Advertisement

ದೀರ್ಘಾವಧಿ ಜಲ ಭದ್ರತೆಗಾಗಿ ಜಲಧಾರೆ: ಎಚ್‌ಡಿಕೆ

08:50 PM Nov 09, 2021 | Team Udayavani |

ಬೆಂಗಳೂರು: ಮೇಕೆದಾಟುವಿನಿಂದ ಬೆಂಗಳೂರಿಗೆ ಕಾಂಗ್ರೆಸ್‌ ಪಾದಯಾತ್ರೆ ಬೆನ್ನಲ್ಲೇ ಎಚ್ಚೆತ್ತ ಜೆಡಿಎಸ್‌, ವಿವಿಧ ನೀರಾವರಿ ಯೋಜನೆಗಳ ಅನುಷ್ಠಾನ ಮತ್ತು ದೀರ್ಘಾವಧಿ ಜಲ ಭದ್ರತೆಗಾಗಿ ಜಲಧಾರೆ ಕಾರ್ಯಕ್ರಮಕ್ಕೆ ಮುಂದಾಗಿದೆ.

Advertisement

ನಾಡಿನ ನದಿ ನೀರು ಬಳಕೆ ಹಾಗೂ ಜನರಿಗೆ ಜಲ ಭದ್ರತೆ ನೀಡುವ ಉದ್ದೇಶದಿಂದ ದೀರ್ಘ‌ಕಾಲೀನ ಅನುಕೂಲತೆಯ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯದಲ್ಲಿ ನದಿ ಉಪನದಿಗಳು ಸೇರಿ 38 ಜೀವನದಿಗಳಿವೆ. ಅವುಗಳ ಜಲ ಸಂಗ್ರಹ ಮಾಡಿ, ನೀರಿನ ಬಳಕೆಯ ಬಗ್ಗೆ ನಾಡಿನ ಜನರಿಗೆ ಅರಿವು ಮೂಡಿಸುವ ಹಾಗೂ ರಾಜ್ಯದ ನೀರಾವರಿ ಹಿತಾಸಕ್ತಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ದೊಡ್ಡ ಪ್ರಮಾಣದಲ್ಲಿ ಈ ಜಲಧಾರೆ ಕಾರ್ಯಕ್ರಮ ರೂಪಿಸಲಾಗಿದೆ. ಶೀಘ್ರದಲ್ಲೇ ಈ ಕುರಿತು ಸಮಗ್ರ ನೀಲನಕ್ಷೆ ಬಹಿರಂಗಪಡಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಜೆ.ಪಿ. ಭವನದಲ್ಲಿ ಮಂಗಳವಾರ ಜನತಾ ಸಂಗಮ ಕಾರ್ಯಾಗಾರಕ್ಕೆ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್‌ ವೇಗ ನಮಗೆ ಬೇಡ. ನಾವು ಬದ್ಧತೆ ಇಟ್ಟುಕೊಂಡು ಹೋಗುವವರು. ನಮ್ಮ ಕಾರ್ಯಕ್ರಮ ರೂಪರೇಷ ವಿಭಿನ್ನವಾಗಿರುತ್ತದೆ. ನೀರಾವರಿ ವಿಚಾರವಾಗಿ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದವರಲ್ಲಿ ನಾವು ಮೊದಲಿಗರು ಎಂದ ಅವರು, ಮೇಕೆದಾಟು ಹೆಸರಿನಲ್ಲಿ ಕಾಂಗ್ರೆಸ್‌ ಪಕ್ಷದ ಪಾದಯಾತ್ರೆ ಬಗ್ಗೆ ಟೀಕೆ ಮಾಡಲ್ಲ. ಅವರ ಸಂಘಟನೆ ದೃಷ್ಟಿಯಿಂದ ಈ ಕಾರ್ಯಕ್ರಮ ಮಾಡಿದ್ದಾರೋ ಗೊತ್ತಿಲ್ಲ. ಆದರೆ, ನಮ್ಮ ರಾಜ್ಯದ 38 ನದಿಗಳ ನೀರು ಬಳಕೆ ಮಾಡಬೇಕು. ಹೀಗಾಗಿ ನಾವು ಹೋರಾಟ ಮಾಡುತೇವೆ ಎಂದು ಹೇಳಿದರು.

ರಾಷ್ಟ್ರೀಯ ಪಕ್ಷಗಳು ರಾಜ್ಯದ ನೀರಾವರಿ ಹಿತರಕ್ಷಣೆ ಮಾಡುವುದಿಲ್ಲ. ಈ ಸತ್ಯ ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಕೇಂದ್ರದ ಮುಂದೆ ನಮ್ಮ ಸರ್ಕಾರದಿಂದ ಮನವಿ ಕಳುಹಿಸಲಾಗಿದೆ. ಅದಕ್ಕೆ ಸರಿಯಾದ ಪ್ರತಿಕ್ರಿಯೆ ಬಂದಿಲ್ಲ. ಇವೆಲ್ಲ ಕಾರಣಕ್ಕೆ ಜಲಧಾರೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನತೆಯ ಮುಂದೆ ಈ ಕಾರ್ಯಕ್ರಮ ಇಡುತ್ತೇವೆ. ಈಗಾಗಲೇ ಎಲ್ಲ ರೂಪರೇಷೆಗಳನ್ನು ರೂಪಿಸಿದ್ದೇವೆ ಎಂದು ಅವರು ತಿಳಿಸಿದರು.ವಿಧಾನ ಪರಿಷತ್ತಿನ ಮಾಜಿ ಸದಸ್ಯ ಟಿ.ಎ. ಶರವಣ ಇದ್ದರು.

ಇದನ್ನೂ ಓದಿ:ಎಲ್ಲಾ ಯೋಜನೆಗಳಲ್ಲೂ ಜಾತಿ ತುರುಕಿದ ಕಾಂಗ್ರೆಸ್‌ : ಸಿ.ಟಿ.ರವಿ ಟೀಕೆ

Advertisement

ಕೋರ್‌ ಕಮಿಟಿ ಶೀಘ್ರ ರಚನೆ
ಶೀಘ್ರ ಜೆಡಿಎಸ್‌ ಕೋರ್‌ ಕಮಿಟಿ ರಚನೆ ಮಾಡಲಾಗುವುದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕರೂ ಆದ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದರು.

“ಉದ್ದೇಶಿತ ಸಮಿತಿಯಲ್ಲಿ ಯಾರ್ಯಾರು ಇರುತ್ತಾರೆ ಎನ್ನುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಯಾರು ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುತ್ತಿದ್ದಾರೋ ಅಂತಹವರನ್ನು ನೇಮಕ ಮಾಡುತ್ತೇವೆ. 2023ರ ಗುರಿ ಸಾಧನೆಗೆ ಪ್ರಯತ್ನಿಸಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮುಂಬೈ ಕರ್ನಾಟಕ ಹೆಸರನ್ನು ಈಗ ಕಿತ್ತೂರು ಕರ್ನಾಟಕ ಅಂತ ಹೆಸರು ಬದಲಾಯಿಸಿದ್ದಾರೆ. ಅದನ್ನೇ ಸಿಹಿ ಹಂಚಿ ಸಂಭ್ರಮಿಸುವ ಅಗತ್ಯ ಇಲ್ಲ. ಹೈದರಾಬಾದ್‌ ಕರ್ನಾಟಕದ ಹೆಸರನ್ನು ಕಲ್ಯಾಣ ಕರ್ನಾಟಕ ಎಂದು ಬದಲಿಸಿದ್ದಾರೆ. ಆದರೆ, ಅಲ್ಲಿನ ಜನರ ಬದುಕು ಬದಲಾಗಿದೆಯೇ? ಈಗಲೂ ಅಲ್ಲಿನ ಜನ ಕಷ್ಟದಲ್ಲಿ ಬದುಕುತ್ತಿದ್ದಾರೆ. ಇದು ರಾಷ್ಟ್ರೀಯ ಪಕ್ಷಗಳ ನಡವಳಿಕೆ. ಇದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next