ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸದನದಲ್ಲಿ ಬಹುಮತ ಸಾಬೀತು ಪಡಿಸಲು 15ದಿನಗಳ ಗಡುವಿದೆ. ಬಹುಮತ ಸಾಬೀತಿಗೆ ಅಗತ್ಯ ಶಾಸಕ ಸ್ಥಾನಗಳ ಲೆಕ್ಕಾಚಾರ ವಿಚಾರ ರಾಜಕೀಯ ಮೇಲಾಟಗಳಿಗೆ ಕಾರಣವಾಗಿರುವ ಬೆನ್ನಲ್ಲೇ,ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂ ಸಿದ್ದ ಸಂಬಂಧ ಜೆಡಿಎಸ್ನ 7 ಮಂದಿ ಬಂಡಾಯ ಶಾಸಕರ ಅನರ್ಹತೆ ದೂರಿನ ಸಂಬಂಧದ ವಿಧಾನಸಭಾಧ್ಯಕ್ಷರ ತೀರ್ಪು ಕೂಡ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್ನಿಂದ ಕಾಂಗ್ರೆಸ್ಗೆ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾಗಿರುವ ಜಮೀರ್ ಅಹಮದ್, ಅಖಂಡ ಶ್ರೀನಿವಾಸಮೂರ್ತಿ, ಭೀಮಾನಾಯಕ್ನ್ನೊಳಗೊಂಡ 7 ಶಾಸಕರ ವಿರುದ್ಧ ಒಂದು ವೇಳೆ ಸ್ಪೀಕರ್ ವ್ಯತಿರಿಕ್ತ ತೀರ್ಪು ನೀಡಿದರೆ ಮೂವರು ಶಾಸಕತ್ವ ಸ್ಥಾನ ಅನೂರ್ಜಿತಗೊಳ್ಳಬಹುದೇ?
ಹಾಗೊಂದು ವೇಳೆ ಆದರೆ, ಬಹುಮತ ಸಾಬೀತಿನ ಸಂಖ್ಯೆ ಇಳಿಕೆಯಾಗುವ ಲೆಕ್ಕಾಚಾರ ಬಿಜೆಪಿ ಮುಂದಿತ್ತು ಎಂದು ಹೇಳಲಾಗುತ್ತಿದೆ. ಆದರೆ, ಸ್ಪೀಕರ್ ಆಗಿದ್ದ ಕೆ.ಬಿ ಕೋಳಿವಾಡ ಚುನಾವಣೆಯಲ್ಲಿ ಸೋತಿರುವುದರಿಂದ ಸ್ಪೀಕರ್ ಸ್ಥಾನವೂ ಕಳೆದುಕೊಂಡಿದ್ದಾರೆ. ಹೀಗಾಗಿ ತೀರ್ಪು ಪ್ರಕಟಣೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ.
ಪಕ್ಷದ ವಿಪ್ ಉಲ್ಲಂಘನೆ ಸಂಬಂಧ ಬಂಡಾಯ ಶಾಸಕರ ಅನರ್ಹತೆ ಕುರಿತು ದೂರಿನ ತೀರ್ಪು ಪ್ರಕಟಿಸುವಂತೆ ಕೋರಿದ್ದ ಜೆಡಿಎಸ್ನ ಶಾಸಕರ ರಿಟ್ ಅರ್ಜಿ ಮಾನ್ಯ ಮಾಡಿದ್ದ ಸ್ಪೀಕರ್ ಕೆ.ಬಿ ಕೋಳಿವಾಡ ಅವರಿಗೆ, ತೀರ್ಪು ಪ್ರಕಟಿಸುವಂತೆ ಏಕಸದಸ್ಯ ಪೀಠ ನಿರ್ದೇಶನ ನೀಡಿತ್ತು.
ಈ ತೀರ್ಪು ಪ್ರಶ್ನಿಸಿ ಜಮೀರ್ ಅಹಮದ್ ಸೇರಿ ಮತ್ತಿತರರು ಸಲ್ಲಿಸಿದ್ದ ಮೇಲ್ಮನವಿಗಳನ್ನು ಇತ್ಯರ್ಥಪಡಿಸಿದ್ದ ವಿಭಾಗೀಯ ಪೀಠಕ್ಕೆ, ಮೇ 27ರೊಳಗೆ ತೀರ್ಪು ಪ್ರಕಟಿಸುವುದಾಗಿ ಏಕಸದಸ್ಯ ಪೀಠದ ಸ್ಪೀಕರ್ ಕೂಡ ಮೆಮೊ ಸಲ್ಲಿಸಿದ್ದರು. ಆದರೆ, ಇದೀಗ ಸ್ಪೀಕರ್ ಆಗಿದ್ದ ಕೆ.ಬಿ ಕೋಳಿವಾಡ ಶಾಸಕ ಸ್ಥಾನವನ್ನು ಕಳೆದುಕೊಂಡಿರುವುದರಿಂದ ಈ ಪ್ರಕರಣ ಬಹುತೇಕ ಮುಕ್ತಾಯಗೊಂಡಂತೆ ಎಂದು ಹೈಕೋರ್ಟ್ ಹಿರಿಯ ವಕೀಲರೊಬ್ಬರು ಅಭಿಪ್ರಾಯಪಡುತ್ತಾರೆ.
ಸ್ಪೀಕರ್ ಸ್ಥಾನ ಕಳೆದುಕೊಂಡರೂ ಶಾಸಕರ ಕುರಿತ ದೂರುಗಳ ಬಾಕಿ, ಉಳಿದ ತೀರ್ಪು ಪ್ರಕಟಣೆ ಸಂಬಂಧ ಬಗ್ಗೆ ಸುಪ್ರೀಂಕೋರ್ಟ್ ಕೂಡ ಯಾವುದೇ ಮಾರ್ಗಸೂಚಿಗಳನ್ನು ನೀಡಿಲ್ಲ. ಅಲ್ಲದೆ, ನೂತನ ಸ್ಪೀಕರ್ ಅಧಿಕಾರ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆಯೂ ಕಾನೂನು ಜಿಜ್ಞಾಸೆಯಿದೆ.
ಹೀಗಾಗಿ ಈ ಪ್ರಕರಣದ ತೀರ್ಪು ಪ್ರಕಟಣೆಯ ಪ್ರಶ್ನೆಯೂ ಸದ್ಯಕ್ಕೆ ಉದ್ಭವಿಸುವುದಿಲ್ಲ. ಈಗಾಗಲೇ ಈ ಹಿಂದೆಯೇ ಹಿಂದಿನ ಅವಧಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಕಾನೂನು ತಜ್ಞರು ಹೇಳುತ್ತಾರೆ.