Advertisement

ಮಳೆ ಹಾನಿ ಪರಿಹಾರ ವಿತರಣೆಗೆ ಅಡ್ಡಿಪಡಿಸುವುದೇಕೆ? ಶಾಸಕ ರೇಣುಕಾಚಾರ್ಯ

06:34 PM Oct 04, 2022 | Team Udayavani |

ಹೊನ್ನಾಳಿ: ಅತಿವೃಷ್ಟಿಯಿಂದ ಹಾನಿಯಾದ 500 ಮನೆಗಳ ಸಂತ್ರಸ್ತರಿಗೆ ಪರಿಹಾರ ಕೊಡದೇ ಇರುವುದಕ್ಕೆ ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಕಾರಣ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.

Advertisement

ಸೋಮವಾರ ಪಟ್ಟಣದ ಗುರುಭವನದಲ್ಲಿ ಮನೆ ಹಾನಿ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಬಿದ್ದ ಭಾರೀ ಮಳೆಗೆ ಮೊದಲ ಬಾರಿ 288, ಎರಡನೇ ಬಾರಿ 284 ಹಾಗೂ ಮೂರನೇ ಬಾರಿ 300 ಸೇರಿದಂತೆ ಒಟ್ಟು 872 ಹಾಗೂ ನ್ಯಾಮತಿ ತಾಲೂಕಿನಲ್ಲಿ 1111 ಸೇರಿದಂತೆ ಅವಳಿ ತಾಲೂಕಿನಲ್ಲಿ ಒಟ್ಟು 2083 ಮನೆಗಳಿಗೆ ಪರಿಹಾರದ ಮಂಜೂರಾತಿ ಪತ್ರ ನೀಡಿದ್ದೇವೆ. ಆದರೆ ಇನ್ನೂ ಅವಳಿ ತಾಲೂಕಿನಿಂದ ಮನೆ ಕಳೆದುಕೊಂಡ 500 ಸಂತ್ರಸ್ತರಿಗೆ ಮಂಜೂರಾತಿ ಪತ್ರ ನೀಡಬೇಕಿದೆ.

ಆದರೆ ಮಾಜಿ ಶಾಸಕರು ಸುಖಾ ಸುಮ್ಮನೆ ತಾಲೂಕು ಆಡಳಿತ ಮತ್ತು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದರಿಂದ ಆ ಸಂತ್ರಸ್ತರಿಗೆ ಪರಿಹಾರ ನೀಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಮಾಜಿ ಶಾಸಕರೇ ನೇರ ಹೊಣೆ. ಅವರು ನಿಮ್ಮ ಮನೆಬಾಗಿಲಿಗೆ ಬಂದಾಗ ಈ ಬಗ್ಗೆ ಪ್ರಶ್ನಿಸಿ ಎಂದರು.

ಧಾರಾಕಾರ ಮಳೆಯಿಂದ ಮನೆ ಕಳೆದುಕೊಂಡ ಸಂತ್ರಸ್ತರನ್ನು ಭೇಟಿಯಾಗಿ ಅವರ ಸಂಕಷ್ಟಕ್ಕೆ ನಾನು ಸ್ಪಂದಿಸುತ್ತಿದ್ದೇನೆ. ಅವಳಿ ತಾಲೂಕಿನ 7 ಗ್ರಾಮಗಳನ್ನು ಹೊರತುಪಡಿಸಿ ಉಳಿದೆಲ್ಲಾ ಗ್ರಾಮಗಳಿಗೆ ಭೇಟಿ ನೀಡಿ ಅವರ ಸಮಸ್ಯೆಯಲ್ಲಿ ಭಾಗಿಯಾಗಿದ್ದೇನೆ. ಅಂತಹ ಸಮಯದಲ್ಲಿ ಮನೆಯಿಂದ ಹೊರಬಾರದ ಮಾಜಿ ಶಾಸಕರು, ಈಗ ಪರಿಹಾರ ಕೊಡುವ ಹೊತ್ತಿನಲ್ಲಿ ಅಧಿಕಾರಿಗಳಿಗೆ ಹಾಗೂ ನನ್ನ ಬಗ್ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದೇ ಅಲ್ಲದೆ 500 ಜನರಿಗೆ ಪರಿಹಾರ
ನೀಡುವುದಕ್ಕೆ ಅಡ್ಡಗಾಲು ಹಾಕಿದ್ದಾರೆ ಎಂದು ದೂರಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಪೂರ್ವದಲ್ಲಿ ಮನೆ ಬಿದ್ದರೆ ಒಂದು ಮನೆಗೆ 500ರಿಂದ 2 ಸಾವಿರ ರೂ.ವರೆಗೆ ಕೊಡುತ್ತಿದ್ದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕ್ಯಾಟಗರಿ ಆಧಾರದ ಮೇಲೆ 50 ಸಾವಿರದಿಂದ 5 ಲಕ್ಷದವರೆಗೆ ಪರಿಹಾರ ನೀಡುತ್ತಿದ್ದೇವೆ. ಇದನ್ನು ಮಾಜಿ ಶಾಸಕರಿಗೆ ಸಹಿಸಲು ಆಗುತ್ತಿಲ್ಲ ಎಂದು ಕಿಡಿ ಕಾರಿದರು.

Advertisement

ಕೋವಿಡ್‌ ಹಾಗೂ ಇನ್ನಿತರ ಸಂಕಷ್ಟದಲ್ಲಿ ತಾಲೂಕಿನ ಜನತೆಗೆ ಬೇಕಾದ ಸಕಲ ಸೌಲಭ್ಯಗಳನ್ನು ವಿತರಿಸಿ ಅವರ ಜೊತೆ ನಾನು ಹಾಗೂ ನಮ್ಮ ಅಧಿಕಾರಿಗಳಿದ್ದೆವು. ಆ ಸಮಯದಲ್ಲಿ ಮನೆಯಲ್ಲಿದ್ದ ಮಾಜಿ ಶಾಸಕರು, ವಿನಾಕಾರಣ ತಾಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ನನ್ನ ಹಾಗೂ ನನ್ನ
ತಾಯಿಯ ಬಗ್ಗೆ ಅವಹೇಳನ ಹೇಳಿಕೆ ನೀಡಿ ಇಡೀ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ ಎಂದರು. ತಾಪಂ ಇಒ ರಾಮ ಬೋವಿ ಮಾತನಾಡಿ, ಇಡೀ ರಾಜ್ಯದಲ್ಲಿ ಮಳೆಯಿಂದ ಬಿದ್ದ ಎಲ್ಲಾ ಮನೆಗಳಿಗೂ ಹೋಗಿ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿರುವ ಶಾಸಕರಿದ್ದರೆ ಅವರು ನಮ್ಮ ಶಾಸಕರು ಮಾತ್ರ ಎಂದು ಹೇಳಿದರು.

ತಹಶೀಲ್ದಾರ್‌ ರಶ್ಮಿ ಮಾತನಾಡಿ, ಮಳೆಯಿಂದ ಬಿದ್ದ ಮನೆಗಳಿಗೆ ಶಾಸಕರು ಸರ್ಕಾರದ ಮಟ್ಟದಲ್ಲಿ ಕೊನೆ ದಿನಾಂಕವನ್ನು ವಿಸ್ತರಣೆ ಮಾಡಿಸಿ ನಿಮಗೆಲ್ಲ ಮಂಜೂರಾತಿ ಪತ್ರ ಕೊಡಿಸಿದ್ದಾರೆ. ಪರಿಹಾರದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸದೆ ಮನೆ ಕಟ್ಟಿಕೊಳ್ಳಿ ಎಂದು ತಿಳಿಸಿದರು. ನ್ಯಾಮತಿ ತಹಶೀಲ್ದಾರ್‌ ರೇಣುಕಾ ಮಾತನಾಡಿದರು. ಕೆಎಸ್‌ಡಿಎಲ್‌ ನಿರ್ದೇಶಕ ಶಿವು ಹುಡೇದ್‌, ಉಪ ತಹಶೀಲ್ದಾರ್‌ ಮಂಜುನಾಥ್‌ ಇಂಗಳಗೊಂದಿ, ರಾಜಸ್ವ ನಿರೀಕ್ಷಕರಾದ ಗುರುಪ್ರಸಾದ್‌, ದಿನೇಶ್‌, ಸಂತೋಷ್‌, ಸು ಧೀರ್‌, ಬಸವರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next