Advertisement

ಭಾರತದಿಂದ ಗೋಧಿ ರಫ್ತು ನಿಷೇಧ : ವಿಶ್ವ ಆಹಾರ ಮಾರುಕಟ್ಟೆಯಲ್ಲಿ ತಲ್ಲಣ

10:00 AM May 22, 2022 | Team Udayavani |

ರಷ್ಯಾ-ಉಕ್ರೇನ್‌ ನಡುವಣ ಯುದ್ಧದಿಂದಾಗಿ ಈ ದೇಶಗಳಿಂದ ಗೋಧಿ ರಫ್ತು ಸಂಪೂರ್ಣ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ವಿಶ್ವದ ಹಲವಾರು ರಾಷ್ಟ್ರಗಳಿಂದ ಗೋಧಿಗೆ ಭಾರೀ ಬೇಡಿಕೆ ವ್ಯಕ್ತವಾಗಿದೆ. ಈ ನಡುವೆ ಪ್ರಸಕ್ತ ವರ್ಷದ ಬೇಸಗೆ ಋತುವಿನ ಅಂತ್ಯದಲ್ಲಿ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದರಿಂದ ಭಾರತದಲ್ಲಿ ಗೋಧಿಯ ಒಟ್ಟಾರೆ ಇಳುವರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಹೀಗಾಗಿ ದೇಶದ ಆವಶ್ಯಕತೆಯನ್ನು ಪೂರೈಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಗೋಧಿ ರಫ್ತಿಗೆ ನಿಷೇಧ ಹೇರಿದೆ. ಇದಕ್ಕೆ ಜಾಗತಿಕ ಸಮುದಾಯದಿಂದ ವಿರೋಧ ವ್ಯಕ್ತವಾಗಿದ್ದರೂ ಸರಕಾರ ಮತ್ತು ದೇಶದ ಕೃಷಿ ತಜ್ಞರು ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಹಾಗಾದರೆ ಏನಿದು ಬೆಳವಣಿಗೆ, ಇದರ ಪರಿಣಾಮಗಳೇನು, ಗೋಧಿ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತದ ಪಾತ್ರವೇನು ಇವೆಲ್ಲದರ ಕುರಿತಂತೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

Advertisement

ಹವಾಮಾನ ವೈಪರೀತ್ಯದಿಂದಾಗಿ ಈ ಬಾರಿ ಭಾರತದಲ್ಲಿ ಗೋಧಿ ಇಳುವರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ನಿರೀಕ್ಷೆಗಿಂತ ಉತ್ಪಾದನೆ ಕಡಿಮೆಯಾದ ಕಾರಣ ಗೋಧಿ ಮತ್ತು ಅದರ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುತ್ತಿದ್ದು, ಇದಕ್ಕೆ ನಿಯಂತ್ರಣ ಹೇರುವ ಸಲುವಾಗಿ ಕೇಂದ್ರ ಸರಕಾರವು ವಿದೇಶಗಳಿಗೆ ಗೋಧಿ ರಫ‌¤ನ್ನು ನಿಷೇಧಿಸಿದೆ.ರಷ್ಯಾ- ಉಕ್ರೇನ್‌ ಯುದ್ಧದ ಪರಿಣಾಮ ಮತ್ತು ಭಾರತದ ಗೋಧಿ ರಫ್ತಿನ ಮೇಲಿನ ನಿಷೇಧವು ವಿಶ್ವ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸತೊಡಗಿದೆ. ಈ ವರ್ಷ ಗೋಧಿ ಬೆಲೆ ಶೇ. 60ರಷ್ಟು ಏರಿಕೆ ಕಂಡಿದೆ. ಗೋಧಿ ರಫ್ತಿನ ಮೇಲೆ ಭಾರತದ ನಿಷೇಧದಿಂದ ವಿಶ್ವಾದ್ಯಂತ ಆಹಾರ ಬಿಕ್ಕಟ್ಟು ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿರುವ ಜಿ-7 ರಾಷ್ಟ್ರಗಳು ಭಾರತದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈಗಾಗಲೇ ಬ್ರೆಡ್‌, ನೂಡಲ್ಸ್‌ ಆದಿಯಾಗಿ ಗೋಧಿಯಿಂದ ತಯಾರಿಸಲಾಗುವ ಬಹುತೇಕ ಉತ್ಪನ್ನಗಳ ಬೆಲೆ ಏರಿಕೆಯಾಗಿವೆ. ಹೆಚ್ಚುತ್ತಿರುವ ಬೆಲೆಗಳಿಂದ ಮುಂದಿನ ದಿನಗಳಲ್ಲಿ ಹಲವು ದೇಶಗಳಲ್ಲಿ ಗೋಧಿಯಿಂದ ತಯಾರಿಸಲಾಗುವ ಆಹಾರ ಪದಾರ್ಥಗಳು ಮತ್ತು ಉತ್ಪನ್ನಗಳ ಕೊರತೆಉಂಟಾಗಬಹುದು.

ಗೋಧಿ ಇಳುವರಿಯಲ್ಲಿ ಇಳಿಕೆ
ಈ ಬಾರಿ ದೇಶದಲ್ಲಿ ಗೋಧಿ ಇಳುವರಿ ಕಡಿಮೆಯಾಗಲು ಹವಾಮಾನ ವೈಪರೀತ್ಯವೇ ಮುಖ್ಯ ಕಾರಣ. ಮಾರ್ಚ್‌ ತಿಂಗಳಲ್ಲೇ ಬಿಸಿ ಗಾಳಿ ಪ್ರಾರಂಭವಾಗಿತ್ತು. ಗೋಧಿ ಬೆಳೆಗೆ ಮಾರ್ಚ್‌ ತಿಂಗಳು ಬಹುಮುಖ್ಯವಾಗಿರುತ್ತದೆ. ಈ ಅವಧಿಯಲ್ಲಿ ತಾಪಮಾನವು 30 ಡಿ. ಸೆ. ಮೀರಬಾರದು. ಯಾಕೆಂದರೆ ಇದೇ ವೇಳೆ ಪಿಷ್ಟ, ಪ್ರೊಟೀನ್‌ ಮತ್ತು ಇತರ ಒಣ ಪದಾರ್ಥಗಳು ಗೋಧಿಯಲ್ಲಿ ಸಂಗ್ರಹಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ತಾಪಮಾನವು ಗೋಧಿ ಧಾನ್ಯಗಳ ತೂಕವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ವರ್ಷದಲ್ಲಿ ಮಾರ್ಚ್‌ನಲ್ಲಿ ಹಲವು ಬಾರಿ ತಾಪಮಾನ 40 ಡಿ.ಸೆ. ದಾಟಿದೆ. ಇದರಿಂದ ಅಕಾಲಿಕವಾಗಿ ಗೋಧಿ ಹಣ್ಣಾಗಿ ಧಾನ್ಯಗಳು ಹಗುರವಾದವು. ಪರಿಣಾಮ ಗೋಧಿಯ ಇಳುವರಿಯಲ್ಲಿ ಶೇ. 25ರಷ್ಟು ಕಡಿಮೆಯಾಯಿತು. ಕಡಿಮೆ ಇಳುವರಿಯಿಂದ ಭಾರತದಲ್ಲಿ ಗೋಧಿ ಧಾರಣೆ ಈಗಾಗಲೇ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ. ಇಂತಹ ಪರಿಸ್ಥಿತಿಯಲ್ಲಿ ಗೋಧಿ ಹಿಟ್ಟಿನ ಬೆಲೆಯಲ್ಲಿ ಏರಿಕೆಯಾಗುವುದು ಖಚಿತ. ಈ ಬಾರಿ 111.3 ಮಿಲಿಯನ್‌ ಟನ್‌ ಗೋಧಿ ಉತ್ಪಾದನೆಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಇಳುವರಿ 100 ಮಿಲಿಯನ್‌ ಟನ್‌ಗಳನ್ನು ತಲುಪುವುದೂ ಕಷ್ಟಸಾಧ್ಯ.

ಈ ವರ್ಷ ಸರಕಾರಿ ಸಂಸ್ಥೆಗಳಿಂದ ಗೋಧಿ ಸಂಗ್ರಹಣೆ 18 ಮಿಲಿಯನ್‌ ಟನ್‌ಗಳಿಗೆ ಇಳಿದಿದೆ. ಇದು ಕಳೆದ 15 ವರ್ಷಗಳಲ್ಲೇ ಅತ್ಯಂತ ಕಡಿಮೆ. 2021- 22ರಲ್ಲಿ ಸರಕಾರವು ಒಟ್ಟು 43.33 ಮಿಲಿಯನ್‌ ಟನ್‌ ಗೋಧಿಯನ್ನು ಸಂಗ್ರಹಿಸಿದೆ. ಭಾರತದ ಮಾರುಕಟ್ಟೆಗಳಲ್ಲಿ ಗೋಧಿ ಬೆಲೆ ಪ್ರತೀ ಟನ್‌ಗೆ 25 ಸಾವಿರ ರೂ. ಗಳಾಗಿದ್ದು, ಕನಿಷ್ಠ ಬೆಂಬಲ ಬೆಲೆ ಟನ್‌ಗೆ ಕೇವಲ 20,150 ರೂ. ಗಳಾಗಿವೆ.

ಇದನ್ನೂ ಓದಿ : ಕೋಟೇಶ್ವರ – ಹಾಲಾಡಿ ಮಾರ್ಗ: ಬೃಹತ್‌ ಮರ ಬಿದ್ದು ಸಂಚಾರಕ್ಕೆ ಅಡ್ಡಿ

Advertisement

ವಿಶ್ವ ಮಾರುಕಟ್ಟೆಯ ಮೇಲೆ ಪರಿಣಾಮ
ಭಾರತವು ವಿಶ್ವದಲ್ಲಿ ಅತೀ ಹೆಚ್ಚು ಗೋಧಿ ರಫ್ತು ಮಾಡುವ ದೇಶಗಳಲ್ಲಿ ಒಂದಾಗಿದೆ.
ಈ ವರ್ಷದ ಆರಂಭದಿಂದಲೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಶೇ. 60ರಷ್ಟು ಹೆಚ್ಚಾಗಿದೆ. ಈಗ ಭಾರತ ಸರಕಾರ ರಫ್ತಿಗೆ ನಿಷೇಧ ಹೇರಿರುವುದರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಅದರ ಪರಿಣಾಮ ಈಗಾಗಲೇ ಕಾಣಿಸಿಕೊಂಡಿದ್ದು, ವಿಶ್ವ ಮಾರುಕಟ್ಟೆಯಲ್ಲಿ ಬ್ರೆಡ್‌, ಕೇಕ್‌ನಿಂದ ಹಿಡಿದು ನೂಡಲ್ಸ್‌, ಪಾಸ್ತಾದ ಬೆಲೆ ನಿರಂತರ ಹೆಚ್ಚಾಗುತ್ತಿದೆ.

ವಿಶ್ವದ ಗೋಧಿ ಉತ್ಪಾದನೆಯ ಮೂರನೇ ಒಂದು ಭಾಗವನ್ನು ಉಕ್ರೇನ್‌ ಮತ್ತು ರಷ್ಯಾ ಉತ್ಪಾದಿಸುತ್ತದೆ. ಆದರೆ ಈಗ ನಡೆಯುತ್ತಿರುವ ಯುದ್ಧದಿಂದಾಗಿ ಉತ್ಪಾದನೆ ಮತ್ತು ಪೂರೈಕೆ ಮೇಲೆ ಹೊಡೆತ ಬಿದ್ದಿದೆ. ರಫ್ತು ಸ್ಥಗಿತಗೊಂಡಿದೆ. ಈಗ ಭಾರತವೂ ನಿಷೇಧ ಹೇರಿದ್ದರಿಂದ ಈಗಾಗಲೇ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದೇಶಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ. ಶ್ರೀಲಂಕಾಕ್ಕೆ ಭಾರತ ನಿರಂತರವಾಗಿ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ಗ್ಲೋಬಲ್‌ ಫ‌ುಡ್‌ ಕ್ರೈಸಿಸ್‌ ವರದಿ ಪ್ರಕಾರ ವಿಶ್ವದ 53 ದೇಶಗಳು ಆಹಾರ ಸಹಾಯದ ತುರ್ತು ಅಗತ್ಯವನ್ನು ಹೊಂದಿವೆ. ಅಫ್ಘಾನಿಸ್ಥಾನ, ಸಿರಿಯಾ, ಸುಡಾನ್‌, ಪಾಕಿಸ್ಥಾನದಂತಹ ದೇಶಗಳ ಮೇಲೆ ಇದು ಹೆಚ್ಚಿನ ಪರಿಣಾಮ ಬೀರಲಿದೆ.

ನಿಷೇಧದ ಪರಿಣಾಮ
ನಿಷೇಧದ ಬಳಿಕ ದೇಶಿಯ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಶೇ. 10ರಷ್ಟು ಇಳಿಕೆಯಾಗಿದೆ. ಹೀಗಾಗಿ ಗೋಧಿಯಿಂದ ತಯಾರಿಸಿದ ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಸರಕಾರವು ಈ ನಿಷೇಧವನ್ನು ದೀರ್ಘ‌ಕಾಲದವರೆಗೆ ಮುಂದುವರಿಸಬೇಕಾಗಬಹುದು ಎನ್ನುತ್ತಾರೆ ಕೃಷಿ ತಜ್ಞರು.

ಹೆಚ್ಚುತ್ತಿರುವ ಹಣದುಬ್ಬರ
ದೇಶದಲ್ಲಿ ಹಣದುಬ್ಬರ ಒಂದೇ ಸಮನೆ ಹೆಚ್ಚುತ್ತಿರುವುದರಿಂದಾಗಿ ಸರಕಾರ ರಫ್ತಿಗೆ ಅದರಲ್ಲೂ ಮುಖ್ಯವಾಗಿ ಆಹಾರ ಬೆಳೆಗಳು ಮತ್ತು ಉತ್ಪನ್ನಗಳ ರಫ್ತಿಗೆ ಕಡಿವಾಣ ಹಾಕಲು ಮುಂದಾಗಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ದೇಶದಲ್ಲಿ ಚಿಲ್ಲರೆ ಹಣದುಬ್ಬರದ ವಾರ್ಷಿಕ ದರವು ಎಪ್ರಿಲ್‌ನಲ್ಲಿ ಎಂಟು ವರ್ಷಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಇದೇ ವೇಳೆ ಸಗಟು ಹಣದುಬ್ಬರ ದರವೂ ಸಾರ್ವಕಾಲಿಕ ದಾಖಲೆ ಮಟ್ಟಕ್ಕೇರಿದೆ.

ಕೃಷಿ ತಜ್ಞರ ಸಮರ್ಥನೆ ಏನು?
ಭಾರತಕ್ಕೆ ತನ್ನ ಅಗತ್ಯಗಳನ್ನು ಮೊದಲು ಪೂರೈಸಿಕೊಳ್ಳುವ ಎಲ್ಲ ಹಕ್ಕುಗಳೂ ಇವೆ. ಭಾರತದ ನಡೆಯನ್ನು ಜಿ-7 ರಾಷ್ಟ್ರಗಳು ಪ್ರಶ್ನಿಸಲಾಗದು. ಜಿ-7 ದೇಶಗಳು ಜೈವಿಕ ಇಂಧನಕ್ಕಾಗಿ 90 ಮಿಲಿಯನ್‌ ಟನ್‌ ಆಹಾರ ಧಾನ್ಯಗಳನ್ನು ಬಳಸುತ್ತಿ¤ವೆ. ಜೈವಿಕ ಇಂಧನದಲ್ಲಿ ಬಳಸುವ ಧಾನ್ಯಗಳಲ್ಲಿ ಶೇ. 50ರಷ್ಟು ಕಡಿಮೆ ಮಾಡಿದರೆ ವಿಶ್ವದ ಆಹಾರ ಬಿಕ್ಕಟ್ಟು ಕೊನೆಗೊಳಿಸಲು ಸಾಧ್ಯವಿದೆ ಎನ್ನುತ್ತಾರೆ ಭಾರತದ ಕೃಷಿ ತಜ್ಞರು.

ಜಿ-7 ರಾಷ್ಟ್ರಗಳ ವಿರೋಧ
ಭಾರತದ ಕ್ರಮಕ್ಕೆ ಜಿ- 7 ರಾಷ್ಟ್ರಗಳು ಅಂದರೆ ಕೆನಡಾ, ಫ್ರಾನ್ಸ್‌, ಜರ್ಮನಿ, ಇಟಲಿ, ಜಪಾನ್‌, ಯುಕೆ ಮತ್ತು ಯುಎಸ್‌ ವಿರೋಧ ವ್ಯಕ್ತಪಡಿಸಿವೆ. ಇದು ವಿಶ್ವಾದ್ಯಂತ ಆಹಾರ ಬಿಕ್ಕಟ್ಟಿಗೆ ಕಾರಣವಾಗಲಿದೆ ಎಂದು ಜರ್ಮನಿಯ ಕೃಷಿ ಸಚಿವ ಕೆಮ್‌ ಒಜೆxಮಿರ್‌ ಹೇಳಿದ್ದಾರೆ. ಜಿ-7 ದೇಶಗಳ ಕೃಷಿ ಸಚಿವರು ಗೋಧಿ ರಫ್ತು ನಿಷೇಧಿಸದಂತೆ ಭಾರತ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದು ಒತ್ತಡ ಹೇರತೊಡಗಿದ್ದಾರೆ.

ಚೀನದ ಬೆಂಬಲ ಆದರೆ ಅಚ್ಚರಿ ಎಂಬಂತೆ ಭಾರತದ ಪರಮವೈರಿ ಎಂದೇ ಗುರುತಿಸಲ್ಪಡುತ್ತಿರುವ ಚೀನ ಮಾತ್ರ ಭಾರತದ ಕ್ರಮವನ್ನು ಸಮರ್ಥಿಸಿಕೊಂಡಿದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ದೂಷಿಸುವುದು ಜಾಗತಿಕ ಆಹಾರದ ಕೊರತೆಯನ್ನು ಪರಿಹರಿಸುವುದಿಲ್ಲ. ಗೋಧಿ ರಫ್ತು ನಿಷೇಧಿಸದಂತೆ ಜಿ-7 ರಾಷ್ಟ್ರಗಳ ಕೃಷಿ ಸಚಿವರು ಭಾರತವನ್ನು ಕೇಳುತ್ತಿದ್ದು, ಇದರ ಬದಲು ತನ್ನ ರಫ್ತುಗಳನ್ನು ಹಚ್ಚಿಸುವ ಮೂಲಕ ಆಹಾರ ಮಾರುಕಟ್ಟೆಯ ಪೂರೈಕೆಯನ್ನು ಸ್ಥಿರಗೊಳಿಸಲು ಯಾಕೆ ಕ್ರಮಕೈಗೊಳ್ಳಬಾರದು ಎಂದು ಚೀನ ಪ್ರಶ್ನಿಸಿದೆ.

ಗೋಧಿ ಇಳುವರಿ ಕುಸಿತವನ್ನು ಭಾರತ ಹೇಗೆ ನಿಭಾಯಿಸಬಲ್ಲುದು?
– ಪಿಎಂಜಿಕೆವೈ ಅಡಿಯಲ್ಲಿ 5.5 ಮೆಟ್ರಿಕ್‌ ಟನ್‌ ಗೋಧಿಯ ಬದಲು ಅಕ್ಕಿಯನ್ನು ಪೂರೈಸಲಾಗುವುದು.
– ಎನ್‌ಎಫ್ಎಸ್‌ಎ ಅಡಿಯಲ್ಲಿ 6.1 ಮೆಟ್ರಿಕ್‌ ಟನ್‌ ಗೋಧಿಯ ಬದಲು ಅಕ್ಕಿಯ ಪೂರೈಕೆ.

Advertisement

Udayavani is now on Telegram. Click here to join our channel and stay updated with the latest news.

Next