Advertisement

ಬದುಕು ಕೈ ಚೆಲ್ಲಲು ಇವರಿಗೇನಾಗಿದೆ?

06:00 AM May 13, 2018 | |

ಚಿಕ್ಕ ಚಿಕ್ಕ ವಿಷಯಗಳಿಗೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಮನಸ್ಸನ್ನು ನಾವೆಷ್ಟು ನಾಜೂಕುಗೊಳಿಸುತ್ತಿದ್ದೇವೆ ಅನ್ನು ವುದು ಮುಖ್ಯ. ನಾವು ಬೆಳೆಸುವಲ್ಲಿ ಎಲ್ಲೋ ಎಡವಿದ್ದೇವೆ ಎಂಬುದು ಕೂಡ ಇದಕ್ಕೆಲ್ಲ ಒಂದು ಕಾರಣ.

Advertisement

ಆ ಅಂಕಿ ಅಂಶಗಳನ್ನು ನೋಡಿ ದಂಗು ಬಡಿಯಿತು! ನಮ್ಮ ದೇಶದಲ್ಲಿ ಪ್ರತಿ ಗಂಟೆಗೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿ ಕೊಳ್ಳುತ್ತಾನಂತೆ! ಇದು ಯಾರೋ ಅಂದಾಜಿನಲ್ಲಿ ಬರೆದ ಲೆಕ್ಕ ವಲ್ಲ. ಸ್ವತಃ NCRB(National crime record bureau) ಹೊರಹಾಕಿದ ವರದಿಯ ಸತ್ಯ. ದೇಶಕ್ಕೆ ಆಸ್ತಿಯಾಗಬಲ್ಲ ಒಂದು ಜೀವ ಮಣ್ಣಾಗುತ್ತದೆ. ಒಂದು ಮನೆ ಅನಾಥವಾಗುತ್ತದೆ. ಪೋಷಕರ ಕನಸುಗಳು ನುಚ್ಚುನೂರಾಗುತ್ತವೆ.

ಪ್ರತಿನಿತ್ಯ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಇವೇ ವಿಷಯಗಳನ್ನು ಓದುವಾಗ ಸಂಕಟವಾಗುತ್ತದೆ. ಹೌದು, ನಮ್ಮ ವಿದ್ಯಾರ್ಥಿಗಳಿಗೆ ಏನಾಗಿದೆ? ಏಕಾಏಕಿ ಪ್ರಾಣವನ್ನು ಒಪ್ಪಿಸಿ ಹೋಗುವಂತೆ ಮಾಡುವ ಕಾರಣಗಳಾದರೂ ಏನು? ಇದೆಲ್ಲ ಆಧುನಿಕತೆ ಕೊಡಮಾಡಿದ ಕೆಟ್ಟ ಕೊಡುಗೆಯೇ? ಎಂಬ ಪ್ರಶ್ನೆ ಮೂಡುತ್ತದೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿರುವ ಸಾವಿನ ಪ್ರಕರಣಗಳನ್ನು ಲೆಕ್ಕ ಹಾಕಿದರೆ ಹೌದೆನಿಸುತ್ತದೆ. 

ಕೇವಲ ಹತ್ತನೆಯ ತರಗತಿಯ ಹುಡುಗನೊಬ್ಬ ಆಕೆ ತನ್ನ ಬಳಿ ಮಾತುಬಿಟ್ಟಳು ಅನ್ನುವ ಕಾರಣಕ್ಕೆ ತನ್ನ ಮನದ ನೋವನ್ನು ಸೆಲ್ಫಿಯಲ್ಲಿ ರೆಕಾರ್ಡ್‌ ಮಾಡಿಟ್ಟು ಸತ್ತೇ ಹೋದ! ಮೊನ್ನೆ ಬೆಂಗಳೂರಿನಲ್ಲಿ ನಡೆದ ಘಟನೆಯಿದು. ಪರೀಕ್ಷೆಯಲ್ಲಿ ಫೇಲ್‌, ನಿರೀಕ್ಷಿತ ಅಂಕ ದೊರೆಯದಿರುವುದು, ಪ್ರೀತಿಯಲ್ಲಿ ವೈಫ‌ಲ್ಯ, ಶಾಲೆಯ ಕೆಲವು ನಡಾವಳಿಗಳು ಇಂತಹವೇ ಕ್ಷುಲಕ ಕಾರಣಗಳು ಇವರ ಸಾವುಗಳಿಗೆ ಷರಾ ಬರೆಯುತ್ತಿರುವುದು ದುರಂತವಲ್ಲದೇ ಮತ್ತೇನು? ಪ್ರೌಢಶಾಲಾ ಹಂತಕ್ಕೆ ಬರುವ ಹೊತ್ತಿಗಾಗಲೇ ದೈಹಿಕವಾಗಿ ಮತ್ತು ಮಾನಸಿಕವಾಗಿ ವಿಪರೀತವೆನಿಸುವಷ್ಟು ಬದಲಾವಣೆ ಗಳು ಆರಂಭವಾಗಿರುತ್ತವೆ. ಪಕ್ಕಾ ಬಿರುಗಾಳಿಯಂತಹ ವಯಸ್ಸು. ಮನಸ್ಸನ್ನು ತಹಬದಿಗೆ ತರುವುದೇ ಕಷ್ಟಾತಿಕಷ್ಟ. ಅದರ ಮಧ್ಯೆ ಓದು ಸಾಗಬೇಕು. ಓದಿನ ಸುತ್ತಲಿನ ನಿರೀಕ್ಷೆಗಳ್ಳೋ ಗಗನ ಮುಟ್ಟಿರುತ್ತವೆ. ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಮೇಲೆ ಅದೆಂತಹ ಒತ್ತಡ ತರಬಹುದೆಂದು ವ್ಯವಸ್ಥೆ ಯಾಕೋ ಅರ್ಥ ಮಾಡಿಕೊಂಡಂತಿಲ್ಲ. ಇನ್ನು ತಲೆಯೆತ್ತಿ ಬದುಕು ವುದಕ್ಕೆ ಸಾಧ್ಯವೇ ಇಲ್ಲ ಎನ್ನುವಷ್ಟು ಒತ್ತಡ ಸೃಷ್ಟಿ ಯಾದಾಗ ವಿದ್ಯಾರ್ಥಿ ಬೇರೆ ದಾರಿಯಿಲ್ಲವೆಂದು ಭಾವಿಸಿ ಆ ಮಾರ್ಗ ಹಿಡಿಯುತ್ತಾನೆ. ಶೇ 70ರಷ್ಟು ಆತ್ಮಹತ್ಯೆಗಳು ಓದಿನ ಕಾರಣಕ್ಕಾಗಿಯೇ ಆಗುತ್ತವೆಯಂತೆ! 

ತದನಂತರದ ಕಾರಣವೆಂದರೆ ಪ್ರೇಮ ವೈಫ‌ಲ್ಯ. ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನವಾದರೂ ಎಲ್ಲಿದೆ? ಅವರ 
ಕೈಗೆ ಏನು ಸಿಗಬಾರದೋ ಅವೆಲ್ಲ ಸಿಗುತ್ತಿವೆ. ಮೊಬೈಲ್‌ ಅವರ ಕೈಗೆ ಈಗ ಅನಾಯಾಸವಾಗಿ ಸಿಗುತ್ತಿದೆ. ಒಂದು ಪ್ಲೇಟ್‌ ಇಡ್ಲಿ ವಡೆಯ ಬೆಲೆಗೆ ಇಂಟರ್ನೆಟ್‌ ಸಿಗುತ್ತಿದೆ. ಕಾದು ಕುಳಿತ ಯೌವ್ವನ. ಇಷ್ಟು ಸಾಕಲ್ಲವೇ ಹಾದಿ ತಪ್ಪಲು? ಅಷ್ಟೇ ಅಲ್ಲದ ನಾವೇನು ಕಡಿಮೆ ಅಂತ ಟಿವಿ ಮಾಧ್ಯಮಗಳು, ಆಧುನಿಕ ವಿದ್ಯಮಾನಗಳು ಮಕ್ಕಳ ಹಾದಿ ತಪ್ಪಿಸುವಲ್ಲಿ ತಮ್ಮ ಪಾಲನ್ನು ನೀಡುತ್ತವೆ. 

Advertisement

ಇನ್ನು ಈ ದೇಶದಲ್ಲಿ ಬಡತನ ಯಾವತ್ತಿಂದಲೂ ಅನೇಕರನ್ನು ಕಾಡುತ್ತಲೇ ಬಂದಿದೆ. ಬಡ ಕುಟುಂಬದಿಂದ ಶೈಕ್ಷಣಿಕ ಲೋಕಕ್ಕೆ ಬರುವ ಮಕ್ಕಳು ಸಾಕಷ್ಟು ನಿರೀಕ್ಷೆ ಹೊತ್ತುಕೊಂಡೆ ಬರುತ್ತವೆ.ಆದರೂ ಓದಲು ಅವರ ಆರ್ಥಿಕತೆ ಅವರಿಗೆ ಅಡ್ಡಗಾಲು ಹಾಕು ತ್ತದೆ. ಮನಸ್ಸು ಬಡತನ-ಶಿಕ್ಷಣದ ಒತ್ತಡದ ನಡುವೆ ಹೆಣಗ ಬೇಕಾ ಗುತ್ತದೆ. ಮನೆಯ ಜವಾಬ್ದಾರಿಗಳು, ಓದು, ಕೀಳರಿಮೆ…ಇವೆಲ್ಲದರ ಒತ್ತಡ ವಿದ್ಯಾರ್ಥಿಯನ್ನು ಹಿಂಡಿ ಹಾಕುತ್ತವೆ. 

ಚಿಕ್ಕ ಚಿಕ್ಕ ವಿಷಯಗಳಿಗೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳ ಮನಸ್ಸನ್ನು ನಾವೆಷ್ಟು ನಾಜೂಕುಗೊಳಿಸುತ್ತಿದ್ದೇವೆ ಅನ್ನು ವುದು ಮುಖ್ಯ. ನಾವು ಬೆಳೆಸುವಲ್ಲಿ ಎಲ್ಲೋ ಎಡವಿದ್ದೇವೆ ಎಂಬುದು ಕೂಡ ಇದಕ್ಕೆಲ್ಲ ಒಂದು ಕಾರಣ. ಕಷ್ಟವೇ ಇಲ್ಲದಂತೆ ಬೆಳೆಸಿ, ಬೆಳೆದು ನಿಂತ ಮೇಲೆ ಒಂದೇ ಸಾರಿಗೆ ಕಷ್ಟದ ಸುರಿ ಮಳೆಯಾದರೆ ಅವರಾದರೂ ಹೇಗೆ ತಡೆದುಕೊಂಡಾರು? ನಾವು ಮಕ್ಕಳ ಮನಸ್ಸನ್ನು ದುರ್ಬಲಗೊಳಿಸುತ್ತಾ ಸಾಗಿದ್ದೇವೆ. ಅವರನ್ನು ಗಟ್ಟಿಗರನ್ನಾಗಿ ಮಾಡುವ, ಏನೇ ಬರಲಿ ಜಯಿಸುವೆ, ಇದಿಲ್ಲದಿದ್ದರೆ ಮತ್ತೂಂದು ಅನ್ನುವ ಮನೋಭಾವವನ್ನು ಅವ ರಲ್ಲಿ ಬಿತ್ತಲು ಸೋತಿದ್ದೇವೆ. ಶಿಕ್ಷಣ ಮತ್ತು ಅದು ಹಾಕಿ ಕೊಡುತ್ತಿರುವ ಮಾರ್ಗ ಯಾವುದೂ ಕೂಡ ವಿದ್ಯಾರ್ಥಿಯ ಸಹಾಯಕ್ಕೆ ಬರುತ್ತಿಲ್ಲ.

ವಿದ್ಯಾರ್ಥಿಗಳೇ…ಸಮಸ್ಯೆ ಏನೇ ಇರಲಿ, ಆತ್ಮಹತ್ಯೆ ಯಾವ ತ್ತಿಗೂ ಒಂದು ಪರಿಹಾರವಲ್ಲ. ಅದೊಂದು ಪರಿಹಾರವೇ ಆಗಿದ್ದರೆ ಇಂದು ಭೂಮಿಯ ಮೇಲೆ ಯಾರೂ ಇರುತ್ತಿರಲಿಲ್ಲ. ಜೀವನದಲ್ಲಿ ನೂರೊಂದು ಪರೀಕ್ಷೆ ಬರೆಯಬಹುದು. ಗೆಲುವು ಯಾವತ್ತೂ ಒಬ್ಬರ ಸ್ವತ್ತಲ್ಲ! ಶ್ರಮ ಪಟ್ಟವರ ಸ್ವತ್ತು. ಶ್ರಮ ಪಡಿ ಗೆಲುವು ಪಡೆಯಿರಿ. ಸೋಲುಗಳು ನಿಮ್ಮನ್ನು ಪರೀಕ್ಷೆ ಮಾಡಲು ಬರುತ್ತವೆ. ಅದರಲ್ಲಿ ಪಾಸಾಗಿ. ಪ್ರೀತಿ ಹೊರಟು ಹೋದರೆ ಹೋಗಲಿ ನಾಳೆ ಮತ್ತೆಲ್ಲೋ ಹೊಸ ಚಿಗುರು ಮೂಡುತ್ತದೆ. ಬದುಕು ಬಂಜೆಯಲ್ಲ, ಛಲವಿರುವವನ ಪಾಲಿಗೆ ಅದು ಕಾಮ ಧೇನು. ನಿಮಗೆ ಆತ್ಮಸ್ಥೈರ್ಯಬೇಕು. ಮನೆಯಲ್ಲಿ ಬಡತನ

ವಿದೆ ನಿಜ, ಆದರೆ ಆ ಬಡತನವನ್ನು ನೀವು ಸೋಲಿಸಬೇಕೆ ಹೊರೆತು ಅದು ನಿಮ್ಮನ್ನು ಸೋಲಿಸಬಾರದು. ಓದುವ ಸಮ ಯದಲ್ಲಿ ಮೊಬೈಲ್‌ ಹುಚ್ಚೇಕೆ? ಮಾಧ್ಯಮಗಳ ತೀವ್ರ ಅವಲಂಬನೆ ಏಕೆ? ಯಾವುದರಲ್ಲೇ ಆಗಲಿ ಒಳ್ಳೆಯದನ್ನು ಹಂಸದಂತೆ ಹೀರಿಕೊಳ್ಳಬೇಕು. ಸೆಟೆದು ನಿಂತರೆ ಸವಾಲುಗಳು ಸೋತು ನಿಮ್ಮ ಸೇವಕನಾಗುತ್ತವೆ. ಅಂತಹ ಅವಕಾಶಗಳಿದ್ದಾ ಗಿಯೂ ಬದುಕಿನಿಂದಲೇ ಓಡಿ ಹೋಗುವ ಹೇಡಿತನ ಬೇಡ.

ಸದಾಶಿವ್‌ ಸೊರಟೂರು, ಶಿಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next