Advertisement

ಶೈಕ್ಷಣಿಕ ವರ್ಷದ ಭವಿಷ್ಯ ಏನು?

12:51 AM May 21, 2021 | Team Udayavani |

ಒಂದು ಶೈಕ್ಷಣಿಕ ವರ್ಷವನ್ನೇ ನುಂಗಿ ಹಾಕಿದ ಕೊರೊನಾ ಈಗ ಇನ್ನೊಂದು ವರ್ಷವನ್ನೂ ನುಂಗಲು ಬಾಯ್ದೆರೆದು ನಿಂತಿದೆ. ಇಂಥ ಸಮಯದಲ್ಲಿ ಇಡೀ ಶಿಕ್ಷಣ ವ್ಯವಸ್ಥೆಯ ಭವಿಷ್ಯ ಏನು ಎಂಬ ಪ್ರಶ್ನೆ  ಎಲ್ಲರನ್ನೂ ಕಾಡುತ್ತಿದೆ. ಯಾರಲ್ಲೂ  ಸಮರ್ಪಕ ಉತ್ತರ ಇಲ್ಲ. ರಾಜ್ಯ ಸರಕಾರ ಈ ನಿಟ್ಟಿನಲ್ಲಿ  ಸಮಿತಿಯೊಂದನ್ನು ರಚಿಸಲು ಮುಂದಾಗಿದೆ. ಈ ಹಂತದಲ್ಲಿ  “ಉದಯವಾಣಿ’ ರಾಜ್ಯದ ವಿವಿಧೆಡೆಯ ನೂರಕ್ಕೂ ಹೆಚ್ಚು ಶಿಕ್ಷಣ ಪರಿಣಿತರ ಅಭಿಪ್ರಾಯ ಸಂಗ್ರಹಿಸಿತು.

Advertisement

ಬೆಂಗಳೂರು:ಈ ವರ್ಷ ಕಲಿಕಾವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸದೇ ಹೋದರೆ ಇನ್ನೊಂದು ಶೈಕ್ಷಣಿಕ ವರ್ಷ ನಷ್ಟವಾಗಬಹುದೆಂಬ ಆತಂಕವನ್ನು ರಾಜ್ಯದ ಶಿಕ್ಷಣ ತಜ್ಞರು ವ್ಯಕ್ತಪಡಿಸಿದ್ದಾರೆ. “ಉದಯವಾಣಿ’ ನಡೆಸಿದ ಅಭಿಮತ ಸಂಗ್ರಹದಲ್ಲಿ ನೂರಕ್ಕೂ ಹೆಚ್ಚು ಮಂದಿ ಪರಿಣಿತರು, ಸರಕಾರಕ್ಕೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಸದ್ಯಕ್ಕೆ ಆನ್‌ಲೈನ್‌ ಶಿಕ್ಷಣವೊಂದೇ ಮಾರ್ಗ ಎಂದು ಬಹುತೇಕ ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಲ್ಲದೆ, ಈ ವಿಧಾನವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದಿದ್ದಾರೆ. ಗ್ರಾಮೀಣ ಭಾಗದ ಶಿಕ್ಷಣ ತಜ್ಞರು ಮಾತ್ರ ಆನ್‌ಲೈನ್‌ ಶಿಕ್ಷಣದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದು, ಶಾಲೆ, ಕಾಲೇಜು ಆರಂಭಿಸಬೇಕಾದ ಅನಿವಾರ್ಯತೆ ಬಗ್ಗೆ ಒತ್ತಿ ಹೇಳಿದ್ದಾರೆ.ನಗರ ಪ್ರದೇಶಗಳಲ್ಲಿ ಆನ್‌ಲೈನ್‌ ಸಲೀಸಾದರೂ ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್‌ ದುಸ್ತರ. ಇದರಿಂದ ಡಿಜಿಟಲ್‌ ಕಂದಕ ಏರ್ಪಡುತ್ತದೆ ಎನ್ನುವ ಆತಂಕ ಎಲ್ಲರದೂ.

ಏಕೀಕೃತ ಪಠ್ಯ ರೂಪಿಸಿ :

ಮಕ್ಕಳ ನಿರಂತರ ಕಲಿಕೆಗೆ ಬೇಕಾದ ಮಾರ್ಗೋಪಾಯ ಅತ್ಯಗತ್ಯ. ಇದಕ್ಕಾಗಿ ಸಮೂಹ ಮಾಧ್ಯಮಗಳನ್ನು ಸಮರ್ಪಕ ವಾಗಿ ಬಳಸಿಕೊಳ್ಳಬೇಕು.  ಸ್ವ-ಕಲಿಕೆಗೆ ಪರಿಕರ ಸಿದ್ಧಪಡಿಸಿ, ಉನ್ನತ ಶಿಕ್ಷಣದಲ್ಲಿ ಅಂಚೆತೆರಪಿನ ಶಿಕ್ಷಣ ಇರುವಂತೆ ಪಠ್ಯದ ಮೂಲಭೂತ ಅಂಶಗಳನ್ನು ಮಕ್ಕಳು ಕಲಿಯಲು ಅನುಕೂಲ ಆಗುವಂತೆ ಪಠ್ಯದ ಪರಿಷ್ಕರಣೆ ಆಗಲೇಬೇಕು. ಎರಡು ವರ್ಷಗಳ ಪಠ್ಯದ ಮೂಲಾಂಶಗಳನ್ನು ಆಧರಿಸಿ ಒಂದು ಪಠ್ಯ ತಯಾರಿಸಿ, ಈಗಆಗಿರುವ ಕೊರತೆ ನೀಗಿಸಬೇಕು.ಪ್ರೊ| ಎಂ.ಕೆ. ಶ್ರೀಧರ್‌, ಶಿಕ್ಷಣ ತಜ್ಞ

Advertisement

ಸರಕಾರವೇ ಪರಿಕರ ನೀಡಲಿ :

ಆನ್‌ಲೈನ್‌ ಪರ್ಯಾಯ ಎಂಬುದಾದರೆ ಬೇಕಾದ ಪರಿಕರವನ್ನು ಸರಕಾರವೇ ಮಕ್ಕಳಿಗೆ ನೀಡಬೇಕು. ಹಳ್ಳಿ ಅಥವಾ ನಗರ ಪ್ರದೇಶದಲ್ಲಿ ಸ್ಥಳೀಯ ಪದವೀಧ ರರು ಅಥವಾ ಶೈಕ್ಷಣಿಕ ವಿಷಯ ತಿಳಿದು,ಅರ್ಥೈಸಿಕೊಂಡು, ಮಕ್ಕಳಿಗೆ ಕಲಿಸುವವ ರನ್ನು ಸೇರಿಸಿ, ಮಕ್ಕಳ ಪಠ್ಯ ಪುಸ್ತಕ ನೀಡಿ, ಐದಾರು ಮಕ್ಕಳಂತೆ ಹಂಚಿಕೆ ಮಾಡಿ, ಕಲಿಕೆ ನಿರಂತರತೆ ಕಾಪಾಡಿಕೊಳ್ಳಬಹುದು. ಕೋವಿಡ್ ಇಲ್ಲದ ಕಡೆಗಳಲ್ಲಿ ಶಾಲೆಗೆ ಮಕ್ಕಳನ್ನು ಕರೆಸಿ, ಪಾಠ ಮಾಡಬಹುದು.ವಿ.ಪಿ. ನಿರಂಜನಾರಾಧ್ಯ, ಶಿಕ್ಷಣ ತಜ್ಞ

ಪ್ರಾಕ್ಟಿಕಲ್ಸಹ ಮನೆಯಲ್ಲೇ! :

ವಿದ್ಯಾರ್ಥಿಗಳಿಗೆ ಚಟುವಟಿಕೆ ಆಧಾರಿತ ಕಲಿಕೆ ಹಾಗೂ ನಿರಂತರ ಮೌಲ್ಯಾಂಕನ ಪದ್ಧತಿ ಅತ್ಯವಶ್ಯ. ಮನೆ ಯಲ್ಲಿಯೇ ಲಭ್ಯವಿರುವ ವಸ್ತುಗಳ ಆಧಾರದಲ್ಲಿ ವಿದ್ಯಾರ್ಥಿಗಳು ಚಟುವಟಿಕೆ, ವಿನ್ಯಾಸದಲ್ಲಿ ತೊಡಗುವಂತಾಗಬೇಕು. ಎಂಜಿನಿಯರಿಂಗ್‌ನ ಕೆಲವು ವಿಭಾಗದಲ್ಲಿ ಪ್ರಯೋಗದ  ವಿದ್ಯಾರ್ಥಿಗಳು ಮನೆಯ ಲ್ಲಿಯೇ ಮಾಡುವ ವ್ಯವಸ್ಥೆ ರೂಪಿಸಿದ್ದೇವೆ. ಎಲೆಕ್ಟ್ರಾನಿಕ್ಸ್‌ ವಿಭಾಗಕ್ಕೆ ಬೇಕಾದ ಕಿಟ್‌ಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಡಾ| ಅಶೋಕ ಶೆಟ್ಟರ, ಕುಲಪತಿ, ಕೆಎಲ್ ತಾಂತ್ರಿಕ ವಿ.ವಿ., ಹುಬ್ಬಳ್ಳಿ

ಆನ್ಲೈನ್ಶಿಕ್ಷಣವೇ ಸೂಕ್ತ :

ಸುರಕ್ಷಿತವಾಗಿರುವ ಕಲಿಕೆ ಈ ಸಂದ ರ್ಭಕ್ಕೆ ಅತ್ಯಂತ ಸಮಂಜಸವಾದ ವಿಧಾನ. ತಾವಿದ್ದಲ್ಲಿಯೇ ಕಲಿಯಬೇಕು, ತಾವಿದ್ದಲ್ಲಿಯೇ ಬೋಧಿಸಬೇಕು ಎನ್ನುವಂತಹ ಪದ್ಧತಿ ಇಂದಿನ ಪರಿಸ್ಥಿತಿಗೆ ಅನ್ವರ್ಥಕವಾ ಗುತ್ತದೆ. ಆನ್‌ಲೈನ್‌ ಶಿಕ್ಷಣ ಈಗ ಅತ್ಯಂತ ಸೂಕ್ತ. ಪರಿಸ್ಥಿತಿನೋಡಿಕೊಂಡು ಮುಂದಿನ ದಿನಗಳಲ್ಲಿ ಆನ್‌ಲೈನ್‌ ಹಾಗೂ ಆಫ್‌ಲೈನ್‌ ಶಿಕ್ಷಣದ ಬಗ್ಗೆ ತಜ್ಞರು, ಸರಕಾರ, ಸಂಘ-ಸಂಸ್ಥೆಗಳು ಸಮಾಲೋಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಡಾ| ಶಿವಮೂರ್ತಿ ಮುರುಘಾ ಶರಣರು, ಜಮುರಾ ವಿ.ವಿ. ಕುಲಾಧಿಪತಿ

Advertisement

Udayavani is now on Telegram. Click here to join our channel and stay updated with the latest news.

Next