Advertisement

ರಾಜ್ಯದಲ್ಲಿ ಮೈತ್ರಿ ಆಸೆ ಕೈ ಚೆಲ್ಲಿದ ಕಾಂಗ್ರೆಸ್‌?

11:42 PM Dec 08, 2019 | Team Udayavani |

ಬೆಂಗಳೂರು: ಉಪ ಚುನಾವಣೆ ಫ‌ಲಿತಾಂಶದ ಬಳಿಕ ಸರ್ಕಾರವನ್ನು ಭದ್ರಪಡಿಸಿಕೊಳ್ಳುವ ಅತೀವ ಉಮೇದಿನಲ್ಲಿ ಬಿಜೆಪಿ ಪಾಳಯ ಇದ್ದರೆ, ಹಳೇ ದೋಸ್ತಿ ಮುಂದುವರಿಯಬಹುದು ಅನ್ನುವ ನಿರೀಕ್ಷೆಯಿಟ್ಟುಕೊಂಡಿದ್ದ ಕಾಂಗ್ರೆಸ್‌ ಪಾಳೆಯ ಆ ಆಸೆಯನ್ನು ಸದ್ಯಕ್ಕೆ ಕೈಚೆಲ್ಲಿದಂತಿದೆ. ಮತದಾನೋತ್ತರ ಸಮೀಕ್ಷೆ ಹೊರ ಬಂದ ನಂತರ ಕಾಂಗ್ರೆಸ್‌ ನಾಯಕರಲ್ಲಿ ಒಂದು ರೀತಿಯ ಮೌನ ಮನೆ ಮಾಡಿದೆ.

Advertisement

ಕನಿಷ್ಠ 8ರಿಂದ 9 ಸ್ಥಾನಗಳನ್ನು ಗೆಲ್ಲುತ್ತೇವೆಂಬ ಕಾಂಗ್ರೆಸ್‌ ಲೆಕ್ಕಾಚಾರ ತಲೆಕೆಳಗಾಗಿರುವಂತೆ ಕಾಣುತ್ತಿದೆ. ಈಗ ಹುಣಸೂರು, ಕಾಗವಾಡ, ಅಥಣಿ, ರಾಣಿಬೆನ್ನೂರು ಬಗ್ಗೆ ಮಾತ್ರ ಆಶಾಭಾವನೆ ಹೊಂದಿದ್ದು, ಶಿವಾಜಿನಗರದಲ್ಲಿ ಅಚ್ಚರಿ ಫ‌ಲಿತಾಂಶದಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಲಿದೆ ಎಂಬ ವಿಶ್ವಾಸ ಇಟ್ಟುಕೊಂಡಿದೆ. ಉಳಿದ ಕಡೆ ಅಂತಹ ಯಾವ ಲಕ್ಷಣಗಳೂ ಕಾಂಗ್ರೆಸ್‌ ಪಕ್ಷಕ್ಕೆ ಸದ್ಯಕ್ಕಂತೂ ಕಾಣುತ್ತಿಲ್ಲ.

ಕಾಂಗ್ರೆಸ್‌ನಲ್ಲಿ “ಆಂತರಿಕ ಧೃವೀಕರಣ’ ಸಾಧ್ಯತೆ: ಅಷ್ಟಕ್ಕೂ, ಸೋಮವಾರ ಹೊರಬೀಳಲಿರುವ ಫ‌ಲಿತಾಂಶದಿಂದ ಎಲ್ಲಾ ಅಂತೆ-ಕಂತೆಗಳಿಗೆ ತೆರೆ ಬೀಳಲಿದ್ದು, ಇದೇ ವೇಳೆ ಕಾಂಗ್ರೆಸ್‌ ಪಕ್ಷದಲ್ಲಿ “ಆಂತರಿಕ ಧೃವೀಕರಣ’ ಆಗುವ ಸಾಧ್ಯತೆಗಳನ್ನು ಅಲ್ಲಗಳೆ ಯುವಂತಿಲ್ಲ. ಪ್ರತಿಪಕ್ಷ ನಾಯಕನ ಸ್ಥಾನಪಲ್ಲಟ, ಕೆಪಿಸಿಸಿ ಅಧ್ಯಕ್ಷರ ತಲೆದಂಡ ಚರ್ಚೆಗಳು ಮುನ್ನೆಲೆಗೆ ಬರಲಿದ್ದು, ಜತೆಗೆ ಪಕ್ಷ ಸೋತರೆ ಯಾರನ್ನು ಹೊಣೆ ಮಾಡಬೇಕು, ಗೆದ್ದರೆ ಯಶಸ್ಸಿನ ಕಿರೀಟ ಯಾರಿಗೆ ಮುಡಿಸಬೇಕೆಂಬ ಚರ್ಚೆಗಳು ಕಾಂಗ್ರೆಸ್‌ ಪಾಳೆಯದಲ್ಲಿ ಜೋರಾಗಲಿವೆ.

ಮೂಲ ಮತ್ತು ವಲಸಿಗರ ಸೆಣಸಾಟ ಸಹ ಹೆಚ್ಚಾಗಲಿದೆ. ಈ ಮಧ್ಯೆ, ಹೈಕಮಾಂಡ್‌ಗೆ “ವರದಿ ಒಪ್ಪಿಸುವ’ ಪೈಪೋಟಿಯೂ ನಡೆಯಲಿದೆ ಎಂಬ ಮಾತುಗಳು ಪಕ್ಷದ ಆಂತರಿಕ ವಲಯದಲ್ಲಿ ಕೇಳಿ ಬರುತ್ತಿವೆ. ಮತ್ತೂಂದು ಕಡೆ, ಉಪ ಚುನಾವಣೆ ಬಳಿಕ ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆ, ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆ ಎಂಬ ಸಿದ್ದರಾಮಯ್ಯ ನವರ ಪ್ರತಿಪಾದನೆ, ಸಿದ್ದರಾಮಯ್ಯ ಏಕಾಂಗಿ ಎಂಬ ಬಿಜೆಪಿಯವರ ಮೂದಲಿಕೆ, ಉಪ ಚುನಾವಣೆ ಬಳಿಕ ಸರ್ಕಾರ ಇರುತ್ತದೆ.

ಆದರೆ, ಯಾವ ಸರ್ಕಾರ ಎಂದು ಡಿ.9ರ ಬಳಿಕ ಹೇಳುತ್ತೇನೆಂಬ ಎಚ್‌.ಡಿ. ಕುಮಾರ ಸ್ವಾಮಿಯವರ ಭವಿಷ್ಯವಾಣಿ, ಅನರ್ಹರನ್ನು ಸೋಲಿ ಸಲು ಕಾಂಗ್ರೆಸ್‌-ಜೆಡಿಎಸ್‌ ಒಳ ಒಪ್ಪಂದ ಮಾಡಿ ಕೊಂಡಿವೆ ಅನ್ನುವ ಪುಕಾರು, ದೋಸ್ತಿ ಬಗ್ಗೆ ಎಚ್‌.ಡಿ. ದೇವೇಗೌಡರು ಆಡಿದ ಮಾತು, ಫ‌ಲಿತಾಂಶದ ಬಳಿಕ ನಮಗಿರುವುದು ಎರಡೇ ಆಯ್ಕೆ, ಒಂದು ಪ್ರತಿಪಕ್ಷದಲ್ಲಿ ಕೂರುವುದು, ಇಲ್ಲವೇ ಜೆಡಿಎಸ್‌ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಎಂಬ ಡಾ.ಪರಮೇಶ್ವರ್‌ ಅವರ ಹೇಳಿಕೆ, ಡಿ.9ರ ಬಳಿಕ ನಿಮಗೆ ಸಿಹಿ ಸುದ್ದಿ ಸಿಗಲಿದೆ ಎಂಬ ಮಲ್ಲಿಕಾರ್ಜುನ ಖರ್ಗೆಯವರ “ಆಶಾವಾಣಿ’ ಇದಕ್ಕೆಲ್ಲಾ ಸೋಮವಾರದ ಫ‌ಲಿತಾಂಶ ಉತ್ತರ ನೀಡಲಿದೆ.

Advertisement

ಲೆಕ್ಕಾಚಾರ ಬದಲಿಸಿದ “ಮೈತ್ರಿ’ ಮಾತು: ಉಪ ಸಮರ ಗೆಲ್ಲೋದು ನಾವೇ ಎಂದು ರಣರಂಗಕ್ಕೆ ಇಳಿದ ಕಾಂಗ್ರೆಸ್‌, ಚುನಾವಣಾ ಪ್ರಚಾರದ ಮೊದಲಾರ್ಧದಲ್ಲಿ ಅಷ್ಟೇನೂ ಉತ್ಸಾಹ, ಸಂಘಟಿತ ಪ್ರಯತ್ನ ನಡೆಸಿದಂತೆ ಕಂಡು ಬಂದಿಲ್ಲ. ಆದರೆ, ದೇವೇಗೌಡರು ಮೈತ್ರಿ ದಾಳ ಉರುಳಿಸುತ್ತಿದ್ದಂತೆ ಸಿಎಂ ಪಟ್ಟಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ತೇಲಿ ಬರುತ್ತಿದ್ದಂತೆ, ಪ್ರಚಾರ ಗರಿಗೆದರಿತು. ಪ್ರಚಾರದ ಕೊನೆಯಾರ್ಧದಲ್ಲಿ ಕಣ ದಲ್ಲಿ ಕಾಂಗ್ರೆಸ್‌ನ ಘಟಾನುಘಟಿಗಳು ಒಟ್ಟೊಟ್ಟಿಗೆ ಕಂಡು ಬಂದರು. ನಮಗೆ ಬಿಜೆಪಿಯಷ್ಟೇ ಜೆಡಿಎಸ್‌ ಸಹ ರಾಜಕೀಯವಾಗಿ ಶತ್ರು ಎಂಬ ಸಿದ್ದರಾಮಯ್ಯ ನವರ ಮಾತು ಮೈತ್ರಿಯ ಕನಸಿಗೆ ಭಂಗ ತಂದಿತು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅಷ್ಟಕ್ಕೂ, ಮೈತ್ರಿಯ ಮಾತೇ ಗೆಲ್ಲುವ ಸ್ಥಾನಗಳು, ಗೆಲ್ಲುವ ಲೆಕ್ಕಾಚಾರಕ್ಕೆ ಹಿನ್ನಡೆ ತಂದಿತು ಅನ್ನುವ ಮಾತುಗಳು ಕಾಂಗ್ರೆಸ್‌ ಪಡಸಾಲೆಯಲ್ಲಿ ಕೇಳಿ ಬಂದಿವೆ. ಏಕೆಂದರೆ, ಶಾಸಕರ ಅನರ್ಹತೆಯ ವಿಚಾರ ಇಟ್ಟುಕೊಂಡು ಪ್ರಚಾರ ಮಾಡಿದ್ದಿದ್ದರೆ ಹೆಚ್ಚು ಸ್ಥಾನ ಗೆಲ್ಲಬಹುದಿತ್ತು. ಆದರೆ, ಚುನಾವಣಾ ಪ್ರಚಾರದ ಕೊನೆ ಯಾರ್ಧದಲ್ಲಿ ಕೇಳಿ ಬಂದ ಮೈತ್ರಿಯ ಮಾತುಗಳು ಲೆಕ್ಕಾಚಾರ “ಕೈ’ ತಪ್ಪುವಂತೆ ಮಾಡಿತು. ಇದು ಬಿಜೆಪಿಗೆ ಇನ್ನಷ್ಟು ಪೂರಕ ವಾತಾವರಣ ನಿರ್ಮಿಸಿಕೊಟ್ಟಿತು. ಜೆಡಿಎಸ್‌ ನಾಯಕರು ಉದ್ದೇಶಪೂರ್ವಕವಾಗಿಯೇ ಕೊನೇ ಹಂತದಲ್ಲಿ ಮೈತ್ರಿ ಮಾತುಗಳನ್ನು ತೇಲಿ ಬಿಟ್ಟರು ಎಂಬುದು ಕಾಂಗ್ರೆಸ್‌ ನಾಯಕರ ವಾದವಾಗಿದೆ.

ಕೆಪಿಸಿಸಿ ಅಧ್ಯಕ್ಷರ ತಲೆದಂಡ?: ಫ‌ಲಿತಾಂಶ ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆ ತಂಡು ಕೊಟ್ಟರೂ ಸದ್ಯಕ್ಕೆ ಪ್ರತಿಪಕ್ಷ ನಾಯಕನ ಸ್ಥಾನ ಪಲ್ಲಟ ಆಗುವ ಸಾಧ್ಯತೆಗಳು ಕಡಿಮೆ. ಆದರೆ, ಕೆಪಿಸಿಸಿ ಅಧ್ಯಕ್ಷರ “ತಲೆದಂಡ’ಕ್ಕೆ ಒತ್ತಡ ಹೆಚ್ಚಾಗಬಹುದು. ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಸಿಗದಿದ್ದಾಗ “ನೈತಿಕ’ ಹೊಣೆ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ರಾಜೀನಾಮೆ ಕೊಡಲು ಮುಂದಾಗಿದ್ದರು. ಬಳಿಕ, ಹೈಕಮಾಂಡ್‌ ಸೂಚಿಸಿದರೆ ರಾಜೀನಾಮೆ ಕೊಡುತ್ತೇನೆಂದು ಉಲ್ಟಾ ಹೊಡೆದಿದ್ದರು. ಇದೇ ವೇಳೆ, ರಾಜೀನಾಮೆ ಕೊಟ್ಟು ಬಿಜೆಪಿ ಸೇರಿ ಉಪ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಶಾಸಕರ ಪೈಕಿ ಬಹುತೇಕ ಮಂದಿ ದಿನೇಶ್‌ ಗುಂಡೂರಾವ್‌ ವಿರುದ್ಧ ಹರಿಹಾಯ್ದಿದ್ದರು.

* ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next