Advertisement

ಬಿಜೆಪಿ ಅಧಿಕಾರಕ್ಕೆ ಬಂದ್ರೆ ರೈತರ ಸಾಲ ಮನ್ನಾ

12:47 PM May 04, 2018 | Team Udayavani |

ಚಿತ್ರದುರ್ಗ: ರಾಜ್ಯದ ಸರ್ವತೋಮುಖ ಅಭಿವೃದ್ಧಿ ಹಾಗೂ ಜನರ ಕಷ್ಟ ನೀಗಿಸಲು ಬಿಜೆಪಿ ಹತ್ತು ಹಲವು ಯೋಜನೆ ರೂಪಿಸಿದೆ. ಇದನ್ನೆಲ್ಲ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಅಳವಡಿಸಲಾಗಿದ್ದು, ಪ್ರಣಾಳಿಕೆಯನ್ನು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಬಿಡುಗಡೆ ಮಾಡಲಾಗುವುದು. ಪಕ್ಷ ಅಧಿಕಾರಕ್ಕೆ ಬಂದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

Advertisement

ತಾಲೂಕಿನ ಹಿರೇಗುಂಟನೂರು ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.  ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳಿಗೆ ಹೊಸ ಯೋಜನೆ, ಭಾಗ್ಯಲಕ್ಷ್ಮಿ, ವೃದ್ಧಾಪ್ಯ ವೇತನ ಹೆಚ್ಚಿಸಲಾಗುವುದು. 

ಮುಸುಕಿನ ಜೋಳಕ್ಕೆ 1500 ರೂ. ಬೆಂಬಲ ಬೆಲೆ ನಿಗದಿಪಡಿಸಿ ರೈತರ ಉತ್ಪನ್ನಗಳಿಗಾಗಿ 5 ಸಾವಿರ ಕೋಟಿ ರೂ. ಮೀಸಲಿಡಲಾಗುವುದು. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಒಂದು ಲಕ್ಷ ಕೋಟಿ ರೂ. ಅನ್ನು ಕೇಂದ್ರದಿಂದ ತರಲಾಗುವುದು. ರೈತರಿಗೆ ನಿರಂತರವಾಗಿ 10 ಗಂಟೆಗಳ ಕಾಲ ವಿದ್ಯುತ್‌ ಪೂರೈಕೆ ಮಾಡಲಾಗುವುದು. ಬಡವರ ಮದುವೆಗೆ ತಾಳಿ ಹಾಗೂ ಮದುವೆಯ ಅರ್ಧ ಖರ್ಚು ನೀಡಲಾಗುವುದು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್‌ ಮಕ್ಕಳನ್ನು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ. ಯಾರ್ಯಾರಿಗೆ ಏನೇನು ಸೌಲಭ್ಯ ನೀಡಲಿದ್ದೇವೆ ಎಂಬುದು ಪ್ರಣಾಳಿಕೆ ಬಿಡುಗಡೆ ನಂತರ ತಿಳಿಯಲಿದೆ. ಎಲ್ಲವನ್ನೂ ಇಲ್ಲಿಯೇ ಹೇಳಿದರೆ ಕುತೂಹಲ ಇರುವುದಿಲ್ಲ ಎಂದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಹಾಗೂ ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಸೋಲುವುದು ನಿಶ್ಚಿತ. ಅದೇ ರೀತಿ ಶ್ರೀರಾಮುಲು ಮೊಳಕಾಲ್ಮೂರು ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಗೆಲ್ಲುವುದು ಖಚಿತ. ಸಿದ್ದರಾಮಯ್ಯ, ಡಾ| ಜಿ. ಪರಮೇಶ್ವರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಒಟ್ಟಾಗಿ ಪ್ರಚಾರ ನಡೆಸಿದರೂ ಕಾಂಗ್ರೆಸ್‌ ಪಕ್ಷ ಗೆಲ್ಲುವುದಿಲ್ಲ. ಈ ಚುನಾವಣೆಯಲ್ಲಿ ಕರ್ನಾಟಕ ಮುಕ್ತ ಕಾಂಗ್ರೆಸ್‌ ಆದರೆ ಭಾರತ ಮುಕ್ತ ಕಾಂಗ್ರೆಸ್‌ ಕನಸು ನನಸಾಗುತ್ತದೆ ಎಂದರು.

ಚುನಾವಣಾ ಪ್ರಚಾರದ ವೇಳೆ ವೈಯಕ್ತಿಕ ನಿಂದನೆ ಮಾಡಬೇಡಿ ಎಂಬ ಸಿರಿಗೆರೆ ಶ್ರೀಗಳ ಅಭಿಪ್ರಾಯಕ್ಕೆ ನಾವು ಬದ್ಧರಾಗಿದ್ದೇವೆ. ಅದೇ ರೀತಿ ನಡೆದುಕೊಳ್ಳುತ್ತೇವೆ ಎಂದು ಹೇಳಿದರು. 

ಪ್ರತ್ಯೇಕ ಧರ್ಮದ ಹೆಸರಲ್ಲಿ ವೀರಶೈವ-ಲಿಂಗಾಯತರೆಂದು ಬೆಂಕಿ ಹಚ್ಚುವ ಕೆಲಸ ಮಾಡಿದವರಿಗೆ ಉತ್ತರ ಕೊಡುವ ಚುನಾವಣೆ ಇದು. ಮೇ 17 ರಂದು ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವುದು ನೂರಕ್ಕೆ ನೂರು ನಿಶ್ಚಿತ. ನಮ್ಮ ಗುರಿಯಾದ 150 ಸ್ಥಾನಗಳನ್ನು ಗೆಲ್ಲಲಿದ್ದೇವೆ. ಇದರಲ್ಲಿ ಅನುಮಾನ ಬೇಡ ಎಂದು ತಿಳಿಸಿದರು.

Advertisement

ಯಾವುದೇ ಸಮೀಕ್ಷೆಗಳು ಏನೇ ಹೇಳಲಿ, ಅದಕ್ಕೆಲ್ಲ ತಲೆಕೆಡಿಸಿಕೊಳ್ಳುವುದಿಲ್ಲ. ಉತ್ತರಪ್ರದೇಶದ ಚುನಾವಣಾ ಸಮೀಕ್ಷೆ ತಲೆಕೆಳಗಾಗಿತ್ತು. ಕರ್ನಾಟಕದಲ್ಲೂ ಅದೇ ರೀತಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚಿತ್ರದುರ್ಗದಲ್ಲಿ ಸ್ಪರ್ಧಿಸಿರುವುದು ತಿಪ್ಪಾರೆಡ್ಡಿ ಅಲ್ಲ, ಯಡಿಯೂರಪ್ಪ ಅಭ್ಯರ್ಥಿ ಎಂದೇ ಭಾವಿಸಿ ಮತ ಚಲಾಯಿಸಿ. ತಿಪ್ಪಾರೆಡ್ಡಿ ಶಾಸಕರಾಗುವುದು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗಿಸಲು. ತಿಪ್ಪಾರೆಡ್ಡಿಯವರೇ, ನೀವು ಧೈರ್ಯವಾಗಿ ಪ್ರಚಾರ ನಡೆಸಿ. 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತೀರಿ ಎಂದು ಆತ್ಮಸ್ಥೈರ್ಯ ತುಂಬಿದರು.
 
ಇದೇ ಸಂದರ್ಭದಲ್ಲಿ ಬಿ.ಟಿ. ಸಿದ್ದೇಶ್‌ ಹಾಗೂ ಸುನೀತಾ ಮಲ್ಲಿಕಾರ್ಜುನ್‌ ಬಿಜೆಪಿಗೆ ಸೇರ್ಪಡೆಯಾದರು. ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್‌. ನವೀನ್‌, ಸಿದ್ದೇಶ್‌ ಯಾದವ್‌, ಟಿ.ಜಿ. ನರೇಂದ್ರನಾಥ್‌ ಮತ್ತಿತರರು ಇದ್ದರು. 

ನಾಲ್ಕು ವರ್ಷ ಕತ್ತೆ ಕಾಯ್ತಿದ್ರಾ?
ಸಿದ್ದರಾಮಯ್ಯ ಈಗ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎನ್ನುತ್ತಿದ್ದಾರೆ. ನಾಲ್ಕು ವರ್ಷ ಕತ್ತೆ ಕಾಯುತ್ತಿದ್ದರಾ ಎಂದು ತರಾಟೆಗೆ ತೆಗೆದುಕೊಂಡ ಯಡಿಯೂರಪ್ಪ, ಎಸಿಬಿ ರಚನೆ ಮಾಡಿ ಲೂಟಿ ಮಾಡಿದರು. ಈಗ ಲೋಕಾಯುಕ್ತ ಬಲಪಡಿಸುವ ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next