Advertisement

ಕೆಸ್ತೂರು, ಸೋಮನಹಳ್ಳಿ  ಜಿಪಂ ವ್ಯಾಪ್ತಿಯ ಕೆರೆಗೆ ನೀರು

02:45 PM Jun 11, 2022 | Team Udayavani |

ಮದ್ದೂರು: ಕೆಸ್ತೂರು, ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಎಲ್ಲಾ ಕೆರೆಗೆ ನೀರು ತುಂಬಿಸುವ ಕಾಮಗಾರಿ ಯೋಜನೆಯು ಮೂರು ತಿಂಗಳಲ್ಲಿ ಪೂರ್ಣಗೊಳ್ಳಲ್ಲಿದ್ದು, ಇದರಿಂದಾಗಿ ಈ ಭಾಗದ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

Advertisement

ತಾಲೂಕಿನ ಸೋಮನಹಳ್ಳಿ ಜಿಪಂ ವ್ಯಾಪ್ತಿಯ ಕೂಳಗೆರೆ ಗ್ರಾಮದಲ್ಲಿ ನಡೆಯುತ್ತಿರುವ 18 ಕೆರೆಗೆ ನೀರು ತುಂಬಿಸುವ ಕಾಮಗಾರಿ ಯೋಜನೆಯನ್ನು ಸ್ಥಳೀಯ ಮುಖಂಡರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿ, 77 ಕೋಟಿ ರೂ.ನಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಂಡು 18 ಕೆರೆಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡುವುದಾಗಿ ವಿವರಿಸಿದರು. ಅಲ್ಲದೆ, ಈ ಭಾಗದ ಕೆರೆ, ಕಟ್ಟೆಗಳು ತುಂಬುವುದ ರಿಂದ ಅಂತರ್ಜಲ ವೃದ್ಧಿಯಾಗಿ ಕೊಳವೆ ಬಾವಿಗಳು ಪುನರ್ಜೀವನಗೊಂಡು ಜನ, ಜಾನುವಾರುಗಳು, ಪ್ರಾಣಿ-ಪಕ್ಷಿಗಳು, ಈ ವ್ಯಾಪ್ತಿಯ ರೈತರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

5 ಕೋಟಿ ರೂ. ಬಿಡುಗಡೆ: ಕಳೆದ 30 ವರ್ಷಗಳಿಂದಲೂ ಸ್ಥಗಿತಗೊಂಡಿರುವ ಏತ ನೀರಾ ವರಿ ಯೋಜನೆ ಪುನಶ್ಚೇತನಗೊಳಿಸಲು 5 ಕೋಟಿ ರೂ. ಬಿಡುಗಡೆಗೊಳಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಕೆಲ ಗ್ರಾಮಗಳಲ್ಲಿರುವ ಏತ ನೀರಾವರಿ ಯೋಜನೆ ಆಧುನೀಕರಣಗೊಳಿಸಿ ಮಳೆಗಾಲದಲ್ಲಿ ಎಲ್ಲಾ ಕೆರೆಗೂ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.

ಒತ್ತುವರಿ ತೆರವುಗೊಳಿಸಿ: ಕಣ್ವ ಜಲಾಶಯದಿಂದ ತಿಪ್ಪೂರು ಕೆರೆಗೆ ನೀರು ತುಂಬಿಸಲು ನಾಲೆಗಳನ್ನು ಆಧುನೀಕರಣಗೊಳಿಸಿ ಒತ್ತುವರಿ ತೆರವುಗೊಳಿಸುವ ಜತೆಗೆ ಚೆಕ್‌ ಡ್ಯಾಮ್‌ಗಳನ್ನು ನಿರ್ಮಾಣ ಮಾಡಿ, ರುದ್ರಾಕ್ಷಿಪುರದಿಂದ ಕೆರೆಗೆ ನೀರು ತುಂಬಿಸಲು ಕ್ರಮವಹಿಸಿರುವುದಾಗಿ ಹೇಳಿದರು.

ಹಲವು ಹಳ್ಳಿಗೆ ಅನುಕೂಲ: ಈ ಯೋಜನೆಯಿಂದಾಗಿ ತಾಲೂಕಿನ ಗೊಲ್ಲರದೊಡ್ಡಿ, ಅರೆಕಲ್ಲುದೊಡ್ಡಿ, ಹಳ್ಳಿಕೆರೆ, ಕಬ್ಟಾರೆ, ಅರುವನಹಳ್ಳಿ, ಭೀಮನಕೆರೆ, ತಿಪ್ಪೂರು, ರಾಜೇಗೌಡನದೊಡ್ಡಿ ಇನ್ನಿತರೆ ಗ್ರಾಮಗಳಿಗೂ ಅನುಕೂಲವಾಗಲಿದೆ. ಈ ಭಾಗದ ಜನರಿಗೆ ಶುದ್ಧ ನೀರು ಪೂರೈಕೆ ಮಾಡುವ ಉದ್ದೇಶದಿಂದ ಬನ್ನಹಳ್ಳಿ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು: ತಾವು, ಶಾಸಕರಾದ ಅವಧಿಯಿಂದಲೂ ಶಿಕ್ಷಣ, ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು ನನೆಗುದಿಗೆ ಬಿದ್ದಿರುವ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಅನುಕೂಲ ಕಲ್ಪಿಸಲಾಗಿದೆ. ಜಲ ಜೀವನ್‌ ಯೋಜನೆಯಡಿ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕೆಂಬ ಉದ್ದೇಶದಿಂದ ದೇಶಹಳ್ಳಿ ಕೆರೆಯಿಂದ ನೀರು ಪೂರೈಕೆ ಮಾಡಲು ಕ್ರಮವಹಿಸಿದ್ದು, ಈಗಾಗಲೇ ಪೈಪ್‌ಲೈನ್‌, ನೀರು ಶೇಖರಣಾ ಘಟಕಗಳ ಕಾಮಗಾರಿ ಪೂರ್ಣಗೊಂಡಿದೆ ಎಂದು ಹೇಳಿದರು.

ಈ ವೇಳೆ ಟಿಎಪಿಸಿಎಂಎಸ್‌ ನಿರ್ದೇಶಕ ಕೂಳಗೆರೆ ಶೇಖರ್‌, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಸೋಮಣ್ಣ, ತಿಪ್ಪೂರು ರಾಜೇಶ್‌, ನವೀನ್‌, ಹೊನ್ನೇಗೌಡ, ರಾಮಲಿಂಗಯ್ಯ, ಚಿಕ್ಕತಮ್ಮೇಗೌಡ, ಕೆಂಗಲ್‌ಗೌಡ, ಪಿ.ಹರೀಶ್‌ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next