Advertisement

ಯಾರು ಏನೇ ಹೇಳಿದರೂ ಸರ್ಕಾರ ಸುಭದ್ರ

11:43 PM Jun 21, 2019 | Team Udayavani |

ಹುಬ್ಬಳ್ಳಿ: “ಯಾರು ಏನೇ ಹೇಳಿಕೆ ನೀಡಿದರೂ ಮೈತ್ರಿ ಸರ್ಕಾರ ಸುಭದ್ರವಾಗಿ ಮುಂದುವರಿಯಲಿದೆ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರು ಮಧ್ಯಂತರ ಚುನಾವಣೆ ಎದುರಾಗಲಿದೆ ಎಂದಿದ್ದಾರೆ. ಆದರೆ, ಯಾರು ಏನೇ ಹೇಳಿದರೂ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರು ಮೈಸೂರು ಕ್ಷೇತ್ರ ತಮಗೆ ಬೇಕು ಎಂದು ಕೇಳಿದ್ದು ನಿಜ. ಆದರೆ, ನಮಗೆ ಆ ಕ್ಷೇತ್ರ ಬೇಕು ಎಂದಾಗ ತುಮಕೂರು ಕ್ಷೇತ್ರ ಕೊಡಲಾಯಿತೇ ವಿನಃ ನಾವೇನು ಅವರಿಗೆ ಯಾವ ಕ್ಷೇತ್ರವನ್ನೂ ಒತ್ತಾಯಪೂರ್ವಕವಾಗಿ ಕೊಟ್ಟಿಲ್ಲ’ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ವೇಳೆ ನಾನು ಮೈತ್ರಿ ಸರ್ಕಾರದ ಬಗ್ಗೆ ಯಾವ ಅಸಮಾಧಾನವನ್ನೂ ವ್ಯಕ್ತಪಡಿಸಿಲ್ಲ. ಅಲ್ಲದೆ, ನಮ್ಮಿಬ್ಬರ ನಡುವೆ ಏನು ಚರ್ಚೆ ನಡೆದಿದೆ ಎಂಬುದು ಮೂರನೇ ವ್ಯಕ್ತಿಗೆ ಗೊತ್ತಿಲ್ಲ. ಹಾಗೆಯೇ, ನಾವಿಬ್ಬರು ಯಾರೊಂದಿಗೂ ಈ ವಿಷಯ ಹಂಚಿಕೊಂಡಿಲ್ಲ. ಹೀಗಿದ್ದಾಗ ಮಾಧ್ಯಮದವರೇ ಊಹಾಪೋಹ ಮಾಡಿಕೊಂಡರೆ ಅದಕ್ಕೆ ನಾನು ಏನು ಉತ್ತರ ಕೊಡಲಿ? ಊಹೆಯ ಜರ್ನಲಿಸಂ ನಮಗೆ ಬಹಳ ಕಷ್ಟವಾಗಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಕುಮಾರಸ್ವಾಮಿ ಈ ಹಿಂದೆ ಕೂಡ ಗ್ರಾಮ ವಾಸ್ತವ್ಯ ಮಾಡಿದ್ದರು. ಈಗ ಮೈತ್ರಿ ಸರ್ಕಾರದಲ್ಲೂ ಮಾಡುತ್ತಿದ್ದಾರೆ. ಇದು ಅವರ ಕಾರ್ಯಕ್ರಮ. ಗ್ರಾಮ ವಾಸ್ತವ್ಯದಿಂದ ಸಮ್ಮಿಶ್ರ ಸರ್ಕಾರಕ್ಕೆ ಲಾಭ ಆಗುತ್ತದೆ. ಅವರು ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದಾರೆ. ಪಕ್ಷದ ಸಂಘಟನೆ ಚುನಾವಣೆಗೆ ಮಾತ್ರ ಸೀಮಿತವಾಗಿಲ್ಲ. ಯಾವಾಗಲೂ ಮಾಡುತ್ತಿರುತ್ತೇವೆ. ಪಕ್ಷದ ಸಂಘಟನೆಯನ್ನು ವರ್ಷಪೂರ್ತಿ ಮಾಡಲೇಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next