Advertisement

ಲೆಕ್ಕ ಕೊಡದಿದ್ದರೆ ಬಿಡುವವರು ಯಾರು: ಸಿದ್ದರಾಮಯ್ಯ

05:21 AM Jul 09, 2020 | Lakshmi GovindaRaj |

ಮೈಸೂರು: ರಾಜ್ಯ ಸರ್ಕಾರ ಕೋವಿಡ್‌ 19 ಸಮಯದಲ್ಲಿ ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಕೊಡದಿದ್ದರೆ ಬಿಡುವವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ವಿರುದ್ದ ಗುಡುಗಿದರು.  ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸರ್ಕಾರ ಪಾರದರ್ಶಕ ವಾಗಿ ಕೆಲಸ ಮಾಡುತ್ತಿಲ್ಲ. ಕೋವಿಡ್‌ 19 ಸೋಂಕು ಹರಡುವುದನ್ನು ತಪ್ಪಿಸಲು ವೆಚ್ಚ ಮಾಡಿರುವ ಹಣದ ಲೆಕ್ಕ ಕೊಡಬೇಕು. ಅವರು ತಪ್ಪು  ಮಾಡದಿದ್ದರೆ ಅವರಿಗೆ ಭಯ ಏಕೆ? ಅಧಿಕಾರಿಗಳ ಬಳಿ ಸೂಕ್ತ ದಾಖಲೆಗಳನ್ನು ಕಳುಹಿಸಿ ಕೊಡಲಿ. ಇಲ್ಲವಾದರೆ ಅವರು ಭ್ರಷ್ಟಾಚಾರ ಒಪ್ಪಿಕೊಂಡಂತೆ ಎಂದು ಹೇಳಿದರು.

Advertisement

ಹೆಚ್ಚು ಟೆಸ್ಟ್‌ ಮಾಡುತ್ತಿಲ್ಲ: ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೆಚ್ಚು ಜನರಿಗೆ ಪರೀಕ್ಷೆ ಮಾಡಿದರೆ ಹೆಚ್ಚು ಪಾಸಿಟಿವ್‌ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಆದರೆ, ಅಲ್ಲಿ ಹೆಚ್ಚು ಪರೀಕ್ಷೆಗಳನ್ನು ಮಾಡುತ್ತಿಲ್ಲ. ಸರ್ಕಾರ  ಕೋವಿಡ್‌ 19 ನಿಯಂತ್ರಣದಲ್ಲಿ ಸೋತಿದೆ. ರಾಜ್ಯ ಸರ್ಕಾರ ಜನರಿಗೆ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದೆ. ಆದರೆ ಅಂತಹ ವಾತಾವರಣ ನಿರ್ಮಾಣವಾಗಿಲ್ಲ. ಅವರಿಗೆ ಕೆಲಸ ಅಥವಾ ಹಣ ಕೊಡಬೇಕು,  ಮೂಲಸೌಕರ್ಯ ಸೇರಿದಂತೆ ಸೋಂಕಿನಿಂದ ಸುರಕ್ಷತೆ ಒದಗಿಸಬೇಕು. ಏನನ್ನೂ ಮಾಡದಿದ್ದರೆ ಜನರು ಬೆಂಗಳೂರು ಬಿಟ್ಟು ಹೋಗುತ್ತಾರೆ ಎಂದು ಹೇಳಿದರು.

ನಾನು ವಿಶ್ರಾಂತಿಗಷ್ಟೇ ಬಂದಿದ್ದೆ: ನಾನು ಮೈಸೂರಿನಲ್ಲಿದ್ದ ಮಾತ್ರಕ್ಕೆ ಕ್ವಾರೆಂಟೈನಲ್ಲಿದ್ದೇನೆ ಎಂದು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಆದ್ದರಿಂದ ಬೆಂಗಳೂರಿಗೆ ಹೊರಡುತ್ತಿದ್ದೇನೆ. ನಾನು ಕೆಲವು ದಿನಗಳ ಕಾಲ ವಿಶ್ರಾಂತಿಗಾಗಿ ಬಂದಿದ್ದೆ  ಅಷ್ಟೆ. ಅದನ್ನು ಬಿಟ್ಟರೆ ಬೇರೆ ಯಾವ ಕಾರಣಗಳೂ ಇಲ್ಲ. ನಾನು ಕ್ವಾರೆಂಟೈನಲ್ಲಿ ಇದ್ದೆ ಎಂದುಕೊಳ್ಳಬೇಕಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಲಾಕ್‌ಡೌನ್‌ ಪ್ರಯೋಜನವೇನು?: ಕೇಂದ್ರ ಸರ್ಕಾರ ತಪ್ಪು ಸಮಯದಲ್ಲಿ ಲಾಕ್‌ ಡೌನ್‌ ಮಾಡಿದೆ. ಈಗ ಲಾಕ್‌ಡೌನ್‌ ಅವಶ್ಯಕತೆ ಇತ್ತು. ಈಗ ಆರ್ಥಿಕತೆಯ ನೆಪವೊಡ್ಡಿ ಲಾಕ್‌ ಡೌನ್‌ ಮಾಡುತ್ತಿಲ್ಲ. ಆರ್ಥಿಕತೆಗಿಂತ ಜೀವ ಮುಖ್ಯ.  ಮಾ.24ರಂದು ಭಾರತದಲ್ಲಿ 536 ಮಂದಿ ಸೋಂಕಿತರಿದ್ದರು. 10 ಜನರು ಮೃತರಾಗಿದ್ದರು. ಈಗ ಸೋಂಕಿತರ ಸಂಖ್ಯೆ 7 ಲಕ್ಷಕ್ಕೂ ಹೆಚ್ಚಿದೆ. ಮೃತರ ಸಂಖ್ಯೆಯೂ ಹೆಚ್ಚುತ್ತಿದೆ. ಲಾಕ್‌ಡೌನ್‌ ಮಾಡಿದ ಬಳಿಕ ನಮಗೆ ಆದ ಪ್ರಯೋಜನವಾದರೂ  ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next