Advertisement

“ಭಕ್ತ ಪ್ರಹ್ಲಾದ’ನಿಗೂ “ಅವನೇ ಶ್ರೀಮನ್ನಾರಾಯಣ’ನಿಗೂ ಏನಿದು ಲಿಂಕ್‌?

12:48 PM Oct 11, 2019 | Lakshmi GovindaRaju |

ರಕ್ಷಿತ್‌ ಶೆಟ್ಟಿ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ “ಅವನೇ ಶ್ರೀಮನ್ನಾರಾಯಣ’ ತೆರೆಗೆ ಬರಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಸದ್ಯ ಭರ್ಜರಿಯಾಗಿಯೇ ಚಿತ್ರದ ಪ್ರಮೋಶನಲ್‌ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಚಿತ್ರದ ಬಗ್ಗೆ ಒಂದರ ಹಿಂದೊಂದರಂತೆ ಹೊಸ ಹೊಸ ಸುದ್ದಿಗಳನ್ನು ಹೊರಬಿಡುತ್ತಿದೆ. ಇದೀಗ ಅಂಥದ್ದೇ ಒಂದು ಸುದ್ದಿ “ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೂ ಡಾ. ರಾಜಕುಮಾರ್‌ ಅಭಿನಯದ “ಭಕ್ತ ಪ್ರಹ್ಲಾದ’ ಚಿತ್ರಕ್ಕೂ ಏನಾದರೂ ಸಂಬಂಧವಿದೆಯಾ ಅನ್ನೋ ಪ್ರಶ್ನೆಯನ್ನು ಮೂಡುವಂತೆ ಮಾಡಿದೆ.

Advertisement

ಹೌದು, ಇತ್ತೀಚೆಗೆ “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನ್‌ ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿರುವ ಡಾ.ರಾಜಕುಮಾರ್‌ ಅಭಿನಯದ “ಭಕ್ತ ಪ್ರಹ್ಲಾದ’ ಚಿತ್ರದ ಕ್ಲಿಪಿಂಗ್‌ ಇದಕ್ಕೆಲ್ಲ ಕಾರಣವಾಗಿದೆ. ಈ ಕ್ಲಿಪ್ಪಿಂಗ್‌ನಲ್ಲಿ ಡಾ. ರಾಜಕುಮಾರ್‌ ಮತ್ತು ಬಾಲನಟ ಪುನೀತ್‌ ರಾಜಕುಮಾರ್‌ ಒಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯವೊಂದರಲ್ಲಿ, ರಾಜಕುಮಾರ್‌ ಅವರು “ಎಲ್ಲಿ ನಿನ್ನ ನಾರಾಯಣ?’ ಎನ್ನುವಾಗ ಭಕ್ತ ಪ್ರಹ್ಲಾದ ಹೇಳುವ ಡೈಲಾಗ್‌ನಲ್ಲಿ, “ಅವನೇ ಶ್ರೀಮನ್ನಾರಾಯಣ’ ಎನ್ನುವ ಮಾತು ಬರುತ್ತದೆ.

ಇದು “ಭಕ್ತ ಪ್ರಹ್ಲಾದ’ ಚಿತ್ರಕ್ಕೂ “ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೂ ಏನಾದ್ರೂ ಲಿಂಕ್‌ ಇದೆಯಾ ಎಂಬ ಕುತೂಹಲವನ್ನು ಹುಟ್ಟಿಸಿದೆ. ಇನ್ನು “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ರಕ್ಷಿತ್‌ ನಟಿಸಿರುವ ಪಾತ್ರದ ಹೆಸರೂ ನಾರಾಯಣ ಎನ್ನಲಾಗುತ್ತಿದ್ದು, ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ರಕ್ಷಿತ್‌ ಶೆಟ್ಟಿ ಚಿತ್ರಕ್ಕೂ “ಭಕ್ತ ಪ್ರಹ್ಲಾದ’ ಚಿತ್ರಕ್ಕೂ ಏನು ಸಂಬಂಧ? ಇದು ಚಿತ್ರದಲ್ಲಿ ಹೇಗೆ ವರ್ಕೌಟ್‌ ಆಗುತ್ತದೆ? ಎನ್ನುವ ಪ್ರಶ್ನೆಯನ್ನು ಸೋಶಿಯಲ್‌ ಮೀಡಿಯಾಗಳಲ್ಲಿ ಸಿನಿಪ್ರಿಯರು ಕೇಳುತ್ತಿದ್ದಾರೆ. ಆದರೆ ಇದರ ಬಗ್ಗೆ ಎಲ್ಲೂ ಬಾಯಿಬಿಡದ ಚಿತ್ರತಂಡದ ನಡೆ, ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ.

ಇನ್ನು ಪಂಚ ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ “ಅವನೇ ಶ್ರೀಮನ್ನಾರಾಯಣ’ ಇದೇ 70-80ರ ದಶಕದ ಕಥೆಯನ್ನು ಹೊಂದಿದ್ದು, ಆಕ್ಷನ್‌ ಕಂ ಸಸೆನ್ಸ್‌-ಥ್ರಿಲ್ಲರ್‌ ಶೈಲಿಯಲ್ಲಿ ತೆರೆಗೆ ಬರುತ್ತಿದೆ. ಹಾಲಿವುಡ್‌ನ‌ ಜನಪ್ರಿಯ ಶೆರ್ಲಾಕ್‌ ಹೋಮ್ಸ್‌ ಪತ್ತೇಧಾರಿ ಶೈಲಿ ಚಿತ್ರದ ಟೀಸರ್‌ಗಳಲ್ಲಿ ಕಾಣುತ್ತಿದ್ದು, ಇದೇ ತಿಂಗಳಾಂತ್ಯಕ್ಕೆ “ಅವನೇ ಶ್ರೀಮನ್ನಾರಾಯಣ’ನ ಟ್ರೇಲರ್‌ ಕೂಡ ರಿಲೀಸ್‌ ಆಗುವ ಸಾಧ್ಯತೆ ಇದೆ.

Advertisement

ಶ್ರೀಮನ್ನಾರಾಯಣನ ದರ್ಶನ ಪಡೆದ ತಂತ್ರಜ್ಞರು: ಇನ್ನು ಇತ್ತೀಚೆಗೆ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಕೆಲ ಶೋ ರೀಲ್‌ಗ‌ಳನ್ನು ಚಿತ್ರದ ತಂತ್ರಜ್ಞರಿಗೆ ತೋರಿಸಲಾಗಿದೆ. ಇದನ್ನು ನೋಡಿದ ತಂತ್ರಜ್ಞರು ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿ, ಮೆಚ್ಚುಗೆಯ ಮಾತುಗಳನ್ನಾಡಿದ್ದಾರಂತೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್‌ ಮಲ್ಲಿಕಾರ್ಜುನ್‌, “ನಮ್ಮ ತಂತ್ರಜ್ಞರೆಲ್ಲರೂ ಸುಮಾರು ಎರಡು ವರ್ಷ ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಅವರಿಗೆಲ್ಲಾ ವಿಶೇಷವಾಗಿ ಕೆಲ ಶೋ ರೀಲ್‌ ತೋರಿಸಿದೆವು. ಅದನ್ನು ನೋಡಿ ಅವರೆಲ್ಲಾ ಬಹಳ ಥ್ರಿಲ್‌ ಆದರು. ಸಿನಿಮಾ ರಿಲೀಸ್‌ಗಾಗಿ ಎಲ್ಲರೂ ಎಕ್ಸೈಟ್‌ಮೆಂಟ್‌ನಿಂದ ಕಾದಿದ್ದಾರೆ’ ಎನ್ನುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next