ಸೇರಿಕೊಂಡು ಇಂದ್ರಾಣಿಯಾಗುತ್ತದೆ. ಹೀಗೆ ಸಾಗುವ ಇಂದ್ರಾಣಿ ಶಾರದಾ ನಗರದವರೆಗೆ ಎಲ್ಲಿಯೂ ಅಶುದ್ಧಗೊಳ್ಳುವುದೇ ಇಲ್ಲ. ಎಲ್ಲಿ ಕಂಡರೂ ಶುದ್ಧ ನದಿಯಾಗಿಯೇ ಹರಿಯುತ್ತಾಳೆ. ಇಲ್ಲೆಲ್ಲ ಸಾಕಷ್ಟು ಕೃಷಿ ಪ್ರದೇಶಗಳು, ತೋಟಗಳಿದ್ದು, ಅಲ್ಲೆಲ್ಲ ನೀರುಣಿಸಿಕೊಂಡು ಹೋಗುತ್ತಾಳೆ. ರೈಲ್ವೇ ಸ್ಟೇಶನ್ ಬಳಿಯ ಗರಡಿಯೊಂದರ ಸಮೀಪ ಮಾತಿಗೆ ಸಿಕ್ಕಿದ ಸತೀಶ್ ಅವರು ಹೇಳುವಂತೆ, “ನಮಗೆ ಈ ನೀರು ಎಪ್ರಿಲ್ವರೆಗೂ ಲಭ್ಯ. ಬಳಿಕ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗುತ್ತದೆ. ಆದರೆ ಎಂದಿಗೂ ಬತ್ತುವುದಿಲ್ಲ. ಮೇಲ್ಭಾಗ ದಲ್ಲಿ ಯಾರಾದರೂ ಕಟ್ಟ ಹಾಕಿ ನಿಲ್ಲಿಸಿದರೆ ಮೇ ಸಂದರ್ಭದಲ್ಲಿ ತೀರಾ ನೀರು ಕಡಿಮೆಯಾಗಬಹುದಷ್ಟೇ’ ಎಂದರು. ಈ ನೀರಿನಿಂದ ಅನುಕೂಲವಾಗಿದೆಯೇ ಎಂಬ ಪ್ರಶ್ನೆಗೆ, ನಿಜ. ಈ ಸುತ್ತಮುತ್ತಲಿನ ಬಾವಿಗಳಲ್ಲಿ ನೀರಿನ ಮಟ್ಟ ಏರಲು ಇದೇ ಕಾರಣ. ನಾವು ಬಾವಿ ನೀರನ್ನೇ ಬಳಸುತ್ತಿದ್ದೇವೆ. ಅದು ಚೆನ್ನಾಗಿದೆ ಎಂದರು. ಇಲ್ಲೇ ಹತ್ತಿರದಲ್ಲಿ ಕೆಲವು ವರ್ಷಗಳ ಹಿಂದೆ ಯಾಂತ್ರಿಕ ಲಾಂಡ್ರಿಯೊಂದು ಕಾರ್ಯ ನಿರ್ವಹಿಸುತ್ತಿತ್ತು. ಅದರ ಬಟ್ಟೆ ತೊಳೆದ ರಾಸಾಯನಿಕ ಅಂಶಗಳಿದ್ದ ನೀರು (ಸೋಪಿನಪುಡಿ ಇತ್ಯಾದಿ ಅಂಶ) ಈ ನದಿಗೆ ಸೇರುತ್ತಿತ್ತು. ಆದರೆ ಸುತ್ತಲಿನ ನಾಗರಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ಲಾಂಡ್ರಿಯನ್ನು ಅಲ್ಲಿಂದ ತೆಗೆಸಲಾಯಿತು. ಅದಾದ ಬಳಿಕ ನೀರು ಕಲುಷಿತಗೊಳ್ಳುವ ಸಮಸ್ಯೆ ಇಲ್ಲ ಎನ್ನುತ್ತಾರೆ ಅವರು.