Advertisement

ನವಜೋತ್ ಸಿಧು ಪಾಕ್ ಪ್ರೇಮಿ, ದೇಶದ್ರೋಹಿ: ಸಿಂಗ್ ಆರೋಪಕ್ಕೆ ಸೋನಿಯಾ, ರಾಹುಲ್ ಮೌನವೇಕೆ?

12:54 PM Sep 20, 2021 | Team Udayavani |

ನವಜೋತ್ ಸಿಧು ಒಬ್ಬ ದೇಶದ್ರೋಹಿ, ಅಪಾಯಕಾರಿ, ಅವರೊಬ್ಬ ಪಾಕಿಸ್ತಾನದ ಪ್ರೇಮಿ ಎಂದು ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಹಿರಂಗವಾಗಿ ಆರೋಪಿಸಿದ್ದು, ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೌನವಾಗಿರುವುದು ಯಾಕೆ ಎಂದು ಬಿಜೆಪಿ ಮುಖಂಡ ಪ್ರಕಾಶ್ ಜಾವ್ಡೇಕರ್ ಪ್ರಶ್ನಿಸಿದ್ದಾರೆ.

Advertisement

ಈ ಆರೋಪದ ಬಗ್ಗೆ ಕಾಂಗ್ರೆಸ್ ಒಂದು ವೇಳೆ ಪ್ರತಿಕ್ರಿಯೆಯನ್ನು ನೀಡಿ, ಕ್ರಮ ತೆಗೆದುಕೊಳ್ಳಬೇಕು ಎಂದು ಜಾವ್ಡೇಕರ್ ತಿಳಿಸಿರುವುದಾಗಿ ಎಎನ್ ಐ ವರದಿ ಮಾಡಿದೆ. ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ದೇಶದ್ರೋಹಿ ಎಂದು ಮಾಜಿ ಸಿಎಂ ಅಮರಿಂದರ್ ಸಿಂಗ್ ಗಂಭೀರವಾಗಿ ಆರೋಪಿಸಿದ್ದಾರೆ. ಈ ಆರೋಪದ ಬಗ್ಗೆ ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕಾ ಮೌನವಾಗಿರುವುದು ಯಾಕೆ ಎಂಬುದು ಬಿಜೆಪಿ ಪ್ರಶ್ನೆಯಾಗಿದೆ ಎಂದು ತಿಳಿಸಿದ್ದಾರೆ.

ಈ ಆರೋಪದ ಬಗ್ಗೆ ಕಾಂಗ್ರೆಸ್ ಮಾತನಾಡಲೇಬೇಕು ಎಂದು ಬಿಜೆಪಿ ಆಗ್ರಹಿಸುವುದಾಗಿ ಜಾವ್ಡೇಕರ್ ತಿಳಿಸಿದ್ದಾರೆ. ಅಲ್ಲದೇ ಆರೋಪಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಹೇಳಿದರು. ನನಗೆ ಪಕ್ಷದಲ್ಲಿ ತುಂಬಾ ಅವಮಾನವಾಗಿದೆ ಎಂದು ಹೇಳುವ ಮೂಲಕ ಅಮರಿಂದರ್ ಸಿಂಗ್ ಶನಿವಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಸಿಧು ಹಾಗೂ ಸಿಂಗ್ ನಡುವೆ ಮುಸುಕಿನ ಗುದ್ದಾಟ ಇದರೊಂದಿಗೆ ತಾರಕಕ್ಕೇರಿದಂತಾಗಿದೆ.

ಸಿಧು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕ್ ಸೇನಾ ಮುಖ್ಯಸ್ಥ ಬಜ್ವಾ ಅವರನ್ನು ಆಲಂಗಿಸಿಕೊಂಡಿದ್ದು ನಾವೆಲ್ಲ ಕಂಡಿದ್ದೇವೆ. ಅಷ್ಟೇ ಅಲ್ಲ ಪ್ರತಿ ದಿನ ಗಡಿಯಲ್ಲಿ ನಮ್ಮ ಸೈನಿಕರನ್ನು ಪಾಕ್ ಹತ್ಯೆಗೈಯುತ್ತಿದ್ದಾಗಲೂ ಕರ್ತಾಪುರ್ ಕಾರಿಡಾರ್ ಪ್ರವೇಶಿಸಲು ಅನುಮತಿ ನೀಡಿದಾಗಲೂ ಸಿಧು ಪಾಕ್ ಪ್ರಧಾನಿಯನ್ನು ಹೊಗಳಿದ್ದರು ಎಂದು ಸಿಂಗ್ ಹೇಳಿರುವುದಾಗಿ ಐಎಎನ್ ಎಸ್ ವರದಿ ಮಾಡಿದೆ.

ಸಿಧು ಸ್ಥಿರತೆ ಇಲ್ಲದ ವ್ಯಕ್ತಿ, ಸಿಧು ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಮುಳುಗಿಸುವುದು ಖಚಿತ. ಆ ಕಾರಣಕ್ಕಾಗಿಯೇ ಸಿಧುಗೆ ಮುಖ್ಯಮಂತ್ರಿ ಸ್ಥಾನ ನೀಡಲು ತೀವ್ರವಾಗಿ ವಿರೋಧಿಸಿದ್ದೆ. ಸಿಧುಗೆ ಪಾಕ್ ಜತೆ ಒಳ್ಳೆ ಸ್ನೇಹವಿದೆ. ಇದು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಎಂದು ಅಮರಿಂದರ್ ಸಿಂಗ್ ದೂರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next