Advertisement
ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಂಡಿದ್ದರ ಫಲವಾಗಿ ಹಲವೆಡೆ ಬಿಜೆಪಿಗೆ ಅನುಕೂಲವಾಗಿದೆ ಎಂಬುದು ಎಷ್ಟು ಸತ್ಯವೋ, ಅಂಥ ಕ್ಷೇತ್ರಗಳಲ್ಲಿ ಬಿಜೆಪಿಯ ಸ್ವಂತ ಶಕ್ತಿ ಎಷ್ಟರ ಮಟ್ಟಿಗೆ ಕುಸಿದಿದೆ? ಅದನ್ನು ಮೇಲೆಕ್ಕೆತ್ತುವುದು ಹೇಗೆ? ಒಂದು ವೇಳೆ ಜೆಡಿಎಸ್ ಆಶ್ರಯ ಇಲ್ಲದಿದ್ದರೆ ಇನ್ನಷ್ಟು ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಿತ್ತೇ ಎನ್ನುವುದನ್ನೂ ಆಲೋಚಿಸಬೇಕಿದೆ.
ಕೇಂದ್ರ ಸಚಿವರಾಗಿದ್ದ ಭಗವಂತ್ ಖೂಬಾ ಬಿಜೆಪಿ ಶಾಸಕರ ವಿರೋಧದ ನಡುವೆಯೂ ಬೀದರ್ನಿಂದ ಟಿಕೆಟ್ ಗಿಟ್ಟಿಸಿಕೊಂಡಿದ್ದರು. ಕಣಕ್ಕಿಳಿಯಲು ಆಸಕ್ತರಾಗಿದ್ದ ಶಾಸಕ ಪ್ರಭು ಚವ್ಹಾಣ್ರನ್ನು ಬಿಜೆಪಿ ಶಾಸಕರನೇಕರು ಬೆಂಬಲಿಸಲು ಸಿದ್ಧರಿದ್ದರು. ಆದರೂ 2 ಬಾರಿ ಸಂಸದರಾಗಿದ್ದ ಖೂಬಾಗೆ 3ನೇ ಬಾರಿ ಅವಕಾಶ ಮಾಡಿಕೊಡಲಾಗಿತ್ತು. 2019ರಲ್ಲಿ 5,85,471 ಮತಗಳನ್ನು ಪಡೆದಿದ್ದ ಖೂಬಾ ಈ ಬಾರಿ 5,37,442 ಮತಗಳನ್ನಷ್ಟೇ ಪಡೆದಿದ್ದು, ಉಳಿದ 48,029 ಮತಗಳು ಎಲ್ಲಿ ಹೋದವು ಎಂಬುದರ ಚಿಂತನೆ ನಡೆಯಬೇಕಿದೆ. ರಾಮುಲು ಆಯ್ಕೆ ಸರಿಯೇ?
ಬಳ್ಳಾರಿಯಲ್ಲಿ ಶ್ರೀರಾಮುಲು 6,31,853 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ನ ಈ. ತುಕಾರಾಂ ಎದುರು 7,889 ಮತಗಳ ಅಂತರದಿಂದ ಸೋತಿದ್ದಾರೆ. ವಿಧಾನಸಭೆ ಚುನಾವಣೆಯಲ್ಲೂ ಸೋತ ರಾಮುಲು ಆಯ್ಕೆ ಸರಿಯೇ ಎಂಬುದೀಗ ಬಳ್ಳಾರಿ ಬಿಜೆಪಿಯ ಪಡಸಾಲೆಯಲ್ಲಿ ಚರ್ಚೆಗೊಳಗಾಗಿದೆ.
Related Articles
Advertisement
ಕೊಪ್ಪಳದಲ್ಲಿ ಎರಡು ಬಾರಿ ಗೆದ್ದಿದ್ದ ಕರಡಿ ಸಂಗಣ್ಣರನ್ನು ಬದಲಿಸಿದ್ದೂ ಅಲ್ಲದೆ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಪ್ರಯೋಗ ಫಲಿಸಿಲ್ಲ. ರಾಯಚೂರಿನಲ್ಲಿ ಜೆಡಿಎಸ್ ಕರೆಮ್ಮ ಹಾಗೂ ಇಬ್ಬರು ಬಿಜೆಪಿ ಶಾಸಕರಿದ್ದರೂ ಬಿ.ವಿ. ನಾಯಕ್ ಬದಲಿಗೆ ಮತ್ತೆ ರಾಜಾ ಅಮರೇಶ್ವರ್ ನಾಯಕ್ಗೆ ಮಣೆ ಹಾಕಿದ್ದು ಮುಳುವಾದಂತಿದೆ. ಶ್ರೀನಿವಾಸ ಪ್ರಸಾದ್ ಗೆದ್ದಿದ್ದ ಚಾಮರಾಜನಗರವನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಾ| ಸಿ.ಎನ್. ಮಂಜುನಾಥ್ ಗೆದ್ದಿದ್ದೊಂದೇ ಬಿಜೆಪಿಗೆ ಲಾಭ.