Advertisement

ಅರಳುವ ಮುನ್ನ …ಬಿಡಬೇಡಿ ಮುಗ್ಧ ಕೈಗಳನ್ನ

03:56 PM Sep 11, 2022 | Team Udayavani |

ಬಡತನ, ಪೋಷಕರ ಒತ್ತಡ ಅಥವ ಅಸಡ್ಡೆ, ಯಾವುದೋ ಆಸೆ ಆಮಿಷಗಳ ಪರಿಣಾಮ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ನಡೆಸುತ್ತಿದ್ದಾರೆ. ಬಾಲ್ಯದ ಆಟ – ಪಾಠಗಳಿಲ್ಲದೆ, ತಂದೆ ತಾಯಿಯ ಮಮತೆ ಪ್ರೀತಿಗಳಿಲ್ಲದೆ ಈ ಮಕ್ಕಳ ಬದುಕು ಮುದುಡಿ ಹೋಗುತ್ತಿರುವುದು ನಾಕರೀಕ ಸಮಾಜದ ವಿಪರ್ಯಾಸ.

Advertisement

ಮನಸ್ಸು ಅನ್ನುವುದು ಯೋಚನೆ, ಬಾಹ್ಯ ದೃಶ್ಯ, ಜೀವನ ಶೈಲಿಗಳ ಪ್ರಭಾವ ಮತ್ತು ಆಚರಣೆಗಳ ಸಂಗ್ರಹ ರೂಪ. ಅದಕ್ಕೆ ಆಕಾರ ಕೊಡುವುದು, ವಿಕಾರಗೊಳಿಸುವುದು ನಮ್ಮ ಕೈಯಲ್ಲೇ ಇದೆ. ಹೀಗೆ ರೂಪುಗೊಳ್ಳುವ ವಿಶೇಷ ಕಾಲ ಘಟ್ಟವೇ ಬಾಲ್ಯ. ಬಸ್ ಚಾಲಕರನ್ನು ನೋಡಿ ತಾನೂ ಹಾಗಾಗಬೇಕು ಅನ್ನೋ ರೀತಿ ಕಣ್ಣೆದುರು ವಿಭಿನ್ನವಾಗಿ ಕಂಡದ್ದನ್ನೇಲ್ಲಾ ಕಣ್ಣರಳಿಸಿ ತಾನೂ ಹಾಗಾಗುವ ಹಾಗೆ ಕನಸು ಕಾಣೋ ಮಕ್ಕಳು ಹದಗೊಳಿಸಿ ಮುದ್ದೆಯಾಗಿಟ್ಟ ಒದ್ದೆ ಮಣ್ಣಿನಂತೆ. ಎಸೆದ ಕಲ್ಲಾದರೂ ಸರಿ, ಇಟ್ಟ ಕೈಯಾದರೂ ಸರಿ, ಅದರ ಆಕಾರ ಪಡೆದುಕೊಳ್ಳುವ ಕಾಲವೇ ಬಾಲ್ಯ. ಇಂತಹ ಬಾಲ್ಯವೇ ದುಡಿಮೆ, ಹಿಂಸೆಗಳ ಆಗರವಾದರೆ.
ಬಾಲ ಕಾರ್ಮಿಕ ನಿರ್ಮೂಲನೆಗಾಗಿ ‘ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ’ 2002ರಿಂದ ಪ್ರತೀ ವರ್ಷ ಜೂನ್ 12ನ್ನು ‘ಬಾಲ ಕಾರ್ಮಿಕ ದಿನಾಚರಣೆ’ಯನ್ನಾಗಿ ಆಚರಿಸಲಾಗುತ್ತಿದೆ. ಈ ಆಚರಣೆ ಇತಿಹಾಸದದ ಹಲವು ವಿಕೃತ ಮಕ್ಕಳ ಷೋಷಣೆಗಳ ವಿರುದ್ದ ಎದ್ದ ಕೂಗಿನ ಪ್ರತಿಫಲ. ಸರ್ಕಾರ ಮತ್ತು ಎಲ್ಲಾ ವರ್ಗದ ಜನರನ್ನು ಬಾಲ ಕಾರ್ಮಿಕತನದ ದುಷ್ಟ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.
ಮಕ್ಕಳನ್ನು ಹಿಂಸೆ, ಶಿಕ್ಷೆ, ಅನಧಿಕೃತ ಗುರಿಯಾಗಿಸಬಾರದು. 18 ವರ್ಷದೊಳಗಿನ ಮಕ್ಕಳು ಯಾವುದೇ ತಪ್ಪು, ಕಾನೂನು ಉಲ್ಲಂಘನೆ ಮಾಡಿದರೂ ಅವರನ್ನು ಶಿಕ್ಷಿಸುವ ಬದಲು, ಅವರ ಮನಃ ಪರಿವರ್ತನೆಗೆ, ಅವರ ಜೀವನ ಸುಧಾರಣೆಗೆ ಸಹಾಯ ಮಾಡಬೇಕು. ಇದು ಕಾನೂನು ಕೂಡ ಹೌದು. ಆದರೆ ಇದನ್ನೇ ಬಂಡವಾಳವಾಗಿಸಿಕೊAಡ ಕೆಲವರು ಹಲವು ಅನಧಿಕೃತ, ಕಾನೂನು ಬಾಹಿರ ಕೆಲಸಗಳಲ್ಲಿ ಮಧ್ಯವರ್ತಿಗಳಾಗಿ ಮಕ್ಕಳನ್ನು ಬಳಸಿಕೊಳ್ಳುವ ಚಟ ಮುಂದುವರಿಸುತ್ತಿರುವುದು ಶೋಚನೀಯ. ಮಾಧಕ ವ್ಯಸನಗಳ ದಂಧೆ ಕೋರರು ನೇರವಾಗಿ ತೊಡಗಿಕೊಂಡರೆ ಜೈಲು ಪಾಲಾಗುವ ಭಯದಿಂದ ಅಪ್ರಾಪ್ತ ಮಕ್ಕಳನ್ನು ಬಳಸಿಕೊಳ್ಳುತ್ತಾರೆ.

2011ರ ಜನಗಣತಿಯ ಪ್ರಕಾರ ಭಾರತದಲ್ಲಿ 4.5 ಮಿಲಿಯನ್ ಬಾಲಕಾರ್ಮಿಕರಿದ್ದಾರೆ. ಗಮನಿಸಬೇಕಾದ ವಿಚಾರವೆಂದರೆ ಈ ಮಕ್ಕಳ ವಯಸ್ಸು 5 ರಿಂದ 15 ವರ್ಷದೊಳಗಿನವರು ಎಂದು ತಿಳಿದು ಬಂದಿದೆ. ಅಪಾಯಕಾರಿ ಕಾರ್ಖಾನೆಗಳಲ್ಲಿ, ಬೇರೆಯವರ ಮನೆಯ ಕೆಲಸದಲ್ಲಿ, ಕಟ್ಟಡ ನಿರ್ಮಾಣದಂತಹ ಕೆಲಸಗಳಲ್ಲಿ ಅತಿ ಹೆಚ್ಚು ಮಕ್ಕಳು ದುಡಿಯುತ್ತಿದ್ದಾರೆ. ಅದು ಅವರ ಆರೋಗ್ಯದ ಮೇಲೂ ವ್ಯತಿರಿಕ್ತ ಪ್ರಭಾವ ಬೀರುತ್ತದೆ. ಭಾರತ ಸರ್ಕಾರವು 2006 ಅಗೋಸ್ತು 1 ರಂದು ಬಾಲಕಾರ್ಮಿಕ ಪದ್ಧತಿಯನ್ನು ನಿಷೇಧಿಸಿತು. ಈ ಕಾಯ್ದೆ ಅಕ್ಟೋಬರ್ 10ರಂದು ಜಾರಿಗೆ ಬಂದಿದೆ.

ಹೀಗೆ ವಿಶ್ವದ ಹಲವು ದೇಶಗಳಲ್ಲಿ ಇಂತಹ ಬಾಲ ಕಾರ್ಮಿಕ ನಿಷೇಧ ಕಾಯ್ದೆಗಳಿದ್ದರೂ ಬಾಲ ಕಾರ್ಮಿಕರ ರಕ್ಷಣೆಯ ವಿಷಯದಲ್ಲಿ ಅವುಗಳು ಹಲವು ಭಾರಿ ಅಭಾವ, ಪ್ರಭಾವ, ಭಾವಗಳ ಕಾರಣದಿಂದ ಹಲ್ಲು ಕಿತ್ತ ಹಾವಿನಂತೆ ಆಗಿರುವುದು ನಿಜಕ್ಕೂ ದುಸ್ಥಿತಿ. ಅರಳುವ ಹೂವುಗಳನ್ನು ಮೊಗ್ಗಿನಲ್ಲೇ ಚಿವುಟದಂತೆ ಕಾಪಾಡುವುದು, ಬೆಳೆಸುವುದು ನಾಗರಿಕ ಸಮಾಜದ ಹೊಣೆ.

-ದಿನೇಶ ಎಂ. ಹಳೆನೇರೆಂಕಿ

Advertisement
Advertisement

Udayavani is now on Telegram. Click here to join our channel and stay updated with the latest news.

Next