Advertisement

ಹಾಸನ ಜೆಡಿಎಸ್‌ನಲ್ಲೇಕೆ ಹಿರಿಯರು ಉಳಿಯುತ್ತಿಲ್ಲ?

01:14 AM Feb 06, 2023 | Team Udayavani |

ಹಾಸನ: ಜೆಡಿಎಸ್‌ನ ಭದ್ರಕೋಟೆ ಎಂದೆನಿಸಿರುವ ಹಾಸನ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಶಾಸಕರು ಪಕ್ಷದಿಂದ ಹೊರ ಹೋಗುವುದು ಖಾತರಿಯಾ­ಗಿದೆ. ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಗೇಟ್‌ಪಾಸ್‌ ಸಂದೇಶ ರವಾನೆ ಮಾಡಿರುವ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರ­ಸ್ವಾಮಿ ಅವರು ಆ ಕ್ಷೇತ್ರಕ್ಕೆ ಪರ್ಯಾಯ ಅಭ್ಯರ್ಥಿಯನ್ನಾಗಿ ಮಾಜಿ ಸಚಿವ ಎ.ಮಂಜು ಅವರ ಹೆಸರನ್ನೂ ಈಗಾಗಲೇ ಘೋಷಣೆ ಮಾಡಿದ್ದಾರೆ. ಇನ್ನು ಉಳಿದಿರುವುದು ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರಿಗೆ ಪರ್ಯಾಯ ಅಭ್ಯರ್ಥಿ ಹುಡುಕು­ವು­ದಷ್ಟೇ ಜೆಡಿಎಸ್‌ ಮುಖಂಡರಿಗೆ ಈಗ ಉಳಿದಿರುವ ಮಹತ್ವದ ಕೆಲಸ.

Advertisement

ಎ.ಟಿ.ರಾಮಸ್ವಾಮಿ ಅವರು ಮೂಲತಃ ಕಾಂಗ್ರೆಸ್‌ನವರು. ಕಾಂಗ್ರೆಸ್‌ನಿಂದ ಮೂರು ಬಾರಿ ಸ್ಪರ್ಧೆಗಿಳಿದು ಎರಡು ಬಾರಿ ಶಾಸಕರಾಗಿದ್ದವರು. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ತಪ್ಪಿದ್ದಕ್ಕೆ ಪಕ್ಷ ತೊರೆದು ಜೆಡಿಎಸ್‌ ಸೇರಿದ್ದರು. ಕಳೆದ ಎರಡು ದಶಕಗಳಿಂದ ಅವರು ಜೆಡಿಎಸ್‌ನಲ್ಲಿದ್ದವರು. ಕೆ.ಎಂ.ಶಿವಲಿಂಗೇಗೌಡ ಅವರು ಜೆಡಿಎಸ್‌ನಿಂದಲೇ ಜಿಲ್ಲಾ ಪಂಚಾಯತ್‌ ಸದಸ್ಯರಾಗಿ ರಾಜಕಾರಣ ಆರಂಭಿಸಿದವರು. ಮೂರು ದಶಕಗಳಿಗೂ ಹೆಚ್ಚು ಕಾಲ ಜೆಡಿಎಸ್‌ನಲ್ಲಿದ್ದವರು. ಈಗ ಪಕ್ಷ ತೊರೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರು ಪ್ರಭಾವಿ ಶಾಸಕರು. ಪಕ್ಷ ಬಿಡುವಂತಹ ಬೆಳವಣಿಗೆಳು ಏಕೆ ಜೆಡಿಎಸ್‌ನಲ್ಲಿ ನಡೆದಿವೆ ಎಂದು ವಿಶ್ಲೇಷಿಸುತ್ತಾ ಹೋದರೆ ಜೆಡಿಎಸ್‌ಗೆ ಈಗ ಹಿರಿಯ ತಲೆಮಾರಿನ ರಾಜಕಾರಣಿಗಳು ಒಗ್ಗಿಕೊಳ್ಳುತ್ತಿಲ್ಲ ಎಂಬುದು ಕಂಡು ಬರುತ್ತಿದೆ.

ವಿಶ್ವಾಸಕ್ಕೆ ತೆಗೆದುಕೊಳ್ಳದ ರೇವಣ್ಣ
ಎಚ್‌.ಡಿ.ದೇವೇಗೌಡ ಅವರು ಹಾಸನ ಜಿಲ್ಲೆಯ ರಾಜಕಾರಣದ ಹಿಡಿತ ಸಾಧಿಸಿ­ದ್ದ­ವರೆಗೂ ಯಾವೊಬ್ಬ ಮುಖಂಡರಿಗೂ ದೇವೇಗೌಡರ ನಿರ್ಧಾರಗಳನ್ನು ಪ್ರಶ್ನಿಸುವ ಅವಕಾಶಗಳೇ ಇರುತ್ತಿರಲಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತ­ರನ್ನು ದೇವೇಗೌಡರು ಅಷ್ಟರ ಮಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದರು. ಆದರೆ ಹಾಸನ ಜಿಲ್ಲೆಯಲ್ಲಿ ರೇವಣ್ಣ ಅವರು ಪಕ್ಷದ ನಿರ್ಧಾರಗಳನ್ನು ಕೈಗೊಳ್ಳಲು ಆರಂಭಿಸಿದ ಅನಂತರ ಅವರ ಸಮಕಾಲೀನರು ರೇವಣ್ಣ ಅವರ ಹಿಡಿತಕ್ಕೆ ಒಗ್ಗಿಕೊಳ್ಳಲು ಒಪ್ಪಲಿಲ್ಲ.

ಜತೆಗೆ ಜಿಲ್ಲೆಯಲ್ಲಿ ಪಕ್ಷದೊಳಗೆ ಬಿಕ್ಕಟ್ಟು ಎದುರಾದಾಗ ದೇವೇಗೌಡರು ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರ ನಿರ್ದೇಶನಗಳನ್ನು ಒಪ್ಪಿ ಕೊಳ್ಳುವ ಮನಃಸ್ಥಿತಿಯನ್ನೂ ರೇವಣ್ಣ ರೂಢಿಸಿಕೊಳ್ಳಲೇ ಇಲ್ಲ. ಅಲ್ಲದೆ ರೇವಣ್ಣ ಅವರಿಗೆ ನಿಷ್ಠುರವಾಗಿ ನಿರ್ದೇಶನ ಕೊಡುವ ಗೋಜಿಗೆ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರಾಗಲಿ ಹೋಗಲೇ ಇಲ್ಲ. ಹಾಗಾಗಿಯೇ ಮಾಜಿ ಸಂಸದ ಎಚ್‌.ಕೆ. ಜವರೇಗೌಡ, ಮಾಜಿ ಶಾಸಕ ಎಚ್‌. ಎಂ. ವಿಶ್ವನಾಥ್‌ ಪಕ್ಷದಲ್ಲಿ ಉಳಿ ಯಲಿಲ್ಲ. ಈಗ ರೇವಣ್ಣ ಅವರಷ್ಟೇ ಅಲ್ಲ. ರೇವಣ್ಣ ಅವರ ಮಕ್ಕಳೂ ಜಿಲ್ಲೆಯ ರಾಜಕಾರಣ, ಪಕ್ಷದ ಮುಖಂಡರನ್ನು ನಿಯಂತ್ರಿಸುವ ಪರಿಸ್ಥಿತಿ ಹಾಸನ ಜಿಲ್ಲೆಯಲ್ಲಿ ನಿರ್ಮಾಣವಾಗಿದೆ ಎಂಬುದು ಪಕ್ಷ ತೊರೆಯುತ್ತಿರುವ ಮುಖಂಡರ ಅಭಿಪ್ರಾಯ.

ಮಹತ್ವಾಕಾಂಕ್ಷಿ ಕೆಎಂಶಿ
ಶಿವಲಿಂಗೇಗೌಡ ಅವರಂತೂ ಎಚ್‌.ಡಿ.ರೇವಣ್ಣ ಅವರಷ್ಟೇ ಮಹತ್ವಾಕಾಂಕ್ಷಿ ರಾಜಕಾರಣಿ. ರೇವಣ್ಣ ಅವರಿಗಿಂತ ನಾನೇನು ಕಡಿಮೆ ಎಂಬ ಮನಃಸ್ಥಿತಿಯವರು. ಹಾಗಾಗಿ ಸತತ ಮೂರು ಬಾರಿ ಶಾಸಕನಾಗಿರುವ ನಾನು 4ನೇ ಬಾರಿ ವಿಧಾನಸಭೆಗೆ ಆಯ್ಕೆ­ಯಾದರೂ ಜೆಡಿಎಸ್‌ನಲ್ಲಿ ಶಾಸಕನಾಗಿಯೇ ಇರಬೇಕು. ರೇವಣ್ಣ ಅವರನ್ನು ಬಿಟ್ಟರೆ ನಾನೆಂದೂ ಸಚಿವನಾಗಲ್ಲ. ಹಾಗಾಗಿ ಜೆಡಿಎಸ್‌ ಬದಲು ಕಾಂಗ್ರೆಸ್‌ನಿಂದ ಶಾಸಕನಾದರೆ ಸಚಿವನಾಗುವ ಅವಕಾಶ ಸಿಗಬಹುದೆಂಬ ಉದ್ದೇಶದಿಂದ ಕಾಂಗ್ರೆಸ್‌ನತ್ತ ಮುಖ ಮಾಡಿದ್ದಾರೆ ಎಂಬುದು ಜೆಡಿಎಸ್‌ನ ಕಟ್ಟಾ ಬೆಂಬಲಿಗರ ಆರೋಪ. ಶಿವಲಿಂಗೇಗೌಡರ ನಡೆಯೂ ಇತ್ತೀಚಿನ ದಿನಗಳಲ್ಲಿ ಹಾಗೆಯೇ ಇತ್ತು. ಜೆಡಿಎಸ್‌ ವರಿಷ್ಠರೆ­ದುರೇ ಕಾಂಗ್ರೆಸ್‌ ಮತ್ತು ಬಿಜೆಪಿ ಪ್ರಭಾವಿಗಳನ್ನು ಹೊಗಳಿ ಅಟ್ಟಕ್ಕೇರಿಸುವ ನಡೆಗಳನ್ನೂ ಪ್ರದರ್ಶಿಸಿದ್ದರು. ಹಾಸನದಲ್ಲಿ ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ, ಸಿ.ಎಂ. ಇಬ್ರಾಹಿಂ ಅವರು ಪಾಲ್ಗೊಂಡಿದ್ದ ಜನತಾ ಜಲಧಾರೆ ಕಾರ್ಯ ಕ್ರಮವನ್ನೂ ಬಹಿಷ್ಕರಿಸಿದ್ದರು. ಅಲ್ಲಿಂದಲೇ ಅರಸೀಕೆರೆ­ಯಲ್ಲಿ ಶಿವಲಿಂಗೇ­ಗೌಡರಿಗೆ ಪರ್ಯಾಯ ಅಭ್ಯರ್ಥಿ ಹುಡುಕಿಕೊಳ್ಳಬೇಕು ಎಂಬುದು ಜೆಡಿಎಸ್‌ ವರಿಷ್ಠರಿಗೆ ಮನವರಿಕೆ ಆಗತೊಡಗಿತು.

Advertisement

ಇತರರ ಜತೆ ಹೊಂದಾಣಿಕೆ ಕೊರತೆ
ರಾಮಸ್ವಾಮಿ ಅವರು ಶಿಸ್ತು, ಪ್ರಾಮಾಣಿಕ ಹಾಗೂ ಸಜ್ಜನ ರಾಜಕಾರಣಕ್ಕೆ ಹೆಸರಾದವರು. ಆದರೆ ಕಾರ್ಯಕರ್ತರು, ಮುಖಂಡರೊಂದಿಗೆ ಹೊಂದಿ­ಕೊಂಡು ಹೋಗಲಿಲ್ಲ. ನಮ್ಮನ್ನು ಬಿಟ್ಟರೆ ಜೆಡಿಎಸ್‌ ಮುಖಂಡರಿಗೆ ಗತಿಯಿಲ್ಲ. ನಮ್ಮನ್ನು ಓಲೈಕೆ ಮಾಡದೆ ಅವರಿಗೆ ಬೇರೆ ದಾರಿಯಿಲ್ಲ ಎಂಬ ಮನಃಸ್ಥಿತಿ ಇಂದು ಎ.ಟಿ. ರಾಮಸ್ವಾಮಿ ಅವರಿಗೆ ಮುಳುವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ರಾಮಸ್ವಾಮಿ ವಿರುದ್ಧ “ಟಿಕೆಟ್‌’ ಗೆದ್ದ ಮಂಜು!
ಸುದೀರ್ಘ‌ ಕಾಲ ಕಾಂಗ್ರೆಸ್‌ ಸಂಪರ್ಕದಲ್ಲಿದ್ದ ಎ.ಮಂಜು ಅವರು ದೇವೇಗೌಡರ ಕುಟುಂಬ ರಾಜಕಾರಣವನ್ನು ವಿರೋಧಿಸುತ್ತಲೇ ಬಂದವರು. ಆದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ವಿರೋಧಿಸಿ ಬಿಜೆಪಿ ಸೇರಿದ್ದರು.ತನ್ನ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಎ. ಮಂಜು ಅವರು ಬಿಜೆಪಿ ಸೇರಿದ್ದರಿಂದ ಸಿದ್ಧರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾದರೂ ಮಂಜು ಕಾಂಗ್ರೆಸ್‌ ಸಂಪರ್ಕ ಬಿಟ್ಟಿರಲಿಲ್ಲ.

ಹಾಗಾಗಿ ಬಿಜೆಪಿಯಲ್ಲೂ ಭದ್ರ ನೆಲೆ ಸಿಗಲಿಲ್ಲ. ಆದರೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕೊಡಗು ಜಿಲ್ಲೆಯಿಂದ ಸ್ಪರ್ಧೆಗೆ ತನ್ನ ಮಗ ಮಂತರ್‌ ಗೌಡಗೆ ಕಾಂಗ್ರೆಸ್‌ ಟಿಕೆಟ್‌ ಕೊಡಿಸಿದ್ದರು. ಆದರೆ ಇವರಿಗೆ ಮಾತ್ರ ಕಾಂಗ್ರೆಸ್‌ ಸೇರಲು ಆಗಿರಲಿಲ್ಲ. ಈಗ ಎಂ.ಟಿ. ಕೃಷ್ಣೇಗೌಡ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಬಹುತೇಕ ಖಾತರಿಯಾದ ಪರಿಣಾಮ ಎ.ಮಂಜು ಅನಿವಾರ್ಯವಾಗಿ ಜೆಡಿಎಸ್‌ ಕದ ತಟ್ಟಿದರು. ಈಗ ಅಚ್ಚರಿ ಎಂಬಂತೆ ಜೆಡಿಎಸ್‌ ಟಿಕೆಟ್‌ ಪಡೆದಿದ್ದಾರೆ. ಅಲ್ಲದೇ 1994 ರಿಂದಲೂ ಎ.ಟಿ. ರಾಮಸ್ವಾಮಿ ಮತ್ತು ಮಂಜು ಅವರ ನಡುವೆ ರಾಜಕೀಯವಾಗಿ ಹೋರಾಟ ನಡೆಯುತ್ತಲೇ ಇದೆ. ಒಂದು ಬಾರಿ ರಾಮಸ್ವಾಮಿ, ಮಗದೊಂದು ಬಾರಿ ಮಂಜು ಗೆಲ್ಲುತ್ತಾ ಬಂದಿದ್ದಾರೆ. ಇವರಿಬ್ಬರೂ ಪಕ್ಷ ಬದಲಿಸಿದ್ದಾರೆ. ವಿಚಿತ್ರವೆಂದರೆ ಎ.ಟಿ.ರಾಮಸ್ವಾಮಿ ಮೂಲತಃ ಕಾಂಗ್ರೆಸ್‌ನವರೇ. ಎ.ಮಂಜು ಕೂಡ ಕಾಂಗ್ರೆಸ್‌ನಲ್ಲಿದ್ದವರೇ. ಬದಲಾದ ಸನ್ನಿವೇಶದಲ್ಲಿ ರಾಮಸ್ವಾಮಿ ಜೆಡಿಎಸ್‌ಗೆ ಬಂದಿದ್ದರೆ ಹಿಂದೊಮ್ಮೆ ಟಿಕೆಟ್‌ ಸಿಗದೇ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿದ್ದ ಮಂಜು ಬಳಿಕ ಕೈ ಪಕ್ಷಕ್ಕೇ ವಾಪಸ್‌ ಆಗಿದ್ದರು. ಈಗ ಜೆಡಿಎಸ್‌ ಸೇರಲು ಮುಂದಾಗಿರುವ ಮಂಜು, ರಾಮಸ್ವಾಮಿ ವಿರುದ್ಧ ರಾಜಕೀಯ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗಿದೆ.

-ಎನ್‌.ನಂಜುಂಡೇಗೌಡ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next