Advertisement

Siddaramaiah;1989ರಲ್ಲಿ ಸೋತಿದ್ದಾಗ ರಾಜಕೀಯವೇ ಬೇಡ ಎಂದು ಚಿಂತಿಸಿದ್ದ ಸಿದ್ದರಾಮಯ್ಯ

10:36 AM May 19, 2023 | Team Udayavani |

ಮೈಸೂರು:  ರಾಜ್ಯದಲ್ಲಿ ಎಸ್‌.ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಕಾಲ. ಆಗ ಮಾಜಿ ಸಚಿವರಾಗಿದ್ದ ಸಿದ್ದರಾಮಯ್ಯ ಅವರು 1989ರ ಅಸೆಂಬ್ಲಿ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತು  ಹತಾಶ ಸ್ಥಿತಿಗೆ ತಲುಪಿದ್ದರು. ಇನ್ನು ರಾಜಕಾರಣ ನಮ್ಮಂಥವರಿಗೆ ಕಷ್ಟ ಅನಿಸುತ್ತೆ. ಈ ಚುನಾವಣೆಗಳ ಸಹವಾಸವೇ ಸಾಕು. ನನ್ನ ಹತ್ತಿರ ಚುನಾವಣೆ ಎದುರಿಸುವಷ್ಟು ದುಡ್ಡಿಲ್ಲ. ಕರಿಕೋಟು ಹಾಕ್ಕೊಂಡು ಮತ್ತೆ  ಲಾ ಪ್ರಾಕ್ಟೀಸ್‌ ಮಾಡುತ್ತೇನೆ ಎಂದು  ಆಪ್ತರಲ್ಲಿ ಹೇಳಿಕೊಂಡಿದ್ದರು. ಅವರ ಮಾತಿನಲ್ಲಿ ವಿಷಾದದ ಛಾಯೆ ಇತ್ತು. ಆದರೆ 1994ರ ಅಸೆಂಬ್ಲಿ ಚುನಾವಣೆಯಲ್ಲಿ ಮತ್ತೆ  ಗೆದ್ದರು. ಹಾಗಿದ್ದರೂ ಚುನಾವಣೆಗಳು ಸಿದ್ದರಾಮಯ್ಯರನ್ನು ಸುಸ್ತು ಮಾಡಿರುವುದು ಮಾತ್ರ ನಿಜ. ಇದಕ್ಕೆ ಈ ಬಾರಿಯ ವರುಣಾದ ಚುನಾವಣೆಯೂ ಹೊರತಲ್ಲ.

Advertisement

ಮಾಸ್‌ ಲೀಡರ್‌

ಸಿದ್ದರಾಮಯ್ಯ ಈ ರಾಜ್ಯ ಕಂಡ ಮಾಸ್‌ ಲೀಡರ್‌ಗಳಲ್ಲಿ ಅಗ್ರಗಣ್ಯರು. ಹಿಂದುಳಿದ ಕುರುಬ ಸಮಾಜದ  ಇವರು ಅಹಿಂದ ವರ್ಗಗಳ ಚಾಂಪಿಯನ್‌. ಜನತಾ ಪರಿವಾರದಲ್ಲಿ ರಾಮಕೃಷ್ಣ ಹೆಗಡೆ, ಎಚ್‌.ಡಿ.ದೇವೇಗೌಡರ ಬಳಿಕ ಸಮೂಹ ನಾಯಕರಾಗಿ ರೂಪುಗೊಂಡವರಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಆಗೆಲ್ಲ ಹಿಂದುಳಿದ ವರ್ಗಗಳ ನಾಯಕರೆಂದರೆ ಕಾಂಗ್ರೆಸ್‌ನ ಸಾರೇಕೊಪ್ಪ ಬಂಗಾರಪ್ಪ ಮಾತ್ರ ಆಗಿದ್ದರು. ಇದಕ್ಕೆ ಪ್ರತಿಯಾಗಿ ಜನತಾ ಪರಿವಾರದಲ್ಲಿ ಸಿದ್ದರಾಮಯ್ಯ ಪ್ರಾರಂಭದಲ್ಲಿ ಹಿಂದುಳಿದ ಕುರುಬ ಸಮಾಜದ ನಾಯಕರಾಗಿ ಬಳಿಕ ಕ್ರಮೇಣ ಅಹಿಂದ ನಾಯಕರಾಗಿ ಹೊರಹೊಮ್ಮಿದರು. ಹೀಗೆ ಮುಂಚೂಣಿಗೆ ಬರುವಾಗ ಡಾ| ಜೀವರಾಜ ಆಳ್ವ ಮತ್ತಿತರ ಎರಡನೇ ಹಂತದ ನಾಯಕರ ಜತೆ ಸಂಘರ್ಷದ ಹಾದಿ ತುಳಿಯಬೇಕಾಯಿತು.

ಗೌಡರಿಂದ ಮೊದಲ ಮೆಚ್ಚುಗೆ

1994ರ ಚುನಾವಣೆ ವೇಳೆಯಲ್ಲೇ ಹೆಗಡೆ, ಎಸ್‌.ಆರ್‌.ಬೊಮ್ಮಾಯಿ, ಪಟೇಲರ ಸಮ್ಮುಖದಲ್ಲಿ ಮೈಸೂರಿನಲ್ಲಿ  ನಡೆದ ಜನತಾದಳದ ಸಮಾವೇಶದಲ್ಲಿ ಎಚ್‌.ಡಿ.ದೇವೇಗೌಡರು ಮಾತನಾಡುತ್ತಾ, ಸಿದ್ದರಾಮಯ್ಯ ಒಬ್ಬ ವ್ಯಕ್ತಿಯಲ್ಲ, ಶಕ್ತಿ ಎಂದು ಮೊದಲ ಬಾರಿಗೆ ಘೋಷಿಸಿದರು. ಎಲ್ಲರಿಗಿಂತ ಮೊದಲು ಸಿದ್ದರಾಮಯ್ಯರಲ್ಲಿ ಅಂತಹ ರಾಜಕೀಯ ಶಕ್ತಿ ಇರುವುದನ್ನು ಮೊದಲು ಗುರುತಿಸಿದವರೇ ದೇವೇಗೌಡರು. ಆಗ ಸಿದ್ದರಾಮಯ್ಯ ರಾಜ್ಯ ಜನತಾ ದಳದ  ಪ್ರಧಾನ ಕಾರ್ಯದರ್ಶಿಯಾಗಿದ್ದರು. ಜನತಾದಳ ತನ್ನ ಯಾದವಿ ಕಲಹದಲ್ಲಿ ಹೋಳಾದಾಗ ಸಿದ್ದರಾಮಯ್ಯ ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಚಿಂತಿಸಿದ್ದೂ ಇದೆ.

Advertisement

ಇಡೀ ರಾಜ್ಯದಲ್ಲಿ ಸಿದ್ದರಾಮಯ್ಯರಿಗೆ ಗಟ್ಟಿ ನಾಯಕತ್ವ ತಂದುಕೊಟ್ಟಿದ್ದು ಜನತಾ ಪರಿವಾರ. ಇದರ ಲಾಭವನ್ನು ಪ್ರಾರಂಭದಲ್ಲಿ ಜನತಾ ಪರಿವಾರ, ಬಳಿಕ ಕಾಂಗ್ರೆಸ್‌ ಪಡೆದುಕೊಂಡಿದೆ. ಸಿದ್ದರಾಮಯ್ಯರನ್ನು ಜನತಾ ಪರಿವಾರ ಸಚಿವ, ಉಪ ಮುಖ್ಯಮಂತ್ರಿ ಮಾಡಿದೆ. ಕಾಂಗ್ರೆಸ್‌ ಎರಡು ಬಾರಿ ವಿಪಕ್ಷ ನಾಯಕ, ಒಮ್ಮೆ ಮುಖ್ಯಮಂತ್ರಿ ಮಾಡಿದೆ. ಈಗ ಎರಡನೇ ಬಾರಿಗೆ ಮುಖ್ಯಮಂತ್ರಿ ಸ್ಥಾನಕ್ಕೆ ತಂದು ನಿಲ್ಲಿಸಿದೆ. ಸಿದ್ದರಾಮಯ್ಯ ತಾವಿದ್ದ ಪಕ್ಷ ಹಾಗೂ ಸರಕಾರದಲ್ಲಿ ತಮ್ಮ ಸ್ಥಾನವನ್ನು  ಹಕ್ಕು, ಪಾಲು, ದುಡಿಮೆಗೆ ಪ್ರತಿಫ‌ಲ ಎಂಬಂತೆ ಅಧಿಕಾರಯುತವಾಗಿ ಪಡೆಯುತ್ತಲೇ ಸಾಗಿದ್ದಾರೆ.

ತಾಲೂಕು ಬೋರ್ಡ್‌ ಸದಸ್ಯತ್ವದಿಂದ ಸಿಎಂ ಸ್ಥಾನಕ್ಕೆ

ಮೈಸೂರು ತಾಲೂಕು ಬೋರ್ಡ್‌ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಗಾದಿಗೆ ಎರಡನೇ ಬಾರಿಗೆ ಏರುವವರೆಗಿನ ಸಿದ್ದರಾಮಯ್ಯ ಅವರ 45 ವರ್ಷಗಳ ರಾಜಕೀಯ ಜೀವನ ಏಳು-ಬೀಳುಗಳಿಂದ ಕೂಡಿದಂಥದ್ದು. ಇದೇ ವೇಳೆ ಸುಮಾರು 26 ವರ್ಷಗಳ ಕಾಲ ಸಚಿವ, ಉಪ ಮುಖ್ಯಮಂತ್ರಿ,  ಮುಖ್ಯಮಂತ್ರಿ, ವಿಪಕ್ಷ ನಾಯಕರಾಗಿದ್ದಾರೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಇಷ್ಟೊಂದು ದೀರ್ಘ‌ ಕಾಲ ಅಧಿಕಾರದಲ್ಲಿದ್ದವರು ಅಪರೂಪ.

ಗೌಡರ ಆದೇಶ ಧಿಕ್ಕರಿಸಿ ಪಕ್ಷದಿಂದ ಹೊರಬಿದ್ದರು

ಸಿದ್ದರಾಮಯ್ಯ ಅವರು ಧರ್ಮ ಸಿಂಗ್‌ ಸಂಪುಟದಲ್ಲಿ ಡಿಸಿಎಂ ಆಗಿದ್ದಾಗ ಅಹಿಂದ ಸಮಾವೇಶ ನಡೆಸಲು ಆರಂಭಿಸಿದರು. ಆಗ ಹುಬ್ಬಳ್ಳಿಯ ಅಹಿಂದ ಸಮಾವೇಶಕ್ಕೆ ಹೋಗಬಾರದೆಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರು ತಮ್ಮ ಪಕ್ಷದ ಸಿದ್ದರಾಮಯ್ಯರಿಗೆ ತಾಕೀತು ಮಾಡಿದ್ದರು. ಅಹಿಂದ ಸಮಾವೇಶಕ್ಕೆ ಹೋದರೆ ಅಧಿಕಾರದಿಂದ ಕೆಳಗಿಳಿಸುವುದಾಗಿ ಎಚ್ಚರಿಸಿದ್ದರು. ಕಾಂಗ್ರೆಸ್‌ ಈ ಅಹಿಂದ ಸಮಾವೇಶದಲ್ಲಿ ಭಾಗವಹಿಸಬಾರದೆಂದು ನಿರ್ಣಯ ಅಂಗೀಕರಿಸಿತು. ಸಿದ್ದರಾಮಯ್ಯ ತಮ್ಮ ಕಾಲಿನ ಮೂಳೆ ಮುರಿದಿದ್ದರೂ ಈ ಸಮಾವೇಶದಲ್ಲಿ ಪಾಲ್ಗೊಂಡು ದೇವೇಗೌಡರ ಕೆಂಗಣ್ಣಿಗೆ ಗುರಿಯಾಗಿ ಅಧಿಕಾರ ಕಳೆದುಕೊಂಡರು. ಆಗ ಜೆಡಿಯುನಲ್ಲಿದ್ದ ಬಸವರಾಜ ಬೊಮ್ಮಾಯಿ ಕೂಡ ಈ ಸಮಾವೇಶದಲ್ಲಿ ಪಾಲ್ಗೊಂಡು ಸಿದ್ದರಾಮಯ್ಯರನ್ನು ಬೆಂಬಲಿಸಿದ್ದರು.

ಸಿದ್ದರಾಮಯ್ಯರನ್ನು 2006ರಲ್ಲಿ ಜೆಡಿಎಸ್‌ನಿಂದ ಹೊರ ಹಾಕಿದಾಗ ಅವರು ಅಹಿಂದ ಚಳವಳಿಯನ್ನು ಚುರುಕುಗೊಳಿಸಿದರು. ಅಖೀಲ ಭಾರತ ಪ್ರಗತಿಪರ ಜನತಾದಳಕ್ಕೆ ಮತ್ತೆ ಚಾಲನೆ ಕೊಟ್ಟರು. ಜಿಲ್ಲಾ ಪಂಚಾಯತ್‌ ಚುನಾವಣೆಯನ್ನು ಈ ಪಕ್ಷದ ವತಿಯಿಂದಲೇ ಎದುರಿಸಿದರು. ಆದರೆ ಪ್ರಾದೇಶಿಕ ಪಕ್ಷ ಕಟ್ಟುವ ಧೈರ್ಯವನ್ನು ಸಿದ್ದರಾಮಯ್ಯ ಯಾವತ್ತೂ ಮಾಡಲಿಲ್ಲ. ಅವರಿಗೆ ಪ್ರಾದೇಶಿಕ ಪಕ್ಷದ ಮೂಲಕ ರಾಜ್ಯದಲ್ಲಿ ಸ್ವತಂತ್ರವಾಗಿ ಸರಕಾರ ರಚನೆ ಅಷ್ಟು ಸುಲಭದ ಮಾತಲ್ಲ ಎಂಬ ವಾಸ್ತವದ ಅರಿವು ಇದೆ. ಹೀಗಾಗಿಯೇ ಅವರು 2006ರಲ್ಲಿ ಕಾಂಗ್ರೆಸ್‌ ಕೈ ಹಿಡಿದರು.

ಕನ್ನಡ ಪ್ರೇಮಿ

ಸಿದ್ದರಾಮಯ್ಯ ಎಲ್ಲ ಸಮಾಜವಾದಿಗಳಂತೆ ಭಾಷಾ ಪ್ರೇಮಿ. ಕನ್ನಡ ಭಾಷೆಯ ವಿಚಾರಕ್ಕೆ ಬಂದಾಗ ಅವರ ಬದ್ಧತೆ ಪ್ರಶ್ನಾತೀತ. ಅವರ ಮೊದಲ ಅಧಿಕಾರ, ಹುದ್ದೆ ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನವೇ ಆಗಿತ್ತು.

ಕುಹಕವಾಡಿದ್ದವರ ಬಾಯಿ ಮುಚ್ಚಿಸಿದ ಬಜೆಟ್‌

ಸಿದ್ದರಾಮಯ್ಯ ಬಿಎಸ್‌ಸಿ ಓದಿದ ಬಳಿಕ ಕಾನೂನು ಪದವಿ ಪಡೆದರು. ಅವರು ರಾಜಕಾರಣಕ್ಕೆ ಬರಲು ಆಗ ಸಮಾಜವಾದಿ ಚಳವಳಿಯಲ್ಲಿದ್ದ ರೈತ ನಾಯಕ ಪ್ರೊ| ಎಂ. ಡಿ. ನಂಜುಂಡಸ್ವಾಮಿ   ಕಾರಣ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಖಾತೆ ಹೊತ್ತಾಗ ಸಿದ್ದರಾಮಯ್ಯರಿಗೆ ಕುರಿ ಎಣಿಸಲು ಬರುವುದಿಲ್ಲ. ಇನ್ನು ಹಣಕಾಸು ಇಲಾಖೆ ಹೇಗೆ ನಿಭಾಯಿಸುತ್ತಾರೆ ಎಂದು ಕುಹಕವಾಡಿದವರೂ ಇದ್ದಾರೆ. ಆದರೆ ಸಿದ್ದರಾಮಯ್ಯ ಪ್ರಥಮ ಬಜೆಟ್‌ನಲ್ಲಿಯೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಅಹಿಂದ ಪರವಾಗಿ ಗಟ್ಟಿ ಧ್ವನಿ

ಸಿದ್ದರಾಮಯ್ಯ 2013ರಿಂದ 2018ರ ವರೆಗೆ ನನ್ನದು ಅಹಿಂದ ಸರಕಾರ ಎನ್ನುತ್ತಿದ್ದರು. ಇದಕ್ಕೆ ಕೆಲವು ಸ್ವಪಕ್ಷೀಯರೇ ವಿರೋಧಿಸಿದಾಗಲೂ ಸಿದ್ದರಾಮಯ್ಯ ಜಗ್ಗಲಿಲ್ಲ. ನನ್ನದು ಅಹಿಂದ ಸರಕಾರ ಎಂದು ಕರೆದರೂ ನನಗೆ ಮುಜುಗರ ಇಲ್ಲ. ನಾನು ಅಹಿಂದ ಪರ ಎಂದು ಬಲವಾಗಿ ಪ್ರತಿಪಾದಿಸುತ್ತಿದ್ದರು. ಸಿದ್ದರಾಮಯ್ಯ  ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ದೇವಸ್ಥಾನಗಳನ್ನು ಧಾರ್ಮಿಕ ದತ್ತಿ ಮಸೂದೆಗೆ ಒಳಪಡಿಸುವುದು, ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಯೋಜನೆ ಆದೇಶವನ್ನು ಹೊರಡಿಸಿದ್ದರು. ವಿವಾದಕ್ಕೀಡಾದ ಬಳಿಕ ಅದನ್ನು ಹಿಂಪಡೆದರು. ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸಿ ಕಟು ಟೀಕೆಗೆ ಒಳಗಾದರು.

ಉಪನ್ಯಾಸಕರಾಗಿದ್ದರು

ಸಿದ್ದರಾಮಯ್ಯ ಮೈಸೂರಿನ ಕಾನೂನು ಕಾಲೇಜೊಂದರಲ್ಲಿ  ಸುಮಾರು ಮೂರು ವರ್ಷಗಳ ಕಾಲ ಪಾರ್ಟ್‌ಟೈಂ ಉಪನ್ಯಾಸಕರಾಗಿದ್ದರು. ಅವರೇ ಹೇಳುವಂತೆ ಅವರಿಗೆ ವಕೀಲಿ ವೃತ್ತಿಗಿಂತ ಕಾನೂನು ಪಾಠ ಮಾಡುವುದೇ ಹೆಚ್ಚು ಇಷ್ಟವಾಗಿತ್ತು.

ಸಮಾಜವಾದಿ ಚಳವಳಿ ಮೂಲಕ ತಮ್ಮ ರಾಜಕೀಯ ಅಸ್ತಿತ್ವ ಕಂಡುಕೊಂಡ ಸಿದ್ದರಾಮಯ್ಯ ಜಾತಿಬದ್ಧ ಪಾಳೆಗಾರಿಕೆ ರಾಜಕಾರಣವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸಿದ್ದಾರೆ. ಸುಮಾರು 20 ವರ್ಷಗಳಿಂದ ಕರ್ನಾಟಕದ ರಾಜಕಾರಣವನ್ನು ಅವರಷ್ಟು ಆವರಿಸಿಕೊಂಡ ಮತ್ತೂಬ್ಬರಿಲ್ಲ. ಯಾವುದೇ ರಾಜಕೀಯ ಪಕ್ಷದ ನಡೆ ಇರಲಿ ಅದು ಸಿದ್ದರಾಮಯ್ಯ ಅವರನ್ನು ಗಮನದಲ್ಲಿಟ್ಟುಕೊಂಡೇ ದಾಳ ಉರುಳಿಸಬೇಕಾದ ಪರಿಸ್ಥಿತಿ. ಸಿದ್ದರಾಮಯ್ಯ ಅವರ ಸುತ್ತಲೇ ಕರ್ನಾಟಕದ ರಾಜಕಾರಣ ಗಿರಕಿ ಹೊಡೆದಿದೆ.

ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next