Advertisement

ಮಹಿಳೆಯರಿಗೆ ಕೃಷಿಯ ಬಗ್ಗೆ ಯಾಕಿಂಥ ತಾತ್ಸಾರ !

06:00 AM Nov 30, 2018 | |

ಅವರು ದೂರದಲ್ಲಿ ನನಗೆ ಬಂಧುವಾಗಬೇಕು. ನನಗಿಂತ ತುಂಬ ಹಿರಿಯರು. ಅವರೂ ನನ್ನಂತೆ ರೈತ ಮಹಿಳೆ. ಅವರಿಗೆ ಒಬ್ಬ ಮಗ. ಒಬ್ಬಳು ಮಗಳು. ಮಗಳಿಗೆ ಮದುವೆಯಾಗಿ ಆಸ್ಟ್ರೇಲಿಯಾದಲ್ಲಿದ್ದಾಳೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಾಳೆ. ಮಗ ಎಂಎ ಓದಿ ಹೊರಗಿನ ಕೆಲಸಕ್ಕೆ ಹೋಗದೆ ತಂದೆಯ ಕೃಷಿಭೂಮಿಯನ್ನು ನೋಡಿಕೊಳ್ಳುವವರಿಲ್ಲವೆಂದು ಅದರಲ್ಲೇ ತೊಡಗಿಸಿಕೊಂಡಿದ್ದಾನೆ. ಈಗಿನ ಕಾಲದಲ್ಲಿ ಅದೂ ಬ್ರಾಹ್ಮಣ ಯುವಕ ಮನೆಯಲ್ಲಿದ್ದರೆ ಅವನಿಗೆ ಹೆಣ್ಣು ಯಾರು ಕೊಡುತ್ತಾರೆ? ಹೆಣ್ಣುಮಕ್ಕಳೂ ಉನ್ನತ ಶಿಕ್ಷಣ ಪಡೆಯುವ ಈ ಹೊತ್ತಲ್ಲಿ ಬರೀ ಮನೆವಾರ್ತೆ ನೋಡಿಕೊಳ್ಳುವ ಹುಡುಗಿ ಬೇಕೆಂದರೆ ಸಿಗಲು ಸಾಧ್ಯವೇ? ಹಾಗಾಗಿ, ಮದುವೆಯಾಗಬೇಕಾದ ಪ್ರಾಯದಲ್ಲಿ ಅವನಿಗೆ ಮದುವೆಯಾಗಲಿಲ್ಲ. 

Advertisement

ಆ ಮಹಿಳೆ ಬಂಧು-ಮಿತ್ರರ ಮನೆಗೆ, ಮದುವೆ ಕಾರ್ಯಕ್ರಮಕ್ಕೆ ಅಥವಾ ಸಭೆ, ಸಮಾರಂಭಗಳಿಗೆ ಹೋದರೆ ಎಲ್ಲರೂ ಅವರಲ್ಲಿ ಕೇಳುವ ಮೊದಲ ಪ್ರಶ್ನೆ “ಮಗನಿಗೆ ಮದುವೆ ಆಯ್ತಾ?’ ನನ್ನ ಬಂಧುವಿಗೆ ಆಗ ಮುಳ್ಳಿನಿಂದ ಚುಚ್ಚಿದ ಅನುಭವ. ಮಗನಿಗೆ ಮದುವೆ ಆಗುವಂತೆ ಅವರು ಕೈ ಮುಗಿಯದ ದೇವರುಗಳಿಲ್ಲ, ಹೊತ್ತ ಹರಕೆಗೆ ಲೆಕ್ಕವಿಲ್ಲ. ಈಗ ಅವರ ಮಗನ ವಯಸ್ಸಿನ ಬಂಧುಬಳಗದವರ ಮಕ್ಕಳಿಗೆಲ್ಲ ಮದುವೆ ಬಿಡಿ ಮಕ್ಕಳೂ ಆಗತೊಡಗಿದವು. ಜನರ ಪ್ರಶ್ನೆಗಳಿಗೆ ಉತ್ತರಿಸಬೇಕಲ್ಲ ಎಂದು ಆಕೆ ಮನೆಯಿಂದ ಹೊರಗೆ ಹೋಗುವುದನ್ನೇ ಕಡಿಮೆ ಮಾಡಿದರು. ಅವರ ಮೊರೆ ದೇವರಿಗೆ ಕೇಳಿಸಿತೋ ಎಂಬಂತೆ ಈಚೆಗೆ ಅವರ ಮಗ ನಲುವತ್ತೆ„ದನೆಯ ವರ್ಷಕ್ಕೆ ಕಾಲಿಟ್ಟಾಗ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿರುವ ಹುಡುಗಿಯೊಡನೆ ಅವನ ವಿವಾಹ ವಿಜೃಂಭಣೆಯಿಂದ ನೆರವೇರಿತು. ಅದು ಅಂತರ್ಜಾತಿ ವಿವಾಹ. 

ಕೆಲಸಕ್ಕೆ ಹೋಗುವ ಹುಡುಗಿಯಾದರೂ ಪರವಾಗಿಲ್ಲ, ಒಟ್ಟಿನಲ್ಲಿ ಮಗನಿಗೆ ಮದುವೆಯಾಯ್ತಲ್ಲ ಎಂದು ಬಂಧುಗಳು ಬಲು ಸಂಭ್ರಮ ಪಟ್ಟರು. ಅವರ ಸಂಭ್ರಮ ಹೆಚ್ಚು ದಿನ ಉಳಿಯಲಿಲ್ಲ. ಅಲ್ಲಿಯವರೆಗೂ ಮಗನಿಗೆ ಮದುವೆಯಾಗಲಿಲ್ಲ ಎಂಬ ಒಂದೇ ಕೊರಗು ಇದ್ದದ್ದು. ಈಗ ಹಲವು ಚಿಂತೆ. ಭವಿಷ್ಯವೇ ಅಂಧಕಾರದಲ್ಲಿ ಮುಳುಗಿದ ಭಾವ. ಅವರ ಸೊಸೆ ಅಪ್ಪ-ಅಮ್ಮನ‌ ಮುದ್ದಿನ ಮಗಳು. ಅರಗಿಣಿಯಂತೆ ಬೆಳೆದವಳು. ಅಡುಗೆ ಕೆಲಸ ಹೋಗಲಿ, ಗ್ಯಾಸ್‌ ಸ್ಟವ್‌ ಹಚ್ಚುವುದು ಹೇಗೆ ಎಂದೂ ಗೊತ್ತಿಲ್ಲದವಳು. ಗೊತ್ತಿಲ್ಲದಿದ್ದರೆ ಅದೇನೂ ದೊಡ್ಡ ವಿಷಯವಲ್ಲ. ಯಾರೂ ಹುಟ್ಟಿನಿಂದಲೇ ಕಲಿತುಕೊಂಡು ಬಂದಿರುವುದಿಲ್ಲ. ಆದರೆ, ಅವಳಿಗೆ ಅಡುಗೆ ಮಾಡುವುದರಲ್ಲಿ-ಕಲಿಯುವುದರಲ್ಲಿ ಆಸಕ್ತಿಯೇ ಇಲ್ಲ. ದೂರದ ಕಾಲೇಜಿನಲ್ಲಿ ಅವಳ ಕೆಲಸ. ಹಾಸ್ಟೆಲಿನಲ್ಲಿ ವಾಸ. ಮನೆಗೆ ಬರುವುದು ರಜಾದಿನವಾದ ವಾರದ ಕೊನೆಗೆ. ತನ್ನ ಮನೆಯಾದರೂ  ನೆಂಟರಂತೆ ಅವಳ ವರ್ತನೆ. ಎಲ್ಲ ಹೊತ್ತು ಮಾಳಿಗೆಯ ಮೇಲೆಯೇ ! ಊಟ-ತಿಂಡಿಯ ಹೊತ್ತಲ್ಲೂ ಕೆಳಗಿಳಿಯುವುದೆಂದು ಇಲ್ಲ. ಮನ ಬಂದಾಗ ಬಂದು ತಿಂದು ಮತ್ತೆ ಮಹಡಿಗೆ. ಸ್ವಲ್ಪ ದಿನ ಸುಮ್ಮನಿದ್ದ ಆಕೆ ನೋಡಿ ನೋಡಿ ರೋಸಿ ಹೋಗಿ ಒಮ್ಮೆ ಹೇಳಿದರು- “ನೀನು ಸಮಯಕ್ಕೆ ಸರಿಯಾಗಿ ಬಂದು ಊಟ-ತಿಂಡಿ ಮಾಡದಿದ್ದರೆ ನನ್ನ ಮುಂದಿನ ಕೆಲಸಗಳಿಗೆ ತೊಂದರೆಯಾಗುತ್ತದೆ. ಊಟಕ್ಕೆ ನಾವು ಮಾತ್ರ ಅಲ್ಲ, ಕೂಲಿಯಾಳುಗಳೂ ಇರುತ್ತಾರೆ. ಉಂಡು ಉಳಿದದ್ದನ್ನು ನಾಯಿಹಸುಕರುಗಳಿಗೆ ಹಾಕಬೇಕು. ರಾತ್ರಿ ನೀನು ಹತ್ತೂವರೆಗೆ ಊಟಕ್ಕೆ ಬಂದರೆ ನಾನು ನಾಯಿಗೆ ಅನ್ನ ಹಾಕುವುದು ಯಾವಾಗ? ಮುಸುರೆ ಪಾತ್ರೆಗಳನ್ನು ತೊಳೆದಿಡುವುದು ಎಷ್ಟು ಹೊತ್ತಿಗೆ?’

ಅಷ್ಟು ಕೇಳಿದ್ದು ಅವಳನ್ನು ರೊಚ್ಚಿಗೆಬ್ಬಿಸಿತ್ತು. “ಹಾಗಾದ್ರೆ ನಾನು ಗಂಡನನ್ನು ಕರೆದುಕೊಂಡು ಹೊರಗೆ ಹೋಗ್ತೀನೆ. ಅವರಿಗೆ ಅಲ್ಲೇ ಕೆಲಸ ತೆಗೆಸಿಕೊಡ್ತೇನೆ. ಅವರು ಇಲ್ಲಿ ತೋಟದಲ್ಲಿ ಬೆವರು ಹರಿಸಿಕೊಂಡು ದುಡಿಯಬೇಕೆಂದು ಇಲ್ಲ’ ಎಂದು ರೋಪು ಹಾಕಿದಳು. ಮಗ ಈಗಲೇ ಹೆಂಡತಿಯ ದಾಸಾನುದಾಸ ಆಗಿದ್ದಾನೆ. ಅವಳು ಹಾಕಿದ ಗೆರೆ ಮೀರುವುದಿಲ್ಲ. ಇನ್ನು ಮಗನೂ ದೂರ ಹೋದರೆ ವೃದ್ಧಾಪ್ಯಕ್ಕೆ ಕಾಲಿಡುತ್ತಿರುವ ತನಗೆ, ತನ್ನ ಗಂಡನಿಗೆ ಯಾರು ಗತಿ? ಎಂದು ಹೆದರಿದ ಆಕೆ ತಿರುಗಿ ಮಾತಾಡಲಿಲ್ಲ. 

    ಇನ್ನೊಮ್ಮೆ ಅವರು ತೋಟಕ್ಕೆ ಹೋಗುವಾಗ ಸೊಸೆಗೆ ತೋಟದ ಪರಿಚಯವಾಗಲಿ ಎಂದು ಅವಳನ್ನೂ ಒಟ್ಟಿಗೆ ಕರೆದೊಯ್ದಿದ್ದರು.  ಅವಳು ತನ್ನ ಅಪ್ಪನಿಗೆ ಕರೆ ಮಾಡಿ ತನ್ನತ್ತೆ ತನ್ನ ಕೈಯಲ್ಲಿ ಕೆಲಸ ಮಾಡಿಸುವುದಾಗಿ ದೂರು ಕೊಟ್ಟಳು. ಅಂದೇ ಅವಳ ಅಮ್ಮನ ಜೊತೆಗೂಡಿ ಬಂದ ಅವಳ ಅಪ್ಪ”ನಾನು ಹೂವಿನಂತೆ ಬೆಳೆಸಿದ ಮಗಳನ್ನು ಕೃಷಿಕನಿಗೆ ಕೊಟ್ಟದ್ದೇ ಹೆಚ್ಚು. ಅವಳ ಕೈಯಲ್ಲಿ ಯಾವುದೇ ಕೆಲಸ ಮಾಡಿಸಬಾರದು’ ಎಂದು ತಾಕೀತು ಮಾಡಿದರು. “ನಾನು ಮದುವೆ ಮಾಡಿಕೊಡುವಾಗ ಗುಂಡು ಗುಂಡಗೆ ಇದ್ದ ಮಗಳು ಈಗ ಸೊರಗಿ ಕಡ್ಡಿ ಆಗಿದ್ದಾಳೆ. ನೀವು ಅವಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ’ ಎಂದೂ ಆರೋಪಿಸಿದರು. ಮೌನ ಬಿಟ್ಟು ಅವರಿಗೆ ಏನು ಉತ್ತರ ಕೊಡಲು ಸಾಧ್ಯವಿತ್ತು?

Advertisement

    ನಿನ್ನೆ ನನಗೆ ಪೇಟೆಯಲ್ಲಿ ಸಿಕ್ಕಿದ ಆ ಬಂಧುಮಹಿಳೆಯಲ್ಲಿ, “ಹೇಗಿದ್ದೀರಿ? ಮಗ-ಸೊಸೆ ಏನು ಮಾಡುತ್ತಾರೆ?’ ಎಂದು ಕೇಳಿದ್ದಕ್ಕೆ “ಮಗ ಬ್ರಹ್ಮಚಾರಿಯಾಗಿ ಉಳಿದಿದ್ದರೂ ತೊಂದರೆ ಇರುತ್ತಿರಲಿಲ್ಲವೇನೋ! ಮಗನಿಗೆ ಮದುವೆ ಮಾಡಿಸಿದ ತೃಪ್ತಿ ಹೊರತು ಬೇರೇನು ಸಿಕ್ಕಿದೆ? ಕಾಲೇಜು ಇರುವಾಗ ಹೋಗಲಿ, ರಜಾದಿನಗಳಲ್ಲೂ ಸೊಸೆ ಅಡುಗೆ ಮನೆ ಕಡೆ ಮುಖ ಮಾಡುವುದಿಲ್ಲ. ಇನ್ನು ಹಾಲು ಕರೆಯುವುದು, ತೋಟಕ್ಕೆ ಹೋಗುವುದು ದೂರವೇ ಉಳಿಯಿತು. ನನಗೆ ಅವಳ ದುಡ್ಡಿನ ಮೇಲೆ ಆಸೆಯೇನೂ ಇಲ್ಲ ಬಿಡು. ನನ್ನ ಚಿಂತೆಯೆಂದರೆ ಮಗ ಈಗ ಕೃಷಿಯನ್ನು ಕಡೆಗಣಿಸುತ್ತಿದ್ದಾನೆ ಎಂಬುದು. ಮದುವೆ ಆಗುವವರೆಗೂ ಮಗ ಶ್ರದ್ಧೆಯಿಂದ ತೋಟದ ಕೆಲಸ ಮಾಡಿಸುತ್ತಿದ್ದ. ಈಗ ಅವಳು ಹೇಳಿದ್ದೇ ವೇದವಾಕ್ಯ. ನನ್ನ ಕೃಷಿಭೂಮಿಗೆ ಇನ್ನು ಭವಿಷ್ಯವಿಲ್ಲ. ನಾನು, ನನ್ನ ಗಂಡ ವೃದ್ಧಾಶ್ರಮವನ್ನೇ  ಸೇರಬೇಕಷ್ಟೆ ಅಥವಾ ನಮ್ಮನ್ನು ನೋಡಿಕೊಳ್ಳಲು ನರ್ಸ್‌ ಒಬ್ಬಳನ್ನು ತಂದು ಇಟ್ಟುಕೊಳ್ಳಬೇಕಷ್ಟೆ…” ಹೇಳುತ್ತ ಖನ್ನರಾದರು.

    ನನಗೆ ಅವರನ್ನು ಹೇಗೆ ಸಮಾಧಾನ ಮಾಡಬೇಕೆಂದು ಗೊತ್ತಾಗಲಿಲ್ಲ. ಇದು ಅವರ ಒಬ್ಬರ ಕತೆಯೋ, ಒಂದು ಸಮುದಾಯದ ಕತೆಯೋ, ಇಡೀ ಕೃಷಿಕ ಸಮಾಜದ ಕತೆಯೋ ಅಥವಾ ತಲೆಮಾರಿನ ಅಂತರವೋ ಗೊತ್ತಿಲ್ಲ. ಒಂದಂತೂ ನಿಜ ಇಂದಿನ ಯುವತಿಯರಿಗೆ ಕೃಷಿಯಲ್ಲಿ ಆಸಕ್ತಿಯಿಲ್ಲ. “ಕೈ ಕೆಸರಾದರೆ ಬಾಯಿಗೂ ಮೊಸರು’ ಎಂದು ನಂಬುವ ಯುವತಿಯರು ಕಡಿಮೆ. ಮಣ್ಣಿನಲ್ಲಿ ದುಡಿಯುವ ಯುವಕರ‌ ಕೈ ಹಿಡಿಯಲು ಮುಂದೆ ಬರುವವರು ಇಲ್ಲದಿರುವಾಗ ಅವರೂ ಯಾಕೆ ಕೃಷಿಯನ್ನು ನಂಬುತ್ತಾರೆ?

    ಮೂವತ್ತೆ„ದು ವರ್ಷಗಳ ಹಿಂದೆ ನಾನು ಚಿಕ್ಕವಳಿದ್ದಾಗಿನ ಸಂದರ್ಭ ನೆನಪಾಯಿತು. ಅಂದು ಕೃಷಿಕರಿಗೆ ಹೆಣ್ಣು ಕೊಡುವುದು ಎಂದರೆ ಅದೊಂದು ಪ್ರತಿಷ್ಠೆಯ ವಿಷಯವಾಗಿತ್ತು. ಹೆಣ್ಣಿನ ಕಡೆಯವರು ಗಂಡಿನ ಮನೆಯ ಅಂಗಳ ಎಷ್ಟು ದೊಡ್ಡದು ಇದೆ? ಎಂದು ನೋಡುತ್ತಿದ್ದರು. ಕಾರಣ, ಅಂಗಳದ ಗಾತ್ರಕ್ಕೆ ಅನುಸಾರವಾಗಿ ಅಡಿಕೆ ಇರುತ್ತದೆ ಎಂಬುದು ಹಿರಿಯರ ಲೆಕ್ಕಾಚಾರ. ಜಾನುವಾರುಗಳು ತುಂಬ ಇದ್ದಷ್ಟೂ ಒಳ್ಳೆಯದು ಎಂದು ಅಂದುಕೊಳ್ಳುತ್ತಿದ್ದರು. ಮಗಳನ್ನು ಹಳ್ಳಿಮನೆಗೆ ಕೊಟ್ಟರೆ ಅವಳು ಹಾಲು, ಮೊಸರು, ತುಪ್ಪ ಉಂಡು ನೆಮ್ಮದಿಯಿಂದ ಇರಬಹುದು. ಪೇಟೆಯ ಅಂಗೈ ಅಗಲದ ಗೂಡಿನ ಮನೆಯಲ್ಲಿ ಯಾರೋ ಬೆಳೆಸಿದ ಒಣಗಿದ ಕಾಯಿಪಲ್ಲೆಗಳನ್ನು ತಿಂದು, ತಿಂಗಳ ಕೊನೆಗೆ ಅವನಿಗೆ ಸಿಗುವ ಸಂಬಳದಲ್ಲಿ ಅವಳು ಸುಖವಾಗಿರಲಿಕ್ಕಿಲ್ಲ ಎಂದು ಭಾವಿಸುತ್ತಿದ್ದರು. ಹಾಗಾಗಿ, ತಮ್ಮ ಮಗಳಿಗೆ ಜಮೀನಾªರ ಹುಡುಗನೇ ಬೇಕು ಎಂದು ಹುಡುಕುತ್ತಿದ್ದರು. 

    ಅಂದಿಗೂ, ಇಂದಿಗೂ ಎಷ್ಟು ವ್ಯತ್ಯಾಸ? ಇದನ್ನು ಕೃಷಿಪರಂಪರೆಯ ಅವನತಿ ಎಂದೇ ಭಾವಿಸಬೇಕಲ್ಲದೆ ಇನ್ನೇನು!

ಸಹನಾ ಕಾಂತಬೈಲು

Advertisement

Udayavani is now on Telegram. Click here to join our channel and stay updated with the latest news.

Next