Advertisement

ಅಂಗನವಾಡಿ ಕೇಂದ್ರ ನಿರ್ಮಾಣ ಯಾವಾಗ?

06:16 PM May 21, 2022 | Team Udayavani |

ಚೇಳೂರು: 50 ವರ್ಷಗಳ ಹಿಂದೆ ಪಾಳು ಬಿದ್ದಿದ್ದ ಕಟ್ಟಡವನ್ನು ಎ. ಅಂಗನವಾಡಿಗೆ ನೀಡಿ, ಕಟ್ಟಡ ಬಿದ್ದು ಹೋಗುವ ಸ್ಥಿತಿ ತಲುಪಿದ್ದು, ಮುಗ್ಧ ಮಕ್ಕಳು ಅದರಲ್ಲೆ ಪಾಠಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಇದು ಚೇಳೂರು ತಾಲೂಕಿನ ಪಾಳ್ಯಕೆರೆ ಗ್ರಾಪಂನ ಎ. ಅಂಗನವಾಡಿ ಕೇಂದ್ರದ ಚಿಂತಾಜನಕ ಕಥೆ. ತಾಲೂಕಿನಲ್ಲಿ ಪಾಳ್ಯಕೆರೆ ಗ್ರಾಪಂ ಪ್ರಮುಖ ಕೇಂದ್ರ ಸ್ಥಾನ. 50 ವರ್ಷಗಳಿಂದೆ ಪ್ರಯಾಣಿಕರ ಆಶ್ರಯಧಾಮಕ್ಕೆಂದು ಇದ್ದ ಕಲ್ಲು ಕಟ್ಟಡವನ್ನು ಸರ್ಕಾರಿ ಶಾಲೆಗೆ ನೀಡಲಾಯಿತು. ಕಾಲ ಕ್ರಮೇಣ ಶಾಲೆಯ ಕಲ್ಲು ಕಟ್ಟಡ ಶಿಥಿಲಾವಸ್ಥೆ ತಲುಪಿತು. 15 ವರ್ಷ ಅದು ಖಾಲಿಯಿತ್ತು. 36 ವರ್ಷದ ಹಿಂದೆ ಈ ಕಟ್ಟಡದಲ್ಲಿ ಪಾಳ್ಯಕೆರೆ ಎ. ಅಂಗನವಾಡಿ ಕೇಂದ್ರ ಪ್ರಾರಂಭಿಸಲಾಯಿತು. ಈಗ ಈ ಕಟ್ಟಡ ಶಿಥಿಲಾವಸ್ತೆ ತಲುಪಿದ್ದು, ಅವಘಡಕ್ಕೆ ಆಹ್ವಾನ ನೀಡುತ್ತಿದೆ.ಅವಘಡ ಸಂಭವಿಸುವ ಮುನ್ನ ತೆರವು ಮಾಡಿ ಸೂಕ್ತ ಕಟ್ಟಡ ನಿರ್ಮಾಣ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಅನೇಕ ಸಮಸ್ಯೆ: ಪಾಳ್ಯಕೆರೆ ಎ. ಅಂಗನವಾಡಿ ಕೇಂದ್ರದಲ್ಲಿ ಇಬ್ಬರು ಕಾರ್ಯಕರ್ತೆ, ಸಹಾಯಕಿಯರು ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರದಲ್ಲಿ ಕುಡಿವ ನೀರಿಗೂ ಅವ್ಯವಸ್ಥೆ. ಅವೈಜ್ಞಾನಿಕ ಕಾಮಗಾರಿಯಿಂದ ನೀರಿಗಾಗಿ ಪರದಾಟ, ಶೌಚಾಲಯದ ಅವ್ಯವಸ್ಥೆ, ಶಾಲಾ ಆವರಣದ ಚರಂಡಿ ಅಸ್ವತ್ಛತೆಯಿಂದ ಮಕ್ಕಳಿಗೆ ಸಾಂಕ್ರಾಮಿಕ ರೋಗಭೀತಿ ಎದುರಾಗಿದೆ.

ಎ. ಅಂಗನವಾಡಿ ಕೇಂದ್ರದಲ್ಲಿ 15-20 ಜನ ಮಕ್ಕಳು ಸೇರಿದಂತೆ, 10 ಜನ ಮಹಿಳಾ ಗರ್ಭಿಣಿಯರು, 05 ಬಾಣಂತಿಯರು, ಕಿಶೋರಿಯರು 15 ಕ್ಕೂ ಹೆಚ್ಚು ಜನ ಎ. ಅಂಗನವಾಡಿ ಕೇಂದ್ರಕ್ಕೆ ಬಂದು ಹೋಗುತ್ತಿರುತ್ತಾರೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಎ. ಅಂಗನವಾಡಿ ಕೇಂದ್ರದ ಮೇಲ್ಚಾವಣೆ ಪೂರ್ಣ ನೆಂದು ಸೋರುವ ಹಂತ ತಲುಪಿದೆ. ಇದರಿಂದ ಪುಸ್ತಕಗಳು, ಸಾಮುಗ್ರಿಗಳು, ಆಹಾರ ಧಾನ್ಯಗಳು ದುರ್ವಾಸನೆ ಹೊಡೆಯುತ್ತಿವೆ. ಕಲ್ಲುಕಟ್ಟಡ ಮಳೆ ಕಾಲದಲ್ಲಿ ಕುಸಿಯುವ ಹಂತ ತಲುಪಿದ್ದು ಕ್ರಮವಹಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪಾಳ್ಯಕೆರೆ ಗ್ರಾಮದ ಎ. ಅಂಗನವಾಡಿ ಕೇಂದ್ರ ಶಿಥಿಲಾವಸ್ಥೆ ತಲುಪಿದ್ದು, ಅದನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಿಸಬೇಕು. ಎ. ಅಂಗನವಾಡಿ ಸ್ಥಳವನ್ನು
ಬದಲಾಯಿಸಿ, ಇಲ್ಲಿ ಗ್ರಂಥಾಲಯ ನಿರ್ಮಿಸಬೇಕಾಗಿದೆ. ಈ ಬಗ್ಗೆ ಗ್ರಾಪಂ ಮತ್ತು ಎ. ಅಂಗನವಾಡಿ ಇಲಾಖಾಧಿಕಾರಿಗಳಿಗೆ ಹಲವು ಬಾರಿ ತಿಳಿಸಲಾಗಿದೆ. ಈಗ ಮಳೆಗಾಲ ಶುರುವಾಗಿದ್ದು, ಅವಘಡ ಸಂಭವಿಸಿದರೆ ಸರ್ಕಾರವೇ ನೇರ ಹೊಣೆ.
● ಪಿ.ವಿ.ವೆಂಕಟರೆಡ್ಡಿ, ಪಾಳ್ಯಕೆರೆ ಗ್ರಾಪಂ ಹಿರಿಯ ಮುಖಂಡ

Advertisement

ಖಾಲಿ ಜಾಗ ವ್ಯವಸ್ಥೆ ಮಾಡಿದರೆ ಎ. ಅಂಗನವಾಡಿ ಕೇಂದ್ರ ನಿರ್ಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು. ಸ್ಥಳ ನೀಡುವಂತೆ ಪಾಳ್ಯಕೆರೆ ಗ್ರಾಪಂನ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಟ್ಟಡ ಕುಸಿದರೆ ಪಂಚಾಯ್ತಿಯೇ ನೇರ ಹೊಣೆ.
● ಈರಮ್ಮ ಸಿದ್ರಾಮಪ್ಪ ವಂದಾಲ, ಮೇಲ್ವಿಚಾರಕರು ಚೇಳೂರು ವೃತ್ತ

Advertisement

Udayavani is now on Telegram. Click here to join our channel and stay updated with the latest news.

Next