Advertisement

ಸಾವರ್ಕರ್ ದೇಶಪ್ರೇಮಿ ಎಂದು ಯಾಕೆ ಕರೆಯಬೇಕು?: ಸಿದ್ದರಾಮಯ್ಯ

07:03 PM Aug 18, 2022 | Team Udayavani |

ಬೆಂಗಳೂರು: ಸಾವರ್ಕರ್ ಬ್ರಿಟಿಷರಿಗೆ ನಾನು ನಿಮ್ಮ ಸೇವಕ ಎಂದಿದ್ದರು ಹಾಗಿದ್ದರೆ ಅವರು ದೇಶ ಪ್ರೇಮಿ ಸ್ವಾತಂತ್ರ್ಯ ಹೋರಾಟಗಾರರಾಗುವುದು ಹೇಗೆ ಎಂದು ವಿಧಾನ ಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಗುರುವಾರ ಪ್ರಶ್ನಿಸಿದ್ದಾರೆ.

Advertisement

ಮಾಜಿ ಸಿಎಂ ಪತ್ರಿಕಾ ಹೇಳಿಕೆ ನೀಡಿದ್ದು, ನಿಜವಾದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ವಾತಂತ್ರ್ಯ ಹೋರಾಟಗಾರರಲ್ಲ ಎಂದು, ಬ್ರಿಟಿಷರಿಗೆ ಗುಲಾಮಗಿರಿ ಮಾಡಿದವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಇತಿಹಾಸವನ್ನು ತಿರುಚುವ ದುಷ್ಟ ಹುನ್ನಾರವನ್ನು ಬಿಜೆಪಿ ಮುಂದುವರೆಸಿದೆ ಎಂದಿದ್ದಾರೆ.

ಬಿಜೆಪಿಯವರು ಮೊದಲು ಭಗತ್‍ಸಿಂಗ್‍ರನ್ನು ಆಶ್ರಯಿಸಿದರು. ಆದರೆ ನಿಜವಾದ ಸ್ವಾತಂತ್ರ್ಯವೀರ, ಮಹಾನ್ ದೇಶಪ್ರೇಮಿಯಾಗಿದ್ದ, ಚಿಂತನೆಗಳಲ್ಲಿ ಹುಟ್ಟಾ ಎಡಪಂಥೀಯರಾಗಿದ್ದ, ಸಮಾಜವಾದಿಯಾಗಿದ್ದ ಮತ್ತು ‘ನಾನೇಕೆ ನಾಸ್ತಿಕ’ ಎಂದು ಪುಸ್ತಕ ಬರೆದ ಭಗತ್‍ಸಿಂಗ್‍ರು ತಮ್ಮ ಪುರೋಹಿತಶಾಹಿ, ಸನಾತನವಾದಿ ಮತ್ತು ತಾರತಮ್ಯವಾದಿ ಕೊಳಕು ಮನಸ್ಥಿತಿಗೆ ಸಂಪೂರ್ಣ ವಿರುದ್ಧವಾದ ನಿಲುವು ಹೊಂದಿದ್ದರು. ಮಹಾ ಮಾನವತಾವಾದಿಯೂ, ಸಮಾನತಾವಾದಿಯೂ ಆಗಿದ್ದ ಭಗತ್‍ಸಿಂಗ್‍ರ ಚಿಂತನೆಗಳು ತಮಗೆ ಢಿಕ್ಕಿ ಹೊಡೆದು ಪುಡಿ ಮಾಡುತ್ತಿವೆ ಎಂದ ಕೂಡಲೇ ಅವರನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು.

ಕೆಲವು ಕಾಲ ಸ್ವಾಮಿ ವಿವೇಕಾನಂದರನ್ನು ಗುತ್ತಿಗೆ ತೆಗೆದುಕೊಂಡವರಂತೆ ಓಡಾಡಿದರು. ಆದರೆ ಸ್ವಾಮಿ ವಿವೇಕಾನಂದರು ಈ ದೇಶದ ಎಲ್ಲ ಶಾಪಗಳಿಗೆ ಸ್ಥಗಿತತೆಯಲ್ಲಿ, ಅಮಾನವೀಯತೆಯಲ್ಲಿ ಕೊಳೆಯುತ್ತಿರುವ ಮನುವಾದಿಗಳಾದ ಪುರೋಹಿತಶಾಹಿಗಳೇ ಕಾರಣ ಹಾಗಾಗಿ ಅವರನ್ನು ಕಡಲುಗಳಾಚೆಗೆ ಎಸೆದರೆ ಮಾತ್ರ ಇಲ್ಲಿ ನೆಮ್ಮದಿ ಸಾಧ್ಯ ಎಂದಿದ್ದರು, ಹಾಗಾಗಿ ನಿಧಾನಕ್ಕೆ ಬಿಜೆಪಿಯವರು ಸ್ವಾಮಿ ವಿವೇಕಾನಂದರನ್ನೂ ಬಿಟ್ಟುಕೊಟ್ಟರು.ಒಂದಷ್ಟು ಕಾಲ ಸುಭಾಶ್ ಚಂದ್ರ ಬೋಸರನ್ನು ಆತುಕೊಂಡು ಬಳಿಕ ಅವರನ್ನೂ ಬಿಟ್ಟರು.ದೇಶ ಭಕ್ತರೆಂದು ಹೇಳಿಕೊಳ್ಳುವ ಸಾವರ್ಕರ್ ಅವರು ಬ್ರಿಟಿಷರೆ ನಾವು ನಿಮ್ಮ ಜತೆ ಇದ್ದೇವೆ ಎಂದು ಹೇಳಿ ಬ್ರಿಟಿಷರ ಯುದ್ಧಕ್ಕೆ ಬೇಕಾದ ಸೈನ್ಯದ ನೇಮಕಾತಿಗೆ ಬೆಂಬಲವಾಗಿ ನಿಂತರು. ಇದೆಲ್ಲ ಬಿಜೆಪಿಯವರಿಗೆ ಯಾರಾದರೂ ಹೇಳಿಕೊಡಬೇಕಾಗಿದೆ ಎಂದಿದ್ದಾರೆ.

ಏನು ಮಾಡಿದರೂ ಯಾರೊಬ್ಬ ಪೂರ್ವಸೂರಿಯೂ ತಮ್ಮ ನೆರವಿಗೆ ಬರದಿದ್ದಾಗ ಮಾಮೂಲಿನಂತೆ ಸಾವರ್ಕರರನ್ನು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಎಂದು ಬಿಂಬಿಸಲು ಬಿಜೆಪಿಯವರು ಹೊರಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.

Advertisement

ಸರ್ಕಾರ ಜನರ ತೆರಿಗೆಯಲ್ಲಿ ಜಾಹಿರಾತು ನೀಡುವಾಗ ತಮ್ಮ ಪಕ್ಷದ ಜಾಹಿರಾತಿನಂತೆ ನೀಡಿದೆ. ದೇಶದ ಪ್ರಜಾತಂತ್ರದ, ಸಂವಿಧಾನದ ಆಶಯಗಳನ್ನು ಸಮರ್ಥವಾಗಿ ಈಡೇರಿಸಿದ, ಅಭಿವೃದ್ಧಿಗೆ ಭದ್ರಬುನಾದಿ ಹಾಕಿದ ನೆಹರೂರವನ್ನು ಬಿಜೆಪಿಯವರು ಸರ್ಕಾರಿ ಜಾಹಿರಾತುಗಳಲ್ಲಿ ಕೈಬಿಟ್ಟಿದ್ದಾರೆ. ಸಾವರ್ಕರ್ ಅವರನ್ನು ಸ್ವಾತಂತ್ರ್ಯ ಹೋರಾಟಗಾರ, ದೇಶಪ್ರೇಮಿ ಎಂದು ಹೇಗೆ ಕರೆಯಬೇಕು? ಯಾಕೆ ಕರೆಯಬೇಕು? ಎಂದು ಬಿಜೆಪಿಯವರು ಹೇಳಬೇಕು. ಈ ಕುರಿತು ಮುಕ್ತವಾದ ಬಹಿರಂಗ ಚರ್ಚೆ ನಡೆಯಲಿ. ಆರ್ ಎಸ್ ಎಸ್ ಗೆ ಸಂಪೂರ್ಣ ತಲೆಬಾಗಿದ್ದೇನೆಂದು ಹೇಳುತ್ತಿರುವ ಬೊಮ್ಮಾಯಿಯವರೆ ಈ ಚರ್ಚೆಯ ನೇತೃತ್ವ ವಹಿಸಲಿ ಎಂದು ಸವಾಲು ಹಾಕಿದ್ದಾರೆ.

ಸನಾತನವಾದಿ ಪುರೋಹಿತಶಾಹಿ ಮೌಲ್ಯಗಳು ಹಾಗೂ ದ್ವೇಷಯುತವಾದ ವಿಚಾರಗಳನ್ನು ಬಿಟ್ಟರೆ ಸಾವರ್ಕರ್ ಅವರಿಂದ ದೇಶದ ಜನರು ಏನು ಕಲಿಯಲು ಸಾಧ್ಯ? ಕೊಲೆ ಕೇಸೊಂದರಲ್ಲಿ ಜೈಲಿಗೆ ಹೋದ ಸಾವರ್ಕರ್ ಅವರು ಜೈಲಿಗೆ ಹೋದ ಮೇಲೆ ಯಾಕೆ ಒಂದಾದ ಮೇಲೊಂದು ಶರಣಾಗತಿಯ 6 ಪತ್ರಗಳನ್ನು ಬ್ರಿಟಿಷರಿಗೆ ಬರೆದರು? ನಾನು ನಿಮ್ಮ ವಿನಮ್ರ ಸೇವಕ ಎಂದು ಯಾಕೆ ಬರೆದರು? ಸ್ವಾತಂತ್ರ್ಯವೀರ ಭಗತ್‍ಸಿಂಗ್ ಅವರು ನನಗೆ ನೇಣು ಹಾಕಬೇಡಿ, ಬೇಕಿದ್ದರೆ ಗುಂಡು ಹೊಡೆದು ವೀರೋಚಿತವಾಗಿ ಎದುರಿಸಿ ಎಂದು ಬ್ರಿಟಿಷರ ಎದುರು ನಿಂತು ಹುತಾತ್ಮರಾಗಿ ಸ್ವಾತಂತ್ರ್ಯ ಪ್ರೇಮಿ ಎನ್ನಿಸಿಕೊಂಡು ಭಾರತದ ಚರಿತ್ರೆಯಲ್ಲಿ ಅಜರಾಮರರಾದ ಭಗತ್ ಸಿಂಗರೆಲ್ಲಿ, ನಾನು ನಿಮ್ಮ ವಿನಮ್ರ ಸೇವಕ ಎಂದ ಸಾವರ್ಕರರೆಲ್ಲಿ? ಎಂದು ಪ್ರಶ್ನಿಸಿದ್ದಾರೆ.

ಸಾವರ್ಕರ್ ಅವರು ಬ್ರಿಟೀಷರಲ್ಲಿ ದಮ್ಮಯ್ಯ ಎಂದು ಬೇಡಿಕೊಂಡು ಜೈಲಿನಿಂದ ಬಿಡುಗಡೆಯಾದ ಮೇಲೆ ಮಾಡಿದ್ದೇನು? ತಮ್ಮ ಜತೆಯಲ್ಲಿ ಅಂಡಮಾನಿನ ಜೈಲಿನಲ್ಲಿದ್ದ ಕೈದಿಗಳ ಬಿಡುಗಡೆಗೆ ಹೋರಾಟ ಮಾಡಿದರೆ? ಸಾವರ್ಕರರೇಕೆ ಬ್ರಿಟಿಷ್ ಸರ್ಕಾರ ನೀಡುತ್ತಿರುವ ಪಿಂಚಣಿ ಹಣ ಸಾಕಾಗುತ್ತಿಲ್ಲ ಅದನ್ನು ಹೆಚ್ಚಿಸಿ ಎಂದು ದುಂಬಾಲು ಬಿದ್ದರು? ಇಂದಿನ ಬಿಜೆಪಿಯವರು ಒಂದೊ ಮೆದುಳು, ಹೃದಯಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅಧಿಕಾರ ಲಾಲಸೆಗಾಗಿ ಬಲಿಬಿದ್ದು ಈ ನೆಲದ ಸಕಲ ಪರಂಪರೆಗೆ ದ್ರೋಹ ಬಗೆಯುತ್ತಿದ್ದಾರೆ. ಭಾರತ ವಿಭಜನೆಗೆ ನೆಹರೂ ಅವರು ಕಾರಣ ಎಂಬ ಸುಳ್ಳು ಸಿದ್ಧಾಂತವನ್ನು ಬಿಜೆಪಿಯವರು ತೇಲಿಬಿಡುತ್ತಿದ್ದಾರೆ. ವಾಸ್ತವವೇನೆಂದರೆ ಮೊಟ್ಟ ಮೊದಲಿಗೆ ಎರಡು ರಾಷ್ಟ್ರಗಳ ಸಿದ್ಧಾಂತವನ್ನು ಮಂಡಿಸಿದ್ದೆ ಸಾವರ್ಕರ್. 1937 ರಲ್ಲಿ ಗುಜರಾತಿನ ಅಹಮದಾದಿನಲ್ಲಿ ನಡೆದ ಹಿಂದೂ ಮಹಾಸಭಾದ ಕಾರ್ಯಕ್ರಮದಲ್ಲಿ ಮೊದಲ ಬಾರಿ ಈ ಕುರಿತು ಮಾತನಾಡಿದರು. ಸಾವರ್ಕರ್ ಅವರು ಈ ಕುರಿತು ಮಾತನಾಡಿದ 3 ವರ್ಷಗಳ ನಂತರ ಮಹಮ್ಮಾದಾಲಿ ಜಿನ್ನಾ ಅವರು ದ್ವಿರಾಷ್ಟ್ರ ಸಿದ್ಧಾಂತವನ್ನು ಮಂಡಿಸಿದರು ಎಂದಿದ್ದಾರೆ.

ನಾಡಿನ ಯುವಜನರು, ವಿವೇಕವಂತರು ತುಸು ಆಸಕ್ತಿವಹಿಸಿ ಮೂಲ ಇತಿಹಾಸದ ಪುಟಗಳನ್ನು ಅಧ್ಯಯನ ಮಾಡಿ ಸತ್ಯವೇನೆಂದು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ಬಾಬಾ ಸಾಹೇಬರು ಹೇಳಿದಂತೆ ಇತಿಹಾಸವನ್ನು ಅರಿಯದವರು ಇತಿಹಾಸವನ್ನು ನಿರ್ಮಾಣ ಮಾಡಲಾರರು ಎಂದಾಗುತ್ತದೆ. ವಿವೇಕ ಇರುವವರು ಸರಿಯಾದ ದಿಕ್ಕಿನಲ್ಲಿ ಇತಿಹಾಸವನ್ನು ಅರ್ಥ ಮಾಡಿಕೊಳ್ಳದಿದ್ದರೆ ಸುಳ್ಳುಗಳು ಸತ್ಯವಾಗುತ್ತವೆ ಸತ್ಯಗಳನ್ನು ಸುಳ್ಳುಗಳೆಂದು ಬಿಂಬಿಸುವ ದೆವ್ವಗಳು ಸಮಾಜದಲ್ಲಿ ಕುಣಿಯಲಾರಂಭಿಸುತ್ತವೆ ಎಂದು ಹೇಳಿದ್ದಾರೆ.

ಈ ದೇಶದ ಇತಿಹಾಸವನ್ನು ಓದಿ ಅರ್ಥ ಮಾಡಿಕೊಂಡಿರುವವರು ಯಾರೂ ಸಹ ಸಾವರ್ಕರ್ ಅಂಥವರನ್ನು ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರೆಂದು ಕರೆಯಲು ಸಾಧ್ಯವಿಲ್ಲ. ಯಾಕೆಂದರೆ ಅವರು ಬ್ರಿಟಿಷರ ಜೊತೆ ಇದ್ದರು. ಜನರು ಬ್ರಿಟಿಷರ ಗುಂಡು, ಲಾಠಿ, ಫಿರಂಗಿಗಳಿಗೆ ಎದೆಯೊಡ್ಡಿ ನಿಂತಿದ್ದರು ಎಂದಿದ್ದಾರೆ.

ನಾಡಿನ ಯುವಜನರು ಎಚ್ಚೆತ್ತುಕೊಳ್ಳದೆ ಹೋದರೆ ಈ ನೆಲ ಮತ್ತೊಂದು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ. ಬಿಜೆಪಿಯವರು ದೇಶದ ಸಮಸ್ತವನ್ನೂ ಕಾರ್ಪೊರೇಟ್ ಧಣಿಗಳಿಗೆ ಕೊಟ್ಟು ರಾಜ್ಯ ಮತ್ತು ದೇಶದ ಆರ್ಥಿಕತೆಯನ್ನು ಸಂಪೂರ್ಣ ಬರ್ಬಾದು ಮಾಡುತ್ತಿದ್ದಾರೆ. ಯುವಕರು- ಹಿಂದುಳಿದವರು, ದಲಿತರು, ಮಹಿಳೆಯರು ಸೇರಿದಂತೆ ಎಲ್ಲ ವರ್ಗಗಳು ಸಂಕಷ್ಟಕ್ಕೆ ಸಿಲುಕಿಕೊಂಡಿವೆ. ಭ್ರಷ್ಟಾಚಾರ ತುದಿಮುಟ್ಟಿದೆ. ಇವುಗಳನ್ನೆಲ್ಲ ಮರೆಮಾಚಿ ಬಿಜೆಪಿಯವರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next