Advertisement

ಬಜೆ  ಅಣೆಕಟ್ಟಿನಲ್ಲಿ  ಎಪ್ರಿಲ್‌ 10ರ ವರೆಗೆ ಮಾತ್ರ ನೀರು!

12:21 PM Mar 21, 2017 | Harsha Rao |

ಉಡುಪಿ: ಎಲ್ಲೆಡೆ ನೀರಿನ ತತ್ವಾರ ಆರಂಭಧಿಗೊಂಡಿದ್ದು, ಉಡುಪಿ ನಗರಕ್ಕೂ ನೀರಿನ ಬಿಸಿ ನಿಧಾನವಾಗಿ ತಟ್ಟತೊಡಗಿದೆ. ಬಜೆ ಡ್ಯಾಂನಲ್ಲಿ ಈಗಿರುವ ನೀರಿನ ಪ್ರಮಾಣ ನೋಡಿದರೆ ಉಡುಪಿ ನಗರಕ್ಕೆ ಎಪ್ರಿಲ್‌ 10ರ ವರೆಗೆ ಮಾತ್ರ ನೀರು ಕೊಡಬಹುದು. ಈಗಿನಿಂದಲೇ ನೀರು ಪೂರೈಕೆಯಲ್ಲಿ ಕಡಿತ ಅನಿವಾರ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ವರ್ಷ ಇದೇ ದಿನ (ಸೋಮವಾರ) ಇದ್ದುದಕ್ಕಿಂತ 1.14 ಮೀಟರ್‌ ಕಡಿಮೆ ಇದೆ.

Advertisement

ಕಳೆದ ವರ್ಷ ಈ ದಿನಗಳಲ್ಲಿ ಸುಮಾರು 4.90 ಮೀ. ನೀರು ಇದ್ದರೆ ಈ ಬಾರಿ ಇದೇ ದಿನ 3.76 ಮೀ. ನೀರು ಸಂಗ್ರಹವಿದೆ. ಸುಮಾರು 1.14 ಮೀ. ನೀರು ಕಡಿಮೆಯಿದ್ದು, ನಗರಸಭೆಯ 35 ವಾರ್ಡ್‌ ಹಾಗೂ 8 ಗ್ರಾಮ ಪಂಚಾಯತ್‌ಗಳಿಗೆ ಪ್ರತೀ ದಿನ ನೀರು ಕೊಟ್ಟರೆ ಕೇವಲ 15ರಿಂದ 20 ದಿನಗಳ ವರೆಗೆ ಮಾತ್ರ ನೀರು ಸಿಗಬಹುದು.

32 ದಶಲಕ್ಷ ಲೀ. ನೀರು ಅಗತ್ಯ
ಉಡುಪಿ ನಗರಕ್ಕೆ ದಿನ‌ಕ್ಕೆ 32 ದಶಲಕ್ಷ ನೀರು ಬೇಕಾಗುಧಿತ್ತಿದ್ದು, ಸದ್ಯ 22ರಿಂದ 23 ದಶಲಕ್ಷ ಲೀಟರ್‌ ನೀರು ಪೂರೈಕೆ ಮಾಡಧಿಲಾಗುತ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಶೇ. 25.85ಧಿರಷ್ಟು ಮಳೆ ಕೊರತೆಯಾಗಿದೆ. ನಗರಸಭೆಯ 17,862 ಮನೆಗಳು, 8 ಗ್ರಾ.ಪಂ.ಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

ಸದ್ಯ ದಿನಕ್ಕೆ  4 ಗಂಟೆ ಪೂರೈಕೆ
ಉಡುಪಿ ನಗರದಾದ್ಯಂತ ಸದ್ಯ ದಿನಾಲೂ ಬೆಳಗ್ಗೆ 6ರಿಂದ 10 ಗಂಟೆವರೆಗೆ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ನೀರು ಕಡಿತ ಅನಿವಾರ್ಯವಾಗಿದ್ದು, ಹಾಗಾದಲ್ಲಿ 35 ವಾರ್ಡ್‌ಗಳನ್ನು 2 ವಿಭಾಗಗಳಾಗಿ ವಿಂಗಡಿಸಿ 2 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಒಂದೇ ಟ್ಯಾಂಕರ್‌ ಬಳಕೆ
ಈಗ ನಗರದ ಯಾವ ಪ್ರದೇಶದಲ್ಲೂ ನೀರಿನ ಸಮಸ್ಯೆ ಕಾಣಿಸಿಕೊಂಡಿಲ್ಲವಾಗಿದ್ದರಿಂದ ಪೈಪ್‌ಲೈನ್‌ ಮೂಲಕ ನೀರು ಸಿಗದ ಕೆಲವು ಎತ್ತರದ ಪ್ರದೇಶಗಳಿಗೆ ಒಂದು ಟ್ಯಾಂಕರ್‌ ಮೂಲಕ ನೀರು ಸಾಗಿಸಲಾಗುತ್ತಿದೆ. ಹನುಮಂತ ನಗರ, ಅಜ್ಜರಕಾಡು, ದೊಡ್ಡಣಗುಡ್ಡೆ, ಅಂಬಾಗಿಲು ಜಂಕ್ಷನ್‌, ಪೆರಂಪಳ್ಳಿ ಪ್ರದೇಶಗಳ ಸುಮಾರು 20 ಮನೆಗಳಿಗೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

Advertisement

ಖಾಸಗಿ ಟ್ಯಾಂಕರ್‌ಗಳ ಭರಾಟೆ
ಉಡುಪಿ ನಗರದ ಎಲ್ಲ ಕಡೆಗೆಳಲ್ಲಿ ಈಗ ಖಾಸಗಿ ಟ್ಯಾಂಕರ್‌ಗಳದ್ದೇ ಭರಾಟೆ. ಹೆಚ್ಚಿನ ಹೊಟೇಲ್‌, ಬಾರ್‌, ಲಾಡ್ಜ್ಗಳಿಗೆ ಖಾಸಗಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇಂದ್ರಾಳಿಯ ಒಂದೆರಡು ಮನೆ, ಪರ್ಕಳದ ಕೆಲವು ಮನೆಗಳ ಬಾವಿ ಹಾಗೂ ಕೊಳವೆ ಬಾವಿಗಳಿಂದ ಈ ಖಾಸಗಿ ಟ್ಯಾಂಕರ್‌ಗಳಿಗೆ ನೀರು ತುಂಬಿಸಿ ಅದನ್ನು ಹಣ ಪಡೆದು ಪೂರೈಕೆ ಮಾಡಲಾಗುತ್ತಿದೆ.

ಶೀಂಬ್ರ – ಬಾವುಕಾಡಿ ಅಣೆಕಟ್ಟು ಪರಿಹಾರ
ಶಿರೂರಿನಲ್ಲಿ ಫೆಬ್ರವರಿ ಮೊದಲ ವಾರದಲ್ಲೇ ನೀರು ಖಾಲಿಧಿಯಾಗಿತ್ತು. ಇದರಿಂದ ಬಜೆ ಅಣೆಕಟ್ಟಿನಲ್ಲಿಯೂ ನೀರಿನ ಮಟ್ಟ ಕೆಳಮಟ್ಟಕ್ಕೆ ತಲುಪಿದೆ. ಅದಕ್ಕಾಗಿ ಮಣಿಪಾಲದ ಶೀಂಬ್ರ ಹಾಗೂ ಬಾವುಕಾಡಿಯ ಎರ್ಲಪಾಡಿ ಪ್ರದೇಶಗಳಲ್ಲಿ ಇನ್ನೆರಡು ಅಣೆಕಟ್ಟು ನಿರ್ಮಿಸಿದರೆ ನೀರಿನ ಸಂಗ್ರಹ ಮಟ್ಟ ಏರಿಕೆಯಾಗುತ್ತದೆ. ಆಡಳಿತ ವರ್ಗ, ಜನಪ್ರತಿನಿಧಿಗಳು ಮುತುವರ್ಜಿ ವಹಿಸಿದರೆ ಕುಡಿಯುವ ನೀರು ಹಾಗೂ ರೈತರ ನೀರಿನ ಸಮಸ್ಯೆಗೂ ಪರಿಹಾರ ದೊರಕಲು ಸಾಧ್ಯ.

ಕೃಷಿಕರಲ್ಲೂ  ಆತಂಕ
ಸ್ವರ್ಣಾ ನದಿಗೆ ಕಟ್ಟಿರುವ ಬಜೆ ಅಣೆಕಟ್ಟಿನ ಆಸುಪಾಸಿನ ಪ್ರದೇಶದಲ್ಲೇ ವಾಸವಿದ್ದರೂ ರೈತರಿಗೆ ಮಾತ್ರ ಆ ನೀರಿನ ಸದುಪಯೋಗ ಪಡೆಯುವ ಭಾಗ್ಯವಿಲ್ಲ. ಅನೇಕ ದಿನಗಳಿಂದ ನೀರಿಲ್ಲದೆ ಅಡಿಕೆ ಹಾಗೂ ತೆಂಗಿನ ತೋಟಗಳು ಒಣಗಿದ್ದು, ಕೃಷಿಕರು ಕಂಗಾಲಾಗಿದ್ದಾರೆ. 602 ಮಂದಿ ರೈತ ಕುಟುಂಬ ಹಾಗೂ 200 ಮಂದಿ ಕೃಷಿ ಕೂಲಿ ಕಾರ್ಮಿಕರು ಕೃಷಿಯನ್ನೇ ನಂಬಿಕೊಂಡಿದ್ದು, ಒಟ್ಟು 69 ಹೆಕ್ಟೇರು (171 ಎಕ್ರೆ) ಕೃಷಿ ಪ್ರದೇಶದಲ್ಲಿರುವ 20 ಹೆಕ್ಟೇರು ಪ್ರದೇಶ (50 ಎಕ್ರೆ)ದಲ್ಲಿ 11,769 ತೆಂಗಿನ ಮರ, 32 ಹೆಕ್ಟೇರು ಪ್ರದೇಶ (80 ಎಕ್ರೆ)ದಲ್ಲಿ 44,639 ಅಡಿಕೆ ಮರ, 17 ಹೆಕ್ಟೇರು ಪ್ರದೇಶ (41ಎಕ್ರೆ)ಗಳಲ್ಲಿ 17,850 ಬಾಳೆ ಗಿಡ, 5 ಎಕ್ರೆ ಭತ್ತ ಹಾಗೂ 6. 37 ಎಕ್ರೆ ತರಕಾರಿ ಬೆಳೆಗಳು ಈ ನೀರನ್ನೇ ಅವಲಂಬಿಸಿವೆ.

ಮಳೆಯ ನಿರೀಕ್ಷೆ
ಬಜೆ ಡ್ಯಾಂನಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಹೀಗೇ ಮುಂದುವರಿದರೆ ಎಪ್ರಿಲ್‌ 2ನೇ ವಾರದವರೆಗೆ ಮಾತ್ರ ನೀರು ಸಿಗಬಹುದು. ಬಜೆ ಅಣೆಕಟ್ಟಿನ ಪ್ರದೇಶದಲ್ಲಿ ಡ್ರೆಜ್ಜಿಂಗ್‌ ಮಾಡಿದರೆ ಕನಿಷ್ಠ ಎಪ್ರಿಲ್‌ 20ರ ವರೆಗೆ ನೀರು ಕೊಡಬಹುದು. ಅಷ್ಟರೊಳಗೆ ಮಳೆ ಬಂದರೆ ಉತ್ತಮ. ಇಲ್ಲದಿದ್ದರೆ ನೀರಿಗಾಗಿ ಕಷ್ಟವಾಗಲಿದೆ. ಅದಕ್ಕಾಗಿ ಈಗಿನಿಂದಲೇ ನೀರಿನ ಬಳಕೆ ಬಗ್ಗೆ ನಗರದ ಜನ ಎಚ್ಚರ ವಹಿಸಬೇಕು. ನೀರಿನ ಅನಗತ್ಯ ಬಳಕೆಯನ್ನು ಕಡಿಮೆ ಮಾಡಬೇಕು. ನೀರಿನ ಬಳಕೆ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಪರಿಸರ ಅಭಿಯಂತ ರಾಘವೇಂದ್ರ ಹೇಳಿದ್ದಾರೆ.

ಕಳೆದ ವರ್ಷ ಫೆಬ್ರವರಿಯಲ್ಲೇ ಕಡಿತ
ಕಳೆದ ವರ್ಷವೂ ನಗರಕ್ಕೆ ನೀರಿನ ಸಮಸ್ಯೆ ತಲೆದೋರಿದ್ದು, ಫೆಬ್ರವರಿ ಮೊದಲ ವಾರದಿಂದಲೇ ಕೆಲವು ಕಡೆಗಳಿಗೆ 2 ದಿನಕೊಮ್ಮೆ ನೀರು ಕೊಡಲಾಗುತ್ತಿತ್ತು. ಈ ಬಾರಿ ಮಾರ್ಚ್‌ ಮುಗಿಯಲು ಕೆಲವೇ ದಿನಗಳಷ್ಟೇ ಬಾಕಿ ಉಳಿದಿದ್ದು, ನೀರಿನ ಮಟ್ಟ ಕಳೆದ ಬಾರಿಗಿಂತ ಸುಮಾರು 1.14 ಮೀಟರ್‌ ಕಡಿಮೆಯಿದ್ದರೂ ಇನ್ನೂ ಕೂಡ ನೀರಿನ ಕಡಿತ ಪ್ರಕ್ರಿಯೆ ಆರಂಭಗೊಂಡಿಲ್ಲ. ನೀರಿನ ಅಭಾವ ತಲೆದೋರದಂತೆ ಮಾಡಲು ನಗರ ಸಭೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವತ್ತ ಪ್ರಯತ್ನ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next