Advertisement
ವಿಶ್ವ ಸಂಸ್ಥೆಯ ಮಹಾಧಿವೇಶನದಲ್ಲಿ ಮಾತನಾಡಿದ ಪಾಕಿಸ್ಥಾನವು ತನ್ನ ನೆಲದಲ್ಲಿನ ಜಿಹಾದಿ ಮೂಲಭೂತವಾದವನ್ನು ಮತ್ತು ನೆರೆ ಪ್ರದೇಶಗಳಲ್ಲಿನ ಉಗ್ರವಾದವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದೆ. ಆದರೆ ಪಾಕಿಸ್ಥಾನಿ ನಾಯಕರು ಜಿಹಾದಿ ಸಮಸ್ಯೆಗೆ ಅಮೆರಿಕವನ್ನು ದೂಷಿಸುವುದನ್ನು ನಿಲ್ಲಿಸಿದರೆ ಮಾತ್ರ ಮೇಲಿನ ಮಾತುಗಳು ಹೆಚ್ಚು ವಿಶ್ವಾಸಾರ್ಹವಾಗಿರುತ್ತಿದ್ದವು.
Related Articles
ಆದರೆ, ಜಿಹಾದಿ ಸಮಸ್ಯೆಯ ಜವಾಬ್ದಾರಿಯನ್ನು ಇನ್ನೊಬ್ಬರ ತಲೆಗೆ ಕಟ್ಟುವ ಪ್ರಯತ್ನದಲ್ಲಿ ಅನೇಕ ನ್ಯೂನತೆಗಳಿವೆ. ಸೋವಿಯತ್ ಒಕ್ಕೂಟದ ವಿರುದ್ಧದ ಜಿಹಾದ್ ಕೊನೆಗೊಂಡು ಅದಾಗಲೇ 30 ವರ್ಷಗಳಾಗಿವೆ. ಅಂದು ಆ ಯುದ್ಧದಲ್ಲಿ ಪಾಲ್ಗೊಂಡ ಪ್ರಮುಖ ಜಿಹಾದಿಗಳೆಲ್ಲರೂ ಒಂದೋ ಮೃತಪಟ್ಟಿದ್ದಾರೆ, ಇಲ್ಲವೇ ಮುಪ್ಪಾನು ಮುದುಕರಾಗಿದ್ದಾರೆ.
ಗಜ್ವಾ-ಎ-ಹಿಂದ್ಗಾಗಿ(ಭಾರತದ ವಿರುದ್ಧ ಯುದ್ಧ) ಪಾಕಿಸ್ಥಾನವು ತಯಾರು ಮಾಡಿದ ಉಗ್ರ ಸಂಘಟನೆಗಳಿಗೂ, 30 ವರ್ಷಗಳ ಹಿಂದೆ ಆಫ್ಘಾನಿಸ್ಥಾನದಲ್ಲಿ ನಡೆದ ಸೋವಿಯತ್ ವಿರುದ್ಧದ ಹೋರಾಟಕ್ಕೂ ಸಂಬಂಧವೇ ಇಲ್ಲ.
Advertisement
ಕಾಶ್ಮೀರದಲ್ಲಿ ಯುದ್ಧ ಮಾಡಲು ಪಾಕಿಸ್ಥಾನವು ಸೃಷ್ಟಿಸಿದ ಉಗ್ರರಿಗೆ ಅಮೆರಿಕದಿಂದ ತರಬೇತಿ ಅಥವಾ ಶಸ್ತ್ರಾಸ್ತ್ರವಾಗಲಿ ಸಿಕ್ಕಿಲ್ಲ. ಪಾಕಿಸ್ಥಾನ ಸರಕಾರ ಹಲವು ದಶಕಗಳಿಂದ ಈ ಉಗ್ರ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಿದ್ದರೂ, ಅವು ಈಗಲೂ ವಿವಿಧ ರೂಪದಲ್ಲಿ ಅಸ್ತಿತ್ವದಲ್ಲಿ ಇವೆ. ಪಾಕಿಸ್ಥಾನಿ ಆಡಳಿತವು ಈ ಉಗ್ರ ಸಂಘಟನೆಗಳನ್ನು ನಿಷೇಧಿಸುವ ಬದಲು, ಅವು ಅಸ್ತಿತ್ವದಲ್ಲೇ ಇಲ್ಲ ಎಂದು ಜಗತ್ತಿಗೆ ಮಂಕು ಬೂದಿ ಎರಚಲು ಅಥವಾ ಗೊಂದಲಕ್ಕೆ ದೂಡಲು ಬಯಸುತ್ತದೆ. ಉದಾಹರಣೆಗೆ, ಎರಡು ವಾರಗಳ ಹಿಂದಷ್ಟೇ ಉಗ್ರ ಫಜ್ಲರ್ ರೆಹ್ಮಾನ್ ಖಲೀಲ್, ಇಸ್ಲಾಮಾಬಾದ್ನಲ್ಲಿ ನಡೆದ “ಕಾಶ್ಮೀರದೊಂದಿಗೆ ನಾವು’ ಎನ್ನುವ ಪ್ರತಿಭಟನೆಯೊಂದರಲ್ಲಿ ಇಮ್ರಾನ್ ಖಾನ್ರ ವಿಶೇಷ ಸಹಾಯಕರ ಜತೆ ವೇದಿಕೆ ಹಂಚಿಕೊಂಡಿದ್ದ!
ಇಮ್ರಾನ್ ಖಾನ್ರ ಕ್ಯಾಬಿನೆಟ್ ಸಹೋದ್ಯೋಗಿಯೊಂದಿಗೆ ಉಗ್ರಫಜುರ್ ರೆಹ್ಮಾನ್ ವೇದಿಕೆ ಹಂಚಿಕೊಂಡ ಸುದ್ದಿಯು ಅಸೋಸಿಯೇಟೆಡ್ ಪ್ರಸ್ ಆಫ್ ಪಾಕಿಸ್ಥಾನ್(ಸರ್ಕಾರದಿಂದ ನಿರ್ವಹಿಸಲ್ಪಡುವ ರಾಷ್ಟ್ರೀಯ ಸುದ್ದಿ ಸಂಸ್ಥೆ) ನಲ್ಲಿ ಪ್ರಕಟವಾಯಿತಾದರೂ, ಈ ಸುದ್ದಿ ಬಂದದ್ದು ಕೇವಲ ಉರ್ದು ಭಾಷೆಯಲ್ಲಿ ಮಾತ್ರ! ವಿದೇಶಿ ರಾಜತಾಂತ್ರಿಕರು ಮತ್ತು ಅನ್ಯ ದೇಶಗಳ ರಾಜಕೀಯ ವಿಶ್ಲೇಷಕರು ಸಾಮಾನ್ಯವಾಗಿ ಇಂಗ್ಲಿಷ್ ವೆಬ್ಸೈಟ್ಗಳನ್ನು ಓದುತ್ತಾರಾದ್ದರಿಂದ, ಈ ಸುದ್ದಿ ಕೇವಲ ಉರ್ದುವಿನಲ್ಲಿ ಪ್ರಕಟವಾಗುವಂತೆ ಎಚ್ಚರ ವಹಿಸಲಾಯಿತು. ಕಳೆದ ವರ್ಷ, ಇದೇ ಫಜುರ್ ರೆಹ್ಮಾನ್ ಇಮ್ರಾನ್ ಖಾನ್ರ ಆಪ್ತರಾಗಿದ್ದ, ಮಾಜಿ ವಿತ್ತ ಸಚಿವ ಅಸಾದ್ ಉಮರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದ. ಆಗ ಉರ್ದು ಪತ್ರಿಕೆಗಳು “‘ಫಜುರ್ ರೆಹ್ಮಾನ್ ಇಮ್ರಾನ್ ಖಾನ್ರ ಪಕ್ಷವನ್ನು ಸೇರಿದ್ದಾನೆ” ಎಂದು ವರದಿ ಮಾಡಿದ್ದವು. ಆದರೆ ಇಂಗ್ಲಿಷ್ ಪತ್ರಿಕೆಗಳಲ್ಲಿ ಇದಕ್ಕೆ ತದ್ವಿರುದ್ಧವಾಗಿ ಸುದ್ದಿ ಪ್ರಕಟ ಮಾಡಲಾಯಿತು!
1998ರಲ್ಲಿ ಒಸಾಮಾ ಬಿನ್ ಲ್ಯಾಡೆನ್ ಅಮೆರಿಕದ ವಿರುದ್ಧ ಸಮರ ಸಾರಿರುವುದಾಗಿ ಹೊರಡಿಸಿದ ಪ್ರಕಟಣೆಯಲ್ಲಿ ಇದೇ ಫಜ್ಲರ್ ರೆಹ್ಮಾನ್ನ ಸಹಿಯೂ ಇತ್ತು. ಆಗಿನಿಂದಲೂ ಪಾಕಿಸ್ಥಾನ ಫಜ್ಲರ್ ರೆಹ್ಮಾನ್ ಮೇಲೆ ಕ್ರಮ ಕೈಗೊಳ್ಳುವುದಾಗಿ ಹೇಳುತ್ತಲೇ ಬಂದಿದೆಯಾದರೂ, ಆತ ಮಾತ್ರ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ.
ಪಾಕಿಸ್ತಾನದ ಜಿಹಾದಿ ಇತಿಹಾಸಸತ್ಯವೇನೆಂದರೆ, ಈಗಲೂ ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಅಂಗವಾಗಿ ಉಳಿದಿದೆ ” ಜಿಹಾದ್’. ಇದು ಪಾಕ್ನ ರಾಷ್ಟ್ರೀಯ ಸಿದ್ಧಾಂತದ ನಿರ್ಣಾಯಕ ಅಂಶಗಳಲ್ಲಿ ಒಂದಾಗಿದೆ. ಆದರೆ ಪಾಕಿಸ್ತಾನಿ ನಾಯಕರು ಇತಿಹಾಸವನ್ನು ತಿರುಚಿ, ವಿದೇಶಿ ಪ್ರೇಕ್ಷಕರ ಮುಂದೆ ಈ ಸತ್ಯವನ್ನು ಮರೆ ಮಾಚುವುದನ್ನು ನೋಡಿದಾಗ, ಇವರಿಗೆಲ್ಲ ವಾಸ್ತವನ್ನು ಒಪ್ಪಿಕೊಳ್ಳಲು, ಸಮಸ್ಯೆಗೆ ಮುಖಾಮುಖಿಯಾಗಲು ಮನಸ್ಸಿಲ್ಲ. ಸತ್ಯವನ್ನೆಲ್ಲ ಚಾಪೆ ಅಡಿಯಲ್ಲಿ ಮುಚ್ಚಿಡಲು ಬಯಸುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ.
ಸೋವಿಯತ್ ವಿರುದ್ಧ ಹೋರಾಟಕ್ಕಾಗಿಯೇ ಅಮೆರಿಕದ ಸಹಾಯದಿಂದಾಗಿ ಜಿಹಾದ್ ರೂಪುಗೊಂಡಿತು ಎನ್ನುವುದೂ ಸತ್ಯವಲ್ಲ. ಅದಕ್ಕಿಂತಲೂ ಮೊದಲೇ ಪಾಕಿಸ್ಥಾನವು ಮೂಲಭೂತವಾದಿ ಸಂಘಟನೆಗಳನ್ನು ಬೆಳೆಸುವ ಸಂಪ್ರದಾಯಕ್ಕೆ ನಾಂದಿ ಹಾಡಿತ್ತು. ನನ್ನ ಪುಸ್ತಕ “Pakistan Between Mosque and Military”ಯಲ್ಲಿ ಅದ್ಹೇಗೆ ಪಾಕಿಸ್ತಾನ ಸರ್ಕಾರ ಮತ್ತು ಸೇನಾ ನಾಯಕತ್ವವು ಆರ್ಥಿಕ ಮತ್ತು ಮಿಲಿಟರಿ ಸಹಾಯಕ್ಕಾಗಿ ವಿದೇಶಗಳಿಗೆ “ಜಿಹಾದ್’ ಅನ್ನು ಪೂರೈಸುತ್ತಾ ಬಂದಿವೆ ಎನ್ನುವುದನ್ನು ಪುರಾವೆಗಳ ಸಮೇತ ಬರೆದಿದ್ದೇನೆ. ಪಾಕಿಸ್ಥಾನದ ಮೊದಲ ವಿತ್ತ ಸಚಿವ ಗುಲಾಮ್ ಮೊಹಮ್ಮದ್ 1949ರಲ್ಲೇ “ಸೋವಿಯತ್ ವಿರುದ್ಧ ಇಂಥ ಜಿಹಾದಿ ಗುಂಪುಗಳನ್ನು ಸೃಷ್ಟಿಸುವ’ ಬಗ್ಗೆ ಪ್ರಸ್ತಾಪವಿಟ್ಟಿದ್ದರು. ಅಫ್ಘಾನಿಸ್ಥಾನದ ಮುಜಾಹಿದ್ದೀನ್ಗಳಾದ ಬರ್ಹಾನುದ್ದಿನ್ ರಬ್ಟಾನಿ ಮತ್ತು ಗುಲಾಬುದ್ದೀನ್ ಹೆಕ್ಮ ತ್ಯಾರ್, ಸೋವಿಯತ್ ಒಕ್ಕೂಟದ ಆಕ್ರಮಣಕ್ಕಿಂತ ಆರು ವರ್ಷ ಹಿಂದೆಯೇ ಪಾಕಿಸ್ಥಾನಕ್ಕೆ ಕಾಲಿಟ್ಟಿದ್ದರು. 1979ರಲ್ಲಿ ಅಫ್ಘಾನಿಸ್ತಾನದಲ್ಲಿ ಸೋವಿಯತ್ ಆಕ್ರಮಣ ನಡೆಯಿತು. ತದ ನಂತರ ಪಾಕಿಸ್ತಾನದ ಅಂದಿನ ಸರ್ವಾಧಿಕಾರಿ ಜನರಲ್ ಜಿಯಾ ಉಲ್ ಹಕ್, ಜಿಹಾದಿಗಳನ್ನು ಬಳಸಿಕೊಂಡು ಸೋವಿಯತ್ ವಿರುದ್ಧ ಯುದ್ಧ ಸಾರುವ ಐಡಿಯಾವನ್ನು ಅಮೆರಿಕಕ್ಕೆ ಕೊಟ್ಟರೇ ಹೊರತು, ಅಮೆರಿಕ ಪಾಕಿಸ್ಥಾನಕ್ಕೆ ಈ ಐಡಿಯಾ ಕೊಟ್ಟದ್ದಲ್ಲ.
ಪಾಕಿಸ್ಥಾನದ ಜಿಹಾದಿ ಇತಿಹಾಸ 1948ರಲ್ಲೇ ಆರಂಭವಾಗುತ್ತದೆ. ಆಗ ಪಾಕಿಸ್ಥಾನ ಕಾಶ್ಮೀರದಲ್ಲಿ ಬುಡುಕಟ್ಟು ಲಷ್ಕರ್ ಸಂಘಟನೆಯ ಮೂಲಕ ಭಾರತದ ವಿರುದ್ಧ ಜಿಹಾದ್ ನಡೆಸಿತ್ತು. 1965ರಲ್ಲಿ ಫೀಲ್ಡ್ ಮಾರ್ಷಲ್ ಆಯುಭ್ ಖಾನ್, ಭಾರತದ ವಿರುದ್ಧ ಜಿಹಾದ್ ಘೋಷಿಸಿದಾಗಲೂ ಇದು ಮುಂದುವರಿಯಿತು. ಸಾವಿರ ಗಾಯಗಳಿಂದ ಭಾರತದ ರಕ್ತಹರಿಸಬೇಕು ಎಂಬ ಜುಲ್ಫಿಕರ್ ಅಲಿ ಭುಟ್ಟೋ ಘೋಷಣೆಯೂ ಇದಕ್ಕೆ ಪೂರಕವಾಯಿತು. 1971ರಲ್ಲಿ ಅಂದಿನ ಪೂರ್ವಪಾಕಿಸ್ಥಾನ(ಈಗಿನ ಬಾಂಗ್ಲಾದೇಶ)ದಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ತಿಕ್ಕುವುದಕ್ಕಾಗಿ ಪಾಕಿಸ್ಥಾನ ಮುಜಾಹಿದ್ದೀನ್ಗಳು ಮತ್ತು ರಜಾಕರರನ್ನು ಸಜ್ಜುಗೊಳಿಸಿದಾಗಲೂ ಜಿಹಾದ್ ಇತ್ತು. ಆಯುಬ್ ಖಾನ್ರ ಬ್ಯೂರೋ ಆಫ್ ನ್ಯಾಷನಲ್ ರೀಕನ್ಸ್ಟ್ರಕ್ಷನ್, ಪಾಕಿಸ್ತಾನ ಭದ್ರತಾ ಸಮಸ್ಯೆಗಳನ್ನು ಪರಿರಿಸಲು ಶತ್ರು ರಾಷ್ಟ್ರಗಳ ಮೇಲೆ “ಅನಿಯಮಿತ ಯುದ್ಧ’ ಸಾರಬೇಕು ಎಂದು ಹೇಳಿತ್ತು. ಅನಿಯಮಿತ ಯುದ್ಧವೆಂದರೆ, “ಶತ್ರುಗಳಿಗೆ ಪ್ರತಿ ದಾಳಿ ನಡೆಸಲು ಸಾಧ್ಯವಾಗದ ರೀತಿಯಲ್ಲಿ, ಅನಿರೀಕ್ಷಿತ ಸ್ಥಳಗಳಿಂದ ದಾಳಿ ಮಾಡುವುದು’ ಎಂದು ತಮ್ಮ ಪುಸ್ತಕದಲ್ಲಿ ಬರೆದಿದ್ದರು ಈ ಬ್ಯೂರೋದಲ್ಲಿದ್ದ ಹಿರಿಯ ಅಧಿಕಾರಿ ಅಸ್ಲಮ್ ಸಿದ್ದಿಕಿ. ಈ ರೀತಿಯ “ಅನಿಯಮಿತ ಯುದ್ಧ’ ಸಾರುವ ಪಾಕಿಸ್ಥಾನದ ಸಾಮರ್ಥ್ಯವನ್ನು, ಸೋವಿಯತ್ ವಿರೋಧಿ ಅಫ್ಘನ್ ಜಿಹಾದ್ ಮತ್ತಷ್ಟು ವಿಸ್ತರಿಸಿತು. ಅತ್ತ ಅಮೆರಿಕದಿಂದ, ಇತ್ತ ಮಧ್ಯ ಪ್ರಾಚ್ಯದಿಂದ ಹರಿದು ಬಂದ ಹಣವು ಪಾಕಿಸ್ಥಾನದ ಐಎಸ್ಐ (ಇಂಟರ್-ಸರ್ವಿಸಸ್ ಇಂಟೆಲಿಜನ್ಸ್)ಗೆ ಅಸಾಧಾರಣ ಶಕ್ತಿ ತುಂಬಿತು. ಆದಾಗ್ಯೂ ಅಮೆರಿಕದಿಂದ ಬಂದ ಈ ಹಣವು ಶಸ್ತ್ರಾಸ್ತ್ರಗಳು, ಮತ್ತು ಜಿಹಾದಿಗಳಿಗೆ ಒದಗಿಸಲಾಗುತ್ತಿದ್ದ ತರಬೇತಿಯ ಗುಣಮಟ್ಟವನ್ನು ಹೆಚ್ಚಿಸಿತು ಎನ್ನುವುದು ನಿಜವೇ ಆದರೂ, ಅಮೆರಿಕದ ಕಾರಣದಿಂದಾಗಿಯೇ ಪಾಕಿಸ್ತಾನ ಜಿಹಾದ್ ಆರಂಭಿಸಿತು ಎನ್ನುವುದು ಸತ್ಯವಲ್ಲ. ಇತಿಹಾಸವನ್ನು ನಿರಾಕರಿಸುವುದರಿಂದ ಮತ್ತು ಸತ್ಯವನ್ನು ಮರೆ ಮಾಚುವುದರಿಂದ ಪಾಕಿಸ್ಥಾನಕ್ಕೆ ಯಾವುದೇ ರೀತಿಯ ಲಾಭವೂ ಆಗದು. ಬದಲಾಗಿ, ದುಷ್ಪರಿಣಾಮಗಳನ್ನು ಎದುರಿಸಲೇಬೇಕಾಗುತ್ತದೆ. ಲೇಖಕರ ಕುರಿತು
ಹುಸೇನ್ ಹಕ್ಕಾನಿ 2008-2011ರವರೆಗೆ ಪಾಕಿಸ್ಥಾನದ ರಾಯಭಾರಿಯಾಗಿದ್ದವರು. ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದ ಹಕ್ಕಾನಿ, ಮೊದಲಿನಿಂದಲೂ ಪಾಕ್ ಮಿಲಿಟರಿಯನ್ನು ಟೀಕಿಸುತ್ತಾ ಬಂದವರು. “ಪಾಕಿಸ್ಥಾನಿ ಸೇನೆಯು ಉಗ್ರವಾದಿಗಳನ್ನು ಬೆಳೆಸುತ್ತಿದೆ’ ಎಂಬ ಅವರ ನಿರಂತರ ಟೀಕೆಯಿಂದ ಕೆರಳಿದ ಗುಪ್ತಚರ ಸಂಸ್ಥೆ ಐಎಸ್ಐ, 1999ರಲ್ಲಿ ಹಕ್ಕಾನಿಯವರನ್ನು ಅಪಹರಿಸಿ ಎರಡು ತಿಂಗಳು ಬಂಧನದಲ್ಲಿ ಇಟ್ಟಿತ್ತು! ಕೊನೆಗೆ, ಕೋರ್ಟ್ನ ತೀರ್ಪಿಗೆ ತಲೆಬಾಗಿ ಅವರನ್ನು ಬಿಡುಗಡೆ ಮಾಡಿತು. ಹಕ್ಕಾನಿಯವರನ್ನು ಪಾಕಿಸ್ತಾನದ ರಾಯಭಾರಿಯನ್ನಾಗಿ ನೇಮಿಸುವ ವಿಚಾರದಲ್ಲೂ ಐಎಸ್ಐ ಮತ್ತು ಮಿಲಿಟರಿಯ ವಿರೋಧವಿತ್ತು. ಈಗ ಹಕ್ಕಾನಿ ಅಮೆರಿಕದ ನಿವಾಸಿಯಾಗಿದ್ದಾರೆ. ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡುವಂತೆ ಪಾಕ್ ಸರ್ಕಾರ ಅಮೆರಿಕಕ್ಕೆ ಪದೇ ಪದೆ ವಿನಂತಿಸುತ್ತಲೇ ಇದೆ! – ಹುಸೇನ್ ಹಕ್ಕಾನಿ, ಪಾಕಿಸ್ಥಾನದ ಮಾಜಿ ರಾಯಭಾರಿ