Advertisement

ಕೆಲಸ ಮಾಡಲು ಯಾವ ಖಾತೆಯಾದರೇನು? ಕುಮಾರಸ್ವಾಮಿ 

06:00 AM Jun 10, 2018 | |

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ತಮಗೆ ಲಭಿಸಿದ ಖಾತೆಗಳ ಬಗ್ಗೆ ಜೆಡಿಎಸ್‌ನ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, “ಕೆಲಸ ಮಾಡಲು ಯಾವ ಖಾತೆ ಯಾದರೇನು? ಮೊದಲು ಕೊಟ್ಟ ಖಾತೆಗಳನ್ನು ನಿಭಾಯಿಸಿ’ ಎಂದು ಹೇಳಿದ್ದಾರೆ.

Advertisement

ಜೆ.ಪಿ.ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ತಮಗೆ ಇಂತಹ ಖಾತೆಯೇ ಬೇಕು ಎಂದು ಅಸಮಾಧಾನಗೊಂಡವರು ಕೇಳಬೇಕಲ್ಲವೇ? ಕೆಲಸ ಮಾಡುವವರಿಗೆ ಯಾವ ಖಾತೆ
ಯಾದರೇನು? ಅಷ್ಟಕ್ಕೂ ಯಾರೂ ನಮ್ಮ ಬಳಿ ಅಸಮಾಧಾನ ತೋಡಿಕೊಂಡಿಲ್ಲ ಮತ್ತು ಇಂತಹ ಖಾತೆಯೇ ಬೇಕು ಎಂದು ಕೇಳಿಲ್ಲ’ ಎಂದರು.

ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ ಬಗ್ಗೆ ಜಿ.ಟಿ.ದೇವೇಗೌಡ ಮತ್ತು ಸಣ್ಣ ನೀರಾವರಿ ಖಾತೆ ನೀಡಿದ ಬಗ್ಗೆ ಸಿ.ಎಸ್‌.ಪುಟ್ಟರಾಜು ಅಸಮಾಧಾನಗೊಂಡಿದ್ದಾರಂತಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ,”ಕೆಲಸ ಮಾಡಲು ಉನ್ನತ ಶಿಕ್ಷಣ ಮತ್ತು ಸಣ್ಣ ನೀರಾವರಿಗಿಂತ ಬೇರೆ ಖಾತೆ ಬೇಕೇ? ಕೆಲಸ ಮಾಡಲು ಮನಸ್ಸಿರುವ ಸಚಿವರು ಯಾವ ಖಾತೆ
ಕೊಟ್ಟರೂ ಯಶಸ್ವಿಯಾಗಿ ನಿಭಾಯಿಸುತ್ತಾರೆ. ಅದನ್ನು ಬಿಟ್ಟು ಇಂತಹದೇ ಖಾತೆ ಬೇಕೆಂದು ಹೇಳುವುದಿಲ್ಲ. ಕೊಟ್ಟ ಖಾತೆ ನಿಭಾಯಿಸುವ ಕೆಲಸ ಮಾಡಲಿ’ ಎಂದು ಕಿಡಿ ಕಾರಿದರು.

ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಮುನ್ನ ಸಚಿವರನ್ನಾಗಿ ಮಾಡಿ ಎಂದು ದುಂಬಾಲು ಬೀಳುತ್ತಾರೆ. ನಂತರ ಇಂಥದ್ದೇ ಖಾತೆ ಬೇಕು, ವಿಧಾನಸೌಧದ ಮೂರನೇ ಮಹಡಿಯಲ್ಲೇ ಕಚೇರಿ ಬೇಕು ಎಂದು ಕೇಳುತ್ತಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಟಿಡಿ ಮನೆ ಬಳಿ ಸರ್ಕಾರಿ ಕಾರು ಸಚಿವ ಜಿ.ಟಿ.ದೇವೇಗೌಡರಿಗೆ ನೀಡಿದ್ದ ಸರ್ಕಾರಿ ಕಾರನ್ನು ಚಾಲಕ ಶನಿವಾರ ಸದಾಶಿವನಗರದಲ್ಲಿರುವ ಅವರ ಮನೆ ಮುಂದೆ ನಿಲ್ಲಿಸಿ ಹೋಗಿದ್ದಾರೆ. ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ ಬಗ್ಗೆ ಜಿ.ಟಿ.ದೇವೇಗೌಡ ಬೇಸರಗೊಂಡಿದ್ದರು. ಅಲ್ಲದೆ, 8ನೇ ತರಗತಿ ಓದಿರುವ ತಮಗೆ ಉನ್ನತ ಶಿಕ್ಷಣ ಖಾತೆ ನೀಡಿದ್ದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದು, ಈ ಬೇಸರವನ್ನು ಇನ್ನಷ್ಟು ಹೆಚ್ಚಿಸಿತ್ತು. ಇದರಿಂದ ಅವರು ಶುಕ್ರವಾರ
ಸಂಜೆಯೇ ತಮಗೆ ನೀಡಿದ್ದ ಸರ್ಕಾರಿ ಕಾರನ್ನು ವಾಪಸ್‌ ಕಳುಹಿಸಿದ್ದರು.

Advertisement

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕಾರು ಚಾಲಕ ಸರ್ಕಾರಿ ಕಾರನ್ನು ಶನಿವಾರ ಬೆಳಗ್ಗೆಯೇ ಜಿ.ಟಿ.ದೇವೇಗೌಡರ ಮನೆ ಮುಂದೆ ತಂದು ನಿಲ್ಲಿಸಿದ್ದಾರೆ ಎಂದು ಹೇಳಲಾಗಿದೆ.

ಪ್ರಬಲ ಖಾತೆ ನೀಡಲು ಆಗ್ರಹ
ಮೈಸೂರು
: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರಿಗೆ ಸಚಿವ ಸಂಪುಟದಲ್ಲಿ ಪ್ರಮುಖವಾದ
ಖಾತೆ ನೀಡುವಂತೆ ಆಗ್ರಹಿಸಿ ಶಾಸಕರ ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರು ನಗರದ ಅವರ ನಿವಾಸದೆದುರು ಶನಿವಾರ ಪ್ರತಿಭಟನೆ ನಡೆಸಿದರು. 

ಸಿದ್ದರಾಮಯ್ಯನವರನ್ನು ಸೋಲಿಸಿರುವ ಜಿ.ಟಿ.ದೇವೇಗೌಡರಿಗೆ ಪ್ರಬಲ ಖಾತೆಯನ್ನೇ
ನೀಡಬೇಕೆಂದು ಒತ್ತಾಯಿಸಿದರು. ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್‌ಗೌಡ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾಕಾರರ ಮನವೊಲಿಸುವಲ್ಲಿ ಸಫ‌ಲರಾದರು.

ಸಿ.ಎಸ್‌. ಪುಟ್ಟರಾಜುಗೆ ಇಂಧನ ಖಾತೆ ಕೊಡಿ
ಮಂಡ್ಯ
: ಸಿ.ಎಸ್‌.ಪುಟ್ಟರಾಜು ಅವರಿಗೆ ಸಣ್ಣ ನೀರಾವರಿ ಖಾತೆ ಬದಲು ಇಂಧನ, ಅಬಕಾರಿಯಂತಹ ಪ್ರಬಲ
ಖಾತೆ ನೀಡಿ, ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡುವಂತೆ ಯುವ ಜಾತ್ಯತೀತ ಜನತಾದಳದ ರಾಜ್ಯ
ಪ್ರಧಾನ ಕಾರ್ಯದರ್ಶಿ ಸಾಯಿ ಪ್ರಸನ್ನ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿ, ಅವರಿಗೆ ಇಂಧನ ಖಾತೆ ನೀಡದಿದ್ದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಅವರು ತಿಳಿಸಿದ್ದಾರೆ.

ಜೊತೆಗೆ, ಮಂಡ್ಯ ಜಿಲ್ಲಾ ಜೆಡಿಎಸ್‌ ಸೇವಾದಳದ ಅಧ್ಯಕ್ಷ ನವೀನ್‌ಕೃಷ್ಣ, ಮದ್ದೂರು ತಾಲೂಕು ಮಾಜಿ ಕಾರ್ಯಾಧ್ಯಕ್ಷ ಪಿಗ್ಮಿ ಶೇಖರ್‌ ಸೇರಿ ಇತರ ಹಲವರು ಕೂಡ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಮುಖ್ಯಮಂತ್ರಿ ಕುಮಾರಸ್ವಾಮಿ ರೈತರು ಮಾಡಿರುವ ಖಾಸಗಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದರು. ಅವರಿಗೆ ಶಾಪ ಇದೆ. ವಚನ ಭ್ರಷ್ಟನೆಂಬ ಹಣೆಪಟ್ಟಿ ಇದೆ. ಈ ಶಾಪ ವಿಮೋಚನೆ ಆಗಬೇಕಾದರೆ ಕುಮಾರಸ್ವಾಮಿ ಅವರು ಯಾವುದೇ ಷರತ್ತು ಇಲ್ಲದೇ ರೈತರ ಎಲ್ಲ ಬಗೆಯ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ವಚನಭ್ರಷ್ಟ
ಹಣೆಪಟ್ಟಿ ಜತೆಗೆ ರೈತರ ಶಾಪವೂ ತಟ್ಟಲಿದೆ.
– ಲಕ್ಷ್ಮಣ ಸವದಿ,ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ

ಲಕ್ಷ್ಮಣ ಸವದಿಗೆ ಅಥಣಿಯ ಜನ ಶಾಪ ಕೊಟ್ಟು ಮನೆಯಲ್ಲಿ ಕೂರಿಸಿದ್ದಾರೆ. ಅಂಥವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯ ಇಲ್ಲ. ಯಡಿಯೂರಪ್ಪ ಅವರು ಜೀವಮಾನದಲ್ಲಿ ಎಂದೂ ಸಾಲಮನ್ನಾ ಮಾಡಿಲ್ಲ. ನಮ್ಮ ಸರ್ಕಾರ ಕೇವಲ
ಸಾಲಮನ್ನಾ ಮಾತ್ರವಲ್ಲ, ಇನ್ನೊಮ್ಮೆ ರೈತರು ಸಾಲವನ್ನೇ ಮಾಡಬಾರದು ಎನ್ನುವ ರೀತಿ ಯೋಜನೆ ರೂಪಿಸುತ್ತಿದೆ.
ಇಸ್ರೇಲ… ತಜ್ಞರ ಜತೆ ಈಗಾಗಲೇ ಈ ಕುರಿತು ಚರ್ಚೆ ಮಾಡಿದ್ದೇನೆ.
– ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next