Advertisement

ಸದ್ದಿಲ್ಲದೇ ಕೊಲ್ಲುವ ಮಧುಮೇಹದ ಲಕ್ಷಣಗಳೇನು, ಸರಳವಾಗಿ ತಡೆಗಟ್ಟೋದು ಹೇಗೆ

11:08 AM Oct 05, 2019 | mahesh |

ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಎನ್ನುವ ಪದ ಕೇಳಿದರೆ ಬೆಚ್ಚಿ ಬೀಳುವಂತಹ ಜನರು ನಮ್ಮಲ್ಲಿದ್ದಾರೆ. ಯಾಕೆಂದರೆ ಇದು ಒಮ್ಮೆ ನಮ್ಮ ದೇಹದಲ್ಲಿ ಕಾಣಿಸಿಕೊಂಡರೆ ಅದು ಸಂಪೂರ್ಣವಾಗಿ ದೇಹವನ್ನು ಹಿಂಡಿ ಬಿಡುತ್ತದೆ. ಇದನ್ನು ನಿಯಂತ್ರಯದಲ್ಲಿಟ್ಟುಕೊಳ್ಳುವುದು ಕೂಡ ಸವಾಲಿನ ಕೆಲಸ. ಇಂದು ವಿಶ್ವದಲ್ಲಿಯೇ ಭಾರತವು ಅತೀ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶವಾಗಿದೆ.

Advertisement

ಸಕ್ಕರೆ ಕಾಯಿಲೆ ಎಂದಾಕ್ಷಣ ಕಳವಳದಿಂದ ಮುಖ ಸಿಂಡರಿಸಿಕೊಳ್ಳುವವರೇ ಜಾಸ್ತಿ, ಅಂತಹ ರೋಗ ಈ ಸಕ್ಕರೆ ಕಾಯಿಲೆ/ಡಯಾಬಿಟಿಸ್/ಮಧುಮೇಹ. ಮಧುಮೇಹ ರಕ್ತದಲ್ಲಿ ಗ್ಲೂಕೋಸ್ ಅಥವಾ ಸಕ್ಕರೆ ಮಟ್ಟ ಜಾಸ್ತಿಯಾಗುವುದರಿಂದ ಕಾಣಿಸಿಕೊಳ್ಳುವ ಒಂದು ರೋಗ ಲಕ್ಷಣ. ವ್ಯಕ್ತಿಯೊಬ್ಬನ ಶರೀರ ಸಾಕಷ್ಟು ಇನ್ಸುಲಿನ್ ಹಾರ್ಮೋನ್ ಉತ್ಪಾದಿಸದ್ದಿರೆ ಅಥವಾ ದೇಹವು ಇನ್ಸುಲಿನ್ಗೆ ಸರಿಯಾಗಿ ಸ್ಪಂದಿಸದೇ ಇದ್ದ ಪಕ್ಷದಲ್ಲಿ ಈ ಮಧುಮೇಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮಧುಮೇಹದಲ್ಲಿ ಎರಡು ಸಾಮಾನ್ಯ ವಿಧಗಳಿವೆ:
1ನೆಯ ವಿಧದ ಮಧುಮೇಹ:
1ನೆ ವಿಧದ ಮಧುಮೇಹವನ್ನು ಇನ್ಸುಲಿನ್ ಅವಲಂಬಿತ ಮಧುಮೇಹ ಎಂದು ಕೂಡ ಕರೆಯುತ್ತಾರೆ. ಇದನ್ನು ಸಾಮಾನ್ಯವಾಗಿ ಜ್ಯುವೆನಿಲ್ ಮಧುಮೇಹ ಎಂತಲೂ ಕರೆಯುತ್ತಾರೆ ಏಕೆಂದರೆ ಮಕ್ಕಳು ಮತ್ತು ಹದಿಹರೆಯದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ಆದರೆ ಕೆಲವೊಮ್ಮೆ 40 ವರ್ಷಗಳವರೆಗಿನ ವಯೋಮಾನದವರಲ್ಲೂ ಇದು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ.

2ನೆ ವಿಧದ ಮಧುಮೇಹ:
ಮಧುಮೇಹದ 2ನೆ ವಿಧ ಸಾಮಾನ್ಯವಾಗಿ ವಯಸ್ಕರಲ್ಲಿ ಮತ್ತು ಮುಖ್ಯವಾಗಿ ಅಧಿಕ ತೂಕದ ವ್ಯಕ್ತಿಗಳಲ್ಲಿ ಕಾಣಿಸಿಕೊಳ್ಳುತ್ತದೆ. ಶರೀರದ ಜೀವಕೋಶಗಳು ಇನ್ಸುಲಿನ್ಗೆ ಸರಿಯಾಗಿ ಪ್ರತಿಕ್ರಿಯಿಸದಂತಹ ಸ್ಥಿತಿಯಲ್ಲಿ ಹೆಚ್ಚಿನ ಇನ್ಸುಲಿನ್ ಅವಶ್ಯಕತೆಯನ್ನು ಪೂರೈಸಿಕೊಳ್ಳಲು ಮೇಧೋಜೀರಕಗ್ರಂಥಿ ವಿಫಲವಾದರೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ.

ಮಧುಮೇಹದ ಲಕ್ಷಣಗಳು
ಮಧುಮೇಹದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆರಂಭಿಕ ಹಂತದಲ್ಲಿ ಯಾವುದೇ ಲಕ್ಷಣಗಳು ಇರದಿರಬಹುದು, ಆದ್ದರಿಂದ ವ್ಯಕ್ತಿಯೊಬ್ಬರಿಗೆ ತನಗೆ ಮಧುಮೇಹ ಇದೆ ಎಂದು ತಿಳಿಯದೆ ಇರಬಹುದು. ನಮಗರಿವಿಲ್ಲದೆ ಯಾವುದೇ ಲಕ್ಷಣವಿಲ್ಲದೇ ಕಣ್ಣು, ಮೂತ್ರಪಿಂಡಗಳು, ಹೃದಯ ಮತ್ತು ರಕ್ತನಾಳಗಳಿಗೆ ಹಾನಿಯುಂಟಾಗುತ್ತಿರಬಹುದು.

Advertisement

ಮಧುಮೇಹದ ಕೆಲ ಲಕ್ಷಣಗಳು ಈ ತೆರನಾಗಿದೆ:

ಪದೇ ಪದೇ ಬಾಯಾರಿಕೆ ಅಗುವುದು: ಹೆಚ್ಚಿನ ನೀರು ಕುಡಿಯುವುದು ಒಳ್ಳೆ ಅಭ್ಯಾಸ. ಆದರೆ ನಿಮಗೆ ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಿ. ಯಾಕೆಂದರೆ ಬಾಯಾರಿಕೆಗೆ ನೀರು ಕುಡಿದ ಬಳಿಕವೂ ನೀರು ಕುಡಿಯುತ್ತಲಿದ್ದರೆ ಇದು ಮಧುಮೇಹದ ಲಕ್ಷಣವಾಗಿರಬಹುದು.

ಚರ್ಮದ ಅಸ್ವಾಭಾವಿಕ ಸ್ಥಿತಿಗಳು:
ರಕ್ತದಲ್ಲಿ ಇನ್ಸುಲಿನ್ ಪ್ರಮಾಣ ಏರುಪೇರಾದರೆ ಮೊದಲು ಇದರ ಪರಿಣಾಮ ಚರ್ಮದ ಮೇಲಾಗುತ್ತದೆ. ಚರ್ಮದಲ್ಲಿ ಕಪ್ಪು ಕಲೆಗಳಾಗುವುದು, ನೆರಿಗೆ ಮೂಡುವುದ, ಬಣ್ಣ ತಿಳಿಯಾಗುವುದು ಅಥವಾ ಗಾಢವಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತದೆ.

ಸತತ ತುರಿಕೆ:
ಮಧುಮೇಹದ ಮೂಲಕ ರಕ್ತ ಸಂಚಾರದಲ್ಲಿ ಕೊಂಚ ತೊಂದರೆ ಕಾಣಿಸಿಕೊಳ್ಳುತ್ತದೆ. ಪರಿಣಾಮವಾಗಿ ಹೃದಯ ಭಾಗದಿಂದ ದೂರದಲ್ಲಿರುವ ಪಾದ ಮತ್ತು ಕೈ ಭಾಗಗಳಿಗೆ ಸಾಕಷ್ಟು ರಕ್ತ ಪೂರೈಕೆಯಾಗದೇ ಆದ್ರತೆಯ ಕೊರತೆಯಿಂದ ಚರ್ಮ ಒಣಗುತ್ತದೆ. ಇದರಿಂದ ಆ ಭಾಗಗಳಲ್ಲಿ ಸತತ ತುರಿಕೆಯ ಲಕ್ಷಣ ಕಂಡುಬರುತ್ತದೆ.

ಸತತ ಸೋಂಕು :
ಮಧುಮೇಹ ಪ್ರಾರಂಭವಾಗುವಾಗ ದೇಹದರೋಗ ನಿರೋಧಕ ಶಕ್ತಿ ಕೊಂಚ ಕಡಿಮೆಗೊಳ್ಳುವುದಿರಿಂದ ರೋಗಿಗಳು ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ಸುಗಳ ದಾಳಿಗೆ ಸುಲಭವಾಗಿ ತುತ್ತಾಗುತ್ತಾರೆ.

ಉಸಿರಿನಲ್ಲಿ ದುರ್ವಾಸನೆ:
ಬಾಯಿಯ ಸ್ವಚ್ಛತೆಯನ್ನು ಕಾಪಾಡಿಕೊಂಡ ಬಳಿಕವೂ ದುರ್ವಾಸನೆ ದೂರವಾಗದಿದ್ದರೆ ಮಧುಮೇಹದ ಪರೀಕ್ಷೆಯಾಗಲೇಬೇಕು ಎಂಬುದನ್ನು ಸೂಚಿಸುತ್ತದೆ. ಏಕೆಂದರೆ ಬಾಯಿಗೆ ಲಭಿಸುವ ಲಾಲಾರಸದಲ್ಲೂ ಸಕ್ಕರೆ ಅಂಶ ಹೆಚ್ಚಿದ್ದು ಇಲ್ಲಿ ಬ್ಯಾಕ್ಕೀರಿಯಾಗಳು ಸಕ್ಕರೆಯನ್ನು ಶೀಘ್ರವಾಗಿ ಕೊಳೆಸುತ್ತದೆ.

ದೇಹದ ತೂಕದಲ್ಲಿ ಏರುಪೇರು:
ನಮಗರಿವಿಲ್ಲದೆ ದೇಹದ ತೂಕದಲ್ಲಿ ದಿನೇ ದಿನೇ ಇಳಿಮುಖವಾಗುತ್ತಿರುವುದು ಇನ್ನೊಂದು ಸ್ಪಷ್ಟ ಸೂಚನೆಯಾಗಿರುತ್ತದೆ. ರಕ್ತದಲ್ಲಿ ಸಕ್ಕರೆ ಇಲ್ಲದಿದ್ದರೆ ಅಥವಾ ಇದ್ದಿದ್ದೂ ಬಳಕೆಯಾಗದೇ ಇದ್ದರೆ ಜೀವಕೋಶಗಳು ತಮ್ಮ ಸಾಮರ್ಥ್ಯಕ್ಕೆ ಪೂರಕವಾದ ಕೆಲಸಗಳನ್ನು ನಿರ್ವಹಿಸಲಾಗದೆ ಇರಬಹುದು. ಆಗ ಅನಿವಾರ್ಯವಾಗಿ ದೇಹಕ್ಕೆ ಸಂಗ್ರಹವಾಗಿದ್ದ ಕೊಬ್ಬನ್ನು ಬಳಸಿಕೊಳ್ಳಬೇಕಾಗುತ್ತದೆ. ಇದು ಶೀಘ್ರವಾಗಿ ತೂಕ ಇಳಿಯಲು ಕಾರಣವಾಗುತ್ತದೆ.

ನಿಶ್ಯಕ್ತಿಯಿಂದ ಬಳಲುವುದು:
ಸರಿಯಾಗಿ ನಿದ್ರೆ ಬರುತ್ತಿದ್ದರೂ ದೇಹ ಮಾತ್ರ ಬಳಲಿಕೆಯಿಂದ ಇದ್ದರೆ ಆಗ ಮಾತ್ರ ಇದು ಮಧುಮೇಹದ ಲಕ್ಷಣವಾಗಿರಬಹುದು. ಆಗ ನಾವು ತಿನ್ನುತ್ತಿರುವ ಆಹಾರವು ಸರಿಯಾಗಿ ವಿಭಜನೆಗೊಳ್ಳದೆ ಅದರಲ್ಲಿ ಇರುವಂತಹ ಪೋಷಕಾಂಶಗಳನ್ನು ಶಕ್ತಿಯ ರೂಪದಲ್ಲಿ ದೇಹವು ಸದುಪಯೋಗಪಡಿಸಿಕೊಳ್ಳಲು ಆಗದು. ಇದರಿಂದಾಗಿ ಅಂತಹ ವ್ಯಕ್ತಿಗಳಲ್ಲಿ ದಿನವಿಡಿ ಆಯಾಸ ಕಾಡುವುದು ಸಾಮಾನ್ಯವಾಗುತ್ತದೆ.

ಹಸಿವು ಆಗುವುದು:
ಇನ್ಸುಲಿನ್ ಪ್ರತಿರೋಧಕದಿಂದಾಗಿ ದೇಹದಲ್ಲಿರುವ ರಕ್ತನಾಳಗಳು ಸಕ್ಕರೆಯನ್ನು ಹೀರಿಕೊಳ್ಳಲು ವಿಫಲವಾದ ವೇಳೆ ಬೇರೆ ಮೂಲಗಳಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಿರುವುದರಿಂದ ಹಸಿವಿನ ಪ್ರಮಾಣ ಹೆಚ್ಚಾಗುತ್ತಾ ಇರುವುದು.

ದೃಷ್ಟಿ ಮಂದವಾಗುವುದು:
ಮಧು ಮೇಹದ ಮತ್ತೊಂದು ಪ್ರಮುಖ ಲಕ್ಷಣವೆಂದರೆ ದೃಷ್ಟಿ ಮಂದವಾಗುವುದು. ಕಣ್ಣಿನಲ್ಲಿ ದ್ರವವು ಶೇಖರಣೆಯಾಗುವುದು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೊದಲು ಪರೀಕ್ಷೆ ಮಾಡಿಕೊಂಡು ಅದನ್ನು ನಿಯಂತ್ರಣಕ್ಕೆ ತರುವುದು ಉತ್ತಮ.

ಗಾಯ ಒಣಗಲು ತುಂಬಾ ಸಮಯ ಬೇಕಾಗುತ್ತದೆ:
ಯಾವುದೇ ಗಾಯ ಅಥವಾ ತರಚಿದ ಗಾಯವು ಗುಣವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತಾ ಇದ್ದರೆ ಆಗ ದೇಹದಲ್ಲಿ ಏನೂ ಸರಿಯಾಗಿಲ್ಲವೆಂದು ತಿಳಿಯಬೇಕು.

ಕೇಳುವ ಸಾಮರ್ಥ್ಯ ಕುಂದುವುದು:
ಇತ್ತೀಚಿನ ಸಂಶೋಧನೆಯ ಪ್ರಕಾರ ಮಧುಮೇಹದ ಪರಿಣಾಮವಾಗಿ ಕಿವಿಯ ಶ್ರವಣ ಶಕ್ತಿಗೆ ರಕ್ತ ಸಂಚಾರ ಒದಗಿಸುವ ಸೂಕ್ಷ್ಮ ನರಗಳ ಮೇಲೂ ಪ್ರಭಾವ ಬೀರುವ ಮೂಲಕ ಕಿವಿಯ ಕೇಳುವಿಕೆ ಕ್ಷಮತೆ ಕಡಿಮೆಯಾಗುತ್ತದೆ.

ಮಧುಮೇಹ ತಡೆಗಟ್ಟುವ ಉತ್ತಮ ಜೀವನ ವಿಧಾನ:

1)ಉತ್ತಮ ಆಹಾರ: ಉತ್ತಮ ಸಂತುಲಿತ ಆಹಾರ ಸಧೃಡ ಆರೋಗ್ಯಕ್ಕೆ ಅತೀಮುಖ್ಯ. ಅತಿಯಾದ ಸಿಹಿಯನ್ನು ಸೇವಿಸದೇ ಎಣ್ಣೆಯಲ್ಲಿ ಕರಿದ ತಿಡ್ಡಿಗಳನ್ನು ಆದಷ್ಟು ಮಿತವಾಗಿ ಸೇವಿಸಿದರೆ ಒಳಿತು. ದಿನಕ್ಕೆಒಂದು ಬಾರಿಯಾದರು ದ್ವಿದಳ ಧಾನ್ಯದ ಉಪಯೋಗ, ಹೆಸರು ಕಾಳಿನ ಉಪಯೋಗ ಉತ್ತಮ. ಯಥೇಚ್ಛ ತರಕಾರಿ ಉಪಯೋಗ, ನಿಯಮಿತಮಾಗಿ ಹಣ್ಣು ಹಂಪಲುಗಳ ಸೇವನೆ. ಆದಷ್ಟು ಸ್ಮಚ್ಛ ಆಹಾರವನ್ನೇ ಉಪಯೋಗಿಸುವುದು. ಮೈದಾವನ್ನು ಸಂಪೂರ್ಣವಾಗಿ ವರ್ಜಿಸುವುದು. ಆದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವಿಸುವುದು. ಸಕ್ಕರೆ , ಬೆಲ್ಲ, ಜೇನಿನಂತಹ ನೇರ ಸಿಹಿಯನ್ನು ಆದಷ್ಟು ಕಡಿಮೆ ಸೇವಿಸುವುದು ಇತ್ಯಾದಿ ಆಹಾರ ವಿಧಾನಗಳಿಂದ ಮಧುಮೇಹ ಬಾರದಂತೆ ತಡೆಗಟ್ಟಬಹುದು.

2)ರಕ್ತ ಪರೀಕ್ಷೆಮಾಡಿಸಿಕೊಳ್ಳಿ: ಆರಂಭಿಕ ಹಂತದ ಮಧುಮೇಹದಲ್ಲಿ ಸಕ್ಕರೆಯ ಅಂಶವು ಸಕ್ಕರೆ ಕಾಯಿಲೆಯಲ್ಲಿರುವುದಕ್ಕಿಂತ ಕಡಿಮೆಯಿದ್ದು ಸಾಮಾನ್ಯಕ್ಕಿಂತ ಹೆಚ್ಚಿರುತ್ತದೆ. ಇದು 2ನೇ ವಿಧದ ಸಕ್ಕರೆ ಕಾಯಿಲೆಯ ಮುನ್ಸೂಚನೆಯಾಗಿರುತ್ತದೆ. ಒಬ್ಬ ವ್ಯಕ್ತಿ ಪ್ರೀಡಯಾಬಿಟಿಸ್ ಹಂತದಲ್ಲಿರುವುದಾದರೆ ಅವನ ರಕ್ತದಲ್ಲಿನ ಸಕ್ಕರೆ ಅಂಶದ ಪ್ರಮಾಣ ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಸಾಧ್ಯವಿದೆ. ಆದರೆ 2ನೇ ವಿಧದ ಸಕ್ಕರೆ ಕಾಯಿಲೆಯನ್ನು ಪೂರ್ತಿ ಗುಣ ಪಡಿಸಲು ಸಾಧ್ಯವಿಲ್ಲ. ಆಗಾಗ ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಪರೀಕ್ಷಿಸಿಕೊಳ್ಳುತ್ತಿರಬೇಕು. ಯಾಕೆಂದರೆ ಮೊದಲನೆಯ ಹಂತದಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಆದ್ದರಿಂದ ಇದು ಜನರಲ್ಲಿ ಇದ್ದರೂ ಅವರಿಗೆ ತಿಳಿಯದೇ ಹೋಗಬಹುದು.

ನೀವು ನಿಮ್ಮ ಹೆತ್ತವರಿಂದ ಅನುವಂಶೀಯವಾಗಿ ಸಕ್ಕರೆ ಕಾಯಿಲೆಯ ಅಂಶ ಬರದಂತೆ ತಡೆಯಲು ಸಾಧ್ಯವಿಲ್ಲ. ಆದರೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಲು ಸಾಧ್ಯ. ಆರೋಗ್ಯ ಕಾಪಾಡಿಕೊಳ್ಳಲು ಮಾಡುವ ಪ್ರಯತ್ನ ವ್ಯರ್ಥವಾಗುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next