Advertisement

ನಾವು ಡಿಜಿಟಲ್‌ ಬ್ಯಾಂಕಿಂಗ್‌ಗೆ ಕಾಲಿಟ್ಟಿದ್ದೇವಷ್ಟೇ…

11:50 PM Dec 28, 2022 | Team Udayavani |

ಡಿಜಿಟಲ್‌ ಬ್ಯಾಂಕಿಂಗ್‌ ಯುಗಕ್ಕೆ ಇದೀಗ ಕಾಲಿಡು ತ್ತಿರುವ ನಾವು ಮೊದಲು ಗ್ರಾಹಕರಿಗೆ ಬ್ಯಾಂಕಿಂಗ್‌ ಅರಿವು ನೀಡುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾಂಕಿಂಗ್‌ ತಿಳಿವಳಿಕೆ ನೀಡುವ ಕಾರ್ಯಕ್ರಮಗಳು, ತರಗತಿಗಳನ್ನು ನಡೆಸಬೇಕಾಗಿದೆ. ಎಲ್ಲಕ್ಕಿಂತ ಮೊದಲು ಶಿಕ್ಷಕರು ಬ್ಯಾಂಕಿಂಗ್‌ ಸಂಬಂಧಿತ ಜ್ಞಾನಾರ್ಜನೆಗೆ ತೆರದು ಕೊಳ್ಳ ಬೇಕಾಗಿದೆ. ಸುರಕ್ಷಿತ ಬ್ಯಾಂಕಿಂಗ್‌ ಜ್ಞಾನದ ಅರಿವಿಲ್ಲದೇ ಬ್ಯಾಂಕಿಂಗ್‌ ವ್ಯವಸ್ಥೆ ಸುಧಾರಿಸದು.

Advertisement

ಇಂಡಿಯಾ ಶೈನಿಂಗ್‌ ಮಾದರಿಯಲ್ಲಿ ಭಾರತೀಯ ಬ್ಯಾಂಕಿಂಗ್‌ ರಂಗ ಡಿಜಿಟಲ್‌ ಯುಗದಲ್ಲಿದೆ ಎನ್ನುವುದರ ಕುರಿತು ಇದೀಗ ಎಲ್ಲೆಡೆ ಜೋರಾಗಿ ಚರ್ಚೆ ನಡೆಯುತ್ತಿದೆ. ಈ ಚರ್ಚೆ ಎಲ್ಲಿಯವರೆಗೆ ಮುಂದುವರಿದಿದೆ ಎಂದರೆ ಜಮೀನೀ ಹಕೀಕತ್ತಿನ ((ground reality)ಅರಿವಿಲ್ಲದ, ಕೆಲವು ಬ್ಯಾಂಕಿಂಗ್‌ ತಜ್ಞ ಎನಿಸಿಕೊಂಡವರು ಈಗ ಬ್ಯಾಂಕ್‌ ಶಾಖೆಗಳಿಗೆ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹೆಚ್ಚಿನ ಸಿಬಂದಿಯ ಆವಶ್ಯಕತೆ ಇಲ್ಲ ಎನ್ನುವ ವಾದ ಮಂಡಿಸ ಹೊರಟಿದ್ದಾರೆ. ನಗರಗಳ ಬೆರೆಳೆಣಿಕೆಯ ಸುಶಿಕ್ಷಿತ ಗ್ರಾಹಕ ಕೇಂದ್ರೀಕೃತ ಶಾಖೆಗಳ ಕಾರ್ಯವೈಖರಿಯನ್ನು ಗಮನಿಸಿ ಇಂತಹ ಅಭಿಪ್ರಾಯ ವ್ಯಕ್ತಪಡಿಸುವವರು ಒಮ್ಮೆ ಗ್ರಾಮೀಣ ಭಾರತದ ಬ್ಯಾಂಕ್‌ ಶಾಖೆಗಳಿಗೆ ಭೇಟಿ ನೀಡಿದರೆ ಅವರಿಗೆ ವಾಸ್ತವತೆಯ ಅರಿವಾಗುತ್ತದೆ. ಗ್ರಾಹಕದಟ್ಟಣೆ, ಭಾಷಾ ಸಮಸ್ಯೆ, ಡಿಜಿಟಲ್‌ ಯುಗದ ಬ್ಯಾಂಕಿಂಗ್‌ ಜ್ಞಾನವಿಲ್ಲದ ಗ್ರಾಹಕರ ಅಸಹಾಯಕತೆ, ಸಿಬಂದಿ ಕೊರತೆಯಿಂದ ಕಂಗೆಟ್ಟ ಹಳ್ಳಿಗಳ ಬ್ಯಾಂಕ್‌ ಶಾಖೆಗಳ ಸಮಸ್ಯೆಗಳು ಒಂದೆರಡಲ್ಲ.

ಡಿಜಿಟಲೀಕಣ, ಸುಶಿಕ್ಷಿತ ಮತ್ತು ತಂತ್ರಜ್ಞಾನ ಸ್ನೇಹಿ ವ್ಯವಸ್ಥೆಗಳು ಗ್ರಾಹಕರಿಗೆ ಹಲವಾರು ಸೌಲಭ್ಯಗಳನ್ನು ನೀಡಿದೆ ನಿಜ. ಆಧುನಿಕ ಬ್ಯಾಂಕಿಂಗ್‌ ಸೌಲಭ್ಯಗಳ ಅರಿವುಳ್ಳ ಗ್ರಾಹಕ ಮೊಬೈಲ್‌ ಬ್ಯಾಂಕಿಂಗ್‌ ತಂತ್ರಜ್ಞಾನದ ನೆರವಿನಿಂದ ಹಣಕಾಸು ವ್ಯವಹಾರವನ್ನು ಸುಲಲಿತವಾಗಿ ನಡೆಸಬಲ್ಲ. ನಗದುರಹಿತ ಬ್ಯಾಂಕಿಂಗ್‌ ಸವಲತ್ತುಗಳು ಆತನಿಗೆ ವರದಾನವಾಗಿದೆ. ಮೊಬೈಲ್‌ ರೀಚಾರ್ಜ್‌, ರೈಲು-ಬಸ್‌ ರಿಸರ್ವೇಶನ್‌, ವಿದ್ಯತ್‌-ನೀರು ಬಿಲ್‌ ಪಾವತಿಯಂತಹ ಅನೇಕ ದೈನಂದಿನ ಕೆಲಸಗಳಿಗಾಗಿ ಅಲೆಯುವುದು ತಪ್ಪಿದೆ. ದೊಡ್ಡ ಕ್ಯೂಗಳಲ್ಲಿ ನಿಲ್ಲಬೇಕಾದ ಪ್ರಮೇಯವಿಲ್ಲ. ಎಟಿಎಂ ಮಶೀನ್‌ಗಳ ಹಂಗೂ ಅಂತಹ ಗ್ರಾಹಕರಿಗಿಲ್ಲ. ಈ ಎಲ್ಲವುದರ ನಡುವೆಯೂ ಹಳ್ಳಿಗಳ ದೊಡ್ಡ ಗ್ರಾಹಕ ವರ್ಗ ಇಂದಿಗೂ ಹಳೆಯ ಬ್ಯಾಂಕಿಂಗ್‌ ವ್ಯವಸ್ಥೆಯಿಂದ ಆಚೆಗೆ ನೋಡಲಾಗದೇ ಪರದಾಡುತ್ತಿದ್ದಾರೆ ಎನ್ನುವುದೂ ವಾಸ್ತವ!

ಕೇವಲ 3-4 ಸಿಬಂದಿಯಿಂದ ನಡೆಸಲ್ಪಡುವ ಬಹುತೇಕ ಗ್ರಾಮೀಣ ಬ್ಯಾಂಕ್‌ ಶಾಖೆಗಳು ಪ್ರತೀ ನಿತ್ಯ ಬರುತ್ತಿರುವ ಮೊಬೈಲ್‌ ಬ್ಯಾಂಕಿಂಗ್‌, ಎಟಿಎಂ ಸಂಬಂಧಿತ ದೂರುಗಳನ್ನು ಬಗೆಹರಿಸುವುದರಲ್ಲಿ ಏದುಸಿರು ಬಿಡುತ್ತಿವೆ. ಹಲವೆಡೆ ಎಟಿಎಂಗಳಿಗೆ ಹಣ ತುಂಬಿಸುವ, ಎಟಿಎಂ ಯಂತ್ರಗಳ ಬಳಕೆಯಲ್ಲಿನ ಗ್ರಾಹಕರ ಎಡವಟ್ಟಿನ, ಖಾಸಗಿ ಮೊಬೈಲ್‌ ಆ್ಯಪ್ಲಿಕೇಶನ್‌ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಿಬಂದಿ ಹರಸಾಹಸ ಪಡುತ್ತಿದ್ದಾರೆ. ಓರ್ವ ಸಿಬಂದಿ ರಜೆಗೆ ಹೋಗುತ್ತಾರೆ ಎಂದರೂ ಉಳಿದ ಸಿಬಂದಿ ಕೆಲಸದ ಅತೀ ಒತ್ತಡಕ್ಕೊಳಗಾಗಬೇಕಾಗುತ್ತದೆ. ಮೊಬೈಲ್‌ನಲ್ಲೇ ಪಾಸ್‌ ಬುಕ್‌ ವೀಕ್ಷಣೆ ವ್ಯವಸ್ಥೆ ಇದ್ದರೂ ಒಂದು ದಿನದ ಮಟ್ಟಿಗೆ ಪಾಸ್‌ ಬುಕ್‌ ಪ್ರಿಂಟಿಂಗ್‌ ಸೌಲಭ್ಯ ಅಲಭ್ಯವಾದರೂ ಅಸಹಜತೆ ವ್ಯಕ್ತಪಡಿಸುವ ಗ್ರಾಹಕರು ಇಂದಿಗೂ ಗ್ರಾಮೀಣ ಭಾಗದಲ್ಲಿ ಇದ್ದಾರೆ. ಇದರಿಂದ ಎಷ್ಟರಮಟ್ಟಿಗೆ ಹಳ್ಳಿಗಳ ಗ್ರಾಹಕರು ಇಂದಿಗೂ ಡಿಜಿಟಲ್‌ ಬ್ಯಾಂಕಿಂಗ್‌ನಿಂದ ದೂರವಿದ್ದಾರೆ ಎನ್ನುವುದು ತಿಳಿಯುತ್ತದೆ.

ಅಶಿಕ್ಷಿತರಷ್ಟೇ ಅಲ್ಲದೇ ವ್ಯವಹಾರ ಜ್ಞಾನಕ್ಕೆ ಸಾಕಾಗುವಷ್ಟು ಶಿಕ್ಷಣ ಇರುವ ಮತ್ತು ಇನ್ನು ಕೆಲವರು ಶಿಕ್ಷಿತರೂ ಬ್ಯಾಂಕಿಂಗ್‌ ಸಂಬಂಧಿತ ಸಾಮಾನ್ಯ ಜ್ಞಾನವನ್ನು ಹೊಂದಿರದೇ ಇರುವುದು ಖೇದಕರ. ಬ್ಯಾಂಕ್‌ ಶಾಖೆ ಪ್ರವೇಶಿಸಿದೊಡನೆ ತಮ್ಮ ಅಜ್ಞಾನವನ್ನು ಮುಚ್ಚಿಕೊಳ್ಳಲೋ ಎಂಬಂತೆ ಇಂತಹ ಅನೇಕ ಗ್ರಾಹಕರು ಸಿಬಂದಿಯ ಮೇಲೆ ರೇಗಾಟ-ಅಸಹನೆ ಪ್ರದರ್ಶನಕ್ಕೆ ಮುಂದಾಗುತ್ತಾರೆ. ಯಾವುದೇ ಒಂದು ಬ್ಯಾಂಕ್‌ನಿಂದ ಇನ್ನೊಂದು ಬ್ಯಾಂಕ್‌ಗೆ ಸುಲಭವಾಗಿ ಹಣ ವರ್ಗಾವಣೆ ಸೌಲಭ್ಯವಿರುವ ಇಂದಿನ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹತ್ತಾರು ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವ ಅಗತ್ಯವಿಲ್ಲ ಎನ್ನುವ ಕನಿಷ್ಠ ಜ್ಞಾನವೂ ಹೆಚ್ಚಿನ ಗ್ರಾಮೀಣ ಗ್ರಾಹಕರಿಗಿಲ್ಲ. ಅನೇಕ ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕನಿಷ್ಠ ಠೇವಣಿ ಇಡಲಾಗದೇ, ವಿವಿಧ ಸೌಲಭ್ಯಗಳಿಗೆ ಕಡಿತವಾಗುವ ಶುಲ್ಕಗಳನ್ನು ಭರಿಸಲಾಗದೇ ಸಮಗ್ರ ಬ್ಯಾಂಕಿಂಗ್‌ ವ್ಯವಸ್ಥೆಯನ್ನು ದೂಷಿಸುವವರೂ ಇದ್ದಾರೆ. ಎಟಿಎಂ ಮತ್ತು ಮೊಬೈಲ್‌ ಬ್ಯಾಂಕಿಂಗ್‌ ವಂಚನೆಗಳಿಗೆ ಶೀಘ್ರ ಬಲಿಯಾಗುತ್ತಿರುವುದರ ಕುರಿತು ಪ್ರತೀದಿನ ಎಂಬಂತೆ ಮಾಧ್ಯಮಗಳಲ್ಲಿ ವರದಿಯಾಗುತ್ತಿರುತ್ತದೆ.

Advertisement

ಡಿಜಿಟಲ್‌ ಬ್ಯಾಂಕಿಂಗ್‌ ಯುಗಕ್ಕೆ ಇದೀಗ ಕಾಲಿಡುತ್ತಿರುವ ನಾವು ಮೊದಲು ಗ್ರಾಹಕರಿಗೆ ಬ್ಯಾಂಕಿಂಗ್‌ ಅರಿವು ನೀಡುವ ಅಗತ್ಯವಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಬ್ಯಾಂಕಿಂಗ್‌ ತಿಳಿವಳಿಕೆ ನೀಡುವ ಕಾರ್ಯಕ್ರಮಗಳು, ತರಗತಿಗಳನ್ನು ನಡೆಸಬೇಕಾಗಿದೆ. ಎಲ್ಲಕ್ಕಿಂತ ಮೊದಲು ಶಿಕ್ಷಕರು ಬ್ಯಾಂಕಿಂಗ್‌ ಸಂಬಂಧಿತ ಜ್ಞಾನಾರ್ಜನೆಗೆ ತೆರದುಕೊಳ್ಳಬೇಕಾಗಿದೆ. ಗ್ರಾಹಕರು ಬ್ಯಾಂಕಿಂಗ್‌ ವಂಚನೆಗಳನ್ನು ಅರಿಯದೇ, ಸುರಕ್ಷಿತ ಬ್ಯಾಂಕಿಂಗ್‌ ಜ್ಞಾನದ ಅರಿವಿಲ್ಲದೇ ಬ್ಯಾಂಕಿಂಗ್‌ ವ್ಯವಸ್ಥೆ ಸುಧಾರಿಸದು. ಸರಕಾರದ ಯೋಜನೆಗಳು, ಸಾಲ ಸೌಲಭ್ಯಗಳು, ಬ್ಯಾಂಕಿಂಗ್‌ ನಿಯಮಗಳ ಅರಿವಿನ ಕೊರತೆಯಿಂದ ಸಾಮಾನ್ಯ ಜನರಿಗೆ ಅವು ತಲುಪುತ್ತಿಲ್ಲ. ಯುವ ಸಮುದಾಯವನ್ನು ಬ್ಯಾಂಕಿಂಗ್‌ ಜ್ಞಾನದ ಅರಿವಿನಿಂದ ಸಜ್ಜುಗೊಳಿಸಿದರೆ ಭವಿಷ್ಯದಲ್ಲಿ ನಮ್ಮ ಬ್ಯಾಂಕಿಂಗ್‌ ವ್ಯವಸ್ಥೆ ಸದೃಢವಾಗಬಹುದೆಂದು ನಿರೀಕ್ಷಿಸಬಹುದು.

– ಬೈಂದೂರು ಚಂದ್ರಶೇಖರ ನಾವಡ

Advertisement

Udayavani is now on Telegram. Click here to join our channel and stay updated with the latest news.

Next