Advertisement

Mysore-Kodagu: ಸಿಎಂ ತವರೂರಿನಲ್ಲಿ ಪ್ರತಾಪಸಿಂಹಗೆ ಎದುರಾಳಿ ಯಾರು?

11:48 PM Jan 14, 2024 | Team Udayavani |

ಮೈಸೂರು: ಲೋಕಸಭಾ ಚುನಾವಣೆಗೆ ನಾಲ್ಕು ತಿಂಗಳಿರುವಾ ಗಲೇ ಮೈಸೂರು-ಕೊಡಗು ಲೋಕ ಸಭಾ ಕ್ಷೇತ್ರದಲ್ಲಿ ಚುನಾವಣ ಕಣ ರಂಗೇರುತ್ತಿದೆ. ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ದರೂ ಬಿಜೆಪಿಯ ಹಾಲಿ ಸಂಸದ ಸತತ 3ನೇ ಬಾರಿಗೆ ಕಣಕ್ಕಿಳಿಯುವ ಸಾಧ್ಯತೆ ಬಹುತೇಕ ನಿಶ್ಚಿತ. ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರ ಡಾ| ಯತೀಂದ್ರ ಸ್ಪರ್ಧೆ ಬಗ್ಗೆ ಇನ್ನೂ ತೀವ್ರ ಕುತೂಹಲವಿದೆ. ಪಕ್ಷದಲ್ಲಿ ಟಿಕೆಟ್‌ ಆಕಾಂಕ್ಷಿಗಳ ದಂಡೇ ಇದೆ.

Advertisement

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 5, ಜೆಡಿಎಸ್‌ 2, ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದಿವೆ.

ಈ ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರು ಜಿಲ್ಲೆಯನ್ನೂ ಒಳಗೊಂಡಿ ರುವುದರಿಂದ ಸಹಜವಾಗಿಯೇ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. 2019ರ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು. ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಸಿ.ಎಚ್‌.ವಿಜಯ್‌ ಶಂಕರ್‌, ಪ್ರತಾಪಸಿಂಹ ವಿರುದ್ಧ 2 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋತಿದ್ದರು.

ಪ್ರತಾಪ್‌ ಮೈತ್ರಿ ಅಭ್ಯರ್ಥಿ?
ಈ ಕ್ಷೇತ್ರವು 1951ರಿಂದ ಈ ವರೆಗೆ 17 ಚುನಾವಣೆ ಕಂಡಿದ್ದು, ಆರಂಭದಲ್ಲಿ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಇಲ್ಲಿಜೆಡಿಎಸ್‌ ಬಲಿಷ್ಠವಾಗಿದ್ದರೂ ಒಮ್ಮೆಯೂ ಗೆದ್ದಿಲ್ಲ. 12 ಬಾರಿ ಕಾಂಗ್ರೆಸ್‌ ಗೆದ್ದಿತ್ತು. 1998ರಿಂದೀಚೆಗೆ ಕಾಂಗ್ರೆಸ್‌ 2 ಬಾರಿ, ಬಿಜೆಪಿಗೆ 4 ಬಾರಿ ಒಲಿದಿರುವ ಕ್ಷೇತ್ರವಿದು. ಕಳೆದೆರಡು ಬಾರಿಯಿಂದ ಬಿಜೆಪಿಯ ಪ್ರತಾಪ ಸಿಂಹ ಗೆಲ್ಲುತ್ತಾ ಬಂದಿದ್ದಾರೆ.

ಈ ಲೆಕ್ಕಾಚಾರದಲ್ಲೇ ಕ್ಷೇತ್ರದಿಂದ ತನ್ನ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಆದರೆ ಕೆಲವರು ಜೆಡಿಎಸ್‌ನ ಸಾ.ರಾ.ಮಹೇಶ್‌ರನ್ನು ಸ್ಪರ್ಧಿಸುವಂತೆ ಒತ್ತಾಯಿಸಿದ್ದರೂ ಅವರು ಒಪ್ಪುತ್ತಿಲ್ಲ ಎನ್ನಲಾಗಿದೆ. ಇದರೊಂದಿಗೆ ಪ್ರತಾಪ್‌ ಸ್ಪರ್ಧಿಸುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

Advertisement

ಕಾಂಗ್ರೆಸ್‌ ಆಕಾಂಕ್ಷಿಗಳ ದಂಡು
ಅತಿ ಹೆಚ್ಚು ವಿಧಾನಸಭಾ ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ ಪಾಳಯದಲ್ಲಿ ಸಹಜವಾಗಿಯೇ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ| ಯತೀಂದ್ರ ಹೆಸರು ಬಲವಾಗಿ ಕೇಳಿಬರುತ್ತಿದ್ದರೂ, ಇತ್ತೀಚೆಗೆ ಸಿದ್ದರಾಮಯ್ಯ ಅವರೇ ಈ ಸಾಧ್ಯತೆಯನ್ನು ಬಹಿರಂಗವಾಗಿ ತಳ್ಳಿ ಹಾಕಿದ್ದಾರೆ. ಆದರೆ ರಾಜಕೀಯದಲ್ಲಿ ಕೊನೆ ಕ್ಷಣದವರೆಗೂ ಯಾವುದನ್ನೂ ಅಲ್ಲಗಳೆಯುವಂತಿಲ್ಲ. ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಡಾ| ಬಿ.ಜೆ.ವಿಜಯ್‌ ಕುಮಾರ್‌, ಭಾರತ್‌ ಜೋಡೋ ಯಾತ್ರೆಯಲ್ಲಿ ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದ ನಗರದ ಡಾ| ಸುಶ್ರುತ್‌ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜತೆಗೆ, ಮಾಜಿ ಸಂಸದ ಹಾಗೂ ಬಿಜೆಪಿ ಎಂಎಲ್‌ಸಿ ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ನಿಂದ ಕಣಕ್ಕಿಳಿಯಲು ಪ್ರಯತ್ನಿಸುತ್ತಿದ್ದಾರೆ.
ಬೆಂಗಳೂರಿನ ಯಶವಂತಪುರ ಕ್ಷೇತ್ರದ ಶಾಸಕ, ಮಾಜಿ ಸಚಿವ ಎಸ್‌.ಟಿ.ಸೋಮಶೇಖರ್‌ ಅವರನ್ನು ಕಾಂಗ್ರೆಸ್‌ಗೆ ಕರೆತಂದು ಲೋಕಸಭಾ ಕಣಕ್ಕಿಳಿಸುವ ಪ್ರಯತ್ನವೂ ತೆರೆಮರೆಯಲ್ಲಿ ನಡೆಯುತ್ತಿದೆ ಎನ್ನಲಾಗಿದೆ. ಬಿಜೆಪಿಯ ಪ್ರಮುಖ ಲಿಂಗಾಯತ ನಾಯಕ ವಿ. ಸೋಮಣ್ಣ ಅವರಿಗೂ ಗಾಳ ಹಾಕಿರುವ ಗುಸು ಗುಸು ಇದೆಯಾದರೂ, ಅವರು ಇತ್ತೀಚೆಗೆ ಬಿಜೆಪಿ ವರಿಷ್ಠ ಭೇಟಿಯಾದ ಬಳಿಕ ಪಕ್ಷಾಂತರದ ಬಗ್ಗೆ ಒಲವು ಹೊಂದಿಲ್ಲ ಎಂದು ಹೇಳಲಾಗುತ್ತಿದೆ.

ಮೈಸೂರಿಗೆ ಯದುವೀರ, ಉಡುಪಿ- ಚಿಕ್ಕಮಗಳೂರಿಗೆ ಪ್ರತಾಪ್‌ ಸಿಂಹ: ವದಂತಿ
ಕ್ಷೇತ್ರದಲ್ಲಿ ಹಲವು ದಿನಗಳಿಂದ ವದಂತಿಯೊಂದು ಓಡಾಡುತ್ತಿದೆ. ಆದರೆ ಇದಕ್ಕೆ ಯಾವುದೇ ರಾಜಕೀಯ ಬಲ ಇನ್ನೂ ದೊರೆತಿಲ್ಲ. ಅದೆಂದರೆ, ಮೈಸೂರು-ಕೊಡಗು ಕ್ಷೇತ್ರಕ್ಕೆ ರಾಜವಂಶಸ್ಥ ಯದುವೀರ ಒಡೆಯರ್‌ ಅವರನ್ನು ನಿಲ್ಲಿಸುವುದು. ಹಾಲಿ ಸಂಸದ ಪ್ರತಾಪಸಿಂಹ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿನಿಧಿಸುತ್ತಿರುವ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕಣಕ್ಕಿಳಿಸುವುದು. ಶೋಭಾ ಅವರು ಡಿ.ವಿ.ಸದಾನಂದ ಗೌಡ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವುದು. ಇದು ಎಷ್ಟು ನಿಜ, ಎಷ್ಟು ಸುಳ್ಳು ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next