ಮೈಸೂರು: ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದ್ದು, ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಮಾಡಲಾಗಿದೆ. ಮೈಸೂರಿನ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸ್ತಬ್ದವಾಗಿದ್ದು, ಕೆ ಆರ್ ವೃತ್ತ, ದೇವರಾಜ ಅರಸು ರಸ್ತೆ, ಶಿವರಾಂಪೇಟೆ, ಸಯ್ಯಾಜಿರಾವ್ ರಸ್ತೆ, ಅಶೋಕ ರಸ್ತೆ ಸೇರಿದಂತೆ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಅಂಗಡಿ ಮುಂಗಟ್ಟುಗಳು ಬಂದಾಗಿದೆ.
ಜಗತ್ಪ್ರಸಿದ್ಧ ಮೈಸೂರು ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ. ಪ್ರವಾಸಿಗರ ಮೇಲೆ ಅವಲಂಬಿತರಾಗಿರುವ ಟಾಂಗಾವಾಲಗಳು ಕಂಗಾಲಾಗಿದ್ದಾರೆ. ಪ್ರವಾಸೋದ್ಯಮದ ಮೇಲೆ ಅವಲಂಬಿತರಾಗಿರುವ ಜನರಿಗೆ, ದಿನಗೂಲಿ ನೌಕರರಿಗೆ ಸಂಕಷ್ಟ ಪರಿಸ್ಥಿತಿ ಎದುರಾಗಿದೆ.
ವ್ಯಾಪಾರಕ್ಕೆ ಜನರಿಲ್ಲ: ವ್ಯಾಪಾರಕ್ಕೆ ಅವಕಾಶವಿದ್ದರೂ ಖರೀದಿಸಲು ಜನರಿಲ್ಲದ ಪರಿಸ್ಥಿತಿ ಕಂಡುಬಂತು. ಮೈಸೂರಿನ ಸಂತೆಪೇಟೆಯಲ್ಲಿ ಬಹುತೇಕ ಅಂಗಡಿಗಳು ತೆರೆದಿಲ್ಲ. ಕೇವಲ ಬೆರಳೆಣಿಕೆಯಷ್ಟು ಅಂಗಡಿಗಳಲ್ಲಿ ವ್ಯಾಪಾರ ನಡೆಯುತ್ತಿದ್ದು, ವ್ಯಾಪಾರಕ್ಕೆ ಅವಕಾಶ ಇದ್ದರೂ ಜನರು ಮಾತ್ರ ಖರೀದಿಸಲು ಮುಖ ಮಾಡಲಿಲ್ಲ.
ಇದನ್ನೂ ಓದಿ:ಸುಮ್ಮನೆ ನೀವು ಯಾಕೆ ಸಾಯ್ತೀರಾ, ಕಾರ್ಯಕರ್ತರನ್ಯಾಕೆ ಸಾಯಿಸ್ತೀರಾ?: ಕೈ ನಾಯಕರಿಗೆ ಈಶ್ವರಪ್ಪ
ಪರಿಶೀಲನೆ: ಮೈಸೂರಿನ ಎನ್ ಆರ್ ಕ್ಷೇತ್ರದಲ್ಲಿ ಕೈಗೊಂಡಿರುವ ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಶಾಸಕ ತನ್ವೀರ್ ಸೇಠ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೋವಿಡ್ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನೀಡುವ ಕುರಿತು ಹಲವೊಂದು ಸಲಹೆ ಸೂಚನೆಗಳನ್ನು ನೀಡಿದರು.