Advertisement

ನೀರು ವಿಷ: ಪತ್ತೆ ಹಚ್ಚುವ ಕಾರ್ಯ ಚುರುಕು

02:36 PM Jun 12, 2022 | Team Udayavani |

ರಾಯಚೂರು: ರಾಜ್ಯದ ಗಮನ ಸೆಳೆದಿರುವ ಕಲುಷಿತ ನೀರು ಪ್ರಕರಣ ದಿನೇದಿನೇ ಗಂಭೀರ ಸ್ವರೂಪ ಪಡೆಯುತ್ತಿದ್ದು, ಘಟನೆಗೆ ನಿಖರ ಕಾರಣ ಪತ್ತೆ ಹಚ್ಚುವ ನಿಟ್ಟಿನಲ್ಲಿ ತನಿಖೆಗೆ ಚುರುಕು ನೀಡಲಾಗಿದೆ. ಈ ಕುರಿತು ಹುಬ್ಬಳ್ಳಿಯಲ್ಲಿ ಮುಖ್ಯಮಂತ್ರಿ ಕೂಡ ಪ್ರತಿಕ್ರಿಯೆ ನೀಡಿದ್ದು, ಘಟನೆಗೆ ಕಾರಣವಾದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವುದಾಗಿ ತಿಳಿಸಿದ್ದಾರೆ.

Advertisement

ಈಗಾಗಲೇ ಜಿಲ್ಲಾಧಿಕಾರಿ ನಗರಸಭೆ ಅಧಿಕಾರಿಗಳ ಜತೆ ನಿರಂತರ ಸಭೆಗಳನ್ನು ನಡೆಸುತ್ತಿದ್ದು, ಕಲುಷಿತ ನೀರು ಪೂರೈಕೆಗೆ ಕಾರಣಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ. ಇಷ್ಟು ದಿನ ಇಲ್ಲದೇ ಈಗ ಏಕಾಏಕಿ ನೀರು ವಿಷವಾಗಿ ಪರಿವರ್ತನೆಗೊಳ್ಳಲು ಇನ್ನೂ ಏನು ಕಾರಣಗಳಿರಬಹುದು ಎಂಬ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ.

ಡಿವೈಎಸ್‌ಪಿ ವೆಂಕಟೇಶ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ನೀರು ಶುದ್ಧೀಕರಣ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ವಿಚಾರಣೆ ನಡೆಸಲಾಗುತ್ತಿದೆ. ಆಯ್ದ ಬಡಾವಣೆಯಲ್ಲಿ ಮಾತ್ರ ವಾಂತಿ ಭೇದಿ ಪ್ರಕರಣಗಳು ನಡೆದಿರುವುದು ಅನುಮಾನಕ್ಕೆಡೆ ಮಾಡಿದೆ. ಆ ದಿಸೆಯಲ್ಲಿಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಶುದ್ಧ ನೀರು ಪೂರೈಕೆ ವಿಚಾರದಲ್ಲಿ ಜವಾಬ್ದಾರಿ ಹೊಂದಿರುವ ಎಲ್ಲ ಸಿಬ್ಬಂದಿ, ಅಧಿಕಾರಿಗಳ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನಗರದಲ್ಲಿ ಈವರೆಗೆ ಐವರು ಕಲುಷಿತ ನೀರು ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು, ನೂರಾರು ಜನ ರಿಮ್ಸ್‌ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಾಂತಿ ಭೇದಿಯಾಗುವಂತ ಯಾವುದೇ ಸಾಂಕ್ರಾಮಿಕ ಕಾಯಿಲೆಗಳು ಹರಡದಿರುವ ಹಿನ್ನೆಲೆಯಲ್ಲಿ ಘಟನೆಗೆ ಬೇರೆ ಯಾವುದೇ ಕಾರಣ ಇರಬಹುದೇನೋ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಅಧಿಕಾರಿಗಳಿಗೆ ಎಚ್ಚರಿಕೆ!: ನಗರದಲ್ಲಿ ಕಲುಷಿತ ನೀರು ಪೂರೈಕೆ ಪ್ರಕರಣ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಅನೇಕ ಸಂಘ-ಸಂಸ್ಥೆಗಳು, ರಾಜಕೀಯ ಪಕ್ಷಗಳು ಈ ಬಗ್ಗೆ ತರಾಟೆಗೆ ತೆಗೆದುಕೊಂಡು ನಗರಸಭೆಗೆ ಎಚ್ಚರಿಕೆ ನೀಡಿವೆ.

Advertisement

ಶನಿವಾರ ರಾಂಪುರ ಕೆರೆಯ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿದ ಜೆಡಿಎಸ್‌ ಮುಖಂಡ ರಾಮನಗೌಡ ಏಗನೂರು ನೇತೃತ್ವದ ತಂಡ, ನಗರಸಭೆ ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡಿದೆ. ಅವರು ಸ್ಥಳಕ್ಕೆ ಭೇಟಿ ನೀಡಿದ ವೇಳೆಯೇ ಶುದ್ಧೀಕರಣ ಘಟಕದಲ್ಲಿ ಎರಡ್ಮೂರು ಹಲ್ಲಿಗಳು ಸತ್ತು ಬಿದ್ದಿರುವ ದೃಶ್ಯ ಕಣ್ಣಿಗೆ ಬಿದ್ದಿರುವುದು ನಗರಸಭೆ ಆಡಳಿತ ವೈಖರಿಗೆ ಸಾಕ್ಷಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಗೊಳಿಸಿ ಜನರಿಗೆ ಶುದ್ಧ ಕುಡಿವ ನೀರು ಕೊಡದಿದ್ದಲ್ಲಿ ನಗರಸಭೆ ಅಧಿಕಾರಿಗಳು, ಶಾಸಕರು ಹಾಗೂ ಸದಸ್ಯರ ಮನೆಗೆ ಕಲುಷಿತ ನೀರು ಪೂರೈಸಿ ಕುಡಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ.

ಚರಂಡಿಗಳಲ್ಲಿ ಪೈಪ್‌ಲೀಕ್‌!

ಕಲುಷಿತ ನೀರು ಪೂರೈಕೆ ವಿಚಾರವಾಗಿ ಮಾಹಿತಿ ನೀಡುವ ಭರದಲ್ಲಿ ನಗರಸಭೆ ಪೌರಾಯುಕ್ತ ಕೆ.ಗುರುಲಿಂಗಪ್ಪ ಅವರು, ನಗರದಲ್ಲಿ ಕೆಲವೊಂದು ಚರಂಡಿಗಳಲ್ಲಿ ಕುಡಿವ ನೀರಿನ ಪೈಪ್‌ಲೈನ್‌ ಹಾದು ಹೋಗಿದೆ. ಎಲ್ಲಿಯಾದರೂ ಲೀಕ್‌ ಆಗಿ ಕೊಚ್ಚೆ ನೀರು ಮಿಶ್ರಣಗೊಂಡು ಪೂರೈಕೆ ಆಗಿರಬಹುದೇನೊ. ಈ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ ಎಂದಿದ್ದಾರೆ. ನಗರದಲ್ಲಿ ಬಹುತೇಕ ಕಡೆ ಚರಂಡಿಗಳಲ್ಲೇ ಕುಡಿವ ನೀರಿನ ಪೈಪ್‌ಲೈನ್‌ಗಳು ಹಾದು ಹೋಗಿದ್ದು, ಎಲ್ಲೆಲ್ಲಿ ಹಾಳಾಗಿದೆಯೋ ಎನ್ನುವ ಆತಂಕ ಶುರುವಾಗಿದೆ.

50 ರೂ. ಕೊಟ್ಟು ಶುದ್ಧ ನೀರು ಕುಡಿಯಲಾಗದ ಬಡವರು, ಕಲುಷಿತ ನೀರು ಸೇವಿಸಿದ ಪರಿಣಾಮ ಇಂದು ಸಾವಿರಾರು ರೂ. ಆಸ್ಪತ್ರೆಗಳಿಗೆ ಕಟ್ಟುವಂತಾಗಿದೆ. ನೂರಾರು ಕೋಟಿ ಖರ್ಚು ಮಾಡಿದರೂ ಶುದ್ಧ ಕುಡಿವ ನೀರು ಕೊಡದ ಹೀನ ಸ್ಥಿತಿ ನಗರದಲ್ಲಿರುವುದು ನಿಜಕ್ಕೂ ನಾಚಿಕೆಗೇಡಿನ ವಿಚಾರ. ಶೀಘ್ರದಲ್ಲೇ ವ್ಯವಸ್ಥೆ ಸುಧಾರಿಸದಿದ್ದಲ್ಲಿ ಅಧಿಕಾರಿಗಳಿಗೆ ಅಶುದ್ಧ ನೀರು ಕುಡಿಸುವ ಎಚ್ಚರಿಕೆ ನೀಡಲಾಗಿದೆ. -ರಾಮನಗೌಡ ಏಗನೂರು ಜೆಡಿಎಸ್‌ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next