Advertisement

ಐವರು ಮಹಿಳೆಯರಲ್ಲಿ ಸಂಸತ್‌ ಮೆಟ್ಟಿಲು ಹತ್ತುವವರ್ಯಾರು?

12:18 AM Apr 11, 2019 | sudhir |

ಕಾಸರಗೋಡು: ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡಬೇಕೆಂದು ಒತ್ತಡವಿದ್ದರೂ ಈ ವರೆಗೂ ಈ ಬೇಡಿಕೆ ಈಡೇರಿಲ್ಲ. ಕೇರಳದಲ್ಲಿ 20 ಲೋಕಸಭಾ ಕ್ಷೇತ್ರಗಳಿದ್ದು, ಮಹಿಳಾ ಮೀಸಲಾತಿ ಶೇ. 33 ನೀಡಿದ್ದರೆ ಒಂದೊಂದು ರಾಜಕೀಯ ಪಕ್ಷಗಳು ಕನಿಷ್ಠ ಆರು ಮಂದಿ ಮಹಿಳೆಯರನ್ನು ಕಣಕ್ಕಿಳಿಸಬೇಕಾಗಿದ್ದರೂ ಯಾವುದೇ ರಾಜಕೀಯ ಪಕ್ಷಗಳು ಶೇ. 33 ಮೀಸಲಾತಿ ನೀಡಿಲ್ಲ.

Advertisement

ಕೇರಳದಲ್ಲಿ ಪಿ.ಕೆ. ಶ್ರೀಮತಿ ಟೀಚರ್‌, ಶೋಭಾ ಸುರೇಂದ್ರನ್‌, ವೀಣಾ ಜಾರ್ಜ್‌, ಶಾನಿಮೋಲ್‌ ಉಸ್ಮಾನ್‌, ರಮ್ಯಾ ಹರಿದಾಸ್‌ ಮೊದಲಾದ ಪ್ರಮುಖರು ಸ್ಪರ್ಧಾಕಣಕ್ಕಿಳಿದಿದ್ದು ಅದೃಷ್ಟ ಪರೀಕ್ಷೆಯಲ್ಲಿದ್ದಾರೆ. ಈ ಬಾರಿ ಮೂರು ಪಕ್ಷಗಳಿಂದಾಗಿ ಐದು ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

ಪಿ.ಕೆ. ಶ್ರೀಮತಿ ಟೀಚರ್‌
ಪಿ.ಕೆ. ಶ್ರೀಮತಿ ಟೀಚರ್‌ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

69ರ ಹರೆಯದ ಶ್ರೀಮತಿ ಟೀಚರ್‌ ಸಿಪಿಎಂ ಪಕ್ಷದ ಕೇಂದ್ರ ಸಮಿತಿ ಸದಸ್ಯೆ. ಆಲ್‌ ಇಂಡಿಯಾ ಮಹಿಳಾ ಅಸೋಸಿಯೇಶನ್‌ನ ರಾಜ್ಯ ಕಾರ್ಯದರ್ಶಿಯಾಗಿದ್ದು, ಈ ಹಿಂದೆ ಎಡರಂಗ ಸರಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದರು. ಪ್ರಸ್ತುತ ಕಣ್ಣೂರು ಲೋಕಸಭಾ ಸದಸ್ಯೆಯಾಗಿದ್ದಾರೆ. ಈ ಬಾರಿಯೂ ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಾ ಕಣಕ್ಕಿಳಿದಿದ್ದು ಕಾಂಗ್ರೆಸ್‌ ಮತ್ತು ಬಿಜೆಪಿಯಿಂದ ತೀವ್ರ ಸ್ಪರ್ಧೆ ಎದುರಿಸುತ್ತಿದ್ದಾರೆ.

ಶೋಭಾ ಸುರೇಂದ್ರನ್‌
ಆಟ್ಟಿಂಗಲ್‌ ಲೋಕ ಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಶೋಭಾ ಸುರೇಂದ್ರನ್‌ ಬಿಜೆಪಿ ರಾಷ್ಟ್ರೀಯ ನಿರ್ವಾಹಕ ಸಮಿತಿ ಸದಸ್ಯೆಯಾಗಿದ್ದಾರೆ. 45ರ ಹರೆಯದ ಶೋಭಾ ಸುರೇಂದ್ರನ್‌ ಮೂರನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ತೃಶ್ಶೂರು ವಡಕ್ಕಾಂಜೇರಿ ನಿವಾಸಿಯಾಗಿದ್ದಾರೆ. ಶೋಭಾ ಸುರೇಂದ್ರನ್‌ ರಾಜ್ಯ ಮಹಿಳಾ ಮೋರ್ಛಾ ಮಾಜಿ ಅಧ್ಯಕ್ಷೆಯಾಗಿದ್ದಾರೆ. ಕಳೆದ ಬಾರಿ ಪಾಲಾ^ಟ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

Advertisement

ಶಾನಿಮೋಲ್‌ ಉಸ್ಮಾನ್‌
ಆಲಪ್ಪುಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಶಾನಿಮೋಲ್‌ ಉಸ್ಮಾನ್‌ (52) ಸ್ಪರ್ಧಿಸುತ್ತಿದ್ದಾರೆ. ಎ.ಐ. ಸಿ.ಸಿ. ಸದಸ್ಯೆ, ಕೆಪಿಸಿಸಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ, ಎಐಸಿಸಿ ಮಾಜಿ ಕಾರ್ಯದರ್ಶಿ, ಮಹಿಳಾ ಕಾಂಗ್ರೆಸ್‌ ಮಾಜಿ ಅಧ್ಯಕ್ಷೆ, ಕೆಎಸ್‌ಯು ಮಾಜಿ ರಾಜ್ಯ ಉಪಾಧ್ಯಕ್ಷೆ, ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯೆ, ಆಲಪ್ಪುಳ ನಗರಸಭೆಯ ಮಾಜಿ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಶಾನಿಮೋಲ್‌ ಉಸ್ಮಾನ್‌ ಆಲಪ್ಪುಳ ನಿವಾಸಿಯಾಗಿದ್ದಾರೆ.

ವೀಣಾ ಜಾರ್ಜ್‌
ಆರನ್ಮುಳ ಶಾಸಕಿ ಯಾಗಿರುವ ವೀಣಾ ಜಾರ್ಜ್‌(42) ಸಿಪಿಎಂ ಅಭ್ಯರ್ಥಿಯಾಗಿ ಜಿದ್ದಾ ಜಿದ್ದಿನ ಹೋರಾಟದ ಕಣವಾಗಿರುವ ಪತ್ತನಂ ತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಅಧ್ಯಾಪಿಕೆಯಾಗಿ ವೃತ್ತಿ ಜೀವನ ಆರಂಭಿಸಿದ ವೀಣಾ ಜಾರ್ಜ್‌, ಆ ಬಳಿಕ ಪತ್ರಕರ್ತೆಯಾಗಿಯೂ ಸೇವೆ ಸಲ್ಲಿಸಿದ್ದರು. 2016 ರಲ್ಲಿ ನಡೆದ ಚುನಾವಣೆಯಲ್ಲಿ ಆರನ್ಮುಳ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಪತ್ತನಂತಿಟ್ಟ ಕುಂಬಳ ನಿವಾಸಿಯಾಗಿದ್ದಾರೆ.

ರಮ್ಯಾ ಹರಿದಾಸ್‌
ಆಲತ್ತೂರು ಲೋಕ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ರಮ್ಯಾ ಹರಿದಾಸ್‌ (31) ಅವರು ಕಣದಲ್ಲಿದ್ದಾರೆ. ಕಲ್ಲಿಕೋಟೆ ಕುಂದ ಮಂಗಲಂ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆಯಾಗಿರುವ ರಮ್ಯಾ ಹರಿದಾಸ್‌ ಯೂತ್‌ ಕಾಂಗ್ರೆಸ್‌ ಅಖೀಲ ಭಾರತ ಕೋ-ಆರ್ಡಿನೇಟರ್‌ ಆಗಿದ್ದಾರೆ. ದಿಲ್ಲಿಯಲ್ಲಿ ನಡೆದ ಟ್ಯಾಲೆಂಟ್‌ ಹಂಟ್‌ನಲ್ಲಿ ರಾಹುಲ್‌ ಗಾಂಧಿ ರಮ್ಯಾ ಹರಿದಾಸ್‌ ಅವರನ್ನು ಆಯ್ಕೆ ಮಾಡಿದ್ದರು. ಹಲವಾರು ದಲಿತ ಭೂಹೋರಾಟಗಳಲ್ಲಿ ಭಾಗವಹಿಸಿರುವ ರಮ್ಯಾ ಕಲ್ಲಿಕೋಟೆ ಕುಟ್ಟಿಕಾಟ್ಟೂರು ನಿವಾಸಿಯಾಗಿದ್ದಾರೆ.
ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ಸಿಪಿಎಂ ನಿಂದ ಇಬ್ಬರು ಮಹಿಳೆಯರು, ಬಿಜೆಪಿಯಿಂದ ಓರ್ವ ಮತ್ತು ಕಾಂಗ್ರೆಸ್‌ನಿಂದ ಇಬ್ಬರು ಸ್ಪರ್ಧಿಸುತ್ತಿದ್ದಾರೆ.

2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಲತ್ತೂರು ಲೋಕಸಭಾ ಕ್ಷೇತ್ರದಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿಯಾಗಿ ಕಾಂಗ್ರೆಸ್‌ನಿಂದ ಕೆ.ಎ. ಶೀಬ ಅವರು ಸ್ಪರ್ಧಿಸಿದ್ದರು. ಕೆ.ಎ. ಶೀಬಾ ಮಹಿಳಾ ಕಾಂಗ್ರೆಸ್‌ ಮೂಲಕ ಸಕ್ರಿಯ ರಾಜಕೀಯಕ್ಕೆ ಧುಮುಕಿದ್ದರು.

ಎಲ್‌ಟಿಟಿಇ ಮುಖಂಡ ವೇಲುಪಿಳ್ಳೆ ಪ್ರಭಾಕರನ್‌ನನ್ನು ಸಂದರ್ಶಿಸುವ ಮೂಲಕ ಖ್ಯಾತಿ ಪಡೆದ ಪತ್ರಕರ್ತೆ ಅನಿತಾ ಪ್ರತಾಪ್‌ ಆಮ್‌ ಆದ್ಮಿ ಪಾರ್ಟಿಯಿಂದ ಎರ್ನಾಕುಳಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ತಾಲಿಬಾನ್‌ ಬಗ್ಗೆಯೂ ವರದಿ ಮಾಡಿದ 55ರ ಹರೆಯದ ಈಕೆ ಪ್ರಥಮ ಬಾರಿ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಎರಡು ಬಾರಿ ಮಹಿಳಾ ಆಯೋಗದ ಸದಸ್ಯೆಯಾಗಿದ್ದ ಪಿ.ಕೆ. ಸೈನಬಾ ಮಲಪ್ಪುರ ಲೋಕಸಭಾ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯೆ, ಜನಾಧಿಪತ್ಯ ಮಹಿಳಾ ಅಸೋಸಿಯೇಶನ್‌ನ ಅಖೀಲ ಭಾರತ ಅಧ್ಯಕ್ಷೆಯಾಗಿದ್ದರು.

ಆಟ್ಟಿಂಗಲ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್‌. ಗಿರಿಜಾ ಕುಮಾರಿ ವೆಳ್ಳನಾಡು ಗ್ರಾಮ ಪಂಚಾಯತ್‌ ಅಧ್ಯಕ್ಷೆಯಾಗಿದ್ದಾಗ ಅತ್ಯಂತ ಉತ್ತಮ ಮಹಿಳಾ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಪ್ರಶಸ್ತಿ ಪಡೆದಿದ್ದರು.
ಕಳೆದ ಬಾರಿ ಪ್ರಥಮವಾಗಿ ಎಸ್‌.ಗಿರಿಜಾ ಕುಮಾರಿ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು.

ಪ್ರಮುಖ ಬರಹಗಾರ್ತಿಯಾದ ಸಾರಾ ಜೋಸೆಫ್‌ ಆಮ್‌ ಆದ್ಮಿ ಪಾರ್ಟಿ ತೃಶ್ಶೂರು ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಪ್ರಥಮ ಬಾರಿ ಚುನಾವಣಾ ಕಣಕ್ಕಿಳಿದಿದ್ದ ಅವರು ಆರಂಭದಲ್ಲೇ ಆಮ್‌ ಆದ್ಮಿ ಪಾರ್ಟಿಯಲ್ಲಿ ಸಕ್ರಿಯರಾಗಿದ್ದರು.

ಆಟ್ಟಿಂಗಲ್‌ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಂದು ಕೃಷ್ಣ ನ್ಯಾಯವಾದಿಯಾಗಿದ್ದಾರೆ. ಬಿಂದು ಕೊಲ್ಲಂ ಜಿಲ್ಲಾ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿದ್ದು, ಮಹಿಳಾ ಕಾಂಗ್ರೆಸ್‌ನ ರಾಷ್ಟ್ರೀಯ ಉಪಾಧ್ಯಕ್ಷೆಯಾಗಿದ್ದರು. ರಾಜ್ಯ ಅಧ್ಯಕ್ಷೆಯೂ, ಕೊಲ್ಲಂ ಡಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದಲ್ಲಿ 8 ಮಂದಿ ಮಹಿಳೆಯರು ಸ್ಪರ್ಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next